ಮಹಿಳಾ ವೈದ್ಯೆಯ ಮುಸುಕು ಎಳೆದ ನಿತೀಶ್ ಕುಮಾರ್ ಕ್ಷಮೆಯಾಚಿಸಬೇಕು: ಒಮರ್ ಅಬ್ದುಲ್ಲಾ ಆಗ್ರಹ
x

ಮಹಿಳಾ ವೈದ್ಯೆಯ ಮುಸುಕು ಎಳೆದ ನಿತೀಶ್ ಕುಮಾರ್ ಕ್ಷಮೆಯಾಚಿಸಬೇಕು: ಒಮರ್ ಅಬ್ದುಲ್ಲಾ ಆಗ್ರಹ

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯ ಉಡುಪನ್ನು ಮುಟ್ಟುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದು, ಬಿಜೆಪಿಯ ದ್ವಂದ್ವ ನೀತಿಯ ವಿರುದ್ಧವೂ ಹರಿಹಾಯ್ದರು.


Click the Play button to hear this message in audio format

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಹಿಳಾ ವೈದ್ಯೆಯೊಬ್ಬರ ಮುಸುಕು (ಪರದೆ) ಎಳೆದ ಘಟನೆ ಅಕ್ಷಮ್ಯವಾಗಿದ್ದು, ಇದಕ್ಕಾಗಿ ಅವರು ಸಂತ್ರಸ್ತ ಮಹಿಳೆಯ ಕ್ಷಮೆಯಾಚಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಗ್ರಹಿಸಿದ್ದಾರೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯ ಉಡುಪನ್ನು ಮುಟ್ಟುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದು, ಬಿಜೆಪಿಯ ದ್ವಂದ್ವ ನೀತಿಯ ವಿರುದ್ಧವೂ ಹರಿಹಾಯ್ದರು.

ಘಟನೆಯ ಹಿನ್ನೆಲೆ ಮತ್ತು ಆಕ್ರೋಶ

ಸೋಮವಾರ ಪಾಟ್ನಾದಲ್ಲಿ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ನೇಮಕಾತಿ ಪತ್ರ ಪಡೆಯಲು ವೇದಿಕೆಗೆ ಬಂದ ಮುಸ್ಲಿಂ ಮಹಿಳಾ ವೈದ್ಯೆಯೊಬ್ಬರು ಮುಖಕ್ಕೆ ಬುರ್ಖಾ (ನಖಾಬ್) ಧರಿಸಿದ್ದರು. ಇದನ್ನು ಕಂಡ ಮುಖ್ಯಮಂತ್ರಿ ನಿತೀಶ್ ಕುಮಾರ್, "ಇದೇನು?" ಎಂದು ಪ್ರಶ್ನಿಸುತ್ತಾ ಆಕೆಯ ಮುಸುಕನ್ನು ಸರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಒಮರ್ ಅಬ್ದುಲ್ಲಾ, "ನಿತೀಶ್ ಕುಮಾರ್ ಅವರ ವರ್ತನೆ ಒಪ್ಪಲು ಸಾಧ್ಯವಿಲ್ಲದಂತದ್ದು. ಮಹಿಳೆಯ ಬಟ್ಟೆಯನ್ನು ಮುಟ್ಟುವ ಹಕ್ಕು ಯಾರಿಗೂ ಇಲ್ಲ. ನಾನು ಕೇಳಿದ ಪ್ರಕಾರ, ಆ ಅವಮಾನದಿಂದ ನೊಂದಿರುವ ಮಹಿಳಾ ವೈದ್ಯೆ ತಮಗೆ ದೊರೆತ ಸರ್ಕಾರಿ ಕೆಲಸವನ್ನೇ ತಿರಸ್ಕರಿಸಿದ್ದಾರೆ. ನಿತೀಶ್ ಕುಮಾರ್ ಅವರು ಕೂಡಲೇ ಆಕೆಯ ಕ್ಷಮೆ ಕೇಳಬೇಕು ಮತ್ತು ಆಕೆ ಕೆಲಸಕ್ಕೆ ಸೇರುವಂತೆ ಮನವೊಲಿಸಬೇಕು," ಎಂದು ಒತ್ತಾಯಿಸಿದರು.

