ಮೇಕೆದಾಟು ಯೋಜನೆ| ಅನುಮತಿ ಕೊಡಿಸುವೆ, ತಮಿಳುನಾಡನ್ನು ಒಪ್ಪಿಸಿ: ಹೆಚ್‌ಡಿ ಕುಮಾರಸ್ವಾಮಿ
x

ಮೇಕೆದಾಟು ಯೋಜನೆ| ಅನುಮತಿ ಕೊಡಿಸುವೆ, ತಮಿಳುನಾಡನ್ನು ಒಪ್ಪಿಸಿ: ಹೆಚ್‌ಡಿ ಕುಮಾರಸ್ವಾಮಿ


ಅಧಿಕಾರಕ್ಕೆ ಬಂದಲ್ಲಿ ಐದೇ ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಆದರೆ ನಿಮ್ಮ ʻINDIAʼ ಮೈತ್ರಿಕೂಟದ ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ಜವಾಬ್ದಾರಿ ನಿಮ್ಮದೇ ಎಂದು ಈ ಹಿಂದೆ ಹೇಳಿದ್ದು ನಿಜ. ಈಗ ಕಾಂಗ್ರೆಸ್‌ನವರು ಕೇವಲ ಮೊದಲ ವಾಕ್ಯವನ್ನು ಪ್ರಸ್ತಾಪಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮಂಡ್ಯದಿಂದ ಬುಧವಾರ ಹೊರಟ ಐದನೇ ದಿನದ 'ಮೈಸೂರು ಚಲೋ' ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ʻʻಯೋಜನೆ ಅನುಷ್ಠಾನಕ್ಕೆ ಇಲ್ಲಿನ ಕಾಂಗ್ರೆಸ್‌ ಸರ್ಕಾರವೂ ಸಹಕರಿಸಬೇಕು. ಕೇಂದ್ರವೇ ಎಲ್ಲವನ್ನೂ ಮಾಡಲಾಗದು. ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿ ಒಪ್ಪಿಸಿದರೆ, ನಾನು ಪ್ರಧಾನಿಯೊಂದಿಗೆ ಮಾತನಾಡಿ ಒಪ್ಪಿಸುತ್ತೇನೆ ಎಂದಿದ್ದೆ. ಅದಕ್ಕೆ ಈಗಲೂ ಬದ್ಧನಾಗಿದ್ದೇನೆʼʼ ಎಂದು ಹೇಳಿದರು.

ʻʻಕೊಚ್ಚೆಗಳ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೆ. ಆದರೆ, ಕಾಂಗ್ರೆಸ್ ಜನಾಂದೋಲನ ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ನನ್ನ ಬಗ್ಗೆ ವಿಡಿಯೊ ಪ್ಲೇ ಮಾಡಿದ್ದಾರೆ. ನಾನು ಇಂತಹ ಕಾರಣಕ್ಕೆ ಅವರನ್ನು ʻಸಿಡಿ ಶಿವುʼ ಎಂದು ಕರೆದದ್ದು. ವಿಡಿಯೊ ಬಿಡುವ ಚಾಳಿ ಎಲ್ಲೋಗುತ್ತೆʼʼ ಎಂದು ಡಿಕೆಶಿ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.

ʻʻಹಳೇ ವಿಡಿಯೊ ಬಿಟ್ಟಿದ್ದೀರಲ್ಲ, ನಿಮ್ಮ ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್‌ ಬಗ್ಗೆ ಮತ್ತು ನಿಮ್ಮ ಹೈಕಮಾಂಡ್ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ ಎಂಬುದನ್ನು ಮರೆತಿದ್ದೀರಾ?ʼʼ ಎಂದು ಕೇಳಿದರು.

ಈ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ʻʻಈ ಭಂಡ ಸರ್ಕಾರದಿಂದ ಜನರಿಗೆ ಒಳಿತಾಗುವುದಿಲ್ಲ. ಹಗರಣಗಳನ್ನು ಮುಚ್ಚಿ ಹಾಕಲು ಹುನ್ನಾರ ನಡೆಸುತ್ತಿದೆ. ಪೊಲೀಸರ ಮೇಲೆ ನಮಗೆ ನಂಬಿಕೆ ಇದೆಯೇ ಹೊರತು ಸರ್ಕಾರದ ಮೇಲಲ್ಲ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದೇ ಪಾದಯಾತ್ರೆ ನಡೆಸುತ್ತಿದ್ದೇವೆʼʼ ಎಂದು ಹೇಳಿದರು.

Read More
Next Story