
ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ. ಪಿ
Govt Schools | ಇನ್ನೂ ಸಿಕ್ಕಿಲ್ಲ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ !
ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಪಠ್ಯಪೂರಕ ಸಾಮಗ್ರಿಗಳಾದ ಪಠ್ಯಪುಸ್ತಕ, ಸಮವಸ್ತ್ರ, ಶೂ ಹಾಗೂ ಸಾಕ್ಸ್ ಒದಗಿಸುವ ಬಾಧ್ಯತೆಯನ್ನೂ ಸರ್ಕಾರ ಹೊಂದಿದೆ.
ರಾಜ್ಯದಲ್ಲಿ ಶಾಲೆಗಳು ಆರಂಭವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಈವರೆಗೆ ಶೂ ಹಾಗೂ ಸಾಕ್ಸ್ ಒದಗಿಸದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಿ ಶಾಲೆಯ 1 ರಿಂದ 10ನೇ ತರಗತಿವರೆಗೆ ಮಕ್ಕಳಿಗೆ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್ (ಕಾಲು ಚೀಲ) ಒದಗಿಸಲು ಸರ್ಕಾರ 410ಕೋಟಿ ಅನುದಾನ ನಿಗದಿ ಮಾಡಿದೆ. ಮೊದಲ ಹಂತದಲ್ಲಿ ಶೂ ಹಾಗೂ ಸಾಕ್ಸ್ ಖರೀದಿಸಲು 111.88 ಕೋಟಿ ರೂ. ಬಿಡುಗಡೆ ಮಾಡಿದರೂ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ.
ಅಂದಾಜು 42.65 ಲಕ್ಷ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಪೂರೈಸಬೇಕಾಗಿದೆ. ವಿದ್ಯಾರ್ಥಿಗಳ ಶೂ ಅಳತೆ ಪಡೆದು, ಗುಣಮಟ್ಟದ ಪಾದರಕ್ಷೆಗಳನ್ನು ಸ್ಥಳೀಯವಾಗಿ ಖರೀದಿಸಿ ವಿತರಣೆ ಮಾಡುವ ಜವಾಬ್ದಾರಿಯನ್ನು ಆಯಾ ಶಾಲೆಗಳ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ (ಎಸ್ಡಿಎಂಸಿ) ವಹಿಸಿದೆ.
ಸರ್ಕಾರ ಬಿಡುಗಡೆ ಮಾಡಿರುವ ಅನುದಾನವು ಎಸ್ಡಿಎಂಸಿ ಅಧ್ಯಕ್ಷರ ಕೈ ಸೇರಲು ಕನಿಷ್ಠ ಒಂದು ತಿಂಗಳು ಕಾಯಬೇಕಿದೆ. ಆ ಹಣದಲ್ಲಿ ಶೂ ಹಾಗೂ ಸಾಕ್ಸ್ ಖರೀದಿಸಿ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದು. ಹೀಗಿರುವಾಗ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದ ವಿದ್ಯಾರ್ಥಿಗಳು ಬರಿಗಾಲಲ್ಲೇ ಶಾಲೆಗೆ ಬರಬೇಕಾದ ಪರಿಸ್ಥಿತಿ ಎದುರಾಗಿದೆ.
