ಭಾಷಾ ವಿವಾದ | ಕ್ಷಮೆ ಕೇಳುವ ಪ್ರಮೇಯ ಇಲ್ಲ; ಕನ್ನಡಿಗರ ಬೆದರಿಕೆಗೆ ಹೆದರಲ್ಲ ಎಂದ ಕಮಲ್‌ ಹಾಸನ್‌
x

ಭಾಷಾ ವಿವಾದ | ಕ್ಷಮೆ ಕೇಳುವ ಪ್ರಮೇಯ ಇಲ್ಲ; ಕನ್ನಡಿಗರ ಬೆದರಿಕೆಗೆ ಹೆದರಲ್ಲ ಎಂದ ಕಮಲ್‌ ಹಾಸನ್‌

ನನ್ನಿಂದ ತಪ್ಪಾಗಿದ್ದರೆ ಮಾತ್ರ ಕ್ಷಮೆಯಾಚಿಸುವೆ, ನನ್ನಿಂದ ತಪ್ಪು ಆಗಿಲ್ಲ, ಭಾಷಾ ವಿದ್ವಾಂಸರ ಹೇಳಿಕೆಯನ್ನು ನಾನು ಉಲ್ಲೇಖಿಸಿದ್ದೇನಷ್ಟೇ. ಹಾಗಾಗಿ ಕ್ಷಮೆ ಕೇಳುವ ಪ್ರಮೇಯವೇ ಇಲ್ಲ ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ.


ಕನ್ನಡ ಭಾಷೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ನಟ ಕಮಲ್‌ ಹಾಸನ್‌ ಅವರು ಕ್ಷಮೆಯಾಚನೆಗೆ ನಿರಾಕರಿಸಿದ್ದಾರೆ. ತಮ್ಮ ನಟನೆಯ ಥಗ್‌ ಲೈಫ್‌ ಚಿತ್ರ ಬಿಡುಗಡೆಗೆ ನಿರ್ಬಂಧ ಹೇರುವ ಬೆದರಿಕೆಗೆ ಸೆಡ್ಡು ಹೊಡೆದಿದ್ದಾರೆ.

ಶುಕ್ರವಾರ ಚೆನ್ನೈನಲ್ಲಿ ಮಾತನಾಡಿದ ನಟ ಕಮಲ್ ಹಾಸನ್ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.

ನನ್ನಿಂದ ತಪ್ಪಾಗಿದ್ದರೆ ಮಾತ್ರ ಕ್ಷಮೆಯಾಚಿಸುವೆ, ನನ್ನಿಂದ ತಪ್ಪು ಆಗಿಲ್ಲ, ಭಾಷಾ ವಿದ್ವಾಂಸರ ಹೇಳಿಕೆಯನ್ನು ನಾನು ಉಲ್ಲೇಖಿಸಿದ್ದೇನಷ್ಟೇ. ಹಾಗಾಗಿ ಕ್ಷಮೆ ಕೇಳುವ ಪ್ರಮೇಯವೇ ಇಲ್ಲ. ಕನ್ನಡಿಗರ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ. ನನಗೆ ಕಾನೂನು ಮತ್ತು ನ್ಯಾಯದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಸಿನಿಮಾ ವಿತರಕರ ಜೊತೆ ಮಾತುಕತೆ

