ಮಲೆ ಮಹದೇಶ್ವರ ಅರಣ್ಯದ ಆನೆ ಕಾರಿಡಾರ್‌ ನಡುವೆ ಜಲವಿದ್ಯುತ್ ಯೋಜನೆ; ಭ್ರಷ್ಟಾಚಾರದ ವಾಸನೆ
x

ಮಲೆ ಮಹದೇಶ್ವರ ಅರಣ್ಯದ ಆನೆ ಕಾರಿಡಾರ್‌ ನಡುವೆ ಜಲವಿದ್ಯುತ್ ಯೋಜನೆ; ಭ್ರಷ್ಟಾಚಾರದ ವಾಸನೆ

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಸತೇಗಾಲ ಗ್ರಾಮದ ಸರ್ವೆ ನಂ.1 ರಲ್ಲಿ ಬರುವ ಮಲೈ ಮಹದೇಶ್ವರ ಪರಿಸರ ಸೂಕ್ಷ್ಮ ವಲಯದಲ್ಲಿ ಬಾಲಾಜಿ ಕಾವೇರಿ ಪವರ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಗೆ 24.75 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಬಸವೇಶ್ವರ ಕಿರು ಜಲವಿದ್ಯುತ್ ಯೋಜನೆ ಆರಂಭಿಸಲು ಶಿಫಾರಸು ಮಾಡಲಾಗಿದೆ.


ಮಲೈ ಮಹದೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ವಲಯಕ್ಕೆ (Eco Sensitive Zone) ಕುತ್ತು ತರುವ ಕಿರು ಜಲವಿದ್ಯುತ್ ಯೋಜನೆಗೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಕಾನೂನುಬಾಹಿರವಾಗಿ ಶಿಫಾರಸು ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರು ಯೋಜನೆಗೆ ಮಾಡಿರುವ ಶಿಫಾರಸಿನ ಹಿಂದೆ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ನಿಯಮ ಉಲ್ಲಂಘನೆ ಹಾಗೂ ಅವ್ಯವಹಾರದ ಶಂಕೆ ಇದ್ದು, ಸಮಗ್ರ ತನಿಖೆಗೆ ಒತ್ತಾಯಿಸಿ ಅರಣ್ಯ ಪಡೆ ಮುಖ್ಯಸ್ಥರಾದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಅವರಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ಎಂಟು ಪುಟಗಳ ಲಿಖಿತ ದೂರು ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಸತೇಗಾಲ ಗ್ರಾಮದ ಸರ್ವೆ ನಂ.1ರ ಮಲೈ ಮಹದೇಶ್ವರ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯದಲ್ಲಿ ಬಾಲಾಜಿ ಕಾವೇರಿ ಪವರ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಗೆ 24.75 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಬಸವೇಶ್ವರ ಕಿರು ಜಲವಿದ್ಯುತ್ ಯೋಜನೆ ಆರಂಭಿಸಲು ಶಿಫಾರಸು ಮಾಡಿದೆ.

ನ್ಯಾಯಾಲಯದ ಆದೇಶ, ಯೋಜನೆಗೆ ಸಂಬಂಧಿಸಿದ ಈ ಹಿಂದಿನ ಅರಣ್ಯಾಧಿಕಾರಿ ನೀಡಿರುವ ವರದಿ ಮರೆ ಮಾಚಿ ಯೋಜನೆ ಜಾರಿಗೆ ಶಿಫಾರಸು ಮಾಡಲಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ಅವರ ಆರೋಪವಾಗಿದೆ.

ಪರಿಸರ ಸೂಕ್ಷ್ಮ ಪ್ರದೇಶ ಅಧಿಸೂಚನೆ

2013ರಲ್ಲಿ ಘೋಷಿಸಿರುವ ಹಾಗೂ 2017ರಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಅಧಿಸೂಚನೆಗೊಂಡಿರುವ (14312.94 ಹೆಕ್ಟೇರ್) ಮಲೈ ಮಹದೇಶ್ವರ ವನ್ಯಜೀವಿ ಧಾಮದ (906.00 ಚದರ ಕಿ.ಮೀ) ವ್ಯಾಪ್ತಿಯಲ್ಲಿ ಈ ಉದ್ದೇಶಿತ ಯೋಜನೆಯ ಜಾಗವಿದೆ.

