Mysore MUDA Scam | ಪಾದಯಾತ್ರೆ ಬಿಜೆಪಿಯ ಪಾಲಿಗೆ ಆತ್ಮಹತ್ಯೆ ಪ್ರಯತ್ನವಾಗಲಿದೆ: ಡಿ ಕೆ ಶಿವಕುಮಾರ್
x

Mysore MUDA Scam | ಪಾದಯಾತ್ರೆ ಬಿಜೆಪಿಯ ಪಾಲಿಗೆ ಆತ್ಮಹತ್ಯೆ ಪ್ರಯತ್ನವಾಗಲಿದೆ: ಡಿ ಕೆ ಶಿವಕುಮಾರ್


ʻʻನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು, ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿದು ಪ್ರಚಾರ ಪಡೆಯಲು ಬಿಜೆಪಿಯವರು ಷಢ್ಯಂತ್ರ ರೂಪಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆ ಮೂಲಕ ಅವರು ತೋಡಿಕೊಂಡ ಬಾವಿಗೆ ಅವರೇ ಬೀಳುತ್ತಿದ್ದಾರೆ. ಇದು ಬಿಜೆಪಿ ಪಾಲಿಗೆ ಆತ್ಮಹತ್ಯೆ ಪ್ರಯತ್ನವಾಗಲಿದೆʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಶುಕ್ರವಾರ(ಜು.26) ಬೆಳಿಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಬಿಜೆಪಿಯವರು ಹಗರಣಗಳ ಸರದಾರರು. ಈ ಪಾದಯಾತ್ರೆ ಮೂಲಕ ತಾವೇ ತೋಡಿಕೊಂಡಿರುವ ಬಾವಿಗೆ ಬೀಳಲು ಹೋಗುತ್ತಿದ್ದಾರೆ. ಇದು ಬಿಜೆಪಿಯ ಆತ್ಮಹತ್ಯೆ ಪ್ರಯತ್ನವಾಗಲಿದೆ. ದೇಶದಲ್ಲೇ ಕಾಂಗ್ರೆಸ್ ಆಡಳಿತದಲ್ಲಿರುವ ಅತಿ ದೊಡ್ಡ ರಾಜ್ಯ ಕರ್ನಾಟಕ. ಹೀಗಾಗಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಅವರು ಏನಾದರೂ ಮಾಡಲಿ. ನಾವು ನಮ್ಮದೇ ಆದ ರೀತಿ ಉತ್ತರ ನೀಡುತ್ತೇವೆʼʼ ಎಂದರು.

"ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ತಿಳಿದ ತಕ್ಷಣ, ನಮ್ಮ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದ್ದು, ಹಲವರನ್ನು ಬಂಧಿಸಿ, ಅಕ್ರಮವಾಗಿ ಸಾಗಾಟ ಮಾಡಿದ್ದ ಹಣವನ್ನು ವಾಪಸ್ ಪಡೆದಿದ್ದೇವೆ. ಪ್ರತಿಪಕ್ಷಗಳು ಪ್ರಚಾರ ಪಡೆಯಲು ಬೇರೆ ತನಿಖಾ ಸಂಸ್ಥೆಗಳನ್ನು (ಇಡಿ) ಕರೆತಂದು ನಮ್ಮವರಿಗೆ ಕಿರುಕುಳ ನೀಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕಾನೂನು ಪ್ರಕಾರ ಅವರ ಪ್ರಯತ್ನ ಅವರು ಮಾಡಲಿ" ಎಂದು ಹೇಳಿದರು.

"ಪ್ರತಿಪಕ್ಷಗಳ ಆರೋಪದ ಬಗ್ಗೆ ಚರ್ಚೆ ಮಾಡಲು ಸದನದಲ್ಲಿ ಅವಕಾಶ ನೀಡಿದೆವು. ಆದರೆ ಅವರು ಮುಖ್ಯಮಂತ್ರಿಗಳಿಗೆ ಉತ್ತರ ನೀಡಲು ಅವಕಾಶವನ್ನೇ ನೀಡಲಿಲ್ಲ. ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಿ.ಟಿ ರವಿ ಸೇರಿದಂತೆ ಅವರ ಪಕ್ಷದ ನಾಯಕರು ಮಾತನಾಡುವಾಗ ತಾಳ್ಮೆಯಿಂದ ಕೇಳಿಸಿಕೊಂಡಿದ್ದೇವೆ. ನಮ್ಮ ಮುಖ್ಯಮಂತ್ರಿಗಳು ಬಿಜೆಪಿಯ ಆಡಳಿತ ಅವಧಿಯಲ್ಲಿ ಇದೇ ಮಾದರಿಯಲ್ಲಿ ನಡೆದಿರುವ ಅಕ್ರಮಗಳನ್ನು ಬಯಲು ಮಾಡಿದರು. ಅವರ ಅಕ್ರಮಗಳ ಬಗ್ಗೆ ಸಿಎಜಿ ವರದಿಗಳಿವೆ. ಇವುಗಳ ಬಗ್ಗೆ ಚರ್ಚೆ ಮಾಡಲು ವಿರೋಧ ಪಕ್ಷಗಳು ಅವಕಾಶ ನೀಡಲಿಲ್ಲʼʼ ಎಂದು ತಿಳಿಸಿದರು.

