
Mysore Dasara -2025 | ದಸರಾ ಅಂಬಾರಿಗೆ ಕಳೆತಂದಿದ್ದ ಗಜಶ್ರೇಷ್ಠ; ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದ ಅರ್ಜುನ !
2023 ಡಿಸೆಂಬರ್ 4ರಂದು ಹಾಸನದ ಸಕಲೇಶಪುರ ತಾಲ್ಲೂಕಿನ ಯಳಸೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾಗಿದ್ದ. ಆನೆಗಳ ಗುಂಪಿನಲ್ಲಿಯೇ ಕ್ಯಾಪ್ಟನ್ ಎಂದು ಹೆಸರು ಗಳಿಸಿದ್ದ ಅರ್ಜುನನ ವೀರಮರಣ ನಾಡು ಮತ್ತು ನಾಡಿನಾಚಿನ ಅಭಿಮಾನಿಗಳು, ಸಹೃದಯರಲ್ಲಿ ನೋವು ಉಂಟು ಮಾಡಿತ್ತು. ಅಗಲಿದ ಅರ್ಜುನನಿಗೆ ಇಡೀ ನಾಡು ಕಂಬನಿ ಮಿಡಿದಿತ್ತು.
ಗಜಶ್ರೇಷ್ಠ ಅರ್ಜುನ ನಮ್ಮನ್ನು ಅಗಲಿ ಒಂದೂವರೆ ವರ್ಷ ಕಳೆದಿದೆ. ಆದರೂ, ಸಾಹಸಿ ಆನೆಯ ನೆನಪು ಕನ್ನಡಿಗರ ನೆನಪಿನಲ್ಲಿ ಚಿರಸ್ಥಾಯಿಯೇ. ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ಸೈ ಎನ್ನಿಸಿಕೊಂಡಿದ್ದ ಅರ್ಜುನ ತನ್ನ ನಡವಳಿಕೆ, ಹಾವ-ಭಾವ, ಸಾಹಸಗಳಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ.
2023 ಡಿಸೆಂಬರ್ 4ರಂದು ಹಾಸನದ ಸಕಲೇಶಪುರ ತಾಲ್ಲೂಕಿನ ಯಳಸೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾಗಿದ್ದ. ಆನೆಗಳ ಗುಂಪಿನಲ್ಲಿಯೇ ಕ್ಯಾಪ್ಟನ್ ಎಂದು ಹೆಸರು ಗಳಿಸಿದ್ದ ಅರ್ಜುನನ ವೀರಮರಣ ನಾಡು ಮತ್ತು ನಾಡಿನಾಚಿನ ಅಭಿಮಾನಿಗಳು, ಸಹೃದಯರಲ್ಲಿ ನೋವು ಉಂಟು ಮಾಡಿತ್ತು. ಅಗಲಿದ ಅರ್ಜುನನಿಗೆ ಇಡೀ ನಾಡು ಕಂಬನಿ ಮಿಡಿದಿತ್ತು.
ಸರ್ಕಾರವೂ ಸಕಲ ಗೌರವಗಳೊಂದಿಗೆ ಹಾಸನದ ದಬ್ಬಳ್ಳಿಕಟ್ಟೆಯ ನೆಡುತೋಪಿನಲ್ಲಿ ಅಂತ್ಯಕ್ರಿಯೆ ಮಾಡಿತ್ತು. ಆ ವೇಳೆಯಲ್ಲಿಯೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು 50 ಲಕ್ಷ ರೂ. ವೆಚ್ಚದಲ್ಲಿ ಸಾಹಸಿ ಗಜರಾಜ ಅರ್ಜುನನ ಸ್ಮಾರಕ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದು ಈಗ ಉದ್ಘಾಟನೆಯ ಹಂತಕ್ಕೆ ಬಂದು ನಿಂತಿದೆ.
ಅರಮನೆ ಎಂದರೆ ಆನೆಗಳದ್ದೇ ವೈಭವ..!