ಪೊದೆಗಳಿಂದ ಕೂಡಿರುವ ಅರೆ ನಿತ್ಯಹರಿದ್ವರ್ಣದ ಅರಣ್ಯದಲ್ಲಿ ವೈವಿಧ್ಯಮಯ ಸಸ್ಯವರ್ಗ, ಆನೆ, ಚಿರತೆ, ಚುಕ್ಕೆ ಜಿಂಕೆ, ಕಾಡುಹಂದಿ, ಭಾರತೀಯ ಬೂದು ಮುಂಗುಸಿ, ಕಪ್ಪು ಕತ್ತಿನ ಮೊಲ, ಉಡ ಸೇರಿ ವಿವಿಧ ವನ್ಯಜೀವಿಗಳಿವೆ. ಅಲ್ಲದೇ ಈ ಪ್ರದೇಶವು ಅಧಿಸೂಚಿತ ಆನೆ ಕಾರಿಡಾರ್ ಆಗಿರದಿದ್ದರೂ, ಇದು ಆನೆಗಳ ಪ್ರಮುಖ ಆವಾಸಸ್ಥಾನ ಎಂಬುದನ್ನು ಕರ್ನಾಟಕ ಆನೆ ಕಾರ್ಯಪಡೆ 2012 ರಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ಹೀಗಿದ್ದರೂ ಯೋಜನೆ ಜಾರಿಗೆ ಶಿಫಾರಸು ಮಾಡಿರುವುದು ಟೀಕೆಗೆ ಗುರಿಯಾಗಿದೆ.

ಹೆಚ್ಚಲಿದೆ ಮನುಷ್ಯ- ಪ್ರಾಣಿ ಸಂಘರ್ಷ

ಉದ್ದೇಶಿತ ಪ್ರದೇಶದಲ್ಲಿ ಕಿರು ಜಲವಿದ್ಯುತ್ ಯೋಜನೆ ಹಾಗೂ ಪ್ರವಾಸೋದ್ಯಮ ಚಟುವಟಿಕೆ ಆರಂಭವಾದರೆ ಆನೆ-ಮಾನವ ಸಂಘರ್ಷ ಹೆಚ್ಚಾಗುವ ಆತಂಕ ಕಾಡುತ್ತಿದೆ. ಯೋಜನೆಯಿಂದಾಗಿ ಭೌತಿಕ ಅಡೆತಡೆ, ಆನೆಗಳ ಚದುರುವಿಕೆಗೂ ಕಾರಣವಾಗಲಿದೆ ಎಂದು ಪರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಯೋಜನೆ ಜಾರಿಯಾಗುವುದರಿಂದ ವನ್ಯಜೀವಿಗಳು ಹಾಗೂ ಪರಿಸರಕ್ಕೆ ಭಾರೀ ಹಾನಿಯಾಗಲಿದೆ. ಪರಿಸರಕ್ಕೆ ವಿರುದ್ಧವಾಗಿ ನಾವು ಯೋಜನೆ ಅನುಷ್ಟಾನ ಮಾಡಬಾರದು. ಕಿರು ಜಲವಿದ್ಯುತ್ ಯೋಜನೆಗಳು ಪರಿಸರಕ್ಕೆ ಮಾರಕವಾಗಿವೆ. ಸಬ್ಸಿಡಿಗೋಸ್ಕರ ಇಂತಹ ಯೋಜನೆಗಳನ್ನು ಜಾರಿಗೆ ತರುವುದು ಮಾಮೂಲಿ ಎನಿಸಿದೆ ಎಂದು ದಿನೇಶ್‌ ಕಲ್ಲಹಳ್ಳಿ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ನೀಡಿದ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ಯೋಜನೆ ತಿರಸ್ಕಾರ, ಮತ್ತೊಂದಕ್ಕೆ ಶಿಫಾರಸು

