Priyank Kharge : ರೈಲು ಹೋದ ಮೇಲೆ ಟಿಕೆಟ್​ ಕೊಟ್ಟರು; ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ ಪ್ರಿಯಾಂಕ್ ಖರ್ಗೆ
x

Priyank Kharge : ರೈಲು ಹೋದ ಮೇಲೆ ಟಿಕೆಟ್​ ಕೊಟ್ಟರು; ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ ಪ್ರಿಯಾಂಕ್ ಖರ್ಗೆ

ಕೇಂದ್ರದ ನೀತಿಗಳನ್ನು ತೀವ್ರವಾಗಿ ಟೀಕಿಸಿದ ಖರ್ಗೆ, "ನಾನು ಅಮೆರಿಕಕ್ಕೆ ಹೋಗಿದ್ದರೆ ಕೇಂದ್ರಕ್ಕೆ ಏನಾದರೂ ಹಾನಿಯಾಗುತ್ತಿತ್ತೇ? ಬಂಡವಾಳದಿಂದ ಕೇಂದ್ರಕ್ಕೂ ಲಾಭವಾಗುತ್ತಿತ್ತು ಎಂದು ಹೇಳಿದ್ದಾರೆ.


ಕರ್ನಾಟಕದ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಮೆರಿಕಾ ಪ್ರವಾಸಕ್ಕೆ ಕೇಂದ್ರ ಸರ್ಕಾರ ಆರಂಭದಲ್ಲಿ ವಿಧಿಸಿದ್ದ ನಿರ್ಬಂಧವನ್ನು ಇದೀಗ ತೆರವುಗೊಳಿಸಿ, ಅನುಮತಿ ನೀಡಿರುವುದರ ವಿರುದ್ಧ ಸಚಿವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದ ಈ ನಡೆಯನ್ನು "ಇದು ಟ್ರೈನ್ ಹೋದ ಮೇಲೆ ಟಿಕೆಟ್ ನೀಡಿದಂತೆ" ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೇಂದ್ರದ ಕ್ರಮವನ್ನು ಕರ್ನಾಟಕಕ್ಕೆ ಮಾಡಿರುವ ಅಪಮಾನ ಎಂದು ಬಣ್ಣಿಸಿದ್ದಾರೆ. "ಕರ್ನಾಟಕದ ಒಬ್ಬ ಮಂತ್ರಿ ಬಂಡವಾಳ ತರಲು ಅಮೆರಿಕಕ್ಕೆ ಹೋಗುತ್ತಿದ್ದರು. ಬಂಡವಾಳ ತರುವುದನ್ನು ತಡೆಯಲಾಗಿದೆ. ಇದರಿಂದ ಕೇಂದ್ರಕ್ಕೂ ಲಾಭವಾಗುತ್ತಿತ್ತು, ಆದರೆ ಮೊದಲು ತಡೆದಿದ್ದು ಯಾಕೆ? ಅದಕ್ಕೆ ಸ್ಪಷ್ಟ ಕಾರಣ ಕೊಡಲಿ," ಎಂದು ಖರ್ಗೆ ಪ್ರಶ್ನಿಸಿದ್ದಾರೆ. ತಮ್ಮ ಅಮೆರಿಕಾ ಪ್ರವಾಸವನ್ನು ತಡೆದಿದ್ದಕ್ಕೆ ಕಾರಣ ಕೇಳಿ ಈಗಾಗಲೇ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, "ಸರಿಯಾದ ಕಾರಣ ಕೊಡಲಿಲ್ಲವೆಂದರೆ ಕಾನೂನು ಹೋರಾಟ ಮಾಡುತ್ತೇವೆ," ಎಂದು ಎಚ್ಚರಿಕೆ ನೀಡಿದ್ದಾರೆ.

'ಮೇಕ್ ಇನ್ ಇಂಡಿಯಾ' ವ್ಯಂಗ್ಯ ಮತ್ತು ಉತ್ತರ ಭಾರತದ ಪ್ರಶ್ನೆ

ಕೇಂದ್ರದ ನೀತಿಗಳನ್ನು ತೀವ್ರವಾಗಿ ಟೀಕಿಸಿದ ಖರ್ಗೆ, "ನಾನು ಅಮೆರಿಕಕ್ಕೆ ಹೋಗಿದ್ದರೆ ಕೇಂದ್ರಕ್ಕೆ ಏನಾದರೂ ಹಾನಿಯಾಗುತ್ತಿತ್ತೇ? ಬಂಡವಾಳದಿಂದ ಕೇಂದ್ರಕ್ಕೂ ಲಾಭವಾಗುತ್ತಿತ್ತು. 'ಮೇಕ್ ಇನ್ ಇಂಡಿಯಾ' ಕೆಲಸ ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲಿ ಆಗುತ್ತಿದೆ. ಆದರೆ ಉತ್ತರ ಭಾರತದಲ್ಲಿ ಏನು ಕೆಲಸ ಆಗುತ್ತಿದೆ ಸ್ವಾಮಿ?" ಎಂದು ಖರ್ಗೆ ವ್ಯಂಗ್ಯವಾಡಿದರು.

"ಅನುಮತಿ ಕೊಟ್ಟಂಗೂ ಆಗಬೇಕು, ತಡೆದಂಗೂ ಆಗಬೇಕು. ಕೇಂದ್ರ ದೊಡ್ಡ ದೊಡ್ಡ ಕನಸನ್ನು ಬಿತ್ತುತ್ತದೆ. ಆದರೆ ಅದನ್ನು ಸಾಕಾರಗೊಳಿಸಲು ಅವಕಾಶ ನೀಡದೆ ನಿರ್ಬಂಧಿಸುತ್ತದೆ," ಎಂದು ಪ್ರಿಯಾಂಕ್ ಖರ್ಗೆ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More
Next Story