ನಿಖಿಲ್‌ ರಾಜ್ಯ ಪ್ರವಾಸ | ಬಿಜೆಪಿ ಶಾಸಕರಿಂದ ಶುಭ ಹಾರೈಕೆ; ನೆಲೆ ಭದ್ರಪಡಿಸಿಕೊಳ್ಳಲು ಜೆಡಿಎಸ್‌ ಚಿತ್ತ
x

ನಿಖಿಲ್‌ ರಾಜ್ಯ ಪ್ರವಾಸ | ಬಿಜೆಪಿ ಶಾಸಕರಿಂದ ಶುಭ ಹಾರೈಕೆ; ನೆಲೆ ಭದ್ರಪಡಿಸಿಕೊಳ್ಳಲು ಜೆಡಿಎಸ್‌ ಚಿತ್ತ

ಕಲ್ಪತರು ನಾಡು ತುಮಕೂರು ಜಿಲ್ಲೆ ಈ ಹಿಂದಿನಿಂದಲೂ ಜೆಡಿಎಸ್ ಭದ್ರಕೋಟೆ. ತುಮಕೂರು ನಗರ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕಡೆ ಜೆಡಿಎಸ್ ಪ್ರಾಬಲ್ಯವಿದೆ. ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು, ಕೊರಟಗೆರೆ, ತುಮಕೂರು ಗ್ರಾಮಾಂತರ, ತುರುವೇಕೆರೆ, ಪಾವಗಡ ಕ್ಷೇತ್ರಗಳಲ್ಲಿ ಜೆಡಿಎಸ್ ಗಟ್ಟಿಯಾಗಿ ಈ ಹಿಂದೆ ನೆಲೆಯೂರಿತ್ತು.


ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯತಂತ್ರದ ಮೊರೆ ಹೋಗಿದ್ದಾರೆ.

ಬಿಜೆಪಿ-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭವಿಷ್ಯ ನುಡಿದ ಬೆನ್ನಲ್ಲೇ ಮೈತ್ರಿ ಪಕ್ಷಗಳ ಸ್ಥಳೀಯ ನಾಯಕತ್ವ ಅಲರ್ಟ್ ಆಗಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇರುವಾಗಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸ್ಥಳೀಯವಾಗಿ ಮೈತ್ರಿ ಗಟ್ಟಿಗೊಳಿಸಲು ಚಿತ್ತ ಹರಿಸಿವೆ. ಈ ಹಿಂದೆ ಜೆಡಿಎಸ್-ಬಿಜೆಪಿ ಭದ್ರಕೋಟೆಯಂತಿದ್ದ ಹಲವು ಕ್ಷೇತ್ರಗಳನ್ನು ಮರಳಿ ತಮ್ಮ ತೆಕ್ಕೆಗೆ ಪಡೆಯಲು ರಣತಂತ್ರ ಹೆಣೆಯುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿಯಾದ ಬಿಜೆಪಿಯ ಇಬ್ಬರು ಶಾಸಕರು ಜೆಡಿಎಸ್‌ ಪಕ್ಷ ಸಂಘಟನೆಯ ಪ್ರವಾಸಕ್ಕೆ ಶುಭ ಹಾರೈಸಿದರು.

ಜೆಡಿಎಸ್ ಭದ್ರಕೋಟೆ ತುಮಕೂರು

ಕಲ್ಪತರು ನಾಡು ತುಮಕೂರು ಜಿಲ್ಲೆ ಈ ಹಿಂದಿನಿಂದಲೂ ಜೆಡಿಎಸ್ ಭದ್ರಕೋಟೆ. ತುಮಕೂರು ನಗರ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕಡೆ ಜೆಡಿಎಸ್ ಪ್ರಾಬಲ್ಯವಿದೆ. ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು, ಕೊರಟಗೆರೆ, ತುಮಕೂರು ಗ್ರಾಮಾಂತರ, ತುರುವೇಕೆರೆ, ಪಾವಗಡ ಕ್ಷೇತ್ರಗಳಲ್ಲಿ ಜೆಡಿಎಸ್ ಗಟ್ಟಿಯಾಗಿ ನೆಲೆಯೂರಿತ್ತು. ಇದಕ್ಕೆ ಹಾಸನ ಹಾಗೂ ತುಮಕೂರಿನ ಮಧ್ಯೆ ಹರಿಯುವ ಹೇಮೆಯ ನೀರು ಕೂಡ ಕಾರಣವಾಗಿತ್ತು.

