ಶಾಲಾ ಪೂರ್ವ ಶಿಕ್ಷಣ | ಸರ್ಕಾರದ ಹೊಸ ಸುತ್ತೋಲೆ ವಾಪಸ್‌ ಪಡೆಯಲು ಒತ್ತಾಯ
x

ಶಾಲಾ ಪೂರ್ವ ಶಿಕ್ಷಣ | ಸರ್ಕಾರದ ಹೊಸ ಸುತ್ತೋಲೆ ವಾಪಸ್‌ ಪಡೆಯಲು ಒತ್ತಾಯ


ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲೇ ನೀಡಲು ಸೂಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿರುವ ಸುತ್ತೋಲೆಯಿಂದ ಅಂಗನವಾಡಿ ಕೇಂದ್ರಗಳು ಮುಚ್ಚುವ ಪರಿಸ್ಥಿತಿ ಬರಲಿದೆ ಎಂದು ಹೇಳಿರುವ ʻಐಸಿಡಿಎಸ್‌ ಉಳಿಸಿ-ಮಕ್ಕಳನ್ನು ರಕ್ಷಿಸಿ ಆಂದೋಲನʼ ಸಮಿತಿ, ಬದಲಾಗಿ ಸರ್ಕಾರ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಬಲಪಡಿಸಬೇಕು ಎಂದು ಆಗ್ರಹಿಸಿದೆ.

2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ 4 ರಿಂದ 6 ವರ್ಷದ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲೇ ಎಲ್.ಕೆ.ಜಿ-ಯುಕೆಜಿ ಶಿಕ್ಷಣ ನೀಡಬೇಕು, ಕನ್ನಡ ಶಾಲೆಗಳಲ್ಲಿ ಇಂಗ್ಲೀಷ್‌ ಮಾಧ್ಯಮ ಆರಂಭಿಸಬೇಕು ಎಂದು [ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರಿಂದ ಅಂಗನವಾಡಿಗಳ ಅಸ್ತಿತ್ವಕ್ಕೇ ಪೆಟ್ಟು ಬೀಳಲಿದೆ ಎಂದು ʻಐಸಿಡಿಎಸ್‌ ಉಳಿಸಿ-ಮಕ್ಕಳನ್ನು ರಕ್ಷಿಸಿ ಆಂದೋಲನʼ ಸಮಿತಿ ಆತಂಕ ವ್ಯಕ್ತಪಡಿಸಿದ್ದು, ಸರ್ಕಾರ ಅಂತಹ ಕ್ರಮದ ಬದಲಾಗಿ ಐಸಿಡಿಎಸ್‌ ಬಲಪಡಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸಲಿ ಎಂದು ಹೇಳಿದೆ.

ಈ ವಿಚಾರದಲ್ಲಿ ಸರ್ಕಾರದ ವಾದ ಏನೆಂದರೆ ಬಡವರ ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕು, ಒಂದನೇ ತರಗತಿಗೆ ಬರುವ ಮಗು ಶಾಲಾ ವ್ಯವಸ್ಥೆಗೆ ಸಿದ್ಧವಾಗಿರಬೇಕು ಮತ್ತು ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಹೆಚ್ಚಿಸಬೇಕು, ಆದ್ದರಿಂದ ಮಕ್ಕಳು 4 ವರ್ಷದಿಂದ ಮೇಲ್ಪಟ್ಟವರಿರುವಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡಬೇಕು ಎಂಬುದಾಗಿದೆ. ರಾಜ್ಯದಲ್ಲಿ ಈಗಾಗಲೇ 2,524 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಪ್ರಾರಂಭಿಸಲಾಗಿದೆ.

