Mysore MUDA Scam | ಸಿಎಂಗೆ ಮತ್ತೆ ರಿಲೀಫ್‌: ಸೋಮವಾರಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
x

Mysore MUDA Scam | ಸಿಎಂಗೆ ಮತ್ತೆ ರಿಲೀಫ್‌: ಸೋಮವಾರಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸುದೀರ್ಘ ವಾದ -ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಸೋಮವಾರ ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.


ಮುಡಾ ನಿವೇಶನ ಹಂಚಿಕೆ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶವನ್ನು ವಜಾಗೊಳಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ವಿಚಾರಣೆ ಶನಿವಾರವೂ ಮುಂದುವರಿದಿದ್ದು, ಸಿದ್ದರಾಮಯ್ಯ ಅವರಿಗೆ ಮತ್ತೆ ಎರಡು ದಿನ ರಿಲೀಫ್‌ ಸಿಕ್ಕಂತಾಗಿದೆ. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಸುದೀರ್ಘ ವಾದ -ಪ್ರತಿವಾದ ಆಲಿಸಿ, ಸೋಮವಾರ ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.‌ ಮಧ್ಯಂತರ ಅರ್ಜಿದಾರರಿಗೆ ವಾದ ಮಂಡಿಸಲು ಕಾಲಾವಕಾಶ ನೀಡಿದೆ. ರಾಜ್ಯಪಾಲರು, ಖಾಸಗಿ ದೂರುದಾರರ ಪರ ವಕೀಲರ ವಾದ ಮುಕ್ತಾಯ ಆಗಿದೆ.

ಆಗಸ್ಟ್ 19ರಂದು ಅರ್ಜಿ ವಿಚಾರಣೆ ಆರಂಭಿಸಿದ್ದ ನ್ಯಾಯಾಲಯ, ಆಗಸ್ಟ್ 29ರ ತನಕ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಅಧೀನ ನ್ಯಾಯಾಲಯಕ್ಕೆ ಸೂಚನೆ ನೀಡಿ, ವಿಚಾರಣೆ ಮುಂದೂಡಿತ್ತು. ಗುರುವಾರ ಎರಡೂ ಕಡೆಯ ವಾದ ಆಲಿಸಿದ ನ್ಯಾಯಾದೀಶ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ವಿಚಾರಣೆಯನ್ನು ಆಗಸ್ಟ್​ 31ಕ್ಕೆ ಮುಂದೂಡಿತ್ತು. ಶನಿವಾರ ಬೆಳಿಗ್ಗೆ 10:30ಕ್ಕೆ ವಿಚಾರಣೆ ಆರಂಭವಾಯಿತು. ಸುದೀರ್ಘ ಆರು ತಾಸುಗಳ ಕಾಲ ವಾದ -ಪ್ರತಿವಾದ ಆಲಿಸಿದ ಪೀಠ, ಸೋಮವಾರ ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.‌

ಸುದೀರ್ಘ ವಾದ-ವಿವಾದ:

ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸುದೀರ್ಘ ಎರಡು ಗಂಟೆಗಳ ಕಾಲ ವಾದಿಸಿದರು. ಅವರ ವಾದದ ಪ್ರಮುಖ ಅಂಶಗಳು ಇಂತಿವೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಿರುವ ಪ್ರಕರಣದಲ್ಲಿ ರಾಜ್ಯಪಾಲರು ಸಂಪುಟ ಸಭೆಯ ಶಿಫಾರಸ್ಸನ್ನು ಆಧರಿಸಬೇಕಿಲ್ಲ. ಮೇಲ್ನೋಟಕ್ಕೆ ತನಿಖಾ ಸಂಸ್ಥೆಯು ಕಾನೂನಿನ ಅಡಿ ಪ್ರಕರಣದ ತನಿಖೆ ನಡೆಸಬೇಕಿದೆಯೇ ಎಂಬುದರ ಪ್ರಕಾರ ರಾಜ್ಯಪಾಲರು ಮುನ್ನಡೆದಿದ್ದಾರೆ.

