ಮುಡಾ ಹಗರಣ : 92 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದ ಇಡಿ ಅಧಿಕಾರಿಗಳು
x

ಮುಡಾ ಹಗರಣ : 92 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದ ಇಡಿ ಅಧಿಕಾರಿಗಳು

ಇಡಿ ಜಪ್ತಿ ಮಾಡಿಕೊಂಡ ಆಸ್ತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೇರಿದ ಯಾವುದೇ ಆಸ್ತಿಗಳಿಲ್ಲ. ಬದಲಿಗೆ ಇತರೆ ವ್ಯಕ್ತಿಗಳು ಅಕ್ರಮದಲ್ಲಿ ಖರೀದಿಸಿದ ಆಸ್ತಿಗಳಾಗಿವೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿಬಂದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಆರೋಪದ ಹಗರಣಕ್ಕೆ ಸಂಬಂಧ ತನಿಖೆ ನಡೆಸುತ್ತಿರುವ ಇಡಿ (ಜಾರಿ ನಿರ್ದೇಶನಾಲಯ) ಮಹತ್ವದ ಬೆಳವಣಿಗೆ ಸಾಧಿಸಿದ್ದು, 92 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದೆ.

ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಡಿ ತನಿಖೆ ಕೈಗೊಂಡಿದೆ. 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ಅಂದಾಜು 100 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ 92 ಸ್ಥಿರಾಸ್ತಿಗಳನ್ನು ವಶಕ್ಕೆ ಪಡೆಸಿಕೊಳ್ಳಲಾಗಿದೆ. ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ವಸತಿ ಸಹಕಾರಿ ಸಂಘ ಮತ್ತು ಮುಡಾ ಅಧಿಕಾರಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇಡಿ ತನಿಖೆ ಕೈಗೊಂಡಿದೆ. ಜಪ್ತಿ ಮಾಡಿಕೊಂಡ ಆಸ್ತಿಯಲ್ಲಿ ಸಿದ್ದರಾಮಯ್ಯಗೆ ಸೇರಿದ ಯಾವುದೇ ಆಸ್ತಿಗಳಿಲ್ಲ. ಬದಲಿಗೆ ಇತರೆ ವ್ಯಕ್ತಿಗಳು ಅಕ್ರಮದಲ್ಲಿ ಖರೀದಿಸಿದ ಆಸ್ತಿಗಳಾಗಿವೆ ಎಂದು ಮೂಲಗಳು ಹೇಳಿವೆ.

ಕಾನೂನುಗಳು, ಸರ್ಕಾರಿ ಆದೇಶ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ. ಈ ಮೂಲಕ ಮುಡಾ ನಿವೇಶನಗಳ ಹಂಚಿಕೆಯಲ್ಲಿ ದೊಡ್ಡ ಪ್ರಮಾಣದ ವಂಚನೆ ಮಾಡಲಾಗಿದೆ ಎಂದು ಇಡಿ ತನಿಖೆ ಬಹಿರಂಗಪಡಿಸಿದೆ. ಅಕ್ರಮದಲ್ಲಿ ಮುಡಾ ಆಯುಕ್ತರಾಗಿದ್ದ ಜಿ.ಟಿ. ದಿನೇಶ್ ಕುಮಾರ್ ಸೇರಿದಂತೆ ಇತರೆ ಆಯುಕ್ತರ ಪಾತ್ರವು ಇದೆ. ಅನರ್ಹ ವ್ಯಕ್ತಿಗಳಿಗೆ ಪರಿಹಾರ ನಿವೇಶನಗಳ ಅಕ್ರಮ ಹಂಚಿಕೆಯಲ್ಲಿ ಪ್ರಮುಖ ಪಾತ್ರ ಇರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಇಡಿ ತಿಳಿಸಿದೆ.

ನಗದು, ಬ್ಯಾಂಕ್ ವರ್ಗಾವಣೆ, ಚರಾಸ್ತಿ/ಸ್ಥಿರಾಸ್ತಿಗಳ ರೂಪದಲ್ಲಿ ಅಕ್ರಮ ಹಂಚಿಕೆ ಮಾಡಲು ಲಂಚ ಪಡೆದಿರುವ ಬಗ್ಗೆ ಸಾಕ್ಷ್ಯಗಳನ್ನು ತನಿಖೆಯ ಸಮಯದಲ್ಲಿ ಸಂಗ್ರಹಿಸಲಾಗಿದೆ. ಅಕ್ರಮ ಹಂಚಿಕೆ ಮಾಡುವ ವಿಧಾನವೆಂದರೆ ಅನರ್ಹ ಫಲಾನುಭವಿಗಳನ್ನು ಗುರುತಿಸುವುದು ಮತ್ತು ನಕಲಿ ದಾಖಲೆಗಳು, ಅಪೂರ್ಣ ದಾಖಲೆಗಳನ್ನು ಬಳಸಿಕೊಂಡು ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿ ಹಂಚಿಕೆ ಮಾಡುವುದಾಗಿದೆ. ಕೆಲವು ಸಂದರ್ಭಗಳಲ್ಲಿ ಹಂಚಿಕೆ ಪತ್ರಗಳ ಹಿಂದಿನ ದಿನಾಂಕವನ್ನು ನೀಡುವುದು ಸಹ ಆಗಿದೆ. ಅಕ್ರಮ ಹಂಚಿಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಧಿಕಾರಿಗಳ ಸಂಬಂಧಿಕರು ಅಥವಾ ಆಪ್ತರ ಬ್ಯಾಂಕ್ ಖಾತೆಗಳ ಮೂಲಕ ರವಾನಿಸಲಾಗಿದೆ. 92 ಮುಡಾ ನಿವೇಶನಗಳ ಮುಟ್ಟುಗೋಲು ಸುಮಾರು 400 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ ಎಂದು ತಿಳಿಸಿದೆ.