ಪ್ರಸ್ತುತ, ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿದ್ದರೂ ಜೆಡಿಎಸ್ ಮತದಾರರ ಸಂಖ್ಯೆ ನಿರ್ಣಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ತುಮಕೂರಿನಿಂದಲೇ ತನ್ನ ಪಕ್ಷ ಸಂಘಟನೆಗೆ ಪ್ರವಾಸ ಕೈಗೊಂಡಿದೆ. ಜೆಡಿಎಸ್ ಹಾಗೂ ಬಿಜೆಪಿ ವರಿಷ್ಠರು ಮೈತ್ರಿಯನ್ನು ಗಟ್ಟಿಗೊಳಿಸುವ ನಿರ್ಧಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈಗ ಉಭಯ ಪಕ್ಷಗಳು ಮೈತ್ರಿ ಧರ್ಮ ಪಾಲನೆಯಲ್ಲಿ ತೊಡಗಿಸಿಕೊಂಡಿವೆ.

ಬಿಜೆಪಿ ನಾಯಕರು- ನಿಖಿಲ್ ಭೇಟಿಯ ಸಂದೇಶವೇನು?

ಬಿಜೆಪಿ-ಜೆಡಿಎಸ್ ರಾಜ್ಯ ಮಟ್ಟದ ನಾಯಕರಲ್ಲಿ ಏನೇ ಅಭಿಪ್ರಾಯಗಳಿದ್ದರೂ ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಳ್ಳುವುದು ಇಬ್ಬರಿಗೂ ಅನುಕೂಲಕರ ಎಂಬ ಸಂದೇಶವನ್ನು ನಿಖಿಲ್ ಪ್ರವಾಸ ಮೊದಲ ದಿನವೇ ಕಾರ್ಯಕರ್ತರಿಗೆ ರವಾನಿಸಲಾಗಿದೆ.

ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಸಮಾನ ಶತ್ರುವಾಗಿರುವ ಕಾಂಗ್ರೆಸ್ ಪಕ್ಷವನ್ನು ಮುಂಬರುವ ಚುನಾವಣೆಗಳಲ್ಲಿ ಸೋಲಿಸಲು ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಅವಶ್ಯಕ ಎಂಬುದು ಸ್ಥಳೀಯ ಮುಖಂಡರ ವಾದವಾಗಿದೆ.

ಮುಂದಿನ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಒಂದಷ್ಟು ಸವಾಲು ಎದುರಾಗುವ ಸಾಧ್ಯತೆ ಇದೆ. ಇದೆಲ್ಲದರ ನಡುವೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮೈತ್ರಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದು ಉಭಯ ಪಕ್ಷಗಳ ನಾಯಕರು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಹಾಗೂ ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಅವರು ಹೂಗುಚ್ಚ ನೀಡಿ ಜೆಡಿಎಸ್ ಪಕ್ಷ ಸಂಘಟನೆ ಪ್ರವಾಸಕ್ಕೆ ಸಹಕಾರ ನೀಡಿದ್ದಾರೆ.

58 ದಿನಗಳ ಪಕ್ಷ ಸಂಘಟನೆ ಪ್ರವಾಸ

ಜೆಡಿಎಸ್ ಪಕ್ಷ ಸಂಘಟನೆ ಹಿನ್ನಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯಾದ್ಯಂತ 58 ದಿನಗಳ ಪ್ರವಾಸವನ್ನು ತುಮಕೂರಿನ ಸಿದ್ದಗಂಗಾ ಮಠದಿಂದ ಆರಂಭಿಸಿದ್ದಾರೆ.

ಜೆಡಿಎಸ್ ಮೊದಲ ದಿನದ ಪ್ರವಾಸದ ಅಂಗವಾಗಿ ಕೈಗೊಂಡಿದ್ದ ಸಭೆಗೂ ಮುನ್ನ ನಿಖಿಲ್ ಕುಮಾರಸ್ವಾಮಿ ಅವರನ್ನು ಬಿಜೆಪಿ ಇಬ್ಬರು ಶಾಸಕರು ಸಿದ್ದಗಂಗಾ ಮಠದಲ್ಲಿ ಸ್ವಾಗತಿಸಿ ಶುಭ ಕೋರಿರುವುದು ಕಾಂಗ್ರೆಸ್ಸಿಗರಲ್ಲಿ ತಳಮಳ ಮೂಡಿಸಿದೆ.

Read More
Next Story