ರಾಜ್ಯಪಾಲರ ನಿರ್ಧಾರವು ವಾಸ್ತವಿಕ ಅಂಶಗಳನ್ನು ಆಧರಿಸಿ, ವಿವೇಚನಾಯುತವಾಗಿದೆ. ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 17ಎ ಎಲ್ಲಾ ಕಡೆ ಅನ್ವಯವಾಗುತ್ತದೆ. ಇದಕ್ಕೆ ಲಲಿತಾ ಕುಮಾರಿ ತೀರ್ಪಿನ ನೆರವು ಪಡೆಯಬಹುದಾಗಿದೆ. ಸಂಜ್ಞೇಯ ಅಪರಾಧ ಎಂಬುದು ತಿಳಿದಾಗ ರಾಜ್ಯಪಾಲರು ಅಥವಾ ತಹಶೀಲ್ದಾರ್‌ ಆಗಲಿ ವಿವೇಚನೆ ಬಳಸಿ ಅನುಮತಿಸಬೇಕು. ಭ್ರಷ್ಟಾಚಾರ ನಿರೋಧಕ ಕಾಯಿದೆ ಅಡಿ ಇದು ಎಲ್ಲಾ ಸರ್ಕಾರಿ ಸೇವಕರಿಗೆ ಅನ್ವಯಿಸುತ್ತದೆ. ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ದೂರನ್ನು ಓದಿದ ಬಳಿಕ ರಾಜ್ಯಪಾಲರಿಗೆ ಮೇಲ್ನೋಟಕ್ಕೆ ಅಧಿಕಾರ ದುರ್ಬಳಕೆ ಕಂಡು ಬಂದಿರುವುದರಿಂದ ಮುಖ್ಯಮಂತ್ರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಸಂಪುಟದ ಸಲಹೆಯು ಅತಾರ್ಕಿಕ ಅಥವಾ ಪಕ್ಷಪಾತದಿಂದ ಕೂಡಿದೆ ಎನಿಸಿದರೆ ರಾಜ್ಯಪಾಲರು ಸ್ವತಂತ್ರವಾಗಿ ವಿವೇಚನೆ ಬಳಸಿ ಸ್ವನಿರ್ಧಾರದ ಮೂಲಕ ದೂರಿನಲ್ಲಿ ಮೇಲ್ನೋಟಕ್ಕೆ ಪ್ರಕರಣ ಇರುವುದನ್ನು ನಿರ್ಧರಿಸಬಹುದು. ಸ್ವತಃ ತಾವೇ (ನ್ಯಾ. ನಾಗಪ್ರಸನ್ನ) ನೀಡಿರುವ ತೀರ್ಪೊಂದರಲ್ಲಿ ಸರ್ಕಾರಿ ಸೇವಕನ ವಿರುದ್ಧ ಪೂರ್ವಾನುಮತಿ ಪಡೆದು ಯಾರು ಬೇಕಾದರೂ ಕ್ರಿಮಿನಲ್‌ ಕಾನೂನಿಗೆ ಚಾಲನೆ ನೀಡಬಹುದು ಎಂದು ಹೇಳಿದ್ದೀರಿ.

ಸಿಎಂ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಬಾರದು ಎಂದು ಶಿಫಾರಸ್ಸು ಮಾಡಿದ್ದ ಸಂಪುಟದ ತೀರ್ಮಾನವನ್ನು ತಿರಸ್ಕರಿಸಿರುವುದನ್ನು ರಾಜ್ಯಪಾಲರು ಸಕಾರಣ ಸಮರ್ಥಿಸಿದ್ದಾರೆ. ಮುಖ್ಯ ಕಾರ್ಯದರ್ಶಿಯು ಪ್ರಕರಣದ ಕುರಿತು ವಿವರ ನೀಡಿದ್ದು, ಅದು ಅಲ್ಲಿಂದ ಅಡ್ವೊಕೇಟ್‌ ಜನರಲ್‌ಗೆ ಹೋಗಿದೆ. ಎಜಿ ತಮ್ಮ ಅಭಿಪ್ರಾಯ ಮತ್ತು ತೀರ್ಪನ್ನು ಅಡಕಗೊಳಿಸಿದ್ದಾರೆ. ಆನಂತರ ಪ್ರಕರಣವನ್ನು ಸಂಪುಟದ ಮುಂದೆ ಇಡಲಾಗಿತ್ತು. 90 ಪುಟಗಳ ಸಂಪುಟದ ದಾಖಲೆಯಲ್ಲಿ ಎಜಿ ಮತ್ತು ಮುಖ್ಯ ಕಾರ್ಯದರ್ಶಿಯ ಅಭಿಪ್ರಾಯವನ್ನು ಅಲ್ಪ ಮತ್ತು ಪೂರ್ಣ ವಿರಾಮ ಒಳಗೊಂಡಂತೆ ಅಕ್ಷರಶಃ ಎಲ್ಲವನ್ನೂ ಹಾಗೆ ನಕಲು ಮಾಡಲಾಗಿದೆ. ಇಡೀ ಅಂಶಗಳನ್ನು ಮುಖ್ಯಮಂತ್ರಿಯ ಆಕ್ಷೇಪಣೆಯಲ್ಲಿ ಅಡಕಗೊಳಿಸಲಾಗಿದೆ.

