Revanna Sexual Assault Case: High Court Adjourns Hearing to October 8
x

ಹೈಕೋರ್ಟ್‌ ಹಾಗೂ ಆರೋಪಿ ಪ್ರಜ್ವಲ್‌ ರೇವಣ್ಣ

ಪ್ರಜ್ವಲ್ ರೇವಣ್ಣ ಮೇಲ್ಮನವಿ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ 2 ವಾರ ಕಾಲಾವಕಾಶ ನೀಡಿದ ಹೈಕೋರ್ಟ್

ಪ್ರಜ್ವಲ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ, "ಪ್ರಾಸಿಕ್ಯೂಷನ್ ಆಕ್ಷೇಪಣೆ ಸಲ್ಲಿಸಲು ಸಮಯ ತೆಗೆದುಕೊಳ್ಳಲಿ, ಆದರೆ ಮುಂದಿನ ವಿಚಾರಣೆಯಲ್ಲಿ ಭೌತಿಕವಾಗಿ ಹಾಜರಾಗಿ ವಾದ ಮಂಡಿಸಲು ನಮಗೆ ಅವಕಾಶ ನೀಡಬೇಕು," ಎಂದು ಕೋರಿದರು.


Click the Play button to hear this message in audio format

ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತನಗೆ ವಿಧಿಸಲಾಗಿರುವ 'ಆಜೀವ ಜೈಲು ಶಿಕ್ಷೆ'ಯನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ.

ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪ್ರಜ್ವಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ.ಎಸ್. ಮುದುಗಲ್ ಮತ್ತು ಟಿ. ವೆಂಕಟೇಶ್ ನಾಯ್ಕ್ ಅವರ ವಿಭಾಗೀಯ ಪೀಠವು ಮಂಗಳವಾರ (ಅ.28) ನಡೆಸಿತು.

ವಿಚಾರಣೆ ವೇಳೆ, ರಾಜ್ಯ ಸರ್ಕಾರದ ಪರವಾಗಿ ಹಾಜರಾದ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರೊ. ರವಿವರ್ಮ ಕುಮಾರ್ ಅವರು, ಪ್ರಜ್ವಲ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, ಸರ್ಕಾರಕ್ಕೆ ಎರಡು ವಾರಗಳ ಸಮಯ ನೀಡಿ, ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿತು.

ಪ್ರಜ್ವಲ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ, "ಪ್ರಾಸಿಕ್ಯೂಷನ್ ಆಕ್ಷೇಪಣೆ ಸಲ್ಲಿಸಲು ಸಮಯ ತೆಗೆದುಕೊಳ್ಳಲಿ, ಆದರೆ ಮುಂದಿನ ವಿಚಾರಣೆಯಲ್ಲಿ ಭೌತಿಕವಾಗಿ ಹಾಜರಾಗಿ ವಾದ ಮಂಡಿಸಲು ನಮಗೆ ಅವಕಾಶ ನೀಡಬೇಕು," ಎಂದು ಕೋರಿದರು.

ಕೆಳ ನ್ಯಾಯಾಲಯದ ತೀರ್ಪು

ಬೆಂಗಳೂರಿನ ಸಂಸದರು/ಶಾಸಕರ ವಿಶೇಷ ನ್ಯಾಯಾಲಯವು ಆಗಸ್ಟ್ 2, 2025 ರಂದು ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಪದೇ ಪದೇ ಅತ್ಯಾಚಾರ (IPC ಸೆಕ್ಷನ್ 376(2)(n)) ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡು ಅತ್ಯಾಚಾರ ಎಸಗಿದ (IPC ಸೆಕ್ಷನ್ 376(2)(k)) ಆರೋಪಗಳ ಅಡಿಯಲ್ಲಿ 'ಸಾವಿನವರೆಗಿನ ಜೀವಾವಧಿ ಶಿಕ್ಷೆ' ಹಾಗೂ 11.60 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಈ ದಂಡದಲ್ಲಿ 11.25 ಲಕ್ಷ ರೂಪಾಯಿ ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಆದೇಶಿಸಲಾಗಿತ್ತು.

ಇದರ ಜೊತೆಗೆ, ಮಹಿಳೆಯ ಘನತೆಗೆ ಚ್ಯುತಿ, ಕ್ರಿಮಿನಲ್ ಬೆದರಿಕೆ, ಸಾಕ್ಷ್ಯನಾಶ ಮತ್ತು ಐಟಿ ಕಾಯ್ದೆಯಡಿ ಖಾಸಗಿತನದ ಉಲ್ಲಂಘನೆ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿಯೂ ಶಿಕ್ಷೆ ವಿಧಿಸಲಾಗಿತ್ತು.

ಮೇಲ್ಮನವಿಯಲ್ಲಿ ಪ್ರಜ್ವಲ್ ವಾದವೇನು?

ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿರುವ ಪ್ರಜ್ವಲ್, ದೂರು ನೀಡಲು ಮೂರು ವರ್ಷಗಳಿಗಿಂತ ಹೆಚ್ಚು ವಿಳಂಬವಾಗಿರುವುದು ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ವಾದಿಸಿದ್ದಾರೆ. ರಾಜಕೀಯ ಒತ್ತಡದಿಂದ ಎಸ್‌ಐಟಿ ತನಿಖೆ ನಡೆಸಿದ್ದು, ತಮ್ಮ ವರ್ಚಸ್ಸಿಗೆ ಕಳಂಕ ತರಲು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ ಎಂದು ತಮ್ಮ ಮೇಲ್ಮನವಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.

Read More
Next Story