
ಭೂ ವಿವಾದ | ರೋಹಿಣಿ ಸಿಂಧೂರಿ ವರ್ಸಸ್ ಗಾಯಕ ಲಕ್ಕಿ ಅಲಿ: ಎಫ್ಐಆರ್ಗೆ ಹೈಕೋರ್ಟ್ ತಡೆ
ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಗಾಯಕ ಮತ್ತು ನಟ ಲಕ್ಕಿ ಅಲಿ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕುಟುಂಬ ದಾಖಲಿಸಿದ್ದ ಎಫ್ಐಆರ್ಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರು ಹೊರ ವಲಯದ ಕೆಂಚೇನಹಳ್ಳಿಯ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಕಾಂಪೌಂಡ್ ಒಡೆದುಹಾಕಿ, ಗಿಡಗಳನ್ನು ನಾಶಮಾಡಿ ತಮಗೆ ಸುಮಾರು 75 ಲಕ್ಷ ರೂ. ನಷ್ಟವನ್ನುಂಟುಮಾಡಿದ್ದಾರೆ ಎಂದು ಆರೋಪಿಸಿ ಲಕ್ಕಿ ಅಲಿ ಅಲಿಯಾಸ್ ಮಕ್ಸೂದ್ ಅಲಿ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆ ಬುಜ್ಜಮ್ಮ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಸಂಬಂಧ ಪೊಲೀಸರು ದಾಖಲಿಸಿಕೊಂಡಿದ್ದ ಎಫ್ಐಆರ್ ರದ್ದು ಕೋರಿ ಗಾಯಕ ಲಕ್ಕಿ ಅಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಗಾಯಕ ಲಕ್ಕಿ ಅಲಿ ಮತ್ತು ಮೈಲಪ್ಪನಹಳ್ಳಿ ಶ್ರೀನಿವಾಸ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಎಫ್ ಐಆರ್ಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಅರ್ಜಿದಾರರ ಪರ ವಕೀಲ ಶ್ರೀರಾಮ್ ತಿಮ್ಮಪ್ಪ ನಾಯಕ್, ‘‘ಪ್ರಕರಣ ಸಂಬಂಧ ದೂರು ನೀಡಿರುವ ಬುಜ್ಜಮ್ಮ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆಯಾಗಿದ್ದಾರೆ. ಹಾಗಾಗಿ, ರೋಹಿಣಿ ಅವರ ಪ್ರಭಾವ ಬಳಸಿ ಪೊಲೀಸರು ಅರ್ಜಿದಾರರಿಗೆ ಕಿರುಕುಳ ನೀಡುತ್ತಿದ್ದಾರೆ’’ ಎಂದು ನ್ಯಾಯಾಲಯದ ಗಮನ ಸೆಳೆದರು.
‘‘ಕೆಂಚೇನಹಳ್ಳಿಯಲ್ಲಿ ನಟ ಲಕ್ಕಿ ಅಲಿ ಅವರಿಗೆ ಸೇರಿದ ಟ್ರಸ್ಟ್ ಹೆಸರಿನಲ್ಲಿ 87 ಎಕರೆ ಜಮೀನು ಇದೆ. ಆ ಜಮೀನಿನ ಪಕ್ಕದಲ್ಲೇ ಐಎಎಸ್ ಅಧಿಕಾರಿ ರೋಹಿಣಿ ಅವರ ಪತಿ ಜಿ.ಸುಧೀರ್ ರೆಡ್ಡಿ ಅವರು ನಟ ಲಕ್ಕಿ ಅಲಿ ಸಹೋದರನಿಂದ ಖರೀದಿಸಿದ್ದೇವೆ ಎನ್ನುತ್ತಿರುವ ಆಸ್ತಿ ಇದೆ ಎಂದು ಹೇಳುತ್ತಿದ್ದಾರೆ. ಈ ವಿಚಾರವಾಗಿ 2016ರಿಂದಲೂ ಸುಧೀರ್ ರೆಡ್ಡಿ ಮತ್ತು ಲಕ್ಕಿ ಅಲಿ ಅವರ ನಡುವೆ ಸಿವಿಲ್ ದಾವೆ ನಡೆಯುತ್ತಿದೆ. ಆ ಜಮೀನಿನ ವಿಷಯದಲ್ಲಿ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಅಧಿಕಾರ ಬಳಸಿ ನನ್ನ ಕಕ್ಷಿದಾರ ಲಕ್ಕಿ ಅಲಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ'' ಎಂದು ವಕೀಲ ಶ್ರೀರಾಮ್ ತಿಮ್ಮಪ್ಪ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
“ಜಮೀನಿನಲ್ಲಿ ಇರುವ ಖಾಸಗಿ ದಾರಿಯನ್ನು ಸಾರ್ವಜನಿಕ ಹಾದಿ ಎಂದು ಪೊಲೀಸರ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಪೊಲೀಸರು ಖಾಸಗಿ ವಾಹನದಲ್ಲಿ ಬಂದು ನನ್ನ ಕಕ್ಷಿದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬಂಧ ಸಿಸಿಟಿವಿ ವಿಡಿಯೋ ದೃಶ್ಯಾವಳಿಯೂ ನಮ್ಮ ಬಳಿ ಇದೆ ’ ಎಂದು ಶ್ರೀರಾಮ್ ತಿಮ್ಮಪ್ಪ ಹೇಳಿದರು.
