
JDS On Caste Census | ಸರ್ವಪಕ್ಷ ಸಭೆ ಕರೆಯಲು ನಿಖಿಲ್ ಕುಮಾರಸ್ವಾಮಿ ಆಗ್ರಹ
ಜಾತಿಗಣತಿ ವರದಿ ಕುರಿತು ಎಲ್ಲ ಸಮುದಾಯಗಳ ಸ್ವಾಮೀಜಿಗಳು, ಮುಖಂಡರು ಸೇರಿ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸರ್ವಪಕ್ಷ ಕರೆಯುವಂತೆ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜಾತಿಗಣತಿ ವರದಿ ಅಂಕಿ-ಅಂಶಗಳ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು. ಎಲ್ಲಾ ಸಮುದಾಯಗಳ ಮಠಾಧೀಶರು, ಮುಖಂಡರು, ಬುದ್ದಿಜೀವಿಗಳನ್ನು ಸಭೆಗೆ ಆಹ್ವಾನಿಸಿ ಸಮಾಲೋಚನೆ ನಡೆಸಿದ ಬಳಿಕವೇ ಸರ್ವಸಮ್ಮತ ಪರಿಹಾರ ಕಂಡುಕೊಳ್ಳಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗಣತಿಗೆ ಜೆಡಿಎಸ್ ವಿರೋಧ ಮಾಡುತ್ತಿಲ್ಲ. ಆದರೆ, ಸಮೀಕ್ಷೆ ಕ್ರಮಬದ್ಧವಾಗಿ ಇಲ್ಲ ಎಂಬುದಷ್ಟೇ ನಮ್ಮ ಆಕ್ಷೇಪ. ಸೋರಿಕೆ ಆಗಿರುವ ಅಂಕಿ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದ್ದಾರೆ.
ಗಣತಿದಾರರು ಯಾರ ಮನೆಗೆ ಹೋಗಿದ್ದಾರೆ, ಯಾವ ಮಾನದಂಡ ಇಟ್ಟುಕೊಂಡು ಸಮೀಕ್ಷೆ ಮಾಡಿದ್ದಾರೆ ಎಂಬ ಮಾಹಿತಿ ಇಲ್ಲ. ಹೀಗಾಗಿ ಇಡೀ ವರದಿಯನ್ನು ಪುನರ್ ಪರಿಶೀಲನೆ ಮಾಡಬೇಕು. ಕೂಡಲೇ ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ವರದಿ ಬಗ್ಗೆ ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಈಗ ಜಾತಿಗಣತಿ ಆಗಿದೆ. ಅದು ಹೇಗೆ? ಮುಸ್ಲಿಂಮರಲ್ಲಿ ಶಿಯಾ, ಸುನ್ನಿ ಸೇರಿ 90ಕ್ಕೂ ಹೆಚ್ಚು ಉಪ ಜಾತಿಗಳು ಬರುತ್ತವೆ. ಕ್ರಿಶ್ಚಿಯನ್ನರಲ್ಲಿ ಅನೇಕ ಉಪ ಜಾತಿಗಳಿವೆ. ಅವರನ್ನು ಒಗ್ಗೂಡಿಸಿ ಉಳಿದ ಜಾತಿಗಳನ್ನು ಛಿದ್ರ ಮಾಡಿದ್ದಾರೆ. ಇದು ಯಾವ ರೀತಿಯ ಸಾಮಾಜಿಕ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಪಶ್ಚಾತ್ತಾಪ ಯಾತ್ರೆಯ ದಿನ ದೂರವಿಲ್ಲ
ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ದೇಶದಲ್ಲಿ ಭಾರತ್ ಜೋಡೋ ಮಾಡಿದರು. ಅವರನ್ನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಸಮೀಕ್ಷೆ ಹೆಸರಿನಲ್ಲಿ ಜಾತಿಗಳನ್ನು ಒಡೆದು ಕರ್ನಾಟಕ ರಾಜ್ಯಕ್ಕೆ ಯಾವ ಸಂದೇಶ ಕೊಡುತ್ತಿದ್ದೀರಾ?, ಜನ ಬೀದಿಬೀದಿಗಳಲ್ಲಿ ಹೊಡೆದಾಡಬೇಕಾ? ಇದೇನಾ ನಿಮ್ಮ ಜೋಡೋ ಯಾತ್ರೆ. ನೀವು ಮಾಡುತ್ತಿರುವ ಅನಾಹುತ ಅಷ್ಟಿಷ್ಟಲ್ಲ. ನೀವು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಯಾತ್ರೆ ಮಾಡುವ ದಿನ ದೂರವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಿಕೆಶಿ ವಿರುದ್ಧವೂ ವಾಗ್ದಾಳಿ
ಜಾತಿಗಣತಿ ವರದಿ ಇಟ್ಟುಕೊಂಡು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಏನು ಮಾಡುತ್ತಾರೆ. ಪೆನ್ನು ಪೇಪರ್ ಕೇಳಿದ್ರಲ್ಲಾ. ಪಾಪ ಜನರು ಕೊಟ್ಟಿದ್ದಾರೆ. ನೀವು ಆ ಪೆನ್ನು ಪೇಪರ್ ಯಾವುದಕ್ಕೆ ಉಪಯೋಗ ಮಾಡ್ತಿದ್ದೀರಾ? ನಿಮ್ಮ ಆತ್ಮಸಾಕ್ಷಿಯನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ ಎಂದು ಕಿಡಿಕಾರಿದ್ದಾರೆ.