ರಾಜ್ಯಪಾಲರು ಅಭಿಯೋಜನಾ ಮಂಜೂರಾತಿಗೆ ಸಂಬಂಧಿಸಿದಂತೆ ಆರು ಪುಟಗಳ ಆದೇಶ ಮಾಡಿದ್ದಾರೆ. ಎಲ್ಲವನ್ನೂ ಪರಿಗಣಿಸಿ, ವಿವೇಚನಾಯುತ ನಿರ್ಧಾರ ಕೈಗೊಂಡಿದ್ದಾರೆ. ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 17ಎ ಅಧಿಕಾರದ ಮೂಲ ಗುಣವೇ ಕಾರ್ಯಕಾರಿ ಮತ್ತು ಆಡಳಿತಾತ್ಮಕವಾಗಿದೆ. ಇದರ ಅಡಿ ಅನುಮತಿ ನೀಡುವಾಗ ಆರೋಪಿಯ ವಾದ ಆಲಿಸಬೇಕಿಲ್ಲ. ಸೆಕ್ಷನ್‌ 17ಎ ಹಂತದಲ್ಲಿ ಸಹಜ ನ್ಯಾಯ ತತ್ವ ಅನ್ವಯಿಸುವುದಿಲ್ಲ. ಸೆಕ್ಷನ್‌ 19ರ ಹಂತದಲ್ಲೂ ಸಹಜ ನ್ಯಾಯತತ್ವ ಅನ್ವಯಿಸದು.

ಟಿ ಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್‌ ಕುಮಾರ್‌ ಅವರ ದೂರುಗಳ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರದಿದ್ದರೂ ಯಾವುದೇ ಪೂರ್ವಾಗ್ರಹ ಉಂಟಾಗದು. ಮುಖ್ಯಮಂತ್ರಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಸಂಪುಟ ಸಭೆ ನಡೆದಿದೆ ಎಂದ ಮಾತ್ರಕ್ಕೆ ಅದರ ಪ್ರಕಾರ ನಿರ್ಧರಿಸಲಾಗದು. ಏಕೆಂದರೆ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಇರಲಿಲ್ಲ ಎಂದು ಪಕ್ಷಪಾತ ಸಾಧ್ಯತೆ ಅಲ್ಲಗಳೆಯಲಾಗದು.

ಮುಖ್ಯಮಂತ್ರಿಯ ವಿಚಾರದಲ್ಲಿ ಸಂಪುಟ ಸದಸ್ಯರ ಸಲಹೆ ಪಡೆಯಬಾರದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ ಎಂದು ನ್ಯಾ. ನಾಗಪ್ರಸನ್ನ ಹೇಳಿದರು. ಅದಕ್ಕೆ ಮೆಹ್ತಾ ಅವರು “ಹೌದು. ರಾಜ್ಯಪಾಲರು ಬಯಸಿದರೂ ಸಂಪುಟ ಸದಸ್ಯರ ಸಲಹೆ ಪಡೆಯುವಂತಿಲ್ಲ” ಎಂದರು.