ಈ ವಿಚಾರವಾಗಿ ಆರ್ಥಿಕ ತಜ್ಞ ಟಿ ಆರ್‌ ಚಂದ್ರಶೇಖರ್‌ ಅವರು ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಬಲಪಡಿಸಬೇಕು ಮತ್ತು ಅದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಬೇಕು ಎಂದು ಶನಿವಾರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲೇ ಶಾಲಾಪೂರ್ವ ತರಗತಿ ಆರಂಭಿಸುವ ಸರ್ಕಾರದ ನಿರ್ಧಾರದಿಂದಾಗಿ ಸರ್ಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಿಂದ (ಐಸಿಡಿಎಸ್) ನಡೆಯುವ ಅಂಗನವಾಡಿ ಕೇಂದ್ರಗಳಿಗೆ ಮತ್ತು ಶಾಲಾಪೂರ್ವ ಶಿಕ್ಷಣ ಕುರಿತ ಇಸಿಸಿಇ ಅಂಶಗಳ ಜಾರಿಗೆ ತೀವ್ರ ಧಕ್ಕೆಯಾಗಿದೆ ಎಂದು ಶಿಕ್ಷಣ ತಜ್ಞರು, ಬರಹಗಾರರು ಹಾಗೂ ಹೋರಾಟಗಾರರಾದ ಪ್ರೊ. ಟಿ.ಆರ್. ಚಂದ್ರಶೇಖರ, ಡಾ. ವಿಜಯಮ್ಮ, ಬಡಗಲಪುರ ನಾಗೇಂದ್ರ, ಬಿ. ಶ್ರೀಪಾದ ಭಟ್, ಕೆ.ಎಸ್‌. ವಿಮಲಾ, ಎಸ್‌. ವರಲಕ್ಷ್ಮಿ ಹಾಗೂ ಎಚ್‌.ಎಸ್ ಸುನಂದಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಸದೆ ಅವರುಗಳು ಸರ್ಕಾರಕ್ಕೆ ಶಿಫಾರಸುಗಳನ್ನು ನೀಡಿದ್ದು, ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಪ್ರಕಟಣೆಯಲ್ಲಿ, ಈ ವಿಚಾರವಾಗಿ ಕಳೆದ ಜೂನ್ 3 ರಿಂದ ರಾಜ್ಯವ್ಯಾಪಿ ಹೋರಾಟಗಳು ಆರಂಭವಾಗಿದ್ದು, ಬೆಂಗಳೂರಿನಲ್ಲಿ ಜೂ.19 ಮತ್ತು 20 ರಂದು ಬೃಹತ್‌ ಹೋರಾಟ ನಡೆಸಲಾಯಿತು ಎಂದು ತಿಳಿಸಿದ್ದಾರೆ.

ʻʻಯಾವುದೇ ಮಗುವಿನ 40% ದೈಹಿಕ ಬೆಳವಣಿಗೆ 85% ಮಾನಸಿಕ ಬೆಳವಣಿಗೆಯಾಗುವ ಸಂದರ್ಭದಲ್ಲಿ ಲಾಲನೆ-ಪಾಲನೆ, ಪೋಷಣೆ ಮತ್ತು ಶಿಕ್ಷಣವನ್ನು ಕೊಡುವ ಸಲುವಾಗಿಯೇ 1975 ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ, ಅಂಗನವಾಡಿ ಕೇಂದ್ರದ ಪರಿಕಲ್ಪನೆ ಕೂಡ ಬಂದಿರುವುದು. ಶಿಕ್ಷಣ ಇಲಾಖೆಯು ಹೊರಡಿಸಿರುವ ಇತ್ತೀಚಿನ ಆದೇಶದಿಂದ ಅಂಗನವಾಡಿ ಕೇಂದ್ರಗಳಲ್ಲಿ 3- 4 ವರ್ಷದ ಒಳಗಿನ ಮಕ್ಕಳು ಮಾತ್ರವೇ ಉಳಿಯುತ್ತವೆ. ಆಗ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಆಗುತ್ತದೆ. 49 ವರ್ಷಗಳಿಂದ ಸರ್ಕಾರದ ಮಾರ್ಗದರ್ಶನದಲ್ಲಿಯೇ ಐಸಿಡಿಎಸ್‌ ಮೂಲಕ ನಡೆಸಲಾಗುತ್ತಿರುವ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ) ಎಲ್ಲಾ ಅಂಶಗಳನ್ನು ಒಳಗೊಂಡ ಶಾಲಾಪೂರ್ವ ಶಿಕ್ಷಣಕ್ಕೆ ದೊಡ್ಡ ಧಕ್ಕೆಯಾಗುತ್ತದೆ. ಈ ಯೋಜನೆ ಯಾವಾಗ ಬೇಕಾದರೂ ಕುಸಿದು ಕಣ್ಮರೆಯಾಗುವ ಸಾಧ್ಯತೆ ಇದೆʼʼ ಎಂದು ಅವರು ತಮ್ಮ ಮಾಧ್ಯಮ ಹೇಳಿಕೆಯಲ್ಲಿ ಹೇಳಿದ್ದಾರೆ.

