LIVE Assembly Session | ತೆರಿಗೆ ಪಾಲು ಹಂಚಿಕೆ ವಿಚಾರ ; ಆಡಳಿತ-ವಿಪಕ್ಷಗಳ ವಾಕ್ಸಮರ
x

ವಿಧಾನ ಸಭೆ ಅಧಿವೇಶನ 

Assembly Session | ತೆರಿಗೆ ಪಾಲು ಹಂಚಿಕೆ ವಿಚಾರ ; ಆಡಳಿತ-ವಿಪಕ್ಷಗಳ ವಾಕ್ಸಮರ

ದೇಶದಲ್ಲಿ ಅನೇಕ ಕಾಲ್ತುಳಿತ ಪ್ರಕರಣಗಳು ನಡೆದು ಸಾವು-ನೋವು ಹಾಗೂ ಆಸ್ತಿ ಹಾನಿ ಉಂಟಾಗಿರುವುದನ್ನು ತಡೆಗಟ್ಟಲು ಈ ವಿಧೇಯಕ ಅಗತ್ಯವಾಗಿದೆ ಎಂದು ಅವರು ಪರಮೇಶ್ವರ್‌ ತಿಳಿಸಿದ್ದಾರೆ.


ಆರ್‌ಸಿಬಿ ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿರ್ವಹಿಸಲು '2025ನೇ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿರ್ವಹಣೆ) ವಿಧೇಯಕ'ವನ್ನು ವಿಧಾನಸಭೆಯಲ್ಲಿ ಮಂಡಿಸಿದೆ.

ಗೃಹ ಸಚಿವ ಪರಮೇಶ್ವರ್ ಅವರು ಗುರುವಾರ ವಿಧೇಯಕ ಮಂಡಿಸಿ, ಅದರ ಕುರಿತು ಸಮಗ್ರ ವಿವರಣೆ ನೀಡಿದರು.

ಬೆಳಗಾವಿ ಅಧಿವೇಶನದ ಸಮಯದಲ್ಲಿ ನಡೆದ ಪ್ರತಿಭಟನೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರಿಂದ ಲಾಠಿ ಚಾರ್ಜ್ ಆಗಿದ್ದನ್ನು ಉಲ್ಲೇಖಿಸಿದ ಪರಮೇಶ್ವರ್, ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಘಟನೆ ರಾಜ್ಯವನ್ನು ಬೆಚ್ಚಿ ಬೀಳಿಸಿ ಎಚ್ಚರಿಕೆಯ ಗಂಟೆಯಾಗಿತ್ತು ಎಂದ ಅವರು, ದೇಶದಲ್ಲಿ ಅನೇಕ ಕಾಲ್ತುಳಿತ ಪ್ರಕರಣಗಳು ನಡೆದು ಸಾವು-ನೋವು ಹಾಗೂ ಆಸ್ತಿ ಹಾನಿ ಉಂಟಾಗಿವೆ. ರಾಜ್ಯದಲ್ಲಿ ಇದನ್ನು ತಪ್ಪಿಸಲು ವಿಧೇಯಕ ಜಾರಿ ಅಗತ್ಯವಾಗಿತ್ತು ಎಂದು ಪ್ರತಿಪಾದಿಸಿದರು.

ವಿಧೇಯಕದ ಅನ್ವಯ, ಕಾರ್ಯಕ್ರಮದ ಅನುಸಾರ ಸೇರುವ ಜನರ ಸಂಖ್ಯೆ ಆಧರಿಸಿ ಅನುಮತಿ ನೀಡಲಾಗುತ್ತದೆ.

