ಚಹಾ ಇಲ್ಲ, ಕಟಿಂಗ್ ಇಲ್ಲ: ಚಿನ್ನಕಾರದಲ್ಲಿ ಸವರ್ಣೀಯರಿಂದ ದಲಿತರಿಗೆ ಸಾಮಾಜಿಕ ನಿರ್ಬಂಧ
x

ಯಾದಗಿರಿ

"ಚಹಾ ಇಲ್ಲ, ಕಟಿಂಗ್ ಇಲ್ಲ": ಚಿನ್ನಕಾರದಲ್ಲಿ ಸವರ್ಣೀಯರಿಂದ ದಲಿತರಿಗೆ ಸಾಮಾಜಿಕ ನಿರ್ಬಂಧ

ದಲಿತರು ಗ್ರಾಮದ ಸವರ್ಣೀಯರ ಹೋಟೆಲ್​ಗೆ ಹೋಗಿ ಚಹಾ ಕುಡಿಯಲು ಹೋದರೆ ಚಹಾ ಕೊಟ್ಟಿಲ್ಲ. ಕ್ಷೌರದ ಅಂಗಡಿಗೆ ಹೋದರೆ ಕಟಿಂಗ್ ಮಾಡಿಲ್ಲ. ಏಕೆ ಅಂತ ದಲಿತರು ಪ್ರಶ್ನೆ ಮಾಡಿದರೆ ದಲಿತರಿಗೆ ಕಟಿಂಗ್ ಮಾಡಬೇಡಿ ಎಂದು ಹೇಳಿದ್ದಾರೆ, ಒಂದು ವೇಳೆ ಕಟಿಂಗ್ ಮಾಡಿದರೆ ಲೈಸೆನ್ಸ್ ಕ್ಯಾನ್ಸಲ್ ಮಾಡಿಸುವುದಾಗಿ ಹೇಳಿದ್ದಾರೆ ಎಂದಿದ್ದಾರೆ.


ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿನ್ನಕಾರ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸವರ್ಣೀಯರ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ದಲಿತ ಸಮುದಾಯದವರಿಗೆ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಾದ ಭೂಮಿಯಲ್ಲಿ ಬೇರೆ ಕಟ್ಟಡ ನಿರ್ಮಿಸಲು ಹೊರಟ ಸವರ್ಣೀಯರ ಕ್ರಮಕ್ಕೆ ದಲಿತರು ವಿರೋಧ ವ್ಯಕ್ತಪಡಿಸಿದ್ದೇ ಈ ಬಹಿಷ್ಕಾರಕ್ಕೆ ಕಾರಣವಾಗಿದೆ.

ಭವನ ನಿರ್ಮಾಣಕ್ಕೆ ಅಡ್ಡಿ, ಪಂಚಾಯಿತಿ ಕಟ್ಟಡಕ್ಕೆ ಸಂಚು

2017ರಲ್ಲಿ ಚಿನ್ನಕಾರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಸರ್ಕಾರ 6 ಗುಂಟೆ ಭೂಮಿಯನ್ನು ಮಂಜೂರು ಮಾಡಿತ್ತು. ಆದರೆ ವಿವಿಧ ಕಾರಣಗಳಿಂದ ಈ ಭವನವನ್ನು ಇದುವರೆಗೂ ನಿರ್ಮಿಸಲಾಗಿಲ್ಲ. ಇದನ್ನೇ ಬಳಸಿಕೊಂಡ ಸವರ್ಣೀಯರು, ಕಳೆದ ಒಂದು ವರ್ಷದಿಂದ ಈ ಜಾಗದಲ್ಲಿ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿದ್ದರು.

