ಪೆನ್‌ ಡ್ರೈವ್ ಪ್ರಕರಣ | ನಮ್ಮ ಕುಟುಂಬ ಬೇರೆ, ಅವರ ಕುಟುಂಬ ಬೇರೆ: ಕುಮಾರಸ್ವಾಮಿ ಪ್ರತಿಕ್ರಿಯೆ
x

ಪೆನ್‌ ಡ್ರೈವ್ ಪ್ರಕರಣ | ನಮ್ಮ ಕುಟುಂಬ ಬೇರೆ, ಅವರ ಕುಟುಂಬ ಬೇರೆ: ಕುಮಾರಸ್ವಾಮಿ ಪ್ರತಿಕ್ರಿಯೆ


ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದೆನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ, ಕೇವಲ ದೇವೇಗೌಡರ ಕುಟುಂಬಕ್ಕೆ ಮುಜುಗರ ತರುವಂತಹದ್ದಲ್ಲ; ಇಡೀ ಸಮಾಜಕ್ಕೆ ಮುಜುಗರ ತರುವಂತದ್ದು. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ ಐಟಿ ರಚಿಸಿದ್ದು, ಅದರ ವರದಿ ಬರಲಿ. ಬಳಿಕ ಯಾವ ಮುಲಾಜಿಲ್ಲದೆ ಪಕ್ಷ ಪ್ರಜ್ವಲ್‌ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ʻʻನಮ್ಮದು ಮತ್ತು ರೇವಣ್ಣಕುಟುಂಬ ಬೇರೆ ಬೇರೆ ಇದ್ದೇವೆ. ಇದನ್ನು ಪ್ರಜ್ವಲ್ ಪ್ರಕರಣದಲ್ಲಿ ದೇವೇಗೌಡರ ಮತ್ತು ನನ್ನ ಕುಟುಂಬವನ್ನು ಎಳೆದು ತರಬಾರದು. ತಪ್ಪಿತಸ್ಥರು ಯಾರೇ ಇದ್ದರೂ ಅವರು ಶಿಕ್ಷೆ ಅನುಭವಿಸಲೇ ಬೇಕು. ಈ ಮೊದಲೇ ಉಪ್ಪು ತಿಂದವರು ನೀರು ಕುಡಿಯಲೇಬೇಕೆಂದು ಹೇಳಿದ್ದೇನೆ. ಎಲ್ಲವೂ ತನಿಖೆಯಾಗಲಿ, ಇದರಲ್ಲಿ ನಾನಾಗಲಿ, ದೇವೇಗೌಡರಾಗಲಿ ಯಾವುದೇ ರೀತಿಯ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ. ಇಂತಹ ಕೃತ್ಯಗಳು ನಡೆಯಬಾರದುʼʼ ಎಂದು ಹೇಳಿದ್ದಾರೆ.

ʻʻನಾನು ಮುಖ್ಯಮಂತ್ರಿಯಾಗಿದ್ದಾಗ ಮತ್ತು ದೇವೆಗೌಡರು ಪ್ರಧಾನಿಯಾಗಿದ್ದಾಗಲೂ ಸಾವಿರಾರೂ ಜನ ಹೆಣ್ಣುಮಕ್ಕಳು ತಮ್ಮ ಕಷ್ಟ, ಸಮಸ್ಯೆಗಳಿಗೆ ಬಂದಿದ್ದಾರೆ. ಅವರನ್ನು ಅತ್ಯಂತ ಗೌರವದಿಂದ ಕಂಡಿದ್ದೇವೆ. ನನ್ನ ಮತ್ತು ದೇವೇಗೌಡರ ಕುಟುಂಬವೇ ಬೇರೆ, ರೇವಣ್ಣ ಅವರ ಕುಟುಂಬವೇ ಬೇರೆ. ಪೆನ್ ಡೈವ್ ಪ್ರಕರಣದಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ತನಿಖೆ ಪಾರದರ್ಶಕವಾಗಿ ನಡೆಯಲಿ, ಇದರಲ್ಲಿ ರಾಜಕೀಯ ಸಂಚು ಇರುವುದೂ ಕೂಡ ಬಯಲಾಗಲಿದೆʼʼ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಜ್ವಲ್‌ ಉಚ್ಛಾಟನೆ: ದೇವೇಗೌಡರಿಂದ ಮಹತ್ವದ ಆದೇಶ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕೇಸ್‌ಗೆ ದೊಡ್ಡ ತಿರುವು ಸಿಕ್ಕಿದ್ದು, ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡುತ್ತಿರುವುದರಿಂದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ್ದು, ಎಂದು ಆರೋಪ ಮಾಡಿದ್ದ ಸಾವಿರಾರು ಅಶ್ಲೀಲ ವಿಡಿಯೋ ವೈರಲ್ ಆಗಿದ್ದವು. ಆ ಹಿನ್ನೆಲೆಯಲ್ಲಿ ಜೆಡಿಎಸ್‌ ಶಾಸಕರು ಹಲವು ಪ್ರಜ್ವಲ್‌ ಅವರನ್ನು ಪಕ್ಷದಿಂದ ಹೊರಹಾಕಬೇಕು. ಇಲ್ಲವಾದಲ್ಲಿ ತಮ್ಮ ರಾಜಕೀಯ ಭವಿಷ್ಯಕ್ಕೆ ಈ ಪ್ರಕರಣ ಮುಳುವಾಗಲಿದೆ ಎಂದು ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದರು.

ಆ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ತಮ್ಮ ಮೊಮ್ಮಗ ಹಾಗೂ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶಿಸಿದ್ದಾರೆ.

Read More
Next Story