2015ರಲ್ಲಿ ಕಾಂತರಾಜು ನೇತೃತ್ವದ ಆಯೋಗ ಸಮೀಕ್ಷೆ ಮಾಡಿತು. 54 ಮಾನದಂಡ ಅಂತ ಜಾತಿಗಣತಿ ಮಾಡಿರುವುದಾಗಿ ಹೇಳಿದ್ದಾರೆ. ಸಮೀಕ್ಷೆ ಎಂದರೆ ಆ ಮನೆಯ ಸಂಪೂರ್ಣ ಮಾಹಿತಿ ಕಲೆಹಾಕಬೇಕು. ಆ ಬಗ್ಗೆ ಸ್ವತಃ ಕಾಂತರಾಜು ಅವರೇ ಹೇಳಿಕೆ ನೀಡಿದ್ದರು. ಸಮರ್ಪಕವಾಗಿ ಸಮೀಕ್ಷೆ ನಡೆದಿಲ್ಲ ಎಂದು ಅವರೇ ಹೇಳಿ, ಸಮರ್ಪಕವಾಗಿ ಸಮೀಕ್ಷೆ ಮಾಡದಿದ್ದರೆ ಮತ್ತೆ ಸಮೀಕ್ಷೆ ಮಾಡಿಸುತ್ತೇವೆ, ಲೋಪ ಎಸಗಿದವರ ವಿರುದ್ಧ ಕ್ರಮ ಜರುಗಿಸುವ ಮಾತನ್ನಾಡಿದ್ದರು. ವೈಜ್ಞಾನಿಕವಾಗಿ ಸಮೀಕ್ಷೆ ಆಗಿಲ್ಲ ಎನ್ನುವ ಅಂಶವನ್ನು ಅವರೇ ಒಪ್ಪಿಕೊಂಡಿದ್ದರು. ಅವರ ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಲಿಲ್ಲ. ಅದನ್ನು ಸರ್ಕಾರ ಒಪ್ಪಲಿಲ್ಲ ಎಂದು ವಿವರಿಸಿದ್ದಾರೆ.
ಕಾಂತರಾಜ್ ನಂತರ ಬಂದ ಜಯಪ್ರಕಾಶ್ ಹೆಗ್ಡೆ ಅವರು, ಸರ್ಕಾರಕ್ಕೆ ಪತ್ರ ಬರೆದು, ವರದಿಯ ಹಸ್ತಪ್ರತಿ ನಾಪತ್ತೆಯಾಗಿದೆ ಎಂದು ಹೇಳುತ್ತಾರೆ. ಅವರು ಹಿಂದುಳಿದ ವರ್ಗಗಳ ಇಲಾಖೆಗೆ ಪತ್ರ ಬರೆದಿದ್ದಾರೆ. ಸರ್ಕಾರದ ಸುಪರ್ದಿಯಲ್ಲಿ ಇದ್ದ ಮೂಲ ದಾಖಲಾತಿ ಹೇಗೆ ನಾಪತ್ತೆ ಆಯ್ತು? ಇದು ಯಕ್ಷ ಪ್ರಶ್ನೆ. ಈ ವರದಿ ತಯಾರಿಕೆ ಮಾಡೋದಕ್ಕೆ 170 ಕೋಟಿ ರೂ.ಜನರ ತೆರಿಗೆ ಹಣ ಖರ್ಚು ಮಾಡಿದ್ದಾರೆ. ಹಣವೂ ಹೋಯಿತು, ವರದಿಯೂ ಹೋಯಿತು! ಮೂಲ ಪ್ರತಿ ಏನಾಯ್ತು? ಎಂದು ವಾಗ್ದಾಳೀ ನಡೆಸಿದ್ದಾರೆ.
