ಕೇಂದ್ರದ ತ್ರಿಭಾಷಾ ಸೂತ್ರಕ್ಕೆ ಇಲ್ಲ ಮನ್ನಣೆ ; ʼದ್ವಿಭಾಷಾ ʼನೀತಿ ಜಾರಿಗೆ ಸರ್ಕಾರದ ಚಿಂತನೆ
x

ಕೇಂದ್ರದ ತ್ರಿಭಾಷಾ ಸೂತ್ರಕ್ಕೆ ಇಲ್ಲ ಮನ್ನಣೆ ; ʼದ್ವಿಭಾಷಾ ʼನೀತಿ ಜಾರಿಗೆ ಸರ್ಕಾರದ ಚಿಂತನೆ

ಮೈಸೂರಿನಲ್ಲಿ ಸೋಮವಾರ ಸಿದ್ದರಾಮಯ್ಯ ಅವರು ಮಾಧ್ಯಮದ ಜತೆ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ದ್ವಿಭಾಷಾ ನೀತಿಯ ಪರವಾಗಿದೆ ಎಂದು ‌ ಸ್ಪಷ್ಟವಾಗಿ ಹೇಳಿರುವುದು ದ್ವಿಭಾಷಾ ನೀತಿ ಜಾರಿ ಬಗ್ಗೆ ಚರ್ಚೆಗೆ ಕಾರಣವಾಗಿದೆ.


ಕರ್ನಾಟಕದಲ್ಲಿ ʼದ್ವಿಭಾಷಾ ಸೂತ್ರʼ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಗೆ ದಕ್ಷಿಣ ಭಾರತದ ರಾಜ್ಯಗಳಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದ್ವಿಭಾಷಾ ನೀತಿ ಜಾರಿ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ರಾಜ್ಯದಲ್ಲಿ ತ್ರಿಭಾಷಾ ನೀತಿ ಕೈ ಬಿಟ್ಟು ದ್ವಿಭಾಷಾ ನೀತಿ ಜಾರಿ ಮಾಡುವಂತೆ ಸಾಹಿತಿಗಳು, ಹೋರಾಟಗಾರರು ಹಾಗೂ ಕನ್ನಡ ಪರ ಸಂಘಟನೆಗಳ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾಗಿ ಮೈಸೂರಿನಲ್ಲಿ ಸೋಮವಾರ ಸಿದ್ದರಾಮಯ್ಯ ಅವರು ಮಾಧ್ಯಮದ ಜತೆ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ದ್ವಿಭಾಷಾ ನೀತಿಯ ಪರವಾಗಿದೆ ಎಂದು ‌ ಸ್ಪಷ್ಟವಾಗಿ ಹೇಳಿರುವುದು ದ್ವಿಭಾಷಾ ನೀತಿ ಜಾರಿ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ದೇಶವ್ಯಾಪಿ ಹಿಂದಿ ಹೇರಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಆ ಸಲುವಾಗಿ ಶಿಕ್ಷಣ ಹಾಗೂ ಆಡಳಿತದಲ್ಲಿ ತ್ರಿಭಾಷಾ ನೀತಿ ಜಾರಿಗೆ ತಂದಿದೆ. ಆದರೆ, ದಕ್ಷಿಣ ರಾಜ್ಯಗಳು ಕೇಂದ್ರದ ನೀತಿಗೆ ಆಕ್ಷೇಪ ವ್ಯಕ್ತಪಡಿಸಿವೆ.

ಪ್ರಸ್ತುತ, ತಮಿಳುನಾಡು ಹೊರತುಪಡಿಸಿದರೆ ಉಳಿದ ಎಲ್ಲಾ ರಾಜ್ಯಗಳಲ್ಲೂ ತ್ರಿಭಾಷಾ ನೀತಿ ಜಾರಿಯಲ್ಲಿದೆ. ಹಿಂದಿ ಹೇರಿಕೆಗೆ ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಈಗ ಮಹಾರಾಷ್ಟ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಕೂಡ ತ್ರಿಭಾಷಾ ನೀತಿ ರದ್ದುಪಡಿಸಿ, ದ್ವಿಭಾಷಾ ನೀತಿಗೆ ಒತ್ತು ನೀಡಿರುವುದರಿಂದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

ʼದ್ವಿಭಾಷಾ ನೀತಿʼ ಜಾರಿಗೆ ತನ್ನಿ

ರಾಜ್ಯದ ಶಾಲೆಗಳಲ್ಲಿ ನನೆಗುದಿಗೆ ಬಿದ್ದಿರುವ ದ್ವಿಭಾಷಾ ಸೂತ್ರವನ್ನು ಕರ್ನಾಟಕ ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

