ಅಸಮಾಧಾನಿತ ಶಾಸಕರ ಮಾತುಕತೆಗೆ ಸಿಎಂಗೆ ಹೈಕಮಾಂಡ್ ಸೂಚನೆ ಬಗ್ಗೆ ಮಾಹಿತಿ ಇಲ್ಲ; ಪರಮೇಶ್ವರ್ ಸ್ಪಷ್ಟನೆ
x

ಜಿ.ಪರಮೇಶ್ವರ್‌

ಅಸಮಾಧಾನಿತ ಶಾಸಕರ ಮಾತುಕತೆಗೆ ಸಿಎಂಗೆ ಹೈಕಮಾಂಡ್ ಸೂಚನೆ ಬಗ್ಗೆ ಮಾಹಿತಿ ಇಲ್ಲ; ಪರಮೇಶ್ವರ್ ಸ್ಪಷ್ಟನೆ

ಮುಖ್ಯಮಂತ್ರಿ ಅವರು ಈಗ ದೆಹಲಿಯಲ್ಲಿದ್ದಾರೆ. ಅವರು ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಶಾಸಕರನ್ನು ಕರೆದು ಮಾತಾಡಬೇಕೆಂದರೆ, ವರಿಷ್ಠರು ತಮ್ಮ ಮಟ್ಟದಲ್ಲಿ ನಿರ್ಧರಿಸುತ್ತಾರೆ ಎಂದು ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ.


ಅಸಮಾಧಾನಿತ ಶಾಸಕರೊಂದಿಗೆ ಮಾತುಕತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ ನೀಡಿದ ವಿಚಾರದಲ್ಲಿ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ.

ಅವರು ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ʻʻಅಸಮಾಧಾನಿತ ಶಾಸಕರೊಂದಿಗೆ ಮಾತುಕತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ ನೀಡಿದ ವಿಚಾರದಲ್ಲಿ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮುಖ್ಯಮಂತ್ರಿ ಅವರು ಈಗ ದೆಹಲಿಯಲ್ಲಿದ್ದಾರೆ. ಅವರು ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಶಾಸಕರನ್ನು ಕರೆದು ಮಾತಾಡಬೇಕೆಂದರೆ, ವರಿಷ್ಠರು ತಮ್ಮ ಮಟ್ಟದಲ್ಲಿ ನಿರ್ಧರಿಸುತ್ತಾರೆʼʼ ಎಂದು ಅವರು ತಿಳಿಸಿದರು.

ಶಾಸಕರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, “ಶಾಸಕರು ಕೆಲವೊಂದು ಆರೋಪ ಮಾಡಿರಬಹುದು. ಅವರಿಗೆ ವೈಯಕ್ತಿಕವಾಗಿ ತೊಂದರೆ ಆಗಿರಬಹುದು. ಸಿಎಂ ಇಂತಹದ್ದನ್ನು ಬಗೆಹರಿಸುತ್ತಾರೆ” ಎಂದು ಹೇಳಿದರು.

ಸಿಎಲ್‌ಪಿ ಸಭೆಯಲ್ಲಿ ಶಾಸಕರಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ಕೆಲವರು ಮಂತ್ರಿಗಳು ಭೇಟಿಯಾಗುತ್ತಿಲ್ಲ ಎಂಬುದನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ ಇದು ದೊಡ್ಡ ವಿಷಯವಲ್ಲ, ಬಗೆಹರಿಸಲಾಗುತ್ತದೆ ಎಂದು ಅವರು ತಿಳಿಸಿದರು.

