
ಮುಖ್ಯಮಂತ್ರಿ ಸಿದ್ದರಾಮಯ್ಯ
ಪ್ರಚಾರದಿಂದಲೇ ಮೋದಿ ಬದುಕಿರೋದು; ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ
ನರೇಂದ್ರ ಮೋದಿ ಅವರು ಪ್ರಚಾರದಿಂದ ಬದುಕಿರುವುದು. ನೋಟು ಅಮಾನ್ಯೀಕರಣದಿಂದ ಯಾರಿಗೆ ಅನುಕೂಲವಾಗಿದೆ ಎಂದು ಸಿ.ಎಂ ಸಿದ್ದರಾಮಯ್ಯ ಪ್ರಶ್ನಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರದಿಂದಲೇ ಬದುಕಿರುವುದು. ಹೆಸರಿಗಷ್ಟೇ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ 11 ವರ್ಷ ತುಂಬಿದೆ. ಆದರೆ ಅವರ ಕೆಲಸಗಳಲ್ಲಿ ಅದು ಕಾಣುತ್ತಿಲ್ಲ. ಅವರ ಸರ್ಕಾರದ ಸಾಧನೆಗೆ ಶೂನ್ಯಾಂಕ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಸೋಮವಾರ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರಕ್ಕಾಗಿ ಮಾತ್ರ ಬದುಕಿದ್ದಾರೆ. ಅವರ ನೋಟು ಅಮಾನ್ಯೀಕರಣ ಯಾರಿಗೆ ಅನುಕೂಲವಾಗಿದೆ?, ಅಚ್ಚೆ ದಿನ್ ಆಯೇಗಾ ಅಂದರು. ಯಾರಿಗೆ ಒಳ್ಳೆಯ ದಿನಗಳು ಬಂದಿವೆ ಎಂದು ಪ್ರಶ್ನಿಸಿದರು.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗ, ರೈತರ ಸಮಸ್ಯೆ ಇತ್ಯರ್ಥದ ಭರವಸೆ ನೀಡಿದರು. ಹಾಗಾದರೆ ದೆಹಲಿಯಲ್ಲಿ ರೈತರು 1 ವರ್ಷ ಚಳವಳಿ ಮಾಡಿದರೂ ಯಾವುದೇ ಸಮಸ್ಯೆ ಬಗೆಹರಿಸಿಲ್ಲ ಎಂದು ಕುಟುಕಿದರು.
ಸುಳ್ಳು ವಿಚಾರಗಳಿಗೆ ಪ್ರಚಾರ
ಮಾಧ್ಯಮಗಳು ಅವರಿಗೆ ಹೆಚ್ಚಿನ ಪ್ರಚಾರ ನೀಡುತ್ತಿವೆ. ಅವುಗಳ ಮೂಲಕ ಸುಳ್ಳು ವಿಚಾರಗಳನ್ನೇ ಪ್ರಚಾರ ಮಾಡುತ್ತಿದ್ದಾರೆ. ಆದರೆ, ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಇದು ಅಸಾಧ್ಯ ಎಂದವರೇ ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿಯಲ್ಲಿ ನಕಲು ಮಾಡಿದರು ಎಂದರು.
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮನಮೋಹನಸಿಂಗ್ ಅವರು ಶೇ 50ರಷ್ಟು ತೆರಿಗೆ ಹಂಚಿಕೆ ಮಾಡಿದರು. ಈಗ ಇವರೇ ಪ್ರಧಾನಿಯಾಗಿದ್ದಾರೆ. ಇವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ 5,300 ಕೋಟಿ ರೂ. ಕೊಡುವುದಾಗಿ ಘೋಷಿಸಿ ಕೊಡಲಿಲ್ಲ. 15 ನೇ ಹಣಕಾಸು ಆಯೋಗದವರು 11,495 ಕೋಟಿ ರೂ. ಕೊಡಬೇಕು ಎಂದು ಶಿಫಾರಸು ಮಾಡಿದರೂ ಕೊಡಲಿಲ್ಲ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಬಿಜೆಪಿ ಪ್ರಶ್ನೆ ಮಾಡುವುದನ್ನು ಬಿಟ್ಟು ಅಪಪ್ರಚಾರ ಮಾಡುತ್ತಿದೆ ಎಂದರು.