" ಪ್ರಾದೇಶಿಕ ಅಸಮತೋಲನ ಸರಿಪಡಿಸಲು, ಕನ್ನಡ ಭಾಷೆಯ ಹಿರಿಮೆ ಎತ್ತಿ ಹಿಡಿಯಲು ಹಾಗೂ ದೇಶದಲ್ಲಿ ಸ್ಥಳೀಯ ಭಾಷೆಗಳ ಉಳಿವಿಗಾಗಿ ಕನ್ನಡಪರ ಮನಸ್ಸುಗಳ ಬೇಡಿಕೆಯನ್ನು ಈಡೇರಿಸಲು ತಾವು ಕೂಡಲೇ ಮುಂದಾಗಬೇಕು " ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

"ಈಗಾಗಲೇ ಪ್ರತಿ ವರ್ಷ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಿರುವ ತ್ರಿಭಾಷಾ ಸೂತ್ರದ ಅನುಸಾರ ಹಿಂದಿ ಭಾಷೆಯಲ್ಲಿ ನಪಾಸಾಗುವ ಮೂಲಕ ಭವಿಷ್ಯ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈಗಾಗಲೇ ಆಮ್ ಆದ್ಮಿ ಪಕ್ಷವು ಪಂಜಾಬ್ ಹಾಗೂ ದೆಹಲಿಯಲ್ಲಿ ದ್ವಿಭಾಷಾ ನೀತಿ ಜಾರಿಗೆ ತಂದಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಕೂಡ ಹೋರಾಟಗಾರರ ಒತ್ತಡಕ್ಕೆ ಮಣಿದು ತ್ರಿಭಾಷಾ ಸೂತ್ರ ಕೈಬಿಟ್ಟಿದೆ. ಹಾಗಾಗಿ ರಾಜ್ಯದ ಲಕ್ಷಾಂತರ ಮಕ್ಕಳ ಶಿಕ್ಷಣದ ಭವಿಷ್ಯವನ್ನು ಕಾಪಾಡುವ ದಿಶೆಯಲ್ಲಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ದ್ವಿಭಾಷಾ ನೀತಿ ಮಸೂದೆ ಮಂಡಿಸಿ, ಅಂಗೀಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮಕ್ಕಳನ್ನು ಶೈಕ್ಷಣಿಕ ಅಂಧಕಾರದಲ್ಲಿ ದೂಡುವ ಈ ತ್ರಿಭಾಷಾ ನೀತಿಯನ್ನು ಕೂಡಲೇ ರದ್ದುಗೊಳಿಸಿ, ಕನ್ನಡ ಭಾಷೆಯ ಅಳಿವು ಉಳಿವಿಗಾಗಿ ದ್ವಿಭಾಷಾ ನೀತಿ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೂ ಒತ್ತಾಯ

ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಒಳಗೊಂಡ ದ್ವಿಭಾಷಾ ನೀತಿ ಜಾರಿ ಮಾಡುವಂತೆ ಒತ್ತಾಯಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿತು.

"ನಮ್ಮ ಭೂಮಿ, ನಮ್ಮ ಆಡಳಿತ" ಸಂಘಟನೆಯ ರಮೇಶ್ ಬೆಲ್ಲಂಕೊಂಡ ಅವರು ಸಲ್ಲಿಸಿದ್ದ ಮನವಿಯೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದು ದ್ವಿಭಾಷಾ ನೀತಿಗೆ ಒತ್ತಾಯಿಸಿದ್ದರು.

ಹಿಂದಿ ಹೇರಿಕೆಯನ್ನು ಬಲವಾಗಿ ವಿರೋಧಿಸುವ ಮತ್ತು ಶಿಕ್ಷಣ, ಆಡಳಿತ ಮತ್ತು ಸಾರ್ವಜನಿಕ ಸಂವಹನದಲ್ಲಿ ಕನ್ನಡ, ಇಂಗ್ಲಿಷ್ ಮಾತ್ರ ಕಡ್ಡಾಯ ಭಾಷೆಗಳನ್ನಾಗಿ ಮಾಡಬೇಕು. ಕೇಂದ್ರ ಸರ್ಕಾರದ ಈ ನೀತಿಯು ಯುಪಿಎಸ್‌ಸಿ, ಎಸ್‌ಎಸ್‌ಸಿ ಮತ್ತು ಬ್ಯಾಂಕಿಂಗ್ ಪರೀಕ್ಷೆ ನೇಮಕಾತಿ ಪ್ರಕ್ರಿಯೆಗಳಲ್ಲಿ ಹಿಂದಿ ಭಾಷಿಕರನ್ನು ಬೆಂಬಲಿಸುವ ತಂತ್ರ ಒಳಗೊಂಡಿದೆ ಎಂದು ದೂರಿದ್ದರು.

