ಪೊಲೀಸ್ ಮಹಾನಿರ್ದೇಶಕರಾಗಿ ಎಂ.ಎ. ಸಲೀಂ: ಕಾನೂನು ಸಮರದ ಬಳಿಕ ನೇಮಕ ಕಾಯಂ
x

ಡಿಜಿ-ಐಜಿಪಿ ಡಾ.ಎಂ.ಎ. ಸಲೀಂ

ಪೊಲೀಸ್ ಮಹಾನಿರ್ದೇಶಕರಾಗಿ ಎಂ.ಎ. ಸಲೀಂ: ಕಾನೂನು ಸಮರದ ಬಳಿಕ ನೇಮಕ ಕಾಯಂ

ಈ ಹಿಂದೆ, ಡಾ. ಎಂ.ಎ. ಸಲೀಂ ಅವರನ್ನು ರಾಜ್ಯದ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅದರ ವಿರುದ್ಧ ವಕೀಲರೊಬ್ಬರು ಕೋರ್ಟ್​ ಮೆಟ್ಟಿಲೇರಿದ್ದರು.


ಹಲವು ದಿನಗಳ ಕಾನೂನು ಸಮರ ಮತ್ತು ಚರ್ಚೆಯ ಬಳಿಕ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕ ಮತ್ತು ಆರಕ್ಷಕ ಮಹಾನಿರೀಕ್ಷಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಡಾ. ಎಂ.ಎ. ಸಲೀಂ ಅವರನ್ನು ರಾಜ್ಯ ಸರ್ಕಾರ ಕಾಯಂಗೊಳಿಸಿದೆ. ಈ ಕುರಿತು ರಾಜ್ಯ ಸರ್ಕಾರ ಶನಿವಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಹಿಂದೆ, ಡಾ. ಎಂ.ಎ. ಸಲೀಂ ಅವರನ್ನು ರಾಜ್ಯದ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ವಕೀಲೆ ಸುಧಾ ಕಾಟ್ವಾ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.

"ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ರಾಜ್ಯ ಪೊಲೀಸ್ ಮುಖ್ಯಸ್ಥರ ಹುದ್ದೆಗೆ ಪ್ರಭಾರ ನೇಮಕಾತಿ ಮಾಡಲು ಅವಕಾಶವಿಲ್ಲ. ಇದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಅರ್ಜಿದಾರರು ವಾದಿಸಿದ್ದರು. ಡಿಜಿಪಿ ನೇಮಕಾತಿಗಾಗಿ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಉನ್ನತ ಮಟ್ಟದ ಸಮಿತಿಯು, ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಗಳ ಪಟ್ಟಿಯಿಂದ ಮೂವರ ಹೆಸರನ್ನು ಶಿಫಾರಸು ಮಾಡಬೇಕು. ಆ ಮೂವರಲ್ಲಿ ಒಬ್ಬರನ್ನು ರಾಜ್ಯ ಸರ್ಕಾರವು ಕಾಯಂ ಡಿಜಿಪಿಯಾಗಿ ನೇಮಿಸಬೇಕು ಎಂಬುದು ನಿಯಮ.

ಆದರೆ, ರಾಜ್ಯ ಸರ್ಕಾರವು ಯುಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸುವಲ್ಲಿ ವಿಳಂಬ ಮಾಡಿದೆ ಮತ್ತು ನಿಯಮಗಳನ್ನು ಪಾಲಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.

ಹೈಕೋರ್ಟ್‌ನಲ್ಲಿ ಸರ್ಕಾರದ ಹೇಳಿಕೆ

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠದ ಮುಂದೆ, ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ಹಾಜರಾಗಿದ್ದರು.

"ಡಿಜಿಪಿ ನೇಮಕಕ್ಕೆ ಸಂಬಂಧಿಸಿದಂತೆ ಯುಪಿಎಸ್‌ಸಿ ಸಮಿತಿಯು ಆಗಸ್ಟ್ 26 ರಂದು ಸಭೆ ನಡೆಸಿದ್ದು, ಒಂದು ವಾರದೊಳಗೆ ಯುಪಿಎಸ್‌ಸಿಯಿಂದ ವರದಿ ಬಂದ ತಕ್ಷಣ ಕಾಯಂ ಡಿಜಿಪಿಯನ್ನು ನೇಮಿಸಲಾಗುವುದು" ಎಂದು ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಸರ್ಕಾರದ ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯವು, ಅರ್ಜಿಯನ್ನು ಇತ್ಯರ್ಥಪಡಿಸಿತ್ತು.

ಹೈಕೋರ್ಟ್‌ಗೆ ನೀಡಿದ ಭರವಸೆಯಂತೆ, ಇದೀಗ ರಾಜ್ಯ ಸರ್ಕಾರವು ಡಾ. ಎಂ.ಎ. ಸಲೀಂ ಅವರನ್ನು ಕಾಯಂ ಡಿಜಿ ಮತ್ತು ಐಜಿಪಿಯಾಗಿ ನೇಮಿಸಿ ಆದೇಶ ಹೊರಡಿಸಿದೆ. 1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಡಾ. ಸಲೀಂ ಅವರು, ಈ ಹಿಂದೆ ಅಪರಾಧ ತನಿಖಾ ದಳ (ಸಿಐಡಿ), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ನೇಮಕಾತಿಯೊಂದಿಗೆ, ರಾಜ್ಯ ಪೊಲೀಸ್ ಇಲಾಖೆಯ ನೇತೃತ್ವದ ಕುರಿತ ಅನಿಶ್ಚಿತತೆಗೆ ತೆರೆ ಬಿದ್ದಿದೆ.

Read More
Next Story