ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರಲ್ಲಿ ವಿದ್ಯಾರ್ಥಿ ಅಪಹರಣ, ಕಿರುಕುಳ
x

ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರಲ್ಲಿ ವಿದ್ಯಾರ್ಥಿ ಅಪಹರಣ, ಕಿರುಕುಳ


ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರು ಹೇಳಿಕೊಂಡು ವಿದ್ಯಾರ್ಥಿಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಕೆಲ ಕಿಡಿಗೇಡಿಗಳು ʼನಾವು ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಕಡೆಯ ಹುಡುಗರುʼ ಎಂದು ಹೇಳಿಕೊಂಡು ವಿದ್ಯಾರ್ಥಿಯೊಬ್ಬನನ್ನು ಕಿಡ್ನಾಪ್ ಮಾಡಿ ಆತನ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ. ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಯುತ್ತಿದೆ.

ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿರುವ ಜೀವನ್‌ ಜೈನ್‌ ಎಂಬ ವಿದ್ಯಾರ್ಥಿ ಕಳೆದ ವರ್ಷ ಆಯುಷ್ ಶ್ರೀನಿವಾಸ್ ಎಂಬಾತನಿಂದ ಮೂರು ಲಕ್ಷ ಸಾಲ ಪಡೆದಿದ್ದನು. ಇವೆಂಟ್ ಒಂದರ ವಿಚಾರವಾಗಿ ಹಣ ಪಡೆದಿದ್ದನು ಎಂದು ಹೇಳಲಾಗುತ್ತಿದೆ. ಆದರೆ ಕಾರಣಾಂತರಗಳಿಂದಾಗಿ ಹೇಳಿದ ಸಮಯಕ್ಕೆ ಹಣ ನೀಡಲು ಜೀವನ್‌ಗೆ ಸಾಧ್ಯವಾಗಿರಲಿಲ್ಲ, ಆದರೆ ತಡವಾಗಿ ಸಾಲ ತೀರಿಸಿದ್ದ. ಸಾಲ ತೀರಿಸಿದ್ದರೂ ಕಿಡಿಗೇಡಿಗಳು ಆತನನ್ನು ಬಿಡದೆ ಮತ್ತಷ್ಟು ಹಣಕ್ಕಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಲವಂತದಿಂದ ಜೀವನ್‌ನನ್ನು ಬೆಟ್ಟಿಂಗ್ ಬಲೆಗೆ ಬೀಳಿಸಿದ್ದಾರೆ ಎಂಬ ಆರೋಪ‌ ಕೇಳಿ ಬಂದಿದೆ. ಜೊತೆಗೆ ಕಿಡ್ನ್ಯಾಪ್​ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಬೆತ್ತಲೆಗೊಳಿಸಿ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೆ ಬೆತ್ತಲೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆ ಬಳಿಕ 6 ಲಕ್ಷಕ್ಕೆ ಡಿಮ್ಯಾಂಡ್ ಮಾಡಿ ಹಣ ಪಡೆದಿದ್ದಾರೆ. ಅದಾದ ಬಳಿಕವೂ ಮನೆಗೆ ಬಂದು ಸಾಲ ಪಡೆಯುವಂತೆ ಬೆದರಿಕೆ ಹಾಕಿದ್ದಾರೆ. ಸಾಲ ಕೊಟ್ಟು ಹೆಚ್ಚು ಬಡ್ಡಿ ಹಾಕಿ ಕಿರುಕುಳ ನೀಡಿದ್ದಾರೆ ಎಂದು ಯುವಕ ಜೀವನ್ ಆರೋಪಿಸಿದ್ದಾರೆ.

ಜೀವನ್‌ನ್ನು ಪದೆ ಪದೇ ಹೋಟೆಲ್‌ಗೆ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ. ಆರು ಲಕ್ಷ ಕೊಟ್ಟರೂ, ಮತ್ತೆ ಹತ್ತು ಲಕ್ಷದವರೆಗೆ ಕೊಡಬೇಕು ಎಂದು ಕಿರುಕುಳ ನೀಡಿದ್ದಾರೆ. ಈ ಸಂಬಂಧ ಒಂಬತ್ತು ಜನರ ವಿರುದ್ಧ ಕಿಡ್ನಾಪ್ ಹಾಗೂ ಸುಲಿಗೆ ಆರೋಪ ಮಾಡಿ ಜೀವನ್ ದೂರು ನೀಡಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

Read More
Next Story