ವಕೀಲರ ವಾದ ಆಲಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರಿಗೆ ಸೂಚಿಸಿತು. ಅಲ್ಲದೆ, ಲಕ್ಕಿ ಅಲಿ ಮತ್ತು ಇತರರ ವಿರುದ್ಧದ ಎಫ್ಐಆರ್ಗೆ ತಡೆ ನೀಡಿ, ಪ್ರಕರಣದ ವಿಚಾರಣೆ ಮುಂದೂಡಿತು.
ಲಕ್ಕಿ ಅಲಿ ವರ್ಸಸ್ ರೋಹಿಣಿ ಸಿಂಧೂರಿ ವಿವಾದವೇನು?
‘‘ಲಕ್ಕಿ ಅಲಿ ಮತ್ತು ಅವರ ಕಡೆಯವರು ನಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಕಾಂಪೌಂಡ್ ಒಡೆದು ಹಾಕಿ, ಬೆಳೆಸಿದ್ದ ಗಿಡಗಳನ್ನು ನಾಶಮಾಡಿ ತಮಗೆ ಸುಮಾರು 75 ಲಕ್ಷ ರೂ. ನಷ್ಟ ಉಂಟು ಮಾಡಿದ್ದಾರೆ. ನಮ್ಮ ಜಮೀನಿಗೆ ಹೋಗಲು ಇರುವ ಸಾರ್ವಜನಿಕ ರಸ್ತೆಗೆ ತಡೆ ಹಾಕಿ ನಮ್ಮ ಓಡಾಟ ನಿರ್ಬಂಧಿಸಿದ್ದಾರೆ’ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಅವರ ಅತ್ತೆ (ಪತಿ ಸುಧೀರ್ ರೆಡ್ಡಿಯ ತಾಯಿ) ಬುಜ್ಜಮ್ಮ ಯಲಹಂಕ ನ್ಯೂಟೌನ್ ಪೊಲೀಸರಿಗೆ 2024ರ ನ.19ರಂದು ದೂರು ನೀಡಿದ್ದರು.
ಆ ದೂರು ಆಧರಿಸಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 126(2) (ಅಕ್ರಮ ನಿರ್ಬಂಧ ವಿಧಿಸುವುದು), 3(5) (ಹಲವು ಮಂದಿಯಿಂದ ದಬ್ಬಾಳಿಕೆ ಪ್ರಯತ್ನ), 324(3) (ಸಾರ್ವಜನಿಕ ಆಸ್ತಿಗೆ ಹಾನಿ), 329(3) (ಅತಿಕ್ರಮ ಪ್ರವೇಶ) ಅಡಿ ಎಫ್ಐಆರ್ ದಾಖಲಿಸಿದ್ದರು.
ಈ ಎಫ್ಐಆರ್ ರದ್ದು ಕೋರಿ ಲಕ್ಕಿ ಅಲಿ ಮತ್ತು ಇತರರು ನ್ಯಾಯಾಲಯದ ಮೊರೆ ಹೋಗಿದ್ದರು. ಕೆಂಚೇನಹಳ್ಳಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಟ ಮತ್ತು ಗಾಯಕ ಲಕ್ಕಿ ಅಲಿ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕುಟುಂಬದ ನಡುವೆ ಕಳೆದ ಎಂಟು ವರ್ಷಗಳಿಂದಲೂ ವಿವಾದ ಇದೆ.