2012-2013ರಲ್ಲಿ ರಾಜ್ಯ ವನ್ಯಜೀವಿ ಮಂಡಳಿಯ ಉಪಸಮಿತಿಯು ಉದ್ದೇಶಿತ "ರಂಗನಾಥಸ್ವಾಮಿ ಸಣ್ಣ ಜಲವಿದ್ಯುತ್ ಯೋಜನೆ' ಸ್ಥಾಪನೆಗೆ ಅನುಮತಿ ನಿರಾಕರಿಸಿತ್ತು. 2015 ನೇ ಸಾಲಿನಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ 8ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಯೋಜನೆಯು ಪರಿಸರ ಸೂಕ್ಷ್ಮ ವಲಯ, ಆನೆಗಳ ಆವಾಸಸ್ಥಾನ ಮತ್ತು ಕಾರಿಡಾ‌ರ್‌ಗಳಲ್ಲಿ ಬರಲಿದೆ ಎಂದು ಉಲ್ಲೇಖಿಸಿ ಯೋಜನೆಯ ಪ್ರಸ್ತಾವವನ್ನು ತಿರಸ್ಕರಿಸಿತ್ತು.

2016ರಲ್ಲಿ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವರ ಅಧ್ಯಕ್ಷತೆಯ ತಾಂತ್ರಿಕ ಸಮಿತಿಯು 'ಕನಿಷ್ಠ ಹಸ್ತಕ್ಷೇಪ ಮತ್ತು 'ಸುರಕ್ಷತಾ ಕ್ರಮʼ ಗಳೊಂದಿಗೆ ಬಸವೇಶ್ವರ ಕಿರು ಜಲ ವಿದ್ಯುತ್ ಯೋಜನೆ ಪರಿಗಣಿಸಬಹುದೆಂದು ಅಭಿಪ್ರಾಯಪಟ್ಟಿತ್ತು. ಆದರೆ, ಚಾಮರಾಜನಗರದ ಅಂದಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CCF) ಅವರು ತೀವ್ರ ವಿರೋಧ ವ್ಯಕ್ತಪಡಿಸಿ, ಪರಿಸರ ಮತ್ತು ವನ್ಯಜೀವಿಗಳಿಗೆ ಅಪಾಯಕಾರಿಯಾದ ಕಾರಣ ಯೋಜನೆಗೆ ಅನುಮತಿಸಬಾರದು ಎಂದು ಶಿಫಾರಸು ಮಾಡಿದ್ದರು.

ಆದರೆ, ನಂತರದ ಹಂತಗಳಲ್ಲಿ ಉದ್ದೇಶಪೂರ್ವಕವಾಗಿ ಯೋಜನೆಗೆ ಮರು ಶಿಫಾರಸು ಮಾಡಿರುವುದರ ಹಿಂದೆ ವ್ಯಕ್ತಿಗತ ಲಾಭ, ಭ್ರಷ್ಟಾಚಾರ ನಡೆದಿರುವ ಅನುಮಾನಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮಂಜೂರಾತಿ ಪ್ರಕ್ರಿಯೆಯಲ್ಲೂ ಅಕ್ರಮದ ವಾಸನೆ

2022 ರಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL)ವು ಮೆ. ಶಿವನಸಮುದ್ರಂ ಪವ‌ರ್ ಲಿಮಿಟೆಡ್ ಎಂಬ ಕಂಪನಿಗೆ 24.75 ಮೆಗಾವ್ಯಾಟ್ ಸಾಮರ್ಥ್ಯದ ಕಿರು ಜಲವಿದ್ಯುತ್ ಯೋಜನೆ ಸ್ಥಾಪಿಸಲು ನೀಡಿದ್ದ ಅನುಮತಿ ತಿರಸ್ಕರಿಸಿತ್ತು. ಆದರೆ, 2023ರ ಮಾರ್ಚ್ 20ರಂದು ಅದೇ ಯೋಜನೆಗೆ ಅದೇ ಸ್ಥಳದಲ್ಲಿ ಅದೇ ಸಾಮರ್ಥ್ಯದ ಮತ್ತೊಂದು ಕಂಪನಿಯಾದ ಮೆ. ಬಾಲಾಜಿ ಕಾವೇರಿ ಪವರ್ ಪ್ರೈವೇಟ್ ಲಿಮಿಟೆಡ್ ಗೆ KREDL ಮತ್ತೆ ಅನುಮತಿ ನೀಡಿತ್ತು. ಹೀಗಾಗಿ ಮಂಜೂರಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರದ ವಾಸನೆ ಕಂಡು ಬಂದಿತ್ತು.