ವಿಧೇಯಕದ ಪ್ರಮುಖ ಅಂಶಗಳು

  • 17,000ಕ್ಕಿಂತ ಕಡಿಮೆ ಜನ ಸೇರುವ ಕಾರ್ಯಕ್ರಮಕ್ಕೆ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು.
  • 7,000ದಿಂದ 50,000 ಜನರವರೆಗೆ ಸೇರುವ ಕಾರ್ಯಕ್ರಮಕ್ಕೆ ಡಿವೈಎಸ್ಪಿ ಅನುಮತಿ ಪಡೆಯಬೇಕು.
  • 50,000ಕ್ಕಿಂತ ಹೆಚ್ಚು ಜನ ಸೇರುವ ಕಾರ್ಯಕ್ರಮಕ್ಕೆ ಎಸ್ಪಿ ಅವರಿಂದ ಅನುಮತಿ ಕಡ್ಡಾಯ.
  • ಇದೇ ರೀತಿಯ ಕಾರ್ಯಕ್ರಮಗಳ ಆಯೋಜಕರೇ ಘಟನೆಯ ಜವಾಬ್ದಾರಿಯನ್ನು ಹೊರಬೇಕು.
  • 50,000ಕ್ಕಿಂತ ಹೆಚ್ಚು ಜನ ಸೇರುವ ಕಾರ್ಯಕ್ರಮಕ್ಕೆ ಆಯೋಜಕರು 1 ಕೋಟಿ ರೂ. ಬಾಂಡ್ ಕೊಡಬೇಕು.
  • ಒಂದು ವೇಳೆ ನಿಯಮಗಳನ್ನು ಪಾಲಿಸದಿದ್ದರೆ ಶಿಕ್ಷೆ ವಿಧಿಸಲು ಅವಕಾಶವಿದೆ.
  • ವದಂತಿ ಹರಡುವವರಿಗೂ ಶಿಕ್ಷೆ ಜಾರಿಯಾಗಲಿದೆ. ವದಂತಿ ಹರಡಿದರೆ ಮೂರು ವರ್ಷಗಳವರೆಗೆ ಶಿಕ್ಷೆ ಮತ್ತು 50,000 ದಂಡ ವಿಧಿಸಬಹುದು.
  • ಪೊಲೀಸರು ಕೂಡ ನಿಯಮಗಳನ್ನು ಪಾಲಿಸದಿದ್ದರೆ ಅವರಿಗೂ ಶಿಕ್ಷೆ ವಿಧಿಸಲಾಗುವುದು.
  • ಯಾವುದೇ ಘಟನೆಯಿಂದ ಪ್ರಾಣಹಾನಿಯಾದರೆ ಕನಿಷ್ಠ 10 ವರ್ಷಗಳ ಶಿಕ್ಷೆಗೆ ಅವಕಾಶವಿದೆ.
  • ಕುಟುಂಬದ ಕಾರ್ಯಕ್ರಮಗಳು ಮದುವೆ, ಖಾಸಗಿ ಸಮಾರಂಭಗಳು ಮತ್ತು ಖಾಸಗಿ ಆವರಣಗಳಲ್ಲಿ ನಡೆಯುವ ಬಾಡಿಗೆ, ಭೋಗ್ಯ, ಗುತ್ತಿಗೆಗೆ ಪಡೆದ ಸ್ಥಳಗಳಲ್ಲಿನ ಕಾರ್ಯಕ್ರಮಗಳಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ.

Live Updates

  • 21 Aug 2025 1:38 PM IST

    ದೂರದೃಷ್ಟಿ ಯೋಜನೆಗಳಿಗೆ ಅನುದಾನ ನೀಡುವಲ್ಲಿ ಸರ್ಕಾರ ವಿಫಲ

    ಯಾವುದಕ್ಕೆ ಆದ್ಯತೆ ಕೊಡಬೇಕು ಎಂದು ಸರ್ಕಾರ ಅರ್ಥ ಮಾಡಿಕೊಂಡಿಲ್ಲ, ದೂರದೃಷ್ಟಿ ಯೋಜನೆಗಳಿಗೆ ಅನುದಾನ ಕೊಡದಿರುವ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಶಾಸಕ ಸುನೀಲ್‌ ಕುಮಾರ್‌ ತಿಳಿಸಿದರು.

