
ಆರ್ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಹಲವರ ಸಾವು; ಸರ್ಕಾರದ ದಿಢೀರ್ ನಿರ್ಧಾರದಿಂದ ಭದ್ರತೆ ವೈಫಲ್ಯ
ವಿವಿಧ ಪೊಲೀಸ್ ಠಾಣೆಗಳಿಂದ ೧ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ. ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಪೂರ್ವ ಸಿದ್ಧತೆ ಇಲ್ಲದೆ ಅವಘಡ.
ಐಪಿಎಲ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಆರ್ಸಿಬಿ ತಂಡಕ್ಕೆ ಸರ್ಕಾರ ಅಭಿನಂದನೆ ಸಲ್ಲಿಸಲು ಕೈಗೊಂಡ ಏಕಾಏಕಿ ತೀರ್ಮಾನವು ಪೊಲೀಸ್ ಭದ್ರತೆ ವೈಫಲ್ಯಕ್ಕೆ ಕಾರಣವಾಗಿದೆ. ಪರಿಣಾಮ ಹಲವು ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು.
ಆರ್ಸಿಬಿ ತಂಡವನ್ನು ಅಭಿನಂದಿಸಲು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಆಯೋಜಿಸುವುದರ ಜತೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಯೋಜನೆ ಮಾಡಲಾಗಿತ್ತು. ಸಂಭ್ರಮ ಆಚರಣೆಯಲ್ಲಿ ಪಾಲ್ಗೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಆರ್ಸಿಬಿ ಅಭಿಮಾನಿಗಳು ಜಮಾಯಿಸಿದ್ದರು. ವಿಧಾನಸೌಧದ ಮುಂಭಾಗದಲ್ಲಿ ನಡೆದ ಸಮಾರಂಭವು ಸುಗಮವಾಗಿ ಜರುಗಿತು.
ಈ ನಡುವೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ವಿಜಯೋತ್ಸವ ಆಯೋಜನೆ ಮಾಡಲಾಗಿತ್ತು. ಈ ಕ್ಷಣಕ್ಕೆ ಸಾಕ್ಷಿಯಾಗಲು ನಗರದೆಲ್ಲೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಲು ಆಗಮಿಸಿದ್ದರು. ಜನರನ್ನು ನಿಯಂತ್ರಿಸಲು ನಗರದ ವಿವಿಧ ಪೊಲೀಸ್ ಠಾಣೆಗಳಿಂದ ೧ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಆದರೆ, ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಯಾವುದೇ ಪೂರ್ವ ಸಿದ್ಧತೆ ಕೈಗೊಳ್ಳದ ಕಾರಣ ಇಂತಹದೊಂದು ಅವಘಡ ಸಂಭವಿಸಿದೆ.
ಪೊಲೀಸರೊಂದಿಗೆ ಸಮಾಲೋಚನೆ ನಡೆಸದೇ ಕಾರ್ಯಕ್ರಮ ಆಯೋಜನೆ
ಬೆಂಗಳೂರಿಗೆ ಆಗಮಿಸಿದ ತಂಡಕ್ಕೆ ಅಭಿನಂದಿಸುವ ತೀರ್ಮಾನವನ್ನು ಸರ್ಕಾರವು ಏಕಾಏಕಿ ಕೈಗೊಂಡಿತು. ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸದೆ ದಿಢೀರ್ ತೀರ್ಮಾನ ಕೈಗೊಂಡ ಕಾರಣ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಅಭಿನಂದನಾ ಸಮಾರಂಭ ದಿಢೀರ್ ಆಯೋಜನೆ ಮಾಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದಿಲ್ಲ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸರ್ಕಾರ ಮತ್ತು ಪೊಲೀಸರ ನಿರೀಕ್ಷೆ ಹುಸಿಯಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.
ಭಾರೀ ಪ್ರಮಾಣದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಿದ ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಕೆಲವು ಗೇಟ್ಗಳ ಮೂಲಕ ಒಳಗೆ ಬಿಡಲಾಯಿತು. ಪ್ರತಿ ಗೇಟ್ ಬಳಿಯು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ ಇರಲಿಲ್ಲ. ಅಧಿಕ ಸಂಖ್ಯೆಯಲ್ಲಿ ಹಿರಿಯ ಅಧಿಕಾರಿಗಳು ಸಹ ಇರದೆ ಕೆಲವೇ ಸಂಖ್ಯೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ಗಳು ಇದ್ದ ಕಾರಣ ಅನಾಹುತಕ್ಕೆ ಕಾರಣವಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಸಿದ್ಧತಾ ಕಾರ್ಯಕ್ಕೆ ಸರ್ಕಾರ ಅವಕಾಶ ನೀಡದೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ ಎಷ್ಟು ಸಂಖ್ಯೆಯಲ್ಲಿ ಪೊಲೀಸರ ಸಂಖ್ಯೆ ಅಗತ್ಯ ಇದೆ ಎಂಬುದರ ಬಗ್ಗೆ ಚರ್ಚೆ ನಡೆಸಲು ಸಹ ಸಾಧ್ಯವಾಗಲಿಲ್ಲ. ಸಿಆರ್ಪಿಎಫ್ ಪಡೆಯನ್ನು ನಿಯೋಜನೆ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೇ, ಕನಿಷ್ಠ ಪಕ್ಷ ಕೈಗಾರಿಕಾ ಭದ್ರತೆ ಪಡೆಯನ್ನು ಸಹ ಕರೆಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂದಾಜಿನ ಮೇರೆಗೆ ನಗರದ ವಿವಿಧೆ ಪೊಲೀಸ್ ಠಾಣೆಗಳಿಂದ ಕರೆಸಿಕೊಳ್ಳಲಾಗಿತ್ತು. ಮುಂಜಾಗ್ರತಾ ಸಿದ್ಧತಾ ಕ್ರಮ ಕೈಗೊಳ್ಳದಿರುವುದೇ ಭದ್ರತಾ ವೈಫಲ್ಯತೆ ಕಾರಣವಾಗಿದೆ.