ಬಹುಭಾಷಾ ನೀತಿ ಜಾರಿಗೆ ಒತ್ತಾಯ

ಮಕ್ಕಳ ಭಾಷಾ ಬೆಳವಣಿಗೆ ಮತ್ತು ಗುಣಾತ್ಮಕ ಕಲಿಕೆಗೆ ಒತ್ತು ನೀಡುವ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳಿಗೆ ಒಪ್ಪಿಗೆಯಾಗುವ ಒಂದು ಸಮಗ್ರ ಬಹು ಭಾಷಾ ನೀತಿ ರೂಪಿಸಬೇಕು ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಆಗ್ರಹಿಸಿದೆ.

ಒಂದು ಭಾಷೆಯ ಹೇರಿಕೆಗೆ ಅನುವು ಮಾಡಿಕೊಡುವ ತ್ರಿಭಾಷಾ ಸೂತ್ರ ಜಾರಿಯ ರಾಜಕಾರಣ ಮಾಡುತ್ತಿರುವ ಕೇಂದ್ರದ ಕ್ರಮವನ್ನು ಪಾಪ್ರೆ ಬಲವಾಗಿ ಖಂಡಿಸಿದೆ.

ತಪ್ಪು ಗ್ರಹಿಕೆ ಮತ್ತು ತಪ್ಪು ನಿರ್ದೇಶಿತ ತ್ರಿಭಾಷಾ ನೀತಿಯು ದಕ್ಷಿಣದ ಪ್ರತಿಯೊಬ್ಬ ವ್ಯಕ್ತಿಯೂ ಹಿಂದಿ ಕಲಿಯಲು ಒಪ್ಪುತ್ತಾನೆ ಎಂದು ತಪ್ಪಾಗಿ ಭಾವಿಸಿದೆ. ಅದರಿಂದ, ಅವರಿಗೆ ಯಾವ ಪ್ರಯೋಜನ ಇರಬಹುದೆಂಬ ಕನಿಷ್ಠ ಚಿಂತನೆಯೂ ನಡೆಯಲಿಲ್ಲ. ತ್ರಿಭಾಷಾ ಸೂತ್ರ ಈಶಾನ್ಯ ಭಾರತವನ್ನು ಪರಿಗಣಿಸಲೇ ಇಲ್ಲ. ದಕ್ಷಿಣ ಭಾರತದಲ್ಲಿ ಹಿಂದಿ ಶಿಕ್ಷಕರಿರುವಂತೆ, ಉತ್ತರ ಭಾರತದ ಶಾಲೆಗಳಲ್ಲಿ ದಕ್ಷಿಣ ಭಾರತದ ಭಾಷೆಗಳ ಯಾವುದೇ ಶಿಕ್ಷಕರು ಇಲ್ಲದಿರುವುದು ತ್ರಿಭಾಷಾ ಸೂತ್ರದ ದಯನೀಯ ಸೋಲಿಗೆ ಕೈಗನ್ನಡಿ ಎಂದು ಟೀಕಿಸಿದೆ.

ವಾಸ್ತವದಲ್ಲಿ ನೋಡುವುದಾದರೆ, ನಮ್ಮ ಶಿಕ್ಷಣ ವ್ಯವಸ್ಥೆ ಭಾರತದ ಬಹುಭಾಷಾ ನೀತಿಯಡಿ ನೆಲೆಗೊಳ್ಳಬೇಕು. ಹಾಗಾಗಿ ತ್ರಿಭಾಷಾ ಸೂತ್ರದ ರಾಜಕೀಯ ಪಕ್ಕಕ್ಕಿಟ್ಟು, ಮಕ್ಕಳ ಕಲಿಕೆ ಮತ್ತು ಸೃಜನಾತ್ಮಕತೆಗೆ ಒತ್ತು ನೀಡುವ ಒಂದು ಸಮಗ್ರ ಹೊಸ ಭಾಷಾ ಸೂತ್ರ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞ ಪಿ.ವಿ. ನಿರಂಜನಾರಾಧ್ಯ ಅಭಿಪ್ರಾಯಪಟ್ಟಿದ್ದಾರೆ.

Read More
Next Story