ಘಾಟ್ ಸೆಕ್ಷನ್‌ನಲ್ಲಿ ಭೂಕುಸಿತ: ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಸಂಚಾರ ವ್ಯತ್ಯಯ
x

ಘಾಟ್ ಸೆಕ್ಷನ್‌ನಲ್ಲಿ ಭೂಕುಸಿತ: ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಸಂಚಾರ ವ್ಯತ್ಯಯ

ಶನಿವಾರ ಸಂಜೆ ಸುಮಾರು 4.40 ಕ್ಕೆ, ಸಿರಿಬಾಗಿಲು-ಯಡಕುಮೇರಿ, ಯಡಕುಮೇರಿ-ಕಡಗರವಳ್ಳಿ ಮತ್ತು ಕಡಗರವಳ್ಳಿ-ದೋಣಿಗಾಲ್ ನಡುವಿನ ರೈಲು ಹಳಿಗಳ ಮೇಲೆ ಮಣ್ಣು ಮತ್ತು ಬಂಡೆಗಳು ಕುಸಿದುಬಿದ್ದವು.


ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ ರಸ್ತೆ ಮತ್ತು ಸಕಲೇಶಪುರ ರೈಲು ನಿಲ್ದಾಣಗಳ ನಡುವಿನ ಘಾಟ್ ಮಾರ್ಗದಲ್ಲಿ ಶನಿವಾರ ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮವಾಗಿ, ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಅನೇಕ ಪ್ರಮುಖ ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ.

ಶನಿವಾರ ಸಂಜೆ ಸುಮಾರು 4.40 ಕ್ಕೆ, ಸಿರಿಬಾಗಿಲು-ಯಡಕುಮೇರಿ, ಯಡಕುಮೇರಿ-ಕಡಗರವಳ್ಳಿ ಮತ್ತು ಕಡಗರವಳ್ಳಿ-ದೋಣಿಗಾಲ್ ನಡುವಿನ ರೈಲು ಹಳಿಗಳ ಮೇಲೆ ಮಣ್ಣು ಮತ್ತು ಬಂಡೆಗಳು ಕುಸಿದುಬಿದ್ದವು. ಈ ಘಟನೆಯ ತೀವ್ರತೆಯಿಂದಾಗಿ ರೈಲು ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಿ, ಮಾರ್ಗವನ್ನು ಮರುಸ್ಥಾಪಿಸುವ ಕಾರ್ಯಗಳನ್ನು ಪ್ರಾರಂಭಿಸಲಾಗಿದೆ.

ರೈಲುಗಳ ಮಾರ್ಗ ಬದಲಾವಣೆ

ಭೂಕುಸಿತದ ಹಿನ್ನೆಲೆಯಲ್ಲಿ, ಶನಿವಾರದಂದು ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 07378) ತನ್ನ ಪ್ರಯಾಣವನ್ನು ತೋಕೂರು, ಕಾರವಾರ, ಮಡಗಾಂವ್, ಲೋಂಡಾ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ಮೂಲಕ ಬದಲಾಯಿಸಿಕೊಂಡು ಸಂಚರಿಸಿತು. ಅದೇ ರೀತಿ, ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ (16586), ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16512) ಮತ್ತು ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (16596) ಕೂಡ ತಮ್ಮ ಮಾರ್ಗವನ್ನು ಬದಲಿಸಿಕೊಂಡು ಕಾಸರಗೋಡು, ಶೊರ್ನೂರ್, ಪಾಲಕ್ಕಾಡ್, ಸೇಲಂ ಮತ್ತು ಜೋಲಾರ್ಪೇಟೆ ಮೂಲಕ ಸಂಚರಿಸಿದವು ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.

ರೈಲ್ವೆ ಇಲಾಖೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್, ಹೆಚ್ಚುವರಿ ವ್ಯವಸ್ಥಾಪಕ ಕೆ.ಎಸ್. ಜೈನ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡವು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಹಳಿಗಳ ಮರುಸ್ಥಾಪನೆ ಕಾರ್ಯಗಳ ಮೇಲ್ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read More
Next Story