ಐಸಿಡಿಎಸ್‌ ಬಲಪಡಿಸಲು ಸರ್ಕಾರಕ್ಕೆ ನೀಡಿದ ಶಿಫಾರಸುಗಳು

1. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ಪರಸ್ಪರ ಚರ್ಚಿಸದೆ ಶಿಕ್ಷಣ ಇಲಾಖೆ ಏಕಮುಖವಾಗಿ ತಂದಿರುವ ಈ ಸುತ್ತೋಲೆಗಳಿಂದ ಆಗಿರುವ ಗೊಂದಲವನ್ನು ನಿವಾರಿಸಲು, ಎರಡೂ ಇಲಾಖೆಗಳು ಪರಸ್ಪರ ಪ್ರಜಾಸತ್ತಾತ್ಮಕವಾಗಿ ಚರ್ಚಿಸಿ, ಎರಡೂ ಇಲಾಖೆಗಳು ನಡೆಸುತ್ತಿರುವ ಪೂರ್ವ ಪ್ರಾಥಮಿಕ ಶಿಕ್ಷಣದ ಅಗತ್ಯತೆಗಳು ಮತ್ತು ಅದರ ಪರಿಣಾಮಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಬೇಕು. ಅಲ್ಲಿಯ ತನಕ 11-6-2024 ರ ಮತ್ತು 19-05-2024 ರ ಆದೇಶಗಳನ್ನು ತಡೆಹಿಡಿಯಬೇಕು, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ 7 ಜಿಲ್ಲೆಗಳ ವ್ಯಾಪ್ತಿಯನ್ನೂ ಒಳಗೊಂಡು ರಾಜ್ಯದ ಎಲ್ಲಿಯೂ ಹೊಸ ಆದೇಶಗಳು ಜಾರಿಯಾಗಬಾರದು.‌

2. ಅಂಗನವಾಡಿ ಕೇಂದ್ರದ ಹೆಸರನ್ನು 'ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರ' ಎಂದು ಪರಿವರ್ತಿಸುವುದು.

3. PUC ಗಿಂತ ಹೆಚ್ಚು ವಿದ್ಯಾರ್ಹತೆ ಹೊಂದಿರುವ ಕಾರ್ಯಕರ್ತೆಯರು ಇರುವ ಮತ್ತು ಸರ್ಕಾರಿ ಶಾಲೆಯ ಅವರಣದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಮೊದಲ ಆದ್ಯತೆಯಲ್ಲಿ ಆಯ್ಕೆ ಮಾಡಿಕೊಳ್ಳುವುದು.

4. ನಿರಂತರ ಕೌಶಲ್ಯಭರಿತ ತರಬೇತಿಗಳನ್ನು ಕೊಡುವುದು.

5. ಸರ್ಕಾರದಿಂದ ಮಕ್ಕಳಿಗೆ ಸಮವಸ್ತ್ರ, ಬ್ಯಾಗ್ ಮತ್ತು ಶೂಗಳನ್ನು ನೀಡುವುದು.

6. ECCE ನೀಡಿದ ಮಗುವಿಗೆ T.C ಕೊಡುವ ವ್ಯವಸ್ಥೆ ತರಬೇಕು.

7. ಅಂಗನವಾಡಿ ಕಾರ್ಯಕರ್ತರನ್ನು “ಶಿಕ್ಷಕಿ” ಎಂದು ಹೆಸರಿಸಿ ಪದನಾಮ ಬದಲಿಸುವುದು.

8. ICDS ನಲ್ಲಿರುವ ECCE ಗೆ ಅನುದಾನವನ್ನು ನಿರಂತರವಾಗಿ ಹೆಚ್ಚಳ ಮಾಡುವುದು.

9. ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನವನ್ನು ಈ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ನೀಡುವುದು.

10. ECCE ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡುವ ಬಗ್ಗೆ ಕಾನೂನು ರೂಪಿಸುವುದು.

11. ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣಾ ಕೆಲಸಗಳಿಂದ ಮುಕ್ತಿಗೊಳಿಸುವುದು. (ಚುನಾವಣಾ ಕೆಲಸಗಳಿಗೆ ನಿವೃತ್ತ ಅಂಗನವಾಡಿ ನೌಕರರನ್ನು ಬಳಸಬಹುದು).

12. ICDS ಯೋಜನೆಯನ್ನು ಪ್ರತ್ಯೇಕ ನಿರ್ದೇಶನಾಲಯವಾಗಿ ಪರಿವರ್ತಿಸಬೇಕು.

Read More
Next Story