ಜೂನ್ 20ರಂದು, ಈ ಯೋಜನೆಯ ಭಾಗವಾಗಿ, ಜೆಸಿಬಿ ಮೂಲಕ ಜಾಗವನ್ನು ಸ್ವಚ್ಛಗೊಳಿಸಿ ಕಾಮಗಾರಿ ಆರಂಭಿಸಲು ಮುಂದಾದಾಗ, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಸಹ ಅಲ್ಲಿ ಹಾಜರಿದ್ದರು. ಇದಕ್ಕೆ ದಲಿತ ಸಮುದಾಯದವರು ತೀವ್ರ ವಿರೋಧ ವ್ಯಕ್ತಪಡಿಸಿದರು. "ಇದು ಅಂಬೇಡ್ಕರ್ ಭವನಕ್ಕೆ ಮೀಸಲಾಗಿರುವ ಜಾಗವಾದ್ದರಿಂದ ಇಲ್ಲಿ ಬೇರೆ ಕಟ್ಟಡ ನಿರ್ಮಾಣ ಮಾಡಬಾರದು," ಎಂದು ಅವರು ಪ್ರತಿಭಟಿಸಿದರು. ಇದಕ್ಕೆ ರೊಚ್ಚಿಗೆದ್ದ ಸವರ್ಣೀಯರು ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದಲಿತ ಮುಖಂಡ ಹುಸೇನಪ್ಪ ಹೇಳಿದ್ದಾರೆ.

ಪೊಲೀಸ್ ದೂರು ಮತ್ತು ಬಹಿಷ್ಕಾರದ ಆದೇಶ

ದಲಿತರ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಕ್ಕೆ ಅವರು ಗುರುಮಠಕಲ್ ಪೊಲೀಸ್ ಠಾಣೆಗೆ ದೂರು ನೀಡಿದರು. ಆದರೆ, ದೂರು ನೀಡಿ ಊರಿಗೆ ಮರಳಿದ ಬಳಿಕ, ಸವರ್ಣೀಯರೆಲ್ಲರೂ ಸೇರಿ ಸಭೆ ನಡೆಸಿ ದಲಿತರ ಜೊತೆ ಯಾವುದೇ ವ್ಯವಹಾರ ಮಾಡಬಾರದು ಎಂದು ಮೌಖಿಕ ಆದೇಶ ಹೊರಡಿಸಿದ್ದಾರೆ. ಗ್ರಾಮದ ಸವರ್ಣೀಯರಲ್ಲಿ ಹಿರಿಯರು ಹೊರಡಿಸಿದ ಈ ಆದೇಶವನ್ನು ಎಲ್ಲರೂ ಪಾಲಿಸುತ್ತಿದ್ದಾರೆ.

ಹೋಟೆಲ್, ಕ್ಷೌರದ ಅಂಗಡಿಗಳಲ್ಲಿ ನಿರಾಕರಣೆ: ಆಡಿಯೋ ವೈರಲ್

ಈ ಬಹಿಷ್ಕಾರದ ಪರಿಣಾಮವಾಗಿ, ದಲಿತರು ಗ್ರಾಮದ ಸವರ್ಣೀಯರ ಹೋಟೆಲ್‌ಗಳಿಗೆ ಚಹಾ ಕುಡಿಯಲು ಹೋದರೆ ಚಹಾ ನೀಡುತ್ತಿಲ್ಲ. ಕ್ಷೌರದ ಅಂಗಡಿಗಳಿಗೆ ಹೋದರೆ ಕಟಿಂಗ್ ಮಾಡುತ್ತಿಲ್ಲ. ಇದಕ್ಕೆ ಕಾರಣ ಕೇಳಿದರೆ, "ದಲಿತರಿಗೆ ಕಟಿಂಗ್ ಮಾಡಬೇಡಿ ಎಂದು ಹೇಳಿದ್ದಾರೆ, ಒಂದು ವೇಳೆ ಕಟಿಂಗ್ ಮಾಡಿದರೆ ಲೈಸೆನ್ಸ್ ಕ್ಯಾನ್ಸಲ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ," ಎಂದು ದಲಿತರು ಆರೋಪಿಸಿದ್ದಾರೆ. ಈ ರೀತಿಯ ಬೆದರಿಕೆಗಳ ಆಡಿಯೋಗಳು ಸದ್ಯ ವೈರಲ್ ಆಗುತ್ತಿವೆ. ಅಷ್ಟೇ ಅಲ್ಲದೆ, ಗ್ರಾಮದಲ್ಲಿ ದಲಿತರ ಕುರಿಗಳು, ದನಗಳನ್ನು ಯಾರೂ ಕಾಯಬಾರದು ಎಂದೂ ಆದೇಶ ಮಾಡಿದ್ದಾರೆ.

Read More
Next Story