ಮರು ಅನುಮತಿ, ಕಂಪನಿಗಳ ಮರು ನಿಯೋಜನೆಗೆ ಸಂಬಂಧಿಸಿದ ತೀರ್ಮಾನಗಳಲ್ಲಿ ಅಧಿಕಾರ ದುರ್ಬಳಕೆ, ರಾಜಕೀಯ ಒತ್ತಡ ಹಾಗೂ ಲಾಭಾಧಾರಿತ (profit-driven valuation) ಆಶಯ ಎದ್ದು ಕಾಣುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರಿದ್ದಾರೆ.

ಒಂದು ಕಂಪನಿಗೆ ಯೋಜನೆ ತಿರಸ್ಕರಿಸಿದ್ದ ಸರ್ಕಾರಿ ಸಂಸ್ಥೆ ತಕ್ಷಣವೇ ಮತ್ತೊಂದು ಕಂಪನಿಗೆ ಅನುಮತಿ ನೀಡುವುದು ಸಂಶಯಾಸ್ಪದ ತೀರ್ಮಾನವಾಗಿದೆ. ಉಪ ಅರಣ್ಯ ಅರಣ್ಯಾಧಿಕಾರಿಯು ಯಾವುದೇ ವೈಜ್ಞಾನಿಕ ಕಾರಣವಿಲ್ಲದೆ ಯೋಜನೆಗೆ ಶಿಫಾರಸು ಮಾಡಿರುವುದು ಗಂಭೀರ ವಿಚಾರ. ಈ ಕುರಿತು ತೀವ್ರ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ನ್ಯಾಯಾಲಯದ ತೀರ್ಪು ಉಲ್ಲಂಘನೆ

ಸಮೃದ್ಧ ಸಸ್ಯವರ್ಗ ಇರುವ ಪ್ರದೇಶ, ಅರಣ್ಯದ ನೈಸರ್ಗಿಕ ಲಕ್ಷಣಗಳುಳ್ಳ ಭೂಮಿಯಲ್ಲಿ ಯಾವುದೇ ಆನಧಿಕೃತ ಚಟುವಟಿಕೆ ಅಥವಾ ಭೂ ಉಪಯೋಗ ಬದಲಾವಣೆಗೆ ಸುಪ್ರೀಂಕೋರ್ಟ್‌ ಪೂರ್ವಾನುಮತಿ ಅಥವಾ ಕೇಂದ್ರ ಪರಿಸರ ಸಚಿವಾಲಯದ ಕಾನೂನುಬದ್ಧ ಅನುಮತಿ ಅಗತ್ಯವಿದೆ ಎಂದು ಗೋಧಾವರ್ಮನ್ ತಿರುಮಲಪಾಡ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಈ ಪ್ರಕರಣದಲ್ಲಿ ಮೆ. ಬಾಲಾಜಿ ಕಾವೇರಿ ಪವರ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ ಅರಣ್ಯ ಪ್ರದೇಶದಲ್ಲಿ ಕಿರು ಜಲ ವಿದ್ಯುತ್ ಯೋಜನೆ ಹಾಗೂ ನಿರ್ಮಾಣ ಚಟುವಟಿಕೆಗಳನ್ನು ಅನುಮತಿಸಲು ಬೇಕಾದ ಮಾನದಂಡಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಬಿ. ಸಂತೋಷ್ ಕುಮಾರ್ ಅವರು 2024 ರಲ್ಲಿ ಸಲ್ಲಿಸಿದ ತಿದ್ದುಪಡಿ ಸ್ಥಳ ಪರಿಶೀಲನಾ ವರದಿಯಲ್ಲಿ (Revised Site Inspection Report) ಬಾಲಾಜಿ ಕಾವೇರಿ ಪವರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಿರು ಜಲ ವಿದ್ಯುತ್ ಯೋಜನಾ ಪ್ರದೇಶವು ಆನೆಗಳ ನೈಸರ್ಗಿಕ ಚಲನೆಯ ಮಾರ್ಗದಲ್ಲಿದೆ ಎಂದು ಸ್ಪಷ್ಟವಾಗಿ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಯಾವುದೇ ಶಿಫಾರಸು ಮಾಡುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಈಗಿರುವ ಅಧಿಕಾರಿ ಈ ವರದಿಯನ್ನು ಮರೆಮಾಚಿದ್ದಾರೆ ಎಂದು ಆರೋಪಿಸಲಾಗಿದೆ.

