
Mining Case| ಗಣಿ ಗುತ್ತಿಗೆ ಮಂಜೂರು ಪ್ರಕರಣ; ಜಾಮೀನು ರದ್ದತಿ ಕೋರಿರುವ ಲೋಕಾಯುಕ್ತ ಅರ್ಜಿ ಪ್ರಶ್ನಿಸಿ ಎಚ್ಡಿಕೆ ಹೈಕೋರ್ಟ್ ಮೊರೆ
“ಲೋಕಾಯುಕ್ತ ಎಸ್ಐಟಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿ ಶ್ರೀಸಾಯಿ ಮಿನರಲ್ಸ್ ಗಣಿ ಗುತ್ತಿಗೆ ಪ್ರಕರಣಕ್ಕೆ ಇದ್ದ ಅಡ್ಡಿ ನಿವಾರಿಸಿದೆ. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಅಹವಾಲನ್ನು ಪರಿಗಣಿಸಿರುವುದರಿಂದ ಹೈಕೋರ್ಟ್ ಆದೇಶವನ್ನು ಮತ್ತಷ್ಟು ಸ್ಪಷ್ಟವಾಗಿದೆ" ಎಂದು ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್ ಅರಬಟ್ಟಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನಲ್ಲಿ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್ಗೆ 550 ಎಕರೆ ಭೂಮಿಯನ್ನು ಗಣಿ ಗುತ್ತಿಗೆ ನೀಡಿರುವ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಲೋಕಾಯುಕ್ತ ಎಸ್ಐಟಿ ಸಲ್ಲಿಸಿರುವ ಅರ್ಜಿ ಅಮಾನತು ಕೋರಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ನೇತೃತ್ವದ ಏಕಸದಸ್ಯ ಪೀಠವು, ಕೇಂದ್ರ ಸಚಿವ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು. ಕುಮಾರಸ್ವಾಮಿ ಪರ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, "ಕಳೆದ ವರ್ಷ ಬೆಂಗಳೂರಿನ ಸಂಜಯಗಾಂಧಿ ನಗರ ಠಾಣೆಯಲ್ಲಿ ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣ ಆಧರಿಸಿ ಗಣಿ ಗುತ್ತಿಗೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ರದ್ದತಿ ಕೋರಿ ಲೋಕಾಯುಕ್ತ ಎಸ್ಐಟಿ ಅರ್ಜಿ ಸಲ್ಲಿಸಿದೆ. ಈಚೆಗೆ ಹೈಕೋರ್ಟ್ನ ಸಮನ್ವಯ ಪೀಠವು ಎಸ್ಐಟಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿ, ಸಂಜಯಗಾಂಧಿ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಧ್ಯಂತರ ತಡೆ ಮುಂದುವರಿಸಿದೆ. ಅಂತಿಮವಾಗಿ ಬೆದರಿಕೆ ಪ್ರಕರಣದ ಸಂಬಂಧ ಸಲ್ಲಿಸಿರುವ ಅರ್ಜಿ ನಿರ್ಧಾರವಾಗುವವರೆಗೆ ನಿರೀಕ್ಷಣಾ ಜಾಮೀನು ರದ್ದತಿ ಕೋರಿ ಎಸ್ಐಟಿ ಸಲ್ಲಿಸಿರುವ ಅರ್ಜಿಯನ್ನು ಅಮಾನತಿನಲ್ಲಿಡಲು ಆದೇಶಿಸಬೇಕು” ಎಂದು ಕೋರಿದರು.