    ವಿಧಾನಸಭೆಯ ನಿಯಮ 69ರಡಿಯಲ್ಲಿ ಅನುದಾನದ ಬಗ್ಗೆ ಚರ್ಚೆ ಮಾಡುತ್ತಾ, ಈ ಸರ್ಕಾರವನ್ನು ಇಲ್ಲಗಳ ಸರ್ಕಾರ ಎಂದು ನಾನು ಕರೆಯುತ್ತೇನೆ. ಇತ್ತೀಚೆಗೆ ಸು ಫ್ರಮ್ ಸೋ ಸಿನಿಮಾ ಪ್ರಸಿದ್ದಿಯಾಗಿದೆ. ಈ ಸರ್ಕಾರ ಬಿ ಫ್ರಮ್ ಸಿ ಯಾಗಿದೆ (ಬೋಗಸ್‌ ಕಾಂಗ್ರೆಸ್) ಎಂದರು.

    ಇದಕ್ಕೆ ಆಡಳಿತ ಪಕ್ಷದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಕೆಲಕಾಲ ಸದನದಲ್ಲಿ ಗದ್ದಲ ಉಂಟಾಯಿತು.

     

  • 21 Aug 2025 1:11 PM IST

    ವಿಧಾನಸಭೆಯಲ್ಲಿ ಕರ್ನಾಟಕ ಸೌಹಾರ್ದ ಸಹಕಾರ ತಿದ್ದುಪಡಿ ವಿಧೇಯಕ ಅಂಗೀಕಾರ

    ಬುಧವಾರ (ಆ.20) ವಿಧಾನಪರಿಷತ್‌ನಲ್ಲಿ ತಿರಸ್ಕೃತಗೊಂಡಿದ್ದ ಕರ್ನಾಟಕ ಸೌಹಾರ್ದ ಸಹಕಾರ ತಿದ್ದುಪಡಿ ವಿಧೇಯಕವನ್ನು ಗುರುವಾರ ಮತ್ತೊಮ್ಮೆ ಕಾನೂನು ಸಚಿವ ಹೆಚ್‌.ಕೆ. ಪಾಟೀಲ್‌ ವಿಧಾನಸಭೆಯಲ್ಲಿ ಮಂಡನೆ ಮಾಡಿ ಅಂಗೀಕಾರ ಪಡೆದುಕೊಂಡರು.

    ವಿಧಾನಪರಿಷತ್‌ನಲ್ಲಿ ವಿಧೇಯಕವನ್ನು ಮತಕ್ಕೆ ಹಾಕಿದಾಗ ಸಂಖ್ಯಾಬಲದ ಕಾರಣದಿಂದಾಗಿ ವಿಧೇಯಕ ತಿರಸ್ಕೃತಗೊಂಡಿತ್ತು. 

     

  • 21 Aug 2025 1:01 PM IST

    ಗಣಿ ನಷ್ಟ ವಸೂಲಾತಿಗೆ ಆಯುಕ್ತರ ನೇಮಕಕ್ಕೆ ನಿರ್ಧಾರ

    ವಿಧಾನಸಭೆಯಲ್ಲಿ ಗುರುವಾರ 'ಅಕ್ರಮ ಗಣಿಗಾರಿಕೆ ಮತ್ತು ಅಪರಾಧ ಉತ್ಪತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ವಿಧೇಯಕ -2025' ಕ್ಕೆ ಅಂಗೀಕಾರ ದೊರೆತಿದೆ.

    ಅಕ್ರಮ ಗಣಿಗಾರಿಕೆಗಳಿಂದಾದ ನಷ್ಟ ವಸೂಲಾತಿ ಮತ್ತು ಆಸ್ತಿಗಳ ಜಪ್ತಿಗಾಗಿ ಹೊಸ ಕಾಯ್ದೆ ತರುತ್ತಿರುವ ಸರ್ಕಾರ, ಗಣಿ ನಷ್ಟ ವಸೂಲಾತಿಗೆ ವಸೂಲಾತಿ ಆಯುಕ್ತರ ನೇಮಕಕ್ಕೆ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.

