ಮುನಿರತ್ನ ಪ್ರಕರಣ | ಶಾಸಕ ಸ್ಥಾನದಿಂದ ಅಮಾನತು: ಸ್ಪೀಕರ್​ಗೆ ಕಾನೂನು ಸಚಿವರ ಪತ್ರ
x
ಮುನಿರತ್ನ

ಮುನಿರತ್ನ ಪ್ರಕರಣ | ಶಾಸಕ ಸ್ಥಾನದಿಂದ ಅಮಾನತು: ಸ್ಪೀಕರ್​ಗೆ ಕಾನೂನು ಸಚಿವರ ಪತ್ರ

ವಿಧಾನಸಭೆ ಸದಸ್ಯತ್ವದಿಂದ ಮುನಿರತ್ನ ಅವರನ್ನು ಅಮಾನತುಗೊಳಿಸಬೇಕೆಂದು ಸ್ವತಃ ಕಾನೂನು ಸಚಿವ ಎಚ್​ ಕೆ ಪಾಟೀಲ್ ಅವರು ಸ್ಪೀಕರ್​ ಯುಟಿ ಖಾದರ್​​ಗೆ ಪತ್ರ ಬರೆದಿದ್ದಾರೆ.


ಅತ್ಯಾಚಾರ, ಹನಿಟ್ರ್ಯಾಪ್‌, ಕೊಲೆ ಬೆದರಿಕೆ, ಜಾತಿನಿಂದನೆ, ಬ್ಲಾಕ್‌ಮೇಲ್‌, ಲಂಚ ಬೇಡಿಕೆ ಸೇರಿದಂತೆ ಸರಣಿ ಪ್ರಕರಣಗಳಲ್ಲಿ ಸಿಲುಕಿ ಜೈಲು ಸೇರಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ವಿಧಾನಸಭೆ ಸದಸ್ಯತ್ವದಿಂದ ಅಮಾನತುಗೊಳಿಸಲು ಕೋರಿ ಕಾನೂನು ಸಚಿವ ಎಚ್ ​ಕೆ ಪಾಟೀಲ್ ಅವರು ಸ್ಪೀಕರ್​ ಯು ಟಿ ಖಾದರ್​​ ಅವರಿಗೆ ಪತ್ರ ಬರೆದಿದ್ದಾರೆ.

ಶಾಸಕ ಮುನಿರತ್ನ ಮಾಡಿರುವ ಜಾತಿ ಹಾಗೂ ಮಹಿಳಾ ನಿಂದನೆ ಗಂಭೀರ ಸ್ವರೂಪದ್ದಾಗಿರುವಾಗಲೇ ಮತ್ತಷ್ಟು ಗಂಭೀರ ಸ್ವರೂಪದ ಹನಿಟ್ರ್ಯಾಪ್ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಇನ್ನು ಮುನಿರತ್ನ ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರ ಎಸ್​ಐಟಿಗೆ ವಹಿಸಿದೆ.

ಆ ಹಿನ್ನೆಲೆಯಲ್ಲಿ ಕಾನೂನು ಸಚಿವ ಎಚ್​​ ಕೆ ಪಾಟೀಲ್ ಅವರು ಸಭಾಧ್ಯಕ್ಷ ಯುಟಿ ಖಾದರ್​ ಅವರಿಗೆ ಪತ್ರ ಬರೆದಿದ್ದು, ವಿಧಾನಸಭೆ ಸದಸ್ಯತ್ವದಿಂದ ಕೆ.ಮುನಿರತ್ನ ರವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ನೀತಿ-ನಿರೂಪಣಾ ಸಮಿತಿ ರಚನೆ ಮಾಡಿ, ಯಾವುದೇ ಅಸಭ್ಯ ವರ್ತನೆ ಅಸಂಸದೀಯ ವರ್ತನೆಗೆ ಗಂಭೀರವಾದ ಮತ್ತು ಕಠಿಣ ಕ್ರಮಗಳ ಕುರಿತು ನಿಯಂತ್ರಣ ಮತ್ತು ಕಡಿವಾಣ ಹಾಕಲೇಬೇಕು ಎಂದಿದ್ದಾರೆ.

ಎಚ್ ​ಕೆ ಪಾಟೀಲ್ ಪತ್ರದಲ್ಲೇನಿದೆ?

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೈತಿಕ ಅಧಃಪತನಕ್ಕೆ ಕಾರಣವಾದ ಅತ್ಯಂತ ಹೇಯವಾದ, ಅಸಭ್ಯವಾದ ಭಾಷೆ ಬಳಸಿ ಕೀಳು ಅಭಿರುಚಿ ಪ್ರದರ್ಶಿಸಿದ ಈ ಘಟನೆ ಕ್ಷಮಾರ್ಹವಲ್ಲ. ವಿಧಾನಸಭೆಯ ಸದಸ್ಯರಿಗೆ ನೈತಿಕ ಮೌಲ್ಯಗಳ ನಿಯಂತ್ರಣ ಹೇರುವ ನೀತಿ-ನಿರೂಪಣಾ ಸಮಿತಿ ಎಂದೆಂದಿಗಿಂತಲೂ ಇಂದು ರಚಿಸಬೇಕಾದ ಅತೀ ಅವಶ್ಯಕತೆ ಇದೆ. ಸದನದ ಒಳಗೆ ಹಾಗೂ ಹೊರಗೆ ಅಸಭ್ಯವಾಗಿ ವರ್ತಿಸುವ ಸದಸ್ಯರ ವರ್ತನೆಯನ್ನು ಮೌಲ್ಯಗಳನ್ನು ಗಾಳಿಗೆ ತೂರುವ ನಡತೆಗಳನ್ನು ನಿಯಂತ್ರಿಸುವ ನಿಯಮಗಳನ್ನು ತಕ್ಷಣ ರಚಿಸಬೇಕು. ಸಂವಿಧಾನದತ್ತವಾಗಿ ಸಭಾಧ್ಯಕ್ಷರಿಗೆ ಪ್ರದತ್ತವಾಗಿರುವ ಪರಾಮಾಧಿಕಾರವನ್ನು ಚಲಾಯಿಸಿ ವಿಶೇಷ ಅಪರೂಪದ ಕ್ರಮ ಕೈಗೊಳ್ಳುವ ಮೂಲಕ ವಿಧಾನಸಭೆ ಸದಸ್ಯರಾದ ಕೆ.ಮುನಿರತ್ನ ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.


ನೀತಿ-ನಿರೂಪಣಾ ಸಮಿತಿ ರಚನೆ ಮಾಡಿ. ಆ ಸಮಿತಿಯ ಮೂಲಕ ಅಸಭ್ಯವಾಗಿ ವರ್ತಿಸುವ ಸದಸ್ಯರ ವಿರುದ್ಧ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಅಸಭ್ಯ ವರ್ತನೆ ಅಸಂಸದೀಯ ವರ್ತನೆಗೆ ಗಂಭೀರವಾದ ಮತ್ತು ಕಠಿಣ ಕ್ರಮಗಳ ಕುರಿತು ನಿಯಂತ್ರಣ ಮತ್ತು ಕಡಿವಾಣ ಹಾಕಲೇಬೇಕು ಎಂದು ಸ್ಪೀಕರ್​ ಯುಟಿ ಖಾದರ್​​ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Read More
Next Story