"ಹಳೆಯ ಹಂತ-I ಮತ್ತು ಹಂತ-II ಅನುಮತಿಗಳ ನವೀಕರಣವಿಲ್ಲದೇ ಹೊಸ ಕಂಪನಿಗೆ ಅರಣ್ಯ ಭೂಮಿಯ ಮರು ಹಂಚಿಕೆ ಮಾಡುವುದು ಅರಣ್ಯ ಸಂರಕ್ಷಣಾ ಕಾಯ್ದೆ, 1980 ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ.

ಈ ಯೋಜನೆ 2011-2012 ರಲ್ಲಿ ಅನುಮೋದನೆ ಪಡೆದಿದ್ದರೂ, ಈವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳ 2017ರ ಮಾರ್ಗಸೂಚಿ ಪ್ರಕಾರ, ಅನುಮತಿ ಪಡೆದ 5 ವರ್ಷಗಳೊಳಗಾಗಿ ಕಾಮಗಾರಿ ಆರಂಭಿಸದಿದ್ದರೆ, ಅನುಮತಿ ಅಮಾನ್ಯವಾಗಲಿದೆ. ಹಾಗಾಗಿ ಯೋಜನೆಗೆ ಶಿಫಾರಸು ನೀಡಿರುವ ಪ್ರಕ್ರಿಯೆ ಮತ್ತು ದಾಖಲೆಗಳನ್ನು ಪೂರ್ಣವಾಗಿ ಮರು ಪರಿಶೀಲನೆಗೆ ಒಳಪಡಿಸಬೇಕು ಎಂದು ದಿನೇಶ್ ಕಲ್ಲಹಳ್ಳಿ ಕೋರಿದ್ದಾರೆ.

ಮಲೈ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಕಿರು ಜಲವಿದ್ಯುತ್ ಯೋಜನೆ ಬೇಡ ಎಂದು ಹಿಂದಿನ ಉಪ ಸಂರಕ್ಷಣಾಧಿಕಾರಿ ವರದಿ ನೀಡಿದ್ದರೂ ಈಗಿನ ಉಪ ಸಂರಕ್ಷಣಾಧಿಕಾರಿಯು ಯೋಜನೆಗೆ ಶಿಫಾರಸು ಮಾಡಿರುವುದು ಏಕೆ?, ಇದರ ಹಿಂದೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ಪರಿಸರಕ್ಕೆ ಹಾನಿಯಾಗುವ ಈ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಗಮನಕ್ಕೂ ತರಲಾಗಿದೆ. ಒಂದು ವೇಳೆ ಅನುಮತಿ ನೀಡಿದರೆ ಹಸಿರು ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಸಲಾಗುವುದು ಎಂದು ದಿನೇಶ್‌ ಕಲ್ಲಹಳ್ಳಿ ಅವರು 'ದ ಫೆಡರಲ್‌ ಕರ್ನಾಟಕ'ಕ್ಕೆ ತಿಳಿಸಿದರು.

Read More
Next Story