
ಪ್ರಜ್ವಲ್ ರೇವಣ್ಣ
ಜೀವಾವಧಿ ಶಿಕ್ಷೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಪ್ರಜ್ವಲ್ ರೇವಣ್ಣ
ದೂರು ಮತ್ತು ಸಂತ್ರಸ್ತೆಯ ಸಾಕ್ಷ್ಯಗಳಲ್ಲಿ ತಾರ್ಕಿಕತೆ ಹಾಗೂ ಸ್ಪಷ್ಟತೆಯ ಕೊರತೆ ಇದೆ. ಸಂತ್ರಸ್ತೆ ದೂರು ದಾಖಲಿಸಲು ಪೊಲೀಸರು ಒತ್ತಾಯಿಸಿದ್ದಾರೆ. ಹಲವು ವರ್ಷಗಳ ಬಳಿಕ ಹಾಸಿಗೆಯಲ್ಲಿ ಪತ್ತೆಯಾದ ಕಲೆಗಳು ಸೇರಿದಂತೆ ಸಾಕ್ಷಿಗಳ ವಿಶ್ವಾಸಾರ್ಹತೆಯನ್ನೂ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಮೇಲಿನ ಶಿಕ್ಷೆ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಆಗಸ್ಟ್ 2ರಂದು ವಿಶೇಷ ನ್ಯಾಯಾಲಯವು ಪ್ರಜ್ವಲ್ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದಾರೆ.
ದೂರು ಮತ್ತು ಸಂತ್ರಸ್ತೆಯ ಸಾಕ್ಷ್ಯಗಳಲ್ಲಿ ತಾರ್ಕಿಕತೆ ಹಾಗೂ ಸ್ಪಷ್ಟತೆಯ ಕೊರತೆ ಇದೆ. ಸಂತ್ರಸ್ತೆ ದೂರು ದಾಖಲಿಸಲು ಪೊಲೀಸರು ಒತ್ತಾಯಿಸಿದ್ದಾರೆ. ಹಲವು ವರ್ಷಗಳ ಬಳಿಕ ಹಾಸಿಗೆಯಲ್ಲಿ ಪತ್ತೆಯಾದ ಕಲೆಗಳು ಸೇರಿದಂತೆ ಸಾಕ್ಷಿಗಳ ವಿಶ್ವಾಸಾರ್ಹತೆಯನ್ನೂ ಅವರು ಪ್ರಶ್ನಿಸಿದ್ದಾರೆ.
ಈ ಪ್ರಕರಣವು ಹಾಸನದ ಗಣಿಕಡ ಅತಿಥಿಗೃಹದಲ್ಲಿ ನಡೆದ ಘಟನೆಯನ್ನು ಆಧರಿಸಿದೆ. ಅಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಮನೆ ಕೆಲಸದಾಕೆಯ ಮೇಲೆ ಪ್ರಜ್ವಲ್ ಲೈಂಗಿಕ ದೌರ್ಜನ್ಯ ಎಸಗಿದರೆಂದು ಆರೋಪಿಸಲಾಗಿದೆ. ಈ ಪ್ರಕರಣವು ಪ್ರಜ್ವಲ್ ವಿರುದ್ಧದ ನಾಲ್ಕು ಬಲಾತ್ಕಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಮೊದಲನೆಯದು.
ಏನಿದು ಪ್ರಕರಣ ?
ಮಾಜಿ ಸಂಸದ ಪ್ರಜ್ವಲ್ ರೇವಣ್ಣ , 47 ವರ್ಷದ ಮನೆಕೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪವಿತ್ತು. ಈ ಸಂಬಂಧ ಸಂತ್ರಸ್ತೆ 2024ರ ಏಪ್ರಿಲ್ 28ರಂದು ಹಾಸನದ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜುಲೈ 24ರಂದು ಎರಡನೇ ಬಾರಿಯೂ ಪ್ರಜ್ವಲ್ಗೆ ಜಾಮೀನು ನಿರಾಕರಿಸಿತ್ತು. ಇದಕ್ಕೂ ಮೊದಲು ಪ್ರಜ್ವಲ್ ರೇವಣ್ಣ ಜನಪ್ರತಿನಿಧಿಗಳ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಎಲ್ಲೆಡೆ ಅರ್ಜಿ ವಜಾಗೊಂಡಿತ್ತು. ನಂತರ ಜೂನ್ನಲ್ಲಿ ಜಾಮೀನು ಕೋರಿ ಹೈಕೋರ್ಟ್ಗೆ ಎರಡನೇ ಬಾರಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಹೈಕೋರ್ಟ್ ಸಲಹೆ ಮೇರೆಗೆ ಎರಡನೇ ಬಾರಿ ವಿಚಾರಣಾ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಎರಡನೇ ಬಾರಿಯೂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು. ಬಳಿಕ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳ ಪೈಕಿ ಒಂದರ ತೀರ್ಪನ್ನು ಪ್ರಕಟಿಸಿತ್ತು.