Karnataka By-election| ಚನ್ನಪಟ್ಟಣಕ್ಕೆ  ಅಚ್ಚರಿ ಅಭ್ಯರ್ಥಿ: ಡಿ.ಕೆ. ಸುರೇಶ್
x
ಡಿ.ಕೆ ಸುರೇಶ್‌

Karnataka By-election| ಚನ್ನಪಟ್ಟಣಕ್ಕೆ ಅಚ್ಚರಿ ಅಭ್ಯರ್ಥಿ: ಡಿ.ಕೆ. ಸುರೇಶ್

ಅವರಿಗೂ ನಮಗೂ ಸಂಬಂಧವಿಲ್ಲ. ಮೈತ್ರಿಕೂಟದಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ, ಯಾರು ಸಿಡಿದೇಳುತ್ತಾರೆ, ಅವರ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ. ನಾವು ನಮ್ಮ ಪಕ್ಷದ ಸಂಘಟನೆ, ನಮ್ಮ ಪಕ್ಷದ ಕಾರ್ಯಕ್ರಮ, ನಮ್ಮ ಕಾರ್ಯಕರ್ತರ ವಿಚಾರದ ಬಗ್ಗೆ ಮಾತ್ರ ಚರ್ಚೆ ಮಾಡುತ್ತೇವೆ.


Click the Play button to hear this message in audio format

“ಕಾಂಗ್ರೆಸ್ ಪಕ್ಷ ಚನ್ನಪಟ್ಟಣದಲ್ಲಿ ಗೆಲ್ಲುವ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಅವರು ಶುಕ್ರವಾರ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳು ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಣೆ ಮಾಡಲು ಮುಂದಾಗಿದ್ದೇವೆ. ನಿರಂತರವಾಗಿ ಎರಡು ಮೂರು ದಿನ ಚರ್ಚೆ ನಡೆಸಿ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಅವರು ತಿಳಿಸಿದರು.

ಅಭ್ಯರ್ಥಿ ಯಾರಾಗುತ್ತಾರೆ ಕೇಳಿದ ಪ್ರಶ್ನೆಗೆ ಅವರು “ನಾಮಪತ್ರ ಸಲ್ಲಿಕೆಗೆ ಇನ್ನು 25ನೇ ತಾರೀಕಿನವರೆಗೂ ಸಮಯವಿದೆ” ಎಂದರು.

ನೀವು ಕಣಕ್ಕಿಳಿಯಬೇಕು ಎಂದು ಒತ್ತಡ ಬರುತ್ತಿದೆ ಎಂದು ಕೇಳಿದಾಗ, “ನನಗೆ ಜನ ವಿಶ್ರಾಂತಿ ನೀಡಿದ್ದು, ನಾನು ವಿಶ್ರಾಂತಿಯಲ್ಲಿದ್ದೇನೆ. ನನ್ನ ಆಚಾರ, ವಿಚಾರ, ಅಭಿಪ್ರಾಯವನ್ನು ನಾನು ಪಕ್ಷಕ್ಕೆ ತಿಳಿಸಿದ್ದೇನೆ ಎಂದು ಅವರು ತಿಳಿಸಿದರು.

ಅಚ್ಚರಿ ಅಭ್ಯರ್ಥಿ ಮೈತ್ರಿಕೂಟದಿಂದ ಬಂಡಾಯ ಎದ್ದು ಬರುವ ಅಭ್ಯರ್ಥಿಯಾಗಿರಬಹುದೇ ಎಂದು ಕೇಳಿದಾಗ, “ಅವರಿಗೂ ನಮಗೂ ಸಂಬಂಧವಿಲ್ಲ. ಮೈತ್ರಿಕೂಟದಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ, ಯಾರು ಸಿಡಿದೇಳುತ್ತಾರೆ, ಅವರ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ. ನಾವು ನಮ್ಮ ಪಕ್ಷದ ಸಂಘಟನೆ, ನಮ್ಮ ಪಕ್ಷದ ಕಾರ್ಯಕ್ರಮ, ನಮ್ಮ ಕಾರ್ಯಕರ್ತರ ವಿಚಾರದ ಬಗ್ಗೆ ಮಾತ್ರ ಚರ್ಚೆ ಮಾಡುತ್ತೇವೆ. ಕಳೆದ ಮೂರು ತಿಂಗಳಿಂದ ಉಪಮುಖ್ಯಮಂತ್ರಿಗಳು, ನಮ್ಮ ಕಾರ್ಯಕರ್ತರು ಹಗಲು ರಾತ್ರಿ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿ ಚನ್ನಪಟ್ಟಣಕ್ಕೆ ಹೊಸ ದಿಕ್ಕು ನೀಡಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಚುನಾವಣೆ ಮಾಡುತ್ತೇವೆ” ಎಂದು ತಿಳಿಸಿದರು.

ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಂಸ್ಥೆ 15ದಿನಗಳ ಹಿಂದೆಯೇ ಪ್ರಕರಣ ದಾಖಲಿಸಿಕೊಂಡಿದೆ. ಅವರು ಕಾನೂನು ಪ್ರಕಾರ ತಮ್ಮ ಕೆಲಸದ ಭಾಗವಾಗಿ ಮೂಡಾ ಕಚೇರಿ ಹಾಗೂ ಸಂಬಂಧಪಟ್ಟವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಇದು ಪಾರದರ್ಶಕವಾದ ವಿಚಾರಣೆ. ಇಡಿ ತನಿಖೆ ಮಾಡಬೇಕಾದರೆ ಕೆಲವು ಪ್ರಕ್ರಿಯೆ ಪಾಲಿಸಬೇಕು. ಇದು ಅವರ ಕಾರ್ಯವೈಖರಿ ಎಂದರು.

ಇಡಿ ಸಂಸ್ಥೆ ಏನೇ ಮಾಡಿದರೂ ಮೂಡಾ ಪ್ರಕರಣದಲ್ಲಿ ಯಾವುದೇ ರೀತಿಯ ಹಣಕಾಸಿನ ವಹಿವಾಟು ನಡೆದಿಲ್ಲ. ನ್ಯಾಯಾಲಯದ ವಿಚಾರಣೆಯಲ್ಲೂ ಯಾವುದೇ ಹಂತದಲ್ಲಿ ಹಣಕಾಸಿನ ವಿಚಾರ ಚರ್ಚೆಯಾಗಿಲ್ಲ. ಇಡಿ ಅವರು ವಿಚಾರಣೆ ಮಾಡುವಾಗ ಹಣಕಾಸಿನ ಬಗ್ಗೆ ತನಿಖೆ ಮಾಡಬೇಕಾಗುತ್ತದೆ. ಆಗ ಅವರಿಗೆ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಮನದಟ್ಟಾಗುತ್ತದೆ. ನಂತರ ಅವರು ಬಿ ರಿಪೋರ್ಟ್ ಹಾಕಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ. ನನಗೆ ತಿಳಿದ ಪ್ರಕಾರ ಈ ಪ್ರಕರಣ ಸರ್ಕಾರದ ನಡುವೆ ಇರುವ ಪ್ರಕರಣವೇ ಹೊರತು, ಖಾಸಗಿ ವ್ಯಕ್ತಿಗಳ ನಡುವೆ ಇರುವ ಪ್ರಕರಣವಲ್ಲ. ಇಲ್ಲಿ ಖಾಸಗಿ ವ್ಯಕ್ತಿಗಳ ಹಸ್ತಕ್ಷೇಪವಿಲ್ಲ. ಇಲ್ಲಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಮೂಡಾ ಆಡಳಿತ ವೈಫಲ್ಯಗಳ ಬಗ್ಗೆ ಮಾತ್ರ ತನಿಖೆಯಾಗಲಿದೆ.

ಹಣಕಾಸು ವ್ಯವಹಾರವಾಗಿಲ್ಲವಾದರೆ ಇಡಿ ಪ್ರವೇಶ ಮಾಡಿದ್ದು ಹೇಗೆ ಎಂದು ಕೇಳಿದಾಗ, “ಲೋಕಾಯುಕ್ತ ತನಿಖೆಯಲ್ಲಿ ಸಂಶಯಾಸ್ಪದವಾಗಿ 120 ಬಿ ಸೆಕ್ಷನ್ ಹಾಕಲಾಗಿದ್ದು, ಇದರಿಂದ ಲೋಕಾಯುಕ್ತ ಪ್ರವೇಶವಾಗಿದೆ. ಈ ತನಿಖೆ ನಡೆದಾಗ ಸತ್ಯಾಂಶ ಹೊರಗೆ ಬರುತ್ತದೆ. ಇಡಿ ಅವರು ವಿಚಾರಣೆ ಮಾಡಲು ಹಣಕಾಸಿನ ವ್ಯವಹಾರವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಸರ್ಕಾರ ಆರೋಪಮುಕ್ತವಾಗಲಿದೆ” ಎಂದರು.

