
ಸರಗಳ್ಳತನದ ಗ್ಯಾಂಗ್ನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಸರಗಳ್ಳತನ ಗ್ಯಾಂಗ್ನನ್ನು ಬಂಧಿಸಿದ ಬೆಂಗಳೂರು ಪೊಲೀಸರು
ಮಾರ್ಚ್ 3 ರಂದು, ಶಾಹಿದ್ ಮತ್ತು ಅವನ ಸಹಚರರು ಕಾರಿನಲ್ಲಿ ಒಂದು ನಿರ್ದಿಷ್ಟ ಸ್ಥಳಕ್ಕೆ ದಾರಿ ಕೇಳುತ್ತಿರುವಂತೆ ನಟಿಸಿ ವೃದ್ಧ ಮಹಿಳೆಯ ಬಳಿಗೆ ಹೋಗಿ, ಆಕೆಯ ಕತ್ತಿನ ಸರ ಕದ್ದು ಪರಾರಿಯಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂಟಿ ಮಹಿಳೆಯರನ್ನು ಗುರಿಯಾಗಿಸಿಟ್ಟುಕೊಂಡು ಬೆಂಗಳೂರು ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಕುಖ್ಯಾತ ರೌಡಿಶೀಟರ್ ಸೇರಿ ನಾಲ್ವರು ಆರೋಪಿಗಳನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 3 ರಂದು ಬೆಂಗಳೂರಿನ ಜಯಮಹಲ್ ಮುಖ್ಯ ರಸ್ತೆಯಲ್ಲಿ ವೃದ್ಧ ಮಹಿಳೆಯೊಬ್ಬರ ಚಿನ್ನದ ಸರವನ್ನು ಈ ಗ್ಯಾಂಗ್ ದೋಚಿತ್ತು. . ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಜೆ.ಸಿ.ನಗರ ಇನ್ಸ್ಪೆಕ್ಟರ್ ಚೈತನ್ಯ ನೇತೃತ್ವದ ತಂಡವು ತನಿಖೆ ನಡೆಸಿ ನಾಗಪುರದ ಮೂಲದ ರೌಡಿಶೀಟರ್ ಶಾಹಿದ್, ಶಬೀರ್, ತನ್ವೀರ್, ಅಲಿನಕಿ ಎಂಬುವರನ್ನು ಬಂಧಿಸಿ ಅವರಿಂದ 6 ಲಕ್ಷ ಮೌಲ್ಯದ 87 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಹಿದ್ ಈ ಹಿಂದೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಜೈಲಿನಲ್ಲಿದ್ದು ಜನವರಿಯಲ್ಲಿ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾಗುತ್ತಲೇ ಶಾಹಿದ್ ಹೊಸ ಗ್ಯಾಂಗ್ ರಚಿಸಿ ಸೆಕೆಂಡ್ ಹ್ಯಾಂಡ್ ಮೋಟಾರ್ ಸೈಕಲ್ನೊಂದಿಗೆ ಬೆಂಗಳೂರಿಗೆ ಆಗಮಿಸಿದ್ದ. ಗಾಡಿಯ ನೋಂದಣಿ ಸಂಖ್ಯೆಯನ್ನು ಕೂಡ ತಿರುಚಿಸಿದ್ದ. ಮಾರ್ಚ್ 3 ರಂದು, ಶಾಹಿದ್ ಮತ್ತು ಅವನ ಸಹಚರರು ಕಾರಿನಲ್ಲಿ ಒಂದು ನಿರ್ದಿಷ್ಟ ಸ್ಥಳಕ್ಕೆ ದಾರಿ ಕೇಳುತ್ತಿರುವಂತೆ ನಟಿಸಿ ವೃದ್ಧ ಮಹಿಳೆಯ ಬಳಿಗೆ ಹೋಗಿ, ಆಕೆಯ ಕತ್ತಿನ ಸರ ಕದ್ದು ಸ್ಥಳದಿಂದ ಪರಾರಿಯಾಗಿದ್ದರು.
ಸರಗಳ್ಳರ ಚಲನವಲನ ಬಗ್ಗೆ ಪೊಲೀಸರು ಕಣ್ಣಿಟ್ಟಿದ್ದರು. ಈ ಗ್ಯಾಂಗ್ ಕೃತ್ಯವೆಸಗಲು ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಮೂಲಕ ಮೈಸೂರಿಗೆ ತೆರಳಿ ಸರಗಳ್ಳತನಕ್ಕೆ ಯತ್ನಕ್ಕೆ ಮುಂದಾಗಿದ್ದಾಗ ಆರೋಪಿಗಳನ್ನ ಸೆರೆಹಿಡಿಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.