
ಮುಖ್ಯಮಂತ್ರಿ ಸಿದ್ದರಾಮಯ್ಯ
Mysore Dasara-2025 | ಚಾಮರಾಜನಗರ, ಶ್ರೀರಂಗಪಟ್ಟಣ ದಸರಾ ರದ್ದು ಮಾಡಿದ ಸರ್ಕಾರ; ಸಿಎಂ ಸ್ಪಷ್ಟನೆ
ಚಾಮರಾಜನಗರ ಹಾಗೂ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಿಸುವುದರಿಂದ ಮೈಸೂರು ದಸರಾದ ಮಹತ್ವ ಕಡಿಮೆಯಾಗಲಿದೆ. ಹಾಗಾಗಿ ಚಾಮರಾಜನಗರದಲ್ಲಿ ದಸರಾ ಆಚರಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರದಲ್ಲಿ ದಸರಾ ಆಚರಣೆಗೆ ಅವಕಾಶ ನೀಡುವುದಿಲ್ಲ. ಶ್ರೀರಂಗಪಟ್ಟಣ ಹಾಗೂ ಮೈಸೂರಿನಲ್ಲಿ ಮಾತ್ರ ದಸರಾ ಆಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರದಲ್ಲಿ ಹಿಂದಿನಿಂದಲೂ ದಸರಾ ಆಚರಣೆ ಮಾಡಿಲ್ಲ. ಹಾಗಾಗಿ ನಾವೂ ಮಾಡುವುದಿಲ್ಲ, ನಾನು 1994ರಿಂದ 99ರವರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೂ ದಸರಾ ಆಚರಣೆಗೆ ಅವಕಾಶ ನೀಡಿರಲಿಲ್ಲ. ಶ್ರೀರಂಗಪಟ್ಟಣವು ಮೈಸೂರು ಅರಸರ ರಾಜಧಾನಿಯಾಗಿದ್ದ ಕಾರಣ ಅಲ್ಲಿ ದಸರಾ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಚಾಮರಾಜನಗರದಲ್ಲಿ ದಸರಾ ಆಚರಿಸುವ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಾಮರಾಜನಗರ ಹಾಗೂ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಿಸುವುದರಿಂದ ಮೈಸೂರು ದಸರಾದ ಮಹತ್ವ ಕಡಿಮೆಯಾಗಲಿದೆ. ಹಾಗಾಗಿ ಚಾಮರಾಜನಗರದಲ್ಲಿ ದಸರಾ ಆಚರಿಸುವುದಿಲ್ಲ ಎಂದು ಹೇಳಿದರು.
ದಸರಾ ಸಿದ್ಧತೆಗೆ ಸೂಚನೆ
ದಸರಾ ಆಚರಣೆಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆ ಸೇರಿ ಮೈಸೂರು ನಗರ ವ್ಯಾಪ್ತಿಯ ಎಲ್ಲಾ ರಸ್ತೆಗಳನ್ನು ಸುಸ್ಥಿತಿಯಲ್ಲಿಡಬೇಕು. ದಸರಾ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.
ದಸರಾ ಉದ್ಘಾಟಕರ ಆಯ್ಕೆ ಅಧಿಕಾರವನ್ನು ಉನ್ನತ ಮಟ್ಟದ ಸಮಿತಿ ನನಗೆ ನೀಡಿದೆ. ಉದ್ಘಾಟಕರ ಆಯ್ಕೆ ಕುರಿತಂತೆ ಹಲವರು ತಮ್ಮ ಸಲಹೆ ಸೂಚನೆ ನೀಡಿದ್ದಾರೆ. ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ಈ ಬಾರಿ ಮಹಿಳೆಯರಿಂದ ದಸರಾ ಉದ್ಘಾಟನೆ ನೆರವೇರಿಸುವಂತೆ ಸಲಹೆ ಕೊಟ್ಟಿದ್ದಾರೆ. ಈ ಬಗ್ಗೆ ಒಂದು ವಾರ ಅಥವಾ 15 ದಿನದಲ್ಲಿ ತೀರ್ಮಾನ ಪ್ರಕಟಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ದಸರಾದಲ್ಲಿ ಸುಮಾರು 10ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಅ.2 ರಂದು ಜಂಬೂಸವಾರಿ ನಡೆಯಲಿದೆ. ಅಂದೇ ಗಾಂಧಿ ಜಯಂತಿ ಇರುವುದರಿಂದ ಗಾಂಧೀಜಿ ಅವರ ಸಂದೇಶ ಸಾರುವ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಸಲಾಗುವುದು. ವಿಶ್ವವಿಖ್ಯಾತ ದಸರಾ ಹಬ್ಬವನ್ನು ಜನರ ಹಬ್ಬದಂತೆ ಆಚರಿಸಲು ಸರ್ಕಾರ ಅಗತ್ಯ ತಯಾರಿ ನಡೆಸುತ್ತಿದೆ ಎಂದು ಸಿಎಂ ಹೇಳಿದರು.