ಇಡಿ ದಾಳಿ

ಇದು ರಾಜಕೀಯ ಪ್ರೇರಿತ ಕ್ರಮವೇ ಎಂದು ಕೇಳಿದಾಗ, “ಈ ಪ್ರಕರಣ ಹಾಗೂ ದಾಳಿಗಳು ರಾಜಕೀಯ ಪ್ರೇರಿತ. ಇದರಲ್ಲಿ ಯಾವುದೇ ರೀತಿಯ ಸತ್ಯಾಂಶವಿಲ್ಲ. ನ್ಯಾಯಾಲಯದಲ್ಲಿ ಎಲ್ಲಾ ವಿಚಾರಗಳು ಕೂಲಂಕುಶವಾಗಿ ವಾದ ವಿವಾದಗಳು ನಡೆದಿವೆ. ಇನ್ನು ಈ ತನಿಖೆಯನ್ನು ಲೋಕಾಯುಕ್ತ ಸಂಸ್ಥೆ ನಡೆಸುತ್ತಿದೆ. ಈ ಮಧ್ಯೆ ರಾಜಕೀಯವಾಗಿ ಬೆದರಿಕೆ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಈ ಬೆದರಿಕೆಗೆ ಸರ್ಕಾರವಾಗಲಿ, ಮಾನ್ಯ ಮುಖ್ಯಮಂತ್ರಿಗಳಾಗಲಿ ಹೆದರುವ ಪ್ರಶ್ನೆಯಿಲ್ಲ” ಎಂದು ತಿಳಿಸಿದರು.

ವಾಲ್ಮೀಕಿ ಹಗರಣ ಪ್ರಕರಣದಲ್ಲಿ ಸಿಎಂ, ಡಿಸಿಎಂ ಹೆಸರು ಹೇಳಲು ಇಡಿ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂಬ ನಾಗೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇಡಿ, ಆದಾಯ ತೆರಿಗೆ, ಸಿಬಿಐ ಕೇಂದ್ರ ಸರ್ಕಾರದ ಅಸ್ತ್ರವಾಗಿವೆ. ಇವುಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಲಾಗುತ್ತಿದೆ. ವಿರೋಧ ಪಕ್ಷಗಳ ಮೇಲೆ ಈ ಸಂಸ್ಥೆಗಳನ್ನು ಪ್ರಯೋಗಿಸುವುದು ಹೊಸತೇನಲ್ಲ. ಕಳೆದ 10 ವರ್ಷಗಳಿಂದ ಇದು ನಡೆದುಕೊಂಡು ಬಂದಿದ್ದು, ಈ ಅವಧಿಯಲ್ಲೂ ಮುಂದುವರಿಯುತ್ತಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು, ನಾಯಕತ್ವಕ್ಕೆ ಧಕ್ಕೆ ತರಲು ಈ ಪ್ರಯತ್ನ ಮಾಡಲಾಗುತ್ತಿದೆ” ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಮುಳುಗಿಸಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರು ಮಂತ್ರಿಯಾದ ಬಳಿಕ ಆ ರೀತಿ ಆಗಿದೆ ಎಂದು ನಾನು ಹೇಳುತ್ತೇನೆ” ಎಂದು ತಿಳಿಸಿದರು.

ಸಿಎಂ, ಡಿಸಿಎಂ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಲಿಲ್ಲ ಎಂಬ ಆರೋಪದ ಬಗ್ಗೆ ಕೇಳಿದಾಗ, “ಪ್ರಧಾನಿಯೂ ಭೇಟಿ ನೀಡಿಲ್ಲ” ಎಂದು ತಿರುಗೇಟು ನೀಡಿದರು.

ಪ್ರಹ್ಲಾದ್ ಜೋಶಿ ಅವರು ಮುಕ್ತವಾಗಿ ಸತ್ಯಾಂಶ ತಿಳಿಸಲಿ

ಪ್ರಹ್ಲಾದ್ ಜೋಶಿ ಅವರ ಸೋದರ ಮತ್ತು ಸೋದರಿ ಜೆಡಿಎಸ್ ಅಭ್ಯರ್ಥಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ, “ಅದು ಅವರವರ ಪಕ್ಷದ ವಿಚಾರ. ಇಲ್ಲಿ ಪ್ರಹ್ಲಾದ್ ಜೋಶಿ ಅವರು ಉತ್ತರ ನೀಡಬೇಕು. ನಾನು ಹೇಗೆ ಉತ್ತರ ನೀಡಲು ಸಾಧ್ಯ? ಈ ಪ್ರಕರಣದಲ್ಲಿ ನಾವೇನಾದರೂ ಮಾತನಾಡಿದರೆ ನಾವೇ ಈ ಪ್ರಕರಣ ಮಾಡಿಸಿದ್ದೇವೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಾರೆ. ಅವರಿಗೆ ಸಂಬಂಧಿಸಿದ ವಿಚಾರವನ್ನು ಅವರ ಬಳಿಯೇ ಕೇಳಿ. ಅವರು ಎಲ್ಲಾ ವಿಚಾರದಲ್ಲೂ ಮಾತನಾಡುತ್ತಾರೆ. ಅದೇ ರೀತಿ ಈ ವಿಚಾರದಲ್ಲೂ ಮುಕ್ತವಾಗಿ ಮಾತನಾಡಿ ಜನರಿಗೆ ಸತ್ಯಾಂಶವನ್ನು ತಿಳಿಸಲಿ” ಎಂದು ಹೇಳಿದರು.

Read More
Next Story