ಮೈಸೂರು ದಸರಾಗೆ ಎಷ್ಟು ಶ್ರೀಮಂತಿಕೆಯ ಹೊದಿಕೆ ಇದೆಯೋ ಹಾಗೆಯೇ ಗಜಪಡೆಗೂ ತನ್ನದೇ ಆದ ಭವ್ಯ ಇತಿಹಾಸ ಇದೆ. ಹಿಂದೆಲ್ಲಾ ರಾಜ ಮಹಾರಾಜರಿಗೆ ವಾಹನವಾಗಿ, ಅವರನ್ನು ಹೊತ್ತು ತಿರುಗುತ್ತಿದ್ದ ಆನೆಗಳು ಈಗ ದಸರಾ ವೇಳೆಯಲ್ಲಿ ಮಾತ್ರ ಅರಮನೆ ಅಂಗಳಕ್ಕೆ ಬರುತ್ತವೆ. ಇಡೀ ದಸರಾ ವೈಭವದ ಕೇಂದ್ರವಾಗಿ ಜನರ ಚಿತ್ತವನ್ನು ತಮ್ಮತ್ತ ವಾಲಿಸಿಕೊಳ್ಳುತ್ತವೆ.
ಜಯಮಾರ್ತಾಂಡ, ವಿಜಯ ಬಹದ್ದೂರ್, ರಾಮಪ್ರಸಾದ್, ಮೋತಿಲಾಲ್, ಗಜೇಂದ್ರ, ಬಿಳಿಗಿರಿ, ದ್ರೋಣ, 30ಕ್ಕೂ ಹೆಚ್ಚು ಬಾರಿ ದಸರಾದಲ್ಲಿ ಪಾಲ್ಗೊಂಡ ಐರಾವತ, ಬಲರಾಮ, ಈಗ ಅಂಬಾರಿಯ ಹೊರುತ್ತಿರುವ ಅಭಿಮನ್ಯು ಸೇರಿ ಎಲ್ಲಾ ಆನೆಗಳಿಗೂ ತಮ್ಮದೇ ಇತಿಹಾಸ ಇದೆ. ಅರಮನೆಯ ಗೋಡೆ, ಇತಿಹಾಸದ ಪುಟಗಳಲ್ಲಿ ಇವುಗಳ ಹೆಸರು ಅಜರಾಮರವಾಗಿ ಉಳಿದಿದೆ. ಇಷ್ಟಿದ್ದರೂ ಅರ್ಜುನ ಎನ್ನುವ ಹೆಸರಿಗೆ ವಿಶೇಷ ಮನ್ನಣೆ ಇದೆ. ಪ್ರೀತಿಯ ಒನಲು ತುಸು ಹೆಚ್ಚಾಗಿಯೇ ಹರಿಯುತ್ತಿದೆ.
ಅರ್ಜುನ ಎಂದರೆ ಎಲ್ಲರಿಗೂ ಇಷ್ಟೊಂದು ಒಲವೇಕೆ..?
1968ರಲ್ಲಿ ಕಾಕನಕೋಟೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕ ಆನೆಗೆ ಅರ್ಜುನ ಎಂದು ಹೆಸರಿಟ್ಟು ಪಳಗಿಸಲಾಯಿತು. ಮಾವುತರು ನೀಡಿದ ಸೂಚನೆಯನ್ನು ವೇಗವಾಗಿ ಗ್ರಹಿಸುತ್ತಿದ್ದ ಅರ್ಜುನ ತನ್ನ ತುಂಟಾಟ ಮತ್ತು ಶೌರ್ಯಗಳಿಂದಲೇ ಹೆಸರು ಮಾಡಿದವನು. ಕಾಡಾನೆಗಳ ಸೆರೆ, ಹುಲಿ ಸೆರೆ ಕಾರ್ಯಾಚರಣೆ ವೇಳೆ ಮುಂದಾಳತ್ವ ವಹಿಸಿಕೊಂಡು ಹಿಡಿದ ಕಾರ್ಯವನ್ನು ಪೂರ್ಣ ಮಾಡುತ್ತಿದ್ದವನು. ಯಾವುದೇ ಕಠಿಣ ಕಾರ್ಯಾಚರಣೆಯೇ ಇರಲಿ, ದಸರಾದಂತಹ ವೈಭವೋಪೇತ ಸನ್ನಿವೇಶವೇ ಇರಲಿ ಚಿತ್ತಶುದ್ಧತೆಯಿಂದ ನಡೆದುಕೊಳ್ಳುತ್ತಿದ್ದವನು. ಇದೇ ಕಾರಣಕ್ಕೆ ಅರ್ಜುನ ಎಂದರೆ ಅರಣ್ಯಾಧಿಕಾರಿಗಳು, ಸಿಬ್ಬಂದಿ, ಮಾವುತರು, ಕಾವಾಡಿಗರು, ಜನ ಸಾಮಾನ್ಯರಿಗೂ ಅಚ್ಚುಮೆಚ್ಚು. 1990ರ ದಶಕದಿಂದ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಆರಂಭಿಸಿದ ಅರ್ಜುನ ಎಂಟು ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ಸೈ ಎನ್ನಿಸಿಕೊಂಡಿದ್ದ. 2019ರ ಬಳಿಕ ನಿಶಾನೆ ಆನೆಯಾಗಿ ಹೆಜ್ಜೆ ಹಾಕಿ ಮೆಚ್ಚುಗೆ ಗಳಿಸಿದ್ದ.