ಈ ಮಧ್ಯೆ, ಕಮಲ್‌ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾದ ವಿತರಣೆಯ ಹಕ್ಕು ಖರೀದಿಸಿರುವ ವೆಂಕಟೇಶ್ ಅವರನ್ನು ಚಲನಚಿತ್ರ ವಾಣಿಜ್ಯ ಮಂಡಳಿಗೆ ಕರೆಸಿ ಮಾತುಕತೆ ನಡೆಸಲಾಯಿತು. ಕಮಲ್ ಹಾಸನ್ ಬಳಿ ಕ್ಷಮೆ ಕೇಳಿಸುವ ಜವಾಬ್ದಾರಿಯನ್ನು ವೆಂಕಟೇಶ್ ಹೆಗಲಿಗೆ ಹಾಕಲಾಗಿತ್ತು. ವೆಂಕಟೇಶ್ ಅವರು ಕೂಡ ತಾವು ಪರಿಸ್ಥಿತಿಯ ಗಂಭೀರತೆಯನ್ನು ಕಮಲ್ ಅವರಿಗೆ ಮನವರಿಕೆ ಮಾಡಿ ಅಗತ್ಯ ಹೆಜ್ಜೆ ಇಡುವಂತೆ ಮನವಿ ಮಾಡುತ್ತೇವೆ ಎಂದಿದ್ದರು. ಈಗ ದಿಢೀರನೇ ತಾವು ಕ್ಷಮೆ ಕೇಳುವುದಿಲ್ಲ ಎಂದು ಕಮಲ್‌ ಹಾಸನ್‌ ಅವರು ಹೇಳಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಈ ಮಧ್ಯೆ, ಕಮಲ್‌ ಹಾಸನ್‌ ಹೇಳಿಕೆಗೆ ಚಿತ್ರರಂಗದ ನಟ ನಟಿಯರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿರಿಯ ನಟ ಜಗ್ಗೇಶ್, ಶ್ರೀನಾಥ್, ಚೇತನ್ ಅಹಿಂಸಾ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟಿಯರಾದ ಸುಮಲತಾ, ಜಯಮಾಲಿನಿ, ರಮ್ಯಾ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ನಟ ಶಿವರಾಜ್‌ಕುಮಾರ್‌ ಅವರು ಈ ವಿಷಯವನ್ನು ದೊಡ್ಡದು ಮಾಡಬೇಡಿ, ಇಲ್ಲಿಗೆ ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದಾರೆ.

ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಚಲನ ಚಿತ್ರ ವಾಣಿಜ್ಯ ಮಂಡಳಿ ಕೂಡ ಪಟ್ಟು ಹಿಡಿದಿವೆ. ಕಮಲ್ ಹಾಸನ್ ಕೈಯಲ್ಲಿ ಕ್ಷಮೆ ಕೇಳಿಸಿಯೇ ಸಿದ್ದ ಎಂದು ಮಂಡಳಿಯ ಪದಾಧಿಕಾರಿಗಳು ಹೇಳಿದ್ದಾರೆ.

ಚಿತ್ರಕ್ಕೆ ನಿರ್ಬಂಧ ಗ್ಯಾರೆಂಟಿ

ಕಮಲ್ ಹಾಸನ್ ಅವರು ಕ್ಷಮೆ ಕೇಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಅವರು, ಕ್ಷಮೆ ಕೇಳದಿದ್ದರೆ ಥಗ್‌ ಲೈಫ್‌ ಬ್ಯಾನ್ ಮಾಡುವುದು ಖಚಿತ. ಕ್ಷಮೆ ಕೇಳುವವರೆಗೂ ನಾವು ಬಿಡೋದಿಲ್ಲ.ಅವರು ಕ್ಷಮೆ ಕೇಳಲೇಬೇಕು, ಕ್ಷಮೆ ಕೇಳಲಿಲ್ಲ ಅಂದ್ರೆ ನಾವು ಬಿಡಲ್ಲ ಎಂದು ಕಿಡಿಕಾರಿದ್ದಾರೆ.

ನಾವು ಕನ್ನಡಿಗರು, ಕನ್ನಡದ ವಿಚಾರದಲ್ಲಿ ಯಾರೇ ಮಾತನಾಡಿದರೂ ಸಹಿಸಿಕೊಳ್ಳುವುದಿಲ್ಲ. ಈಗಾಗಲೇ ಅವರಿಗೆ ಎರಡು ದಿನ ಸಮಯಾವಕಾಶ ಕೊಟ್ಟಿದ್ದೇವೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದೇನೆ. ಅವರು ಕ್ಷಮೆ ಕೇಳಲಿಲ್ಲ ಅಂದರೆ ಕ್ರಮ ಅನಿವಾರ್ಯ. ಚಿತ್ರದ ಜತೆಗೆ ಅವರನ್ನೇ ಬ್ಯಾನ್‌ ಮಾಡುತ್ತೇವೆ ಎಂದಿದ್ದಾರೆ.

Read More
Next Story