ಲೋಕಾಯುಕ್ತ ಪರ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್ ಅರಬಟ್ಟಿ ಅವರು ಪ್ರತಿಕ್ರಿಯಿಸಿ, “ಲೋಕಾಯುಕ್ತ ಎಸ್ಐಟಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿ ಶ್ರೀಸಾಯಿ ಮಿನರಲ್ಸ್ ಗಣಿ ಗುತ್ತಿಗೆ ಪ್ರಕರಣಕ್ಕೆ ಇದ್ದ ಅಡ್ಡಿ ನಿವಾರಿಸಿದೆ. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಅಹವಾಲನ್ನು ಪರಿಗಣಿಸಿರುವುದರಿಂದ ಹೈಕೋರ್ಟ್ ಆದೇಶವನ್ನು ಮತ್ತಷ್ಟು ಸ್ಪಷ್ಟವಾಗಿದೆ. ಆ ಮಧ್ಯಂತರ ಪರಿಹಾರ ಆದೇಶದಲ್ಲಿ ಹಿರಿಯ ವಕೀಲ ಹಷ್ಮತ್ ಪಾಷಾ ಅವರ ಒಪ್ಪಿಗೆಯನ್ನೂ ಕೋರ್ಟ್ ದಾಖಲಿಸಿದೆ. ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ನಿರ್ಧರಿಸುವುದನ್ನು ವಿಳಂಬಗೊಳಿಸಲು ಈಗ ಕುಮಾರಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಅರ್ಜಿಯು ಊರ್ಜಿತವಾಗುವುದಿಲ್ಲ, ಅದನ್ನು ವಜಾಗೊಳಿಸಬೇಕು” ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿ ವಜಾಗೊಳಿಸಲು ಮುಂದಾಗಿತ್ತು. ಹಿರಿಯ ವಕೀಲ ಹಷ್ಮತ್ ಪಾಷಾ ಕೋರಿಕೆಯ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ಮುಂದೂಡಿತು.
ನಿರೀಕ್ಷಣಾ ಜಾಮೀನು ಆದೇಶದ ಷರತ್ತುಗಳೇನು?
2015ರ ಆಗಸ್ಟ್ 21ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಜಿ.ಬೋಪಯ್ಯ ಅವರು ಕುಮಾರಸ್ವಾಮಿ ಅವರು ಐದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಪ್ರಭಾವ ಬೀರಬಾರದು. ತನಿಖಾಧಿಕಾರಿ ಸೂಚಿಸಿದಾಗ ಕುಮಾರಸ್ವಾಮಿ ಅವರು ವಿಚಾರಣೆಯಲ್ಲಿ ಭಾಗಿಯಾಗಬೇಕು ಎಂಬ ಷರತ್ತು ವಿಧಿಸಿದ್ದರು.
ಸಾಯಿ ಮಿನರಲ್ಸ್ ಪಾಲುದಾರರಾದ ವಿ.ವಿ.ಸಕ್ರೆ ಅವರು 2006 ಏ.17 ರಂದು ಬಳ್ಳಾರಿ ಜಿಲ್ಲೆಯ ಸಂಡೂರಿನ ಎನ್ಇಬಿ ವಲಯದಲ್ಲಿ 550 ಎಕರೆ ಗಣಿ ಗುತ್ತಿಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದೇ ಪ್ರಸ್ತಾವಿತ ಪ್ರದೇಶವನ್ನು ಮೊದಲಿಗೆ ಮೆಸರ್ಸ್ ಚೌಗ್ಲೆ ಮತ್ತು ಕಂಪನಿಗೆ ಹಂಚಿಕೆ ಮಾಡಲಾಗಿದ್ದು, ಉಲ್ಲೇಖಿತ ಭೂಮಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿತ್ತು. ಈ ಪ್ರದೇಶವನ್ನು ತಮಗೆ ಹಂಚಿಕೆ ಮಾಡುವಂತೆ ಕೋರಿ 29 ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದವು. ಈ ಸಂಬಂಧ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಒಳಗೊಂಡ ತುಲನಾತ್ಮಕ ಪಟ್ಟಿಯನ್ನು ಸಿದ್ಧಪಡಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ ಸಲ್ಲಿಸಿದ್ದರು.
ಈ ಕಡತವನ್ನು ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಂಡೂರು ತಾಲ್ಲೂಕಿನ ಎನ್ಇಬಿ ವಲಯದ ಜೋಗು, ತಿಮ್ಮಪ್ಪಗುಡಿ ಮತ್ತು ಭಾವಿಹಳ್ಳಿ ವ್ಯಾಪ್ತಿಯ 550 ಎಕರೆಯನ್ನು ವಿ.ವಿ.ಸಕ್ರೆ ಅವರಿಗೆ ಹಂಚಿಕೆ ಮಾಡಲು ನಿರ್ದೇಶಿಸಿದ್ದರು.