"ವಾಲ್ಮೀಕಿ ನಿಗಮ ಅಕ್ರಮ ಆರೋಪದ ರೀತಿಯಲ್ಲೇ ಮುಡಾ ವಿಚಾರದಲ್ಲೂ ಅವರು ಪ್ರಚಾರ ಪಡೆಯಲು ಮುಂದಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅಸ್ಥಿತ್ವ ಕಳೆದುಕೊಳ್ಳುತ್ತಿದೆ ಎಂಬ ಕಾರಣಕ್ಕೆ ಇಬ್ಬರೂ ಒಂದಾಗಿ ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ" ಎಂದರು.

"ಮುಡಾದವರು ಮುಖ್ಯಮಂತ್ರಿಗಳ ಕುಟುಂಬದ ಜಮೀನನ್ನು ನೋಟಿಫಿಕೇಶನ್ ಮಾಡದೇ ಕಬಳಿಸಿದ್ದರು. ಅದಕ್ಕೆ ಪರಿಹಾರವಾಗಿ ಈ ನಿವೇಶನಗಳನ್ನು ನೀಡಲಾಗಿದೆ. ನಿಯಮಾವಳಿ ಪ್ರಕಾರ ನೋಟಿಫಿಕೇಶನ್ ಮಾಡದೇ ಭೂಮಿಯನ್ನು ಬಳಸಿಕೊಂಡರೆ ಪರಿಹಾರ ನೀಡಲು ಅವಕಾಶವಿದೆ. ಅದೇ ರೀತಿ ಇಲ್ಲೂ ಆಗಿದೆ. ಕೆಲವು ಕಡೆ 50:50 ಅನುಪಾತದಲ್ಲಿ ನೀಡಿದರೆ, ಮತ್ತೆ ಕೆಲವು ಕಡೆ ಶೇ.100 ರಷ್ಟು ಮತ್ತೆ ಕೆಲವು ಕಡೆ ಶೇ.30 ರಷ್ಟು ನೀಡುತ್ತಾರೆ. ಮುಖ್ಯಮಂತ್ರಿಗಳ ಕುಟುಂಬದವರು ನಮಗೆ ಇಂತಹದೇ ಜಾಗದಲ್ಲಿ ನಿವೇಶನ ನೀಡಿ ಎಂದು ಕೇಳಿಲ್ಲ. ಮುಡಾ ಅಧಿಕಾರಿಗಳು ಕೊಟ್ಟ ನಿವೇಶನವನ್ನು ಪಡೆದಿದ್ದಾರೆ" ಎಂದು ಶಿವಕುಮಾರ್‌ ವಿವರಿಸಿದರು.

ʻʻಬಿಜೆಪಿ ಅಧಿಕಾರದಲ್ಲಿದ್ದಾಗ ಈ ನಿವೇಶನ ಹಂಚಿಕೆ ಮಾಡಲಾಗಿದೆ. ಬೇರೆಯವರ ನಿವೇಶನ ಹಂಚಿಕೆ ವಿಚಾರವಾಗಿ ಸಂಬಂಧಪಟ್ಟ ಮಂತ್ರಿಗಳು ಮಾತನಾಡುತ್ತಾರೆ. ನಾನು ಕೂಡ ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಮುಖ್ಯಮಂತ್ರಿಗಳ ಕುಟುಂಬ ಕೇವಲ ಪರಿಹಾರ ಪಡೆದಿದೆ. ಕಾನೂನು ಚೌಕಟ್ಟಿನಲ್ಲಿ ಈ ಪ್ರಕ್ರಿಯೆ ನಡೆದಿವೆ. ಈಗ ಮುಖ್ಯಮಂತ್ರಿಗಳ ಘನತೆಗೆ ಮಸಿ ಬಳಿಯಲು ವಿರೋಧ ಪಕ್ಷದವರು ಪ್ರಯತ್ನ ಮಾಡುತ್ತಿದ್ದಾರೆʼʼ ಎಂದರು.

ಪಾದಯಾತ್ರೆ ಹೋರಾಟ ಪರಿಚಯಿಸಿದ್ದೇ ಕಾಂಗ್ರೆಸ್

ದೇಶದಲ್ಲಿ ಪಾದಯಾತ್ರೆ ಮಾಡುವುದನ್ನು ಆರಂಭಿಸಿದ್ದೇ ಕಾಂಗ್ರೆಸ್ ಪಕ್ಷ. ಮಹಾತ್ಮಾ ಗಾಂಧಿಜೀ ಅವರ ನಾಯಕತ್ವದಲ್ಲಿ ಪಾದಯಾತ್ರೆ ಆರಂಭವಾಗಿತ್ತು. ಸ್ವಾತಂತ್ಯ್ರ ಬಳಿಕ ಭಾರತ ಜೋಡೋ, ಬಳ್ಳಾರಿ, ಮೇಕೆದಾಟು ಪಾದಯಾತ್ರೆ ಮಾಡಿದ್ದೇವೆ, ಪಾದಯಾತ್ರೆ ನಮ್ಮ ಸ್ವತ್ತು. ಬಿಜೆಪಿ ಹಗರಣಗಳ ಸರದಾರರು ಎಂದು ಹೇಳಿದರು.

Read More
Next Story