
ಸಾಂದರ್ಭಿಕ ಚಿತ್ರ
ʼತ್ರಿಭಾಷಾ ಸೂತ್ರʼಕ್ಕೆ ವಿರೋಧ ; ದ್ವಿಭಾಷಾ ನೀತಿ ಜಾರಿಗೆ ಕನ್ನಡಿಗರ ಆಗ್ರಹ
ಕರ್ನಾಟಕದಲ್ಲಿ ತ್ರಿಭಾಷಾ ನೀತಿ ಬದಲು ದ್ವಿಭಾಷಾ ನೀತಿ ಜಾರಿ ಮಾಡುವಂತೆ ಕನ್ನಡಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು ಹಾಗೂ ಕನ್ನಡ ಚಿತ್ರರಂಗ ತಾರೆಯರು ಒತ್ತಾಯಿಸಿದ್ಧಾರೆ.
ಕೇಂದ್ರ ಸರ್ಕಾರದ ʼತ್ರಿಭಾಷಾ ನೀತಿʼ ಹೇರಿಕೆಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ʼತ್ರಿಭಾಷಾ ಸೂತ್ರʼ ದಡಿ ಬೋರ್ಡ್ ಪರೀಕ್ಷೆ ಬರೆದ 90 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣ ಆಗಿದ್ದಾರೆ ಎಂಬ ತಮಿಳುನಾಡು ಸಚಿವರ ಹೇಳಿಕೆ ಬೆನ್ನಲ್ಲೇ ಕೇಂದ್ರದ ಭಾಷಾ ನೀತಿಯು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರ ರದ್ದುಪಡಿಸಿ ʼದ್ವಿಭಾಷಾʼ ನೀತಿ ಜಾರಿ ಮಾಡುವಂತೆ ಕನ್ನಡ ಚಿತ್ರರಂಗ ಹಾಗೂ ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ.
ಸರ್ಕಾರ ನಿರ್ಧಾರ ಕೈಗೊಳ್ಳಲಿ
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಸರ್ಕಾರವು ʼತ್ರಿಭಾಷಾ ನೀತಿʼ ಗೆ ತಡೆ ನೀಡಿದೆ. ಬಿಜೆಪಿ ನೇತೃತ್ವದ ಸರ್ಕಾರವೇ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಆಗುವುದಾದರೆ ಕರ್ನಾಟಕ ಸರ್ಕಾರಕ್ಕೆ ಯಾಕೆ ಸಾಧ್ಯವಿಲ್ಲ ಎಂದು ಗೀತರಚನೆಗಾರ ಮತ್ತು ನಿರ್ದೇಶಕ ಕವಿರಾಜ್ ಸೇರಿ ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.
ʼತ್ರಿಭಾಷಾ ಸೂತ್ರʼಕ್ಕೆ ಮಹಾ ಸರ್ಕಾರ ತಡೆ
ಮಹಾರಾಷ್ಟ್ರದಲ್ಲಿ ʼತ್ರಿಭಾಷಾ ಸೂತ್ರʼ ಜಾರಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ತಡೆ ಹಿಡಿದಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ತ್ರಿಭಾಷಾ ನೀತಿ ಜಾರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರಾಥಮಿಕ ಶಾಲೆಯಲ್ಲಿ ಮೂರನೇ ಭಾಷೆಯಾಗಿ ಹಿಂದಿ ಕಲಿಕೆ ಬೇಡ ಎಂದು ನಿರ್ಧರಿಸಲಾಗಿದೆ. ಡಾ.ನರೇಂದ್ರ ಜಾಧವ್ ನೇತೃತ್ವದಲ್ಲಿ ಸಮಿತಿ ರಚಿಸಿ ಹೊಸ ನೀತಿಗಳ ಬಗ್ಗೆ ವರದಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣ
ಕರ್ನಾಟಕದಲ್ಲಿ ʼತ್ರಿಭಾಷಾ ನೀತಿʼ ಅಡಿ ಬೋರ್ಡ್ ಪರೀಕ್ಷೆ ಬರೆದ 90 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪ್ರಾದೇಶಿಕ ಭಾಷೆಗಳ ಮೇಲಿನ ಕೇಂದ್ರದ ದಾಳಿಗೆ ಇದು ಸಾಕ್ಷಿ ಎಂದು ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯುಮೊಳಿ ಆರೋಪಿಸಿದ್ದರು.
ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಅವರು, "ಕರ್ನಾಟಕದಲ್ಲಿ ತ್ರಿಭಾಷಾ ಹೇರಿಕೆಯಿಂದಲೇ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕೇಂದ್ರ ಸರ್ಕಾರದ ಭಾಷಾ ನೀತಿ ವೈಫಲ್ಯವನ್ನು ಇದು ತೋರಿಸುತ್ತದೆ. ತೃತೀಯ ಭಾಷೆ ಐಚ್ಛಿಕವಾಗಿರಬೇಕು. ಅದನ್ನು ಅಗತ್ಯವಾಗಿ ವಿದ್ಯಾರ್ಥಿಗಳ ಮೇಲೆ ಹೇರಬಾರದು. ಶಿಕ್ಷಣ ನೀತಿ ಸಡಿಲವಾದಷ್ಟು ವಿದ್ಯಾರ್ಥಿಗಳ ಮೇಲೆ ಭಾರ ಇಳಿಯಲಿದೆ ಎಂದು ಹೇಳಿದ್ದರು.
ಕೇಂದ್ರದಿಂದ ಅನುದಾನ ಕಡಿತ
ʼತ್ರಿಭಾಷಾ ನೀತಿʼಗೆ ವಿರೋಧ ವ್ಯಕ್ತಪಡಿಸಿದ ಕಾರಣ ದಕ್ಷಿಣ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡಿನ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಅನುದಾನ ಕಡಿತಗೊಳಿಸಿದೆ. ಹಿಂದಿ ಹೇರಿಕೆ ವಿರೋಧಿಸಿದ್ದರಿಂದ ಈ ರೀತಿ ಬೆದರಿಸಲಾಗುತ್ತಿದೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಕೂಡ ಆರೋಪಿಸಿದ್ದರು.
ಹಿಂದಿ ಯಾವ ಭಾಷೆಗಳ ವಿರೋಧಿಯಲ್ಲ
ಹಿಂದಿ ಹೇರಿಕೆಗೆ ದಕ್ಷಿಣ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಪ್ರತಿಕ್ರಿಯಿಸಿ, "ಹಿಂದಿ ಯಾವುದೇ ಪ್ರಾದೇಶಿಕ ಭಾಷೆಗಳ ವಿರೋಧಿಯಲ್ಲ. ಅದು ಸ್ನೇಹಿತನಿದ್ದಂತೆ. ದೇಶದಲ್ಲಿ ಯಾವುದೇ ಭಾಷೆಗೆ ವಿರೋಧ ಬೇಡ." ಎಂದು ಹೇಳಿಕೆ ನೀಡಿದ್ದರು.