    ಎಸಿಎಸ್ ದರ್ಜೆಯ ಸೇವೆಯಲ್ಲಿ ಇರುವ ಅಥವಾ ನಿವೃತ್ತ ಅಧಿಕಾರಿಯನ್ನು ವಸೂಲಾತಿ ಆಯುಕ್ತರಾಗಿ ನೇಮಿಸಲು ಅವಕಾಶ ನೀಡಲಾಗಿದ್ದು, ಆಯುಕ್ತರಿಗೆ ಸಿವಿಲ್ ನ್ಯಾಯಾಲಯದ ಅಧಿಕಾರ ನೀಡಿ, ವಸೂಲಾತಿ ಆಯುಕ್ತರಿಗೆ ಪರಿಶೀಲನೆ, ಶೋಧನೆ ಮಾಡುವ ಹಾಗೂ ಆಸ್ತಿಗಳ ತಾತ್ಕಾಲಿಕ ಜಪ್ತಿ ಮಾಡಲು ಅಧಿಕಾರ ನೀಡಲಾಗಿದೆ.

     

  • 21 Aug 2025 12:14 PM IST

    ಜನಸಂದಣಿ ನಿಯಂತ್ರಣ ವಿಧೇಯಕ ಪರಿಶೀಲನೆಗೆ ಸದನ ಸಮಿತಿ ರಚನೆ: ಸ್ಪೀಕರ್‌

    ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ಜನಸಂದಣಿ ನಿಯಂತ್ರಣ ವಿಧೇಯಕಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ವಿಧೇಯಕದ ಪರಿಶೀಲನೆ ಹಾಗೂ ಕರ್ನಾಟಕ ಭೂಕಂದಾಯ ಎರಡನೇ ತಿದ್ದುಪಡಿ ವಿಧೇಯಕದಡಿಯಲ್ಲಿ ಕೊಡಗಿನಲ್ಲಿ ಜಾರಿಯಲ್ಲಿರುವ 'ಜಮ್ಮಾ ಬಾಣೆ' ಭೂ ಹಿಡುವಳಿಯಡಿ ಭೂಹಕ್ಕು ಬದಲಾವಣೆ, ನೋಂದಣಿ, ವಾರಸು, ಉತ್ತರಾಧಿಕಾರ, ಪರಭಾರೆಗಳನ್ನು ಸರಳೀಕರಣ ಮಾಡಲು ತಂದಿರುವ ವಿಧೇಯಕದಲ್ಲಿ ಸಾಕಷ್ಟು ಜಟಿಲತೆ ಇರುವ ಕಾರಣ  ಸದನ ಸಮಿತಿ ರಚಿಸುವುದಾಗಿ ಸ್ಪೀಕರ್ ಯು.ಟಿ. ಖಾದರ್‌ ತಿಳಿಸಿದರು. 

    ವಿಧೇಯಕ ವಿರೋಧಿಸಿ ಸದನ ಸಮಿತಿ ರಚಿಸುವಂತೆ ಬಿಜೆಪಿ-ಜೆಡಿಎಸ್ ಒಗ್ಗೂಡಿ ಒತ್ತಾಯಿಸಿದ್ದವು.

     

  • 21 Aug 2025 12:07 PM IST

    ಸರ್ಕಾರ ನಡೆಸುವ ಸಮಾವೇಶಗಳಲ್ಲಿ ಅವಘಡವಾದರೆ ಹೊಣೆ ಯಾರು?

    ರಾಜ್ಯದಲ್ಲಿ ದೊಡ್ಡ ಜಾತ್ರೆಗಳು, ಹಬ್ಬಗಳು ನಡೆಯುತ್ತವೆ. ಅವುಗಳಿಗೆ ವಿಧೇಯಕ ಅನ್ವಯವಾಗಲಿದೆಯೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಶಾಸಕ ಸುನೀಲ್‌ ಕುಮಾರ್‌ ಆಗ್ರಹಿಸಿದರು.