'ಸರ್ಕಾರದಲ್ಲಿ ಹಣ ಇಲ್ಲ' ಎಂಬ ಹೇಳಿಕೆ ಕುರಿತು ಸ್ಪಷ್ಟನೆ

ನಾನು ‘ಸರ್ಕಾರದ ಬಳಿ ಹಣವಿಲ್ಲ’ ಎಂದು ಎಲ್ಲಿ ಹೇಳಿದ್ದೇನೆ? ಎಂದು ಪ್ರಶ್ನಿಸಿದ ಪರಮೇಶ್ವರ್, ಆ ರೀತಿ ನಾನು ಹೇಳಿಲ್ಲ. ತಮ್ಮ ಹೇಳಿಕೆಯನ್ನು ಬಿಜೆಪಿಯವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಬಾದಾಮಿ ಅಭಿವೃದ್ಧಿಗೆ 1000 ಕೋಟಿ ರೂ. ಪ್ರಸ್ತಾವನೆ ರೆಡಿ ಮಾಡಿ ಕೇಂದ್ರಕ್ಕೆ ಕಳುಹಿಸಿ ಎಂದು ಹೇಳಿದ್ದೆ. ನಮ್ಮಿಂದ ಅಷ್ಟು ಹಣ ನೀಡಲಾಗದು, ಕೇಂದ್ರ ಸಹಕಾರ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಹೇಳಿದ್ದೆ. ಬಜೆಟ್ ಗಾತ್ರವೂ ಹೆಚ್ಚಾಗಿದೆ. ನೀರಾವರಿ ಮತ್ತು ಅಭಿವೃದ್ಧಿಗೆ ಹಣ ಮೀಸಲಿಟ್ಟಿದ್ದೇವೆ. ‘ಸರ್ಕಾರದ ಬಳಿ ಹಣವಿಲ್ಲ’ ಅನ್ನುವುದು ತಾರ್ಕಿಕವಲ್ಲ ಎಂದು ಅವರು ತಿಳಿಸಿದರು.

ಶಾಸಕರ ಬೇಡಿಕೆ – ಹಣ ಬಿಡುಗಡೆ

“ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎನ್ನುವುದು ಅವರ ದೂರು. ಸಿಎಂ ಖುದ್ದಾಗಿ 50 ಕೋಟಿ ರೂ. ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸಿ ಎಂದು ಶಾಸಕರಿಗೆ ಸೂಚಿಸಿದ್ದಾರೆ. ಈ ಮಾತು ಬಿಜೆಪಿಯ ಶಾಸಕರಿಗೂ ತಿಳಿಸಿದ್ದಾರೆ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಈ ರೀತಿ ಸಿಎಂ ಹೇಳುತ್ತಾರೆಯೇ? ಎಂದು ಪ್ರಶ್ನಿಸಿದರು.

ಜಮೀರ್ ಅಹಮದ್ ಅನುದಾನ ವಿವಾದ

ವಿಪಕ್ಷ ಶಾಸಕರಿಗೆ ಹೆಚ್ಚು ಅನುದಾನ ನೀಡಲಾಗಿದೆ ಎಂಬ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ಜಮೀರ್ ಅವರ ಇಲಾಖೆಯ ಆಂತರಿಕ ವಿಷಯ. ಅವರನ್ನೇ ಕೇಳಿ ಎಂದು ತಿಳಿಸಿದರು.

ಅನಂತ್ ಕುಮಾರ್ ಹೆಗಡೆ ಘಟನೆ ಕುರಿತು ಪ್ರಾಥಮಿಕ ಮಾಹಿತಿ

ಅನಂತ್ ಕುಮಾರ್ ಹೆಗಡೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ಹಲ್ಲೆ ಮಾಡಿದಿಲ್ಲ ಎಂದು ಪೊಲೀಸರು ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಿದ್ದಾರೆ. ಅವರ ಗನ್‌ಮ್ಯಾನ್ ಮತ್ತು ಡ್ರೈವರ್ ಹೊಡೆದಿರುವ ಸಾಧ್ಯತೆ ಇದೆ. ಎಫ್‌ಐಆರ್‌ನಲ್ಲಿ ಹೆಗಡೆ ಅವರು ಹೊಡೆದಿದ್ದಾರೆ ಎಂದು ಇದ್ದರೆ, ತನಿಖೆ ಮುಂದುವರಿಸಲಾಗುತ್ತದೆ ಎಂದು ಅವರು ತಿಳಿಸಿದರು.

Read More
Next Story