ಆರು ತಿಂಗಳು ದಾಟಿ ಒಂದೂವರೆ ವರ್ಷ ಕಳೆದಿದೆ
ಅರ್ಜುನನನ್ನು ಸಮಾಧಿ ಮಾಡಿದ ಬಳಿಕ ಜುಲೈ 6, 2023ರಂದು ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಆರು ತಿಂಗಳ ಒಳಗಾಗಿ ಹಾಸನದ ದಬ್ಬಳ್ಳಿಕಟ್ಟೆ ಮತ್ತು ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಅರ್ಜುನ ಮೃತಪಟ್ಟು ಒಂದೂವರೆ ವರ್ಷವಾಗಿದೆ. ಜೂ.27 ರಂದು ಸ್ಮಾರಕಕ್ಕೆ ಉದ್ಘಾಟನೆ ಭಾಗ್ಯ ದೊರೆತಿದೆ. 2023ರ ಜನವರಿಯಲ್ಲಿ ದಬ್ಬಳ್ಳಿಕಟ್ಟೆಯಲ್ಲಿ ಸ್ಮಾರಕ ಉದ್ಘಾಟನೆಗೆ ಸರ್ಕಾರ ಮುಂದಾಗಿತ್ತು. ಆದರೆ ಇದಕ್ಕೆ ಅರ್ಜುನನ ಅಭಿಮಾನಿಗಳು, ಸ್ಥಳೀಯ ಶಾಸಕ ಸಿಮೆಂಟ್ ಮಂಜು ವಿರೋಧ ವ್ಯಕ್ತಪಡಿಸಿದ್ದರು. ಸ್ಮಾರಕ ನಿರ್ಮಾಣಕ್ಕೆ 50 ಲಕ್ಷ ರೂ ಬಿಡುಗಡೆ ಮಾಡುತ್ತೇವೆ ಎಂದು ಸಚಿವರು ಹೇಳಿದ್ದರು. ಆದರೆ, ಕೇವಲ 16 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಇಲ್ಲಿ ಮೂಲ ಸೌಕರ್ಯಗಳು ಇಲ್ಲ. ತರಾತುರಿಯಲ್ಲಿ ಸ್ಮಾರಕ ಉದ್ಘಾಟನೆ ಮಾಡಲು ಮುಂದಾದರೆ ನಾವು ಹೋರಾಟ ಮಾಡಲು ಸಿದ್ಧ ಎಂದು ಎಚ್ಚರಿಕೆ ನೀಡಿದ್ದರು. ಇದರಿಂದ ಉದ್ಘಾಟನೆ ಮುಂದೂಡಲ್ಪಟ್ಟಿತ್ತು.