ಸಂಪುಟ ಸಭೆಯ ನಿರ್ಣಯವು ಏಕೆ ಪಕ್ಷಪಾತದಿಂದ ಕೂಡಿದೆ ಎಂಬುದಕ್ಕೆ ರಾಜ್ಯಪಾಲರು ತಮ್ಮದೇ ನೋಟ್ಸ್‌ ಮಾಡಿದ್ದಾರೆ. ನಬಮ್‌ ರೇಬಿಯಾ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ರಾಜ್ಯಪಾಲರ ವಿವೇಚನೆಗೆ ಸಂಬಂಧಿಸಿದಂತೆ ಏನು ಹೇಳಿದೆ ಎಂಬುದನ್ನು ಡಾ. ಅಭಿಷೇಕ್‌ ಮನು ಸಿಂಘ್ವಿ ಗೊಂದಲ ಮಾಡಿಕೊಂಡಿದ್ದಾರೆ. ನಬಮ್‌ ರೇಬಿಯಾ ತೀರ್ಪು ನಮ್ಮ ಪರವಾಗಿದ್ದು, ಸಂಪುಟದ ನಿರ್ಣಯದಲ್ಲಿನ ಪಕ್ಷಪಾತ ಸಾಧ್ಯತೆಗೆ ಸಂಬಂಧಿಸಿದಂತೆಯೂ ತೀರ್ಪುಗಳನ್ನು ಉಲ್ಲೇಖಿಸಿದ್ದೇನೆ.

ಸಿಎಂ ವಿರುದ್ಧ ಆತುರದಿಂದ ಅಭಿಯೋಜನಾ ಮಂಜೂರಾತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಸತ್ಯವಲ್ಲ. ಮೊದಲಿಗೆ ಮುಖ್ಯ ಕಾರ್ಯದರ್ಶಿಯಿಂದ ವರದಿ ಪಡೆಯುವುದು ಸೂಕ್ತ ಎಂದು ರಾಜ್ಯಪಾಲರು ತೀರ್ಮಾನಿಸಿದ್ದಾರೆ. ಶೋಕಾಸ್‌ ನೋಟಿಸ್‌ ಜಾರಿ ಮಾಡುವುದು ಆತುರದ ಕ್ರಮವಾಗದು. ಆನಂತರ ಮುಖ್ಯಮಂತ್ರಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ನೀಡಲಾಗಿತ್ತು.

ಆತುರದಿಂದ ಸಕ್ಷಮ ಪ್ರಾಧಿಕಾರ (ಸ್ಟೇಟ್‌) ತೀರ್ಮಾನ ಕೈಗೊಂಡರೆ ಇಡೀ ಪ್ರಕ್ರಿಯೆ ದುರ್ಬಲವಾಗಲಿದೆಯೇ ಎಂದು ನ್ಯಾ. ನಾಗಪ್ರಸನ್ನ ಪ್ರಶ್ನಿಸಿದರು. ಅದಕ್ಕೆ ಮೆಹ್ತಾ ಅವರು “ಅದು ದುರ್ಬಲವಾಗದು. ಕೆಲವು ಸಂದರ್ಭದಲ್ಲಿ ಸಾಂವಿಧಾನಿಕ ಪ್ರತಿನಿಧಿಗೆ ಸಾಂವಿಧಾನಿಕ ಅಧಿಕಾರ ಇರುತ್ತದೆ, ಅದು ಅವರ ಅರಿವಿಗೆ ಬಂದ ತಕ್ಷಣ ತನಿಖೆಗೆ ಅವರು ಅನುಮತಿಸಬೇಕಾಗುತ್ತದೆ. ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 17ಎ ಅಡಿ ಅನುಮತಿಸಿ, ತನಿಖೆ ಆರಂಭಿಸಲು ಸೂಚಿಸಲಾಗಿದೆ. ಅದು ವಿಳಂಬವಾಗಬಾರದು. ಏಕೆಂದರೆ ಕೆಲವೊಮ್ಮೆ ವಿಳಂಬವಾದರೆ ರಾಜ್ಯಪಾಲರ ವಿರುದ್ಧ ಕರ್ತವ್ಯ ಲೋಕ ಆರೋಪಕ್ಕೆ ನಾಂದಿ ಹಾಡಬಹುದು ಎಂದರು.

ಮುಡಾ ಪ್ರಕರಣದಲ್ಲಿ ತನಿಖೆ ಅಗತ್ಯ ಎಂದು ರಾಜ್ಯಪಾಲರು ಹೇಳಿದ್ದು, ತನಿಖೆಗೆ ಆದೇಶಿಸಿದ್ದಾರೆ ಎಂದು ಮೆಹ್ತಾ ಹೇಳಿದರು. ಆಗ ನ್ಯಾ. ನಾಗಪ್ರಸನ್ನ ಅವರು ವೈ ಕೆ ಸಬರ್‌ವಾಲ್‌ ತೀರ್ಪಿನಲ್ಲಿ ಆತುರದ ನಿರ್ಧಾರವು ತನಿಖೆಗೆ ಹಾನಿ ಉಂಟು ಮಾಡುವುದಿಲ್ಲ ಎಂದು ಹೇಳಲಾಗಿದೆ ಎಂದರು.