    ಒಂದು ಕೋಟಿ ರೂ. ಬಾಂಡ್ ಕೊಡಬೇಕು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ. ಒಂದು ಕೋಟಿ ರೂ. ಬಾಂಡ್ ಕೊಡಲು ದೇಗುಲಗಳಿಂದ ಸಾದ್ಯವೇ, ಇವುಗಳಿಗೆ ರಿಯಾಯಿತಿ ನೀಡಬೇಕು. ರಾಜಕಾರಣಿಗಳು ಹಾಗೂ ಸರ್ಕಾರ ಸಮಾವೇಶಗಳನ್ನು ಮಾಡುತ್ತಾರೆ. ಊಟ ಹಾಕುತ್ತಾರೆ. ಸರ್ಕಾರ ಸಾಧನಾ ಸಮಾವೇಶ ನಡೆಸುತ್ತದೆ. ಈ ಕಾರ್ಯಕ್ರಮಗಳಿಗೆ ಹೊಣೆ ಯಾರು? ಪೊಲೀಸ್‌ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಇದಕ್ಕೆಲ್ಲಾ ಸೂಕ್ತ ಉತ್ತರ ನೀಡಬೇಕು ಎಂದರು.

     

  • 21 Aug 2025 11:56 AM IST

    ಜನಸಂದಣಿ ವಿಧೇಯಕ ರಾಜಕೀಯ ಸಮಾವೇಶಗಳಿಗೂ ಅನ್ವಯವಾಗಲಿ: ಅಶೋಕ್‌ ಸಲಹೆ

    ರಾಜಕೀಯ ಸಮಾವೇಶಗಳಿಗೂ ಜನಸಂದಣಿ ನಿಯಂತ್ರಣ ವಿಧೇಯಕ ಅನ್ವಯವಾಗಬೇಕು ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ತಿಳಿಸಿದರು.

    ಚುನಾವಣೆ ವೇಳೆ ಕಾರ್ಯಕ್ರಮಗಳನ್ನು ಮಾಡುತ್ತೇವೆ, ಆಗ ಯಾರಿಗೋ ಏನೋ ಸಮಸ್ಯೆಯಾಗಿ ಮೃತಪಟ್ಟರೆ ಕಾರ್ಯಕ್ರಮ ಆಯೋಜಕರು ಕಾರಣರಾಗುತ್ತಾರೆ. ಸರ್ಕಾರ ಬಳ್ಳಾರಿಯಲ್ಲಿ ಸಾಧನಾ ಸಮಾವೇಶ ಮಾಡಿದ್ದರು. ಆಗ ಯಾರಿಗಾದರೂ ಸಮಸ್ಯೆಯಾಗಿದ್ದರೆ ಯಾರು ಹೊಣೆ ಹೊರಬೇಕಿತ್ತು? ಇದನ್ನೆಲ್ಲ ಗಮನದಲ್ಲಿರಿಸಿಕೊಂಡು ಕಾನೂನು ಮಾಡಬೇಕು ಎಂದು ಸರ್ಕಾರಕ್ಕೆ ಆರ್‌. ಅಶೋಕ್‌ ಸಲಹೆ ನೀಡಿದರು.

     

  • 21 Aug 2025 11:49 AM IST

    ಹೋರಾಟ ಹತ್ತಿಕ್ಕಲು ಜನಸಂದಣಿ ನಿಯಂತ್ರಣ ವಿಧೇಯಕ ಮಂಡನೆ: ಯತ್ನಾಳ್‌

    ಜನಸಂದಣಿ ನಿಯಂತ್ರಣ ವಿಧೇಯಕವು ಹೋರಾಟವನ್ನು ಹತ್ತಿಕ್ಕಲು ತರಲಾಗುತ್ತಿದ್ದು, ಬ್ರಿಟಿಷ್‌ ಕಾನೂನಿಗಿಂತ ಹೆಚ್ಚು ಕಠಿಣ ಕಾನೂನು ಇದಾಗಿದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ದ ಕಿಡಿಕಾರಿದರು. 