ವಿದ್ಯಾರ್ಥಿಗಳಿಗೆ ಕಾಲಮಿತಿಯಲ್ಲಿ ಪಠ್ಯಪೂರಕ ಸಾಮಗ್ರಿ ಒದಗಿಸದೇ ಹೋದರೆ ಅದು ಅವರ ಶೈಕ್ಷಣಿಕ ಚಟುವಟಿಕೆಯ ಮೇಲೂ ಪರಿಣಾಮ ಬೀರಲಿದೆ. ಅಲ್ಲದೇ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಲಿದೆ. ಕಲ್ಯಾಣ ಕರ್ನಾಟಕದ ಕೆಲವು ಕಡೆಗಳಲ್ಲಿ ಇನ್ನೂ ಪುಸ್ತಕ ವಿತರಿಸಿಲ್ಲ. ಸರ್ಕಾರ ತ್ವರಿತವಾಗಿ ಶೂ ಹಾಗೂ ಸಾಕ್ಸ್ ಖರೀದಿ ಪ್ರಕ್ರಿಯೆ ಆರಂಭಿಸಲು ಅನುವು ಮಾಡಿಕೊಡಬೇಕು ಎಂದು ಶಿಕ್ಷಣ ತಜ್ಞ ನಿರಂಜನಾರಾದ್ಯ ವಿ.ಪಿ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಬಹುತೇಕ ಬಡವರು. ಪೋಷಕರು ತಮ್ಮ ಮಕ್ಕಳಿಗೆ ಶೂ, ಚಪ್ಪಲಿ ಖರೀದಿಸಿ ಕೊಡುವುದೂ ಕಷ್ಟ. ಇದರಿಂದ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ, ನಗರ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳು ಕೂಡ ಬರಿಗಾಲಿನಲ್ಲೇ ಶಾಲೆಗೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಲಮಿತಿ ನಿಗದಿಪಡಿಸಿ
ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 3 ರ ಅನ್ವಯ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಶೂ, ಸಾಕ್ಸ್ ಮತ್ತು ಪಠ್ಯಪುಸ್ತಕಗಳನ್ನು ಸರಿಯಾದ ಸಮಯಕ್ಕೆ ನೀಡದೇ ಹೋದರೆ ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕಿನ ಉಲ್ಲಂಘನೆಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಜೂ.25 ರಂದು ಹೊರಡಿಸಿರುವ ಸುತ್ತೋಲೆ ಅನ್ವಯ ಕೂಡಲೇ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಒದಗಿಸಲು ಕಾಲಮಿತಿ ನಿಗದಿಗೊಳಿಸಿ, ಶಿಕ್ಷಣ ಹಕ್ಕು ಕಾಯಿದೆ ಅನುಷ್ಠಾನದ ಜವಾಬ್ದಾರಿ ಹೊರಬೇಕು. ವೈಫಲ್ಯಗಳಿಗೆ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು (ಬಿಇಒ) ಪೂರ್ಣ ಹೊಣೆಗಾರರನ್ನಾಗಿ ಮಾಡಬೇಕು ಎಂದು ನಿರಂಜನರಾದ್ಯ ಆಗ್ರಹಿಸಿದ್ದಾರೆ.
ಕಲ್ಯಾಣ ಕರ್ನಾಟಕ್ಕೆ ಪುಸ್ತಕಗಳೇ ದೊರೆತಿಲ್ಲ
"ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಈವರೆಗೂ ಪಠ್ಯಪುಸ್ತಕ ತಲುಪಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪುಸ್ತಕ ವಿತರಿಸದಿದ್ದರೂ ಡೆಲಿವರಿ ಚಲನ್ ಅನ್ನು ಎಸ್ಟಿಎಸ್ (STS) ತಂತ್ರಾಂಶದಲ್ಲಿ ಒತ್ತಾಯಪೂರ್ವಕವಾಗಿ ಅಪ್ಲೋಡ್ ಮಾಡಿಸಲಾಗುತ್ತಿದೆ. ಮಕ್ಕಳಿಗೆ ಕಾಟಾಚಾರಕ್ಕೆ ಸೇತುಬಂಧ ಕಾರ್ಯಕ್ರಮ ಮಾಡಲಾಗಿದೆ ಎಂಬುದನ್ನು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ(ಎಸ್ಡಿಎಂಸಿ)ಗಳೇ ದೂರುತ್ತಿವೆ.
ಶೂ, ಸಾಕ್ಸ್ಗೆ ದರ ನಿಗದಿ
ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಶೂ ಮತ್ತು ಸಾಕ್ಸ್ ಬದಲಾಗಿ ಪಾದರಕ್ಷೆಗಳನ್ನೂ ಖರೀದಿ ಮಾಡಬಹುದು ಎಂಬುದು ಶಿಕ್ಷಣ ಹಕ್ಕು ಕಾಯ್ದೆಯಲ್ಲಿದೆ. ಶೂ ಹಾಗೂ ಸಾಕ್ಸ್ ಖರೀದಿಗೆ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 265 ರೂ, 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 295 ರೂ. ಹಾಗೂ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ಗಳನ್ನು ಸರ್ಕಾರ ನಿಗದಿ ಮಾಡಿದೆ.