
ಸರ್ಕಾರ ಎಷ್ಟು ಬೇಗ ಹೋದರೆ ಅಷ್ಟು ಒಳ್ಳೆಯದು: ಬೊಮ್ಮಾಯಿ ವಾಗ್ದಾಳಿ
ರಾಜ್ಯ ಕಾಂಗ್ರೆಸ್ ನಾಯಕರು ಸುಖಾಸುಮ್ಮನೆ ದೆಹಲಿಗೆ ಹೋಗಿ ಅವರ ಮನೆ ಬಾಗಿಲು ಕಾಯುತ್ತಿದ್ದಾರೆ. ನಮ್ಮ ಜನರು ಕೊಟ್ಟ ಅಧಿಕಾರಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಜನರು ಕೊಟ್ಟ ಅಧಿಕಾರವನ್ನು ಕಾಂಗ್ರೆಸ್ ಸರ್ಕಾರ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಈ ಸರ್ಕಾರದಿಂದ ಜನತೆಗೆ ಅಪಮಾನ ಆಗುತ್ತಿದೆ. ಹೀಗಾಗಿ ಎಷ್ಟು ಬೇಗ ಈ ಸರ್ಕಾರ ಹೋಗುತ್ತದೋ ಆಗ ಜನರಿಗೆ ಒಳಿತಾಗುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ(ಜ.18) ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಒಬ್ಬರು ಕುರ್ಚಿ ಉಳಿಸಿಕೊಳ್ಳಲು ಹಾಗೂ ಇನ್ನೊಬ್ಬರು ಕಿತ್ತುಕೊಳ್ಳಲು ಯತ್ನಿಸುತ್ತಿದ್ದಾರೆ. ದಿನನಿತ್ಯ ರಾಜ್ಯದಲ್ಲಿ ಈ ಸರ್ಕಾರದಿಂದ ಜನತೆಗೆ ಅಪಮಾನವಾಗುತ್ತಿದ್ದು. ಹೀಗಾಗಿ ಎಷ್ಟು ಬೇಗ ಈ ಸರ್ಕಾರ ಹೋಗುತ್ತದೋ ಎಂದು ಜನರು ಕಾಯುತ್ತಿದ್ದಾರೆ ಎಂದರು.
ಸರ್ಕಾರ ನಡೆಸುವುದನ್ನು ಬಿಟ್ಟು ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ದೆಹಲಿಯಲ್ಲಿ ಸರದಿಯಂತೆ ಓಡಾಡುತ್ತಿದ್ದಾರೆ. ಆದರೆ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಅಸ್ತಿತ್ವದಲ್ಲಿದೆಯೋ ಇಲ್ಲವೊ ಗೊತ್ತಿಲ್ಲ. ಕಳೆದ ಆರು ತಿಂಗಳಿಂದ ನಿರಂತರ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಒಂದು ಮಾತೂ ಹೇಳುತ್ತಿಲ್ಲ. ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕರಿಯುತ್ತೇವೆ ಎನ್ನುವುದರಲ್ಲೇ ಕಾಲ ಕಳೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ನಾಯಕರು ಸುಖಾಸುಮ್ಮನೆ ದೆಹಲಿಗೆ ಹೋಗಿ ಅವರ ಮನೆ ಬಾಗಿಲು ಕಾಯುವ ಕೆಲಸವಾಗುತ್ತದೆ. ನಮ್ಮ ಜನರು ಕೊಟ್ಟ ಅಧಿಕಾರಕ್ಕೆ ಅಪಮಾನ ಮಾಡುತ್ತಿದ್ದಾರೆ. ಇಡೀ ರಾಜ್ಯದ ಜನರಿಗೆ ಈ ಸರ್ಕಾರ ಅಪಮಾನ ಮಾಡುತ್ತಿದೆ. ಹೀಗಾಗಿ ಈ ಸರ್ಕಾರದ ವಿರುದ್ದ ಬಿಜೆಪಿಯಿಂದ ರಾಜ್ಯದಲ್ಲಿ ಆರೇಳು ಸಮಾವೇಶ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಎರಡೂವರೆ ವರ್ಷದಿಂದ ಅರಾಜಕತೆ ಹಾಗು ಕಾನೂನು ಸುವ್ಯವಸ್ಥೆ ಸರಿಯಿಲ್ಲ, ಅಭಿವೃದ್ಧಿಯಾಗಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರದ ವಿರುದ್ಧ ಬಳ್ಳಾರಿಯಿಂದ ಹೋರಾಟ ಆರಂಭ ಮಾಡಿದ್ದೇವೆ ಎಂದು ಹೇಳಿದರು.

