ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದ ಮಣ್ಣು ತೆರವು ಪೂರ್ಣ: ಸಂಚಾರ ಪುನರಾರಂಭ
x

ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದ ಮಣ್ಣು ತೆರವು ಪೂರ್ಣ: ಸಂಚಾರ ಪುನರಾರಂಭ


ಸಕಲೇಶಪುರ-ಬಾಳುಪೇಟೆ ನಡುವಿನ ಮಂಗಳೂರು-ಬೆಂಗಳೂರು ರೈಲು ಹಳಿ ಮೇಲೆ ಗುಡ್ಡ ಕುಸಿತದಿಂದ ಬಿದ್ದಿದ್ದ ಮಣ್ಣು ತೆರವು ಕಾರ್ಯಾಚರಣೆ ಸಂಪೂರ್ಣಗೊಂಡಿದ್ದು, ಇದರ ಬೆನ್ನಲ್ಲೇ ರೈಲು ಸಂಚಾರ ಮತ್ತೆ ಆರಂಭಗೊಂಡಿದೆ.

ರೈಲು ಮಾರ್ಗಕ್ಕೆ ಬಿದ್ದಿದ್ದ ಮಣ್ಣನ್ನು ತೆರವು ಮಾಡುವ ಕಾರ್ಯವು ಸೋಮವಾರ ಸಂಜೆ ಪೂರ್ಣಗೊಂಡಿದೆ. ರೈಲು ಸಂಚಾರಕ್ಕೆ ಮುಕ್ತವಾಗುವಂತೆ ರೈಲು ಮಾರ್ಗವನ್ನು ಮತ್ತೆ ಮರು ಹೊಂದಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಗಳವಾರ (ಆ.20) ಸಂಚರಿಸಬೇಕಿದ್ದ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್ ಪ್ರೆಸ್ ರೈಲು ಮಾತ್ರ ರದ್ದಾಗಿದ್ದು, ಉಳಿದ ಎಲ್ಲಾ ರೈಲುಗಳು ನಿಗದಿತ ದಿನಾಂಕ ಹಾಗೂ ಸಮಯದ ಪ್ರಕಾರ ಸಂಚರಿಸಲಿದೆ. ಮಣ್ಣು ಕುಸಿತಗೊಂಡ ಸ್ಥಳದಲ್ಲಿ ರೈಲು ಸಂಚಾರದ ವೇಗಕ್ಕೆ ಮಿತಿ ಹೇರಲಾಗಿದೆ. ಮೇಲ್ಭಾಗದಿಂದಲೇ ಮಣ್ಣನ್ನು ತೆರವು ಗೊಳಿಸುವ ಮೂಲಕ ಸಂಚಾರಕ್ಕೆ ಮಾರ್ಗವನ್ನು ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೆಲವು ವಾರಗಳ ಹಿಂದೆ ಗುಡ್ಡ ಕುಸಿದಿದ್ದ ಜಾಗದಲ್ಲಿ ಕಳೆದ ಶುಕ್ರವಾರ ಮತ್ತೆ ಗುಡ್ಡ ಕುಸಿದಿತ್ತು. ಇದೇ ಕಾರಣಕ್ಕೆ ರೈಲು ಸಂಚಾರವನ್ನು ಮತ್ತೊಮ್ಮೆ ಸ್ಥಗಿತಗೊಳಿಸಲಾಗಿತ್ತು. ಮೂರು ದಿನಗಳಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದ್ದು, ರೈಲು ಸೇವೆಗಳು ಮತ್ತೆ ಪ್ರಾರಂಭವಾಗಿದೆ. ಮುಂದೆ ಎಲ್ಲಾ ರೈಲುಗಳು ನಿಗದಿತ ದಿನಾಂಕ ಹಾಗೂ ಸಮಯದ ಅನುಸಾರ ಸಂಚರಿಸಲಿದ್ದು, ಮಣ್ಣು ಕುಸಿದ ಸ್ಥಳದಲ್ಲಿ ರೈಲು ಸಂಚಾರದ ವೇಗಕ್ಕೆ ಮಿತಿ ಹೇರಲಾಗಿದೆ ಎಂದು ತಿಳಿದುಬಂದಿದೆ.

Read More
Next Story