ಈ ಕುರಿತು ದ ಫೆಡರಲ್‌ ಕರ್ನಾಟಕ ಜೊತೆಗೆ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ, ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಕೆ ಬಳಿಕ ಇಡೀ ಪ್ರಕರಣ ಮುಚ್ಚಿ ಹೋಯಿತು ಎಂದು ಭಾವಿಸಿದ್ದರು. ಅಲ್ಲದೇ, ತಮ್ಮ ಹೋರಾಟದ ಬಗ್ಗೆ ಹಲವರಿಂದ ಸಾಕಷ್ಟು ಮಾತುಗಳು ಕೇಳಿಬಂದವು. ಆದರೂ ಅವುಗಳನ್ನು ಲೆಕ್ಕಿಸದೆ ಕಾನೂನು ಹೋರಾಟ ನಡೆಸಲಾಗುತ್ತಿದೆ. ಇಡಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಇದೀಗ 92 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದೆ. ಈ ಬೆಳವಣಿಗೆಯು ನನ್ನ ಆರೋಪಕ್ಕೆ ಬಲವಾದ ಸಾಕ್ಷಿ ಸಿಕ್ಕಂತಾಗಿದೆ.

ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದ್ದು, 50:50 ಅನುಪಾತದಡಿ ನಿವೇಶನಗಳನ್ನು ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದೆ. ಇದರಿಂದ ಅಂದಾಜು 5 ಸಾವಿರ ಕೋಟಿ ರೂಪಾಯಿ ಭಾರೀ ಅಕ್ರಮ ನಡೆದಿತ್ತು. ಮೈಸೂರು ನಗರದಲ್ಲಿ ಸಾರ್ವಜನಿಕರಿಗೆ ಭೂಮಿಯನ್ನು ವಿತರಿಸುವ, ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಮತ್ತು ಮೂಲಸೌಲಭ್ಯಗಳ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಮುಡಾ ಹೊಂದಿದೆ. ಆದರೆ, ಇದೇ ಮುಡಾ ಈಗ ಹಗರಣದ ಸುಳಿಗೆ ಸಿಲುಕಿದ್ದು, ನಕಲಿ ದಾಖಲೆ ಸೃಷ್ಟಿ, ಕಾನೂನು ನಿಯಮ ಉಲ್ಲಂಘನೆ, ಮತ್ತು ಪ್ರಭಾವಿಗಳ ಒತ್ತಡದ ಮೂಲಕ ಸಾಮಾನ್ಯ ಅರ್ಹ ಅರ್ಜಿದಾರರ ಬದಲಿಗೆ ಪ್ರಭಾವಿ ವ್ಯಕ್ತಿಗಳಿಗೆ ಭೂ ಹಂಚಿಕೆ ಮಾಡಿದ ಆರೋಪಗಳು ಕೇಳಿ ಬಂದವು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಪ್ರಸ್ತಾಪವಾದ ನಂತರ ಹೆಚ್ಚಿನ ಸುದ್ದಿಯಾಯಿತು. ಪತ್ನಿ ಪಾರ್ವತಿ ಅವರಿಗೆ ಹೆಚ್ಚಿನ ಮೌಲ್ಯ ಹೊಂದಿರುವ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದ್ದು, ಇದರಲ್ಲಿ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿ ಬಂದಿವು. ಆದರೆ, ಆರೋಪ ತಳ್ಳಿ ಹಾಕಿರುವ ಸಿದ್ದರಾಮಯ್ಯ, ಕಾನೂನು ಬದ್ಧವಾಗಿಯೇ ನಿವೇಶನ ಹಂಚಿಕೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.

ನನ್ನ ಪತ್ನಿಗೆ ತವರು ಮನೆಯಿಂದ ಬಳುವಳಿಯಾಗಿ ಬಂದ ಕೆಸರೆ ಸಮೀಪದ 3 ಎಕರೆ 16 ಗುಂಟೆ ಜಮೀನನ್ನು ಮುಡಾ ಸೈಟ್ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಿತ್ತು. ಅದಕ್ಕೆ ಪರ್ಯಾಯ ಜಮೀನು ನೀಡಿದ್ದು ಕೂಡ ಬಿಜೆಪಿ ಸರ್ಕಾರದ ಕಾಲದಲ್ಲಿ, ನಾನು ಅಧಿಕಾರದಲ್ಲಿ ಇದ್ದಾಗ ಜಮೀನು ತೆಗೆದುಕೊಳ್ಳಲು ಹೋಗಿರಲಿಲ್ಲ. ಹಿಂದಿನ ಬಿಜೆಪಿ ಸರ್ಕಾರವೇ 50:50 ನಿಯಮ ರೂಪಿಸಿ ಕಾನೂನು ಬದ್ಧವಾಗಿ ಪರ್ಯಾಯ ನಿವೇಶನ ನೀಡಿದೆ ಎಂದಿದ್ದರು.

ಮುಡಾ ಹಗರಣದಲ್ಲಿ 5 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಇಡಿಗೆ ದೂರು ನೀಡಿದ್ದರು. ಈ ದೂರಿನನ್ವಯ ತನಿಖೆ ಕೈಗೊಂಡಿರುವ ಇಡಿ ಅಧಿಕಾರಿಗಳು ಇದೀಗ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ.

Read More
Next Story