ಮುಖ್ಯ ಕಾರ್ಯದರ್ಶಿ, ಅಡ್ವೊಕೇಟ್‌ ಜನರಲ್‌ ಮತ್ತ ಸಂಪುಟ ಸಭೆಯ ನೋಟ್ಸ್‌ನಲ್ಲಿ ಮಾಹಿತಿಯನ್ನೇ ಅಕ್ಷರಶಃ ಮುಖ್ಯಮಂತ್ರಿ ಆಕ್ಷೇಪಣೆಯಲ್ಲಿ ನಕಲು ಮಾಡಿರುವುದಕ್ಕೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಕೃತಕ ಬುದ್ಧಿಮತ್ತೆಯು ಮನುಷ್ಯನ ಮೂರ್ಖತನಕ್ಕೆ ಎಂದೂ ಸರಿಸಮನಾಗಲಾರದು ಎಂದರು.

ಮುಖ್ಯಮಂತ್ರಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಮುಖ್ಯ ಕಾರ್ಯದರ್ಶಿ, ಅಡ್ವೊಕೇಟ್‌ ಜನರಲ್‌ ಮತ್ತು ಸಂಪುಟದಲ್ಲಿನ ಅಂಶಗಳನ್ನು ನಕಲು ಮಾಡಿ ಮಾಡಿ ಅಡಕಗೊಳಿಸಲಾಗಿದೆ. ಈಗ ಮುಖ್ಯಮಂತ್ರಿಯವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಅದೇ ಪುಟ ಮತ್ತು ಪ್ಯಾರಾಗಳನ್ನು ಸೇರ್ಪಡೆ ಮಾಡಲಾಗಿದೆ. ಇದು ಎಷ್ಟು ವಿಡಂಬನಾತ್ಮಕವಾಗಿದೆ ಎಂದರೆ ಬೆಂಗಳೂರು ದೇಶದಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ ಎಂದು ಹೇಳಲಾಗುತ್ತದೆ. ಈಗ ಕೃತಕ ಬುದ್ಧಿಮತ್ತೆ ಲಭ್ಯವಿದೆ. ಏನನ್ನು ನಕಲು ಮಾಡಲಾಗುತ್ತಿದೆ ಎಂಬುದರ ತಾತ್ಪರ್ಯವನ್ನು ತಿಳಿಸಲು ಅವರು (ಅರ್ಜಿದಾರರು) ಕೃತಕ ಬುದ್ಧಿಮತ್ತೆಯನ್ನಾದರೂ ಬಳಕೆ ಮಾಡಬಹುದಿತ್ತು ಎಂದು ತುಷಾರ್‌ ಮೆಹ್ತಾ ಛೇಡಿಸಿದರು. ಲಘು ದಾಟಿಯಲ್ಲಿ ಹೇಳುವುದಾದರೆ ಇದು ಸಾಮೂಹಿಕ ವಿವೇಚನಾರಾಹಿತ್ಯವನ್ನು ಪ್ರತಿನಿಧಿಸುತ್ತದೆ. 'ಕೃತಕ ಬುದ್ಧಿಮತ್ತೆಯು ಮನುಷ್ಯನ ಮೂರ್ಖತನಕ್ಕೆ ಎಂದೂ ಸರಿಸಮನಾಗಲಾರದು!' ಎಂದೂ ಕುಟುಕಿದರು.

ಆಕ್ಷೇಪಣೆ ಸಲ್ಲಿಸುವಾಗ ಯಾವುದೇ ವಿವೇಚನೆ ಬಳಕೆ ಮಾಡಲಾಗಿಲ್ಲ. ನಕಲು ಮಾಡಿರುವ ಪ್ರಿಂಟ್‌ ಮತ್ತು ಫಾಂಟ್‌ ಸಹ ಒಂದೇ ಆಗಿದೆ ಎಂದು ಕಿಚಾಯಿಸಿದರು.

Read More
Next Story