ಬಿಜೆಪಿಯ ಇಬ್ಬಗೆಯ ನೀತಿ

ಘಟನೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಅಬ್ದುಲ್ಲಾ, "ಬಿಜೆಪಿಯಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹರಿಯಾಣ ಅಥವಾ ರಾಜಸ್ಥಾನದಲ್ಲಿ ಒಬ್ಬ ಮುಸ್ಲಿಂ ನಾಯಕ ಹಿಂದೂ ಮಹಿಳೆಯ ಸೆರಗು ಅಥವಾ ಮುಸುಕನ್ನು ಮುಟ್ಟಿದ್ದರೆ ದೇಶಾದ್ಯಂತ ದೊಡ್ಡ ಕೋಲಾಹಲವೇ ಏಳುತ್ತಿತ್ತು. ಆದರೆ ಇಲ್ಲಿ ಸಂತ್ರಸ್ತೆ ಮುಸ್ಲಿಂ ಆಗಿರುವುದರಿಂದ ಬಿಜೆಪಿಗೆ ಇದರಲ್ಲಿ ತಪ್ಪೇನೂ ಕಾಣಿಸುತ್ತಿಲ್ಲ," ಎಂದು ಕಿಡಿಕಾರಿದರು. ಇದು ಧರ್ಮದ ವಿಷಯವಲ್ಲ, ಒಬ್ಬ ಮುಖ್ಯಮಂತ್ರಿಯ ಅನುಚಿತ ವರ್ತನೆಯ ವಿಷಯ ಎಂದರು.

ಆಪರೇಷನ್ ಸಿಂಧೂರ್ ಮತ್ತು 'ಐಡಿಯಾ ಆಫ್ ಇಂಡಿಯಾ'

ಇದೇ ವೇಳೆ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಬಗ್ಗೆ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಅದು ಚವಾಣ್ ಅವರ ವೈಯಕ್ತಿಕ ಅಭಿಪ್ರಾಯವಿರಬಹುದು. ಪಹಲ್ಗಾಮ್ ಉಗ್ರರ ದಾಳಿಯ ನಂತರ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಸರ್ಕಾರ ಮತ್ತು ಸೇನೆಯ ಬೆಂಬಲಕ್ಕೆ ನಿಂತಿವೆ," ಎಂದು ಸ್ಪಷ್ಟಪಡಿಸಿದರು.

ಜಮ್ಮು ಮತ್ತು ಕಾಶ್ಮೀರದ ಕುರಿತು ಮಾತನಾಡುತ್ತಾ, "ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಿದ್ದರೂ ಕಾಶ್ಮೀರವು ಪಾಕಿಸ್ತಾನದ ಬದಲು ಭಾರತದೊಂದಿಗೆ ವಿಲೀನವಾಗಲು ಬಯಸಿತು. ಇದೇ ನಾವು ಉಳಿಸಿಕೊಳ್ಳಬೇಕಾದ 'ಐಡಿಯಾ ಆಫ್ ಇಂಡಿಯಾ'. ಆದರೆ ಇಂದು ವೈಷ್ಣೋದೇವಿ ವೈದ್ಯಕೀಯ ಕಾಲೇಜು ಪ್ರವೇಶಾತಿ ಮತ್ತು ಸಂತೋಷ್ ಟ್ರೋಫಿ ಫುಟ್‌ಬಾಲ್ ತಂಡದ ಆಯ್ಕೆಯಲ್ಲಿ ಧರ್ಮದ ಆಧಾರದ ಮೇಲೆ ಚರ್ಚೆಗಳು ನಡೆಯುತ್ತಿರುವುದು ಬೇಸರದ ಸಂಗತಿ. ಪ್ರತಿಭೆ ಮತ್ತು ಅರ್ಹತೆ ಮಾತ್ರ ಮಾನದಂಡವಾಗಬೇಕೇ ಹೊರತು ಧರ್ಮವಲ್ಲ," ಎಂದು ಒಮರ್ ಅಬ್ದುಲ್ಲಾ ಪ್ರತಿಪಾದಿಸಿದರು.

Read More
Next Story