ಕುಟುಂಬದವರಿಂದ ಸಹಿ ಮಾಡಿಸಿಕೊಂಡಿದ್ದಾರೆ!
ಜಯಪ್ರಕಾಶ್ ಹೆಗ್ಡೆ ಅವರ ಐದು ವರ್ಷಗಳ ಅವಧಿ ಮುಗಿದ ಮೇಲೂ 2 ತಿಂಗಳು ವಿಸ್ತರಣಾ ಅವಕಾಶ ಕೊಡಲಾಯಿತು. ಅಷ್ಟು ವರ್ಷ ವರದಿ ಕೊಡದ ಇವರು ವಿಸ್ತರಣಾ ಅವಕಾಶ ಸಿಕ್ಕಿದ ಅರವತ್ತೇ ದಿನದಲ್ಲಿ ವರದಿ ತಯಾರು ಮಾಡಿಕೊಡುತ್ತಾರೆ!?, ಇದು ಗಾಳಿ, ಬೆಳಕಿಗಿಂತ ವೇಗವಾಗಿ ಹೇಗೆ ಜಾತಿಗಣತಿ ಸಿದ್ದ ಆಯ್ತು? , ಆ ವರದಿಗೆ ಸಹಿ ಹಾಕಿದ ಸದಸ್ಯ ಕಾರ್ಯದರ್ಶಿ ಯಾರು? ಅವರು ಯಾವ ಶ್ರೇಣಿಯ ಅಧಿಕಾರಿ?, ಯಾರ ಸಂಬಂಧಿ? ಸಿದ್ದರಾಮಯ್ಯ ಅವರಿಗೂ ಯಾವ ರೀತಿಯ ನೆಂಟಸ್ತನ ಇದೆ? ಪ್ರಶ್ನಿಸಿದ್ದಾರೆ.
ಸಾಧನೆ ಶೂನ್ಯ, ಅಬ್ಬರ ಹೆಚ್ಚು
ರಾಜ್ಯ ಕಾಂಗ್ರೆಸ್ ಸರಕಾರದ ಸಾಧನೆ ಶೂನ್ಯ. ಆದರೆ ಆರ್ಭಟ ಮಾತ್ರ ಜಾಸ್ತಿ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕೇಂದ್ರದ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಅವರಿಗೆ ಮಾತನಾಡಲಿಕ್ಕೆ ವಿಷಯವೇ ಇರಲಿಲ್ಲ. ಅದಕ್ಕೆ ಕುಮಾರಸ್ವಾಮಿ ಅವರತ್ತ ಬಾಣ ತಿರುಗಿಸುತ್ತಾರೆ. ಕೇಂದ್ರ ಸಚಿವರ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗುತ್ತೆ, ಮಾಧ್ಯಮಗಳು ಗಮನಿಸುತ್ತವೆ ಎನ್ನುವ ಅಭಿಪ್ರಾಯ ಅವರಲ್ಲಿದೆ. ಅದನ್ನು ಬಿಟ್ಟು ತಮ್ಮ ಸಾಧನೆ ಹೇಳಲು ಅವರಿಗೆ ಆಗುತ್ತಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಡಮ್ಮಿ
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಡಮ್ಮಿ ಹೈಕಮಾಂಡ್ ಅಂತ ಜನ ತೀರ್ಮಾನ ಮಾಡಿದ್ದಾರೆ. ಏಕೆಂದರೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಅರ್ಥವಾಗುತ್ತದೆ. ಸರ್ಕಾರದ ಮೇಲೆ ನಿಯಂತ್ರಣ ಇಲ್ಲ. ಜಾತಿ ಗಣತಿಯ ಗದ್ದಲ ನೋಡಿದರೆ ಕಾಂಗ್ರೆಸ್ ಪರಿಸ್ಥಿತಿ ಅರ್ಥವಾಗುತ್ತದೆ ಎಂದಿದ್ದಾರೆ.