ಮೂವರು ಕಲಾವಿದರಿಂದ ನಾಲ್ಕು ತಿಂಗಳ ಕಾಲ ಶ್ರಮ
ಸದ್ಯ ನಾಗರಹೊಳೆ ಅರಣ್ಯ ವಿಭಾಗದ ಡಿ.ಬಿ.ಕುಪ್ಪೆ ಮತ್ತು ಹಾಸನದ ದಬ್ಬಳ್ಳಿಕಟ್ಟೆಯಲ್ಲಿ ಅರ್ಜುನನ ಪುತ್ಥಳಿ ನಿರ್ಮಾಣವಾಗಿ ಉದ್ಘಾಟನೆಗೆ ಸಜ್ಜಾಗಿವೆ. ಜೂನ್ 21ರಂದು ಅರಣ್ಯ ಸಚಿವರ ಉಪಸ್ಥಿತಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಕಡೇ ಕ್ಷಣದಲ್ಲಿ ರದ್ದಾಗಿ ಇದೀಗ ಜೂನ್ 27ರಂದು ಉದ್ಘಾಟನೆಯಾಗಿದೆ. ಇನ್ನು ಪುತ್ಥಳಿ ನಿರ್ಮಾಣದ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಹಿರಿಯ ಅರಣ್ಯ ಅಧಿಕಾರಿ ಧನಂಜಯ ಮತ್ತು ಅವರ ತಂಡದ ಸದಸ್ಯರು 4 ತಿಂಗಳ ಕಾಲ ಅರ್ಜುನನ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಫೈಬರ್ ಗ್ಲಾಸ್ ಮೆಟಿರೀಯಲ್ ಬಳಕೆ ಮಾಡಿರುವುದರಿಂದ ದೀರ್ಘಾವಧಿ ಬಾಳಿಕೆ ಬರುವ ವಿಶ್ವಾಸ ಇದೆ. 11 ಅಡಿಗಳ ಪ್ರತಿಮೆಗೆ 5 ಲಕ್ಷ ರೂಪಾಯಿ ಖರ್ಚಾಗಿದೆ. ದಬ್ಬಳ್ಳಿ ಕಟ್ಟೆಯಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವ ಮೂರ್ತಿಯೂ ಇಲ್ಲಿಯೇ ತಯಾರಿಸಿದ್ದು, ನಾಗರೀಕ ಸಮಾಜವೊಂದು ತನ್ನೊಂದಿಗೆ ಇದ್ದ ಪ್ರಾಣಿಗೆ ಇಷ್ಟೊಂದು ಗೌರವ ಕೊಡುತ್ತಿರುವುದು ಇದೇ ಮೊದಲು. ಇದು ಅರ್ಜುನನಿಗೆ ಸಿಕ್ಕಿದ ಪ್ರೀತಿಯ ಸಂಕೇತ ಎಂದು ನೆನಪಿಸಿಕೊಂಡರು.
ಎಲ್ಲ ರೀತಿಯ ಸಿದ್ಧತೆಗಳೂ ಪೂರ್ಣಗೊಂಡಿವೆ
ಈಗಾಗಲೇ ಡಿ.ಬಿ.ಕುಪ್ಪೆಯ ಸ್ಮಾರಕದ ಸ್ಥಳದಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮತ್ತಿಗೋಡು ಕ್ಯಾಂಪ್ ಸಮೀಪವೇ ಇರುವುದರಿಂದ ಅಲ್ಲಿಯೂ ಪ್ರವಾಸಿಗರಿಗೆ ಆನೆ ಪ್ರಿಯರಿಗೆ ಅನುಕೂಲಗಳು ಇವೆ. ಮುಂದಿನ ದಿನಗಳಲ್ಲಿ ಇಲಾಖೆ ನಿರ್ದೇಶನದ ಮೇರೆಗೆ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಧನಂಜಯ ತಿಳಿಸಿದರು.
ಮೈಸೂರಿನಲ್ಲಿ ಮತ್ತೊಂದು ಪ್ರತಿಮೆ..?
ದಸರಾ ವೇಳೆ ಅಂಬಾರಿ ಹೊತ್ತು ಗಜಪಡೆ ಸಾಗುವ ಮಾರ್ಗದಲ್ಲಿ ಬರುವ ಎಲ್ ಐಸಿ ಸರ್ಕಲ್ ಗೆ ಅರ್ಜುನ ಆನೆಯ ಹೆಸರನ್ನು ಇಟ್ಟು, ಅಲ್ಲಿ ಆನೆಯ ಪ್ರತಿಮೆ ಸ್ಥಾಪಿಸಬೇಕು ಎಂದು ಸಂಸದ ಯದುವೀರ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸರ್ಕಾರವನ್ನು ಈ ಹಿಂದೆಯೇ ಒತ್ತಾಯಿಸಿದ್ದರು. ಒಂದು ಹೆಜ್ಜೆ ಮುಂದೆ ಹೋಗಿ ಸಂಸದ ಯದುವೀರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವರಿಗೂ ಮನವಿ ಮಾಡಿಕೊಂಡಿದ್ದರು. ಇದು ಸಾಧ್ಯವಾದರೆ ಅರ್ಜುನ ಆನೆಯ ಪ್ರತಿಮೆ ಮೂರು ಕಡೆ ಸ್ಥಾಪಿತವಾದಂತೆ ಆಗುತ್ತದೆ. ಅಲ್ಲದೇ ಅದರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚುತ್ತದೆ. ಮುಂದಿನ ತಲೆಮಾರಿಗೆ ಅದರ ಪರಿಚಯವೂ ಆದಂತೆ ಆಗುತ್ತದೆ.