    ಸರ್ಕಾರದ ವಿರುದ್ಧ ಅನೇಕ ಹೋರಾಟಗಳು ಆಗುತ್ತವೆ. ಬೆಳಗಾವಿಯಲ್ಲಿ ಒಬ್ಬ ಅಧಿಕಾರಿ ಜಿಲ್ಲಾಧಿಕಾರಿ ಅನುಮತಿ ಪಡೆಯದೆ ಲಾಠಿ ಚಾರ್ಜ್ ಮಾಡಿಸಿದ್ದರು. ಬ್ರಿಟಿಷರು ಕೂಡ ಹೀಗೆ ಮಾಡುತ್ತಿದ್ದರು. ಈ ಕಾನೂನು ಬಂದರೆ ಹೋರಾಟ ಮಾಡಲು ಸಾಧ್ಯವಾಗುವುದಿಲ್ಲ. ಈ ಕಾನೂನಿನಲ್ಲಿ ಪೊಲೀಸ್‌ಗೂ ಶಿಕ್ಷೆ ಪ್ರಮಾಣ ಆಗಬೇಕು. ಲಾಠಿ ಚಾರ್ಜ್ ಮಾಡಿದ್ದು ಏಕೆ ಎಂದು ಪೊಲೀಸರು ಉತ್ತರ ನೀಡಬೇಕು ಎಂದು ಹೇಳಬೇಕು ಎಂದರು.

     

  • 21 Aug 2025 11:24 AM IST

    ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ದಿ ಬಂದಿದೆ: ಸುರೇಶ್‌ ಕುಮಾರ್‌

    ಗುರುವಾರ ವಿಧಾನಸಭೆಯಲ್ಲಿ ನಡೆದ ಜನಸಂದಣಿ ನಿಯಂತ್ರಣಕ್ಕೆ ವಿಧೇಯಕ ಮಂಡನೆ ಕುರಿತು ಪ್ರತಿಪಕ್ಷದ ಶಾಸಕ ಸುರೇಶ್‌ ಕುಮಾರ್‌ ತೀವ್ರ ಅಸಮಾಧನ ವ್ಯಕ್ತಪಡಿಸಿದರು.

    ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಅವಘಡ ನಡೆದ ನಂತರ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂದಿದೆ. ಇದು ಪೋಸ್ಟ್‌ಮಾರ್ಟಮ್ ವಿಧೇಯಕವಾಗಿದೆ ಎಂದು ಟೀಕಿಸಿದರು. 

    ಒಡಿಶಾದಲ್ಲಿ ನಡೆಯುವ ಪುರಿ ಜಗನ್ನಾಥನ ರಥಯಾತ್ರೆಗೆ ಲಕ್ಷಗಟ್ಟಲೆ ಜನ ಸೇರುತ್ತಾರೆ. ಅಲ್ಲೆಲ್ಲ ಹೇಗೆ ಜನಸಂದಣಿ ನಿಯಂತ್ರಿಸುತ್ತಾರೆ?  ನಮ್ಮ ರಾಜ್ಯದಲ್ಲೂ ಕರಗ ಸೇರಿ ಹಲವು ಧಾರ್ಮಿಕ‌ ಉತ್ಸವಗಳಲ್ಲಿ ಜನ ಸೇರುತ್ತಾರೆ. ಆದರೆ ಆರ್‌ಸಿಬಿ ಕಾಲ್ತುಳಿತ ಸರ್ಕಾರದ ಪ್ರಚಾರದ ಹಪಾಹಪಿಯಿಂದ ನಡೆದಿದೆ. ಜನಸಂದಣಿ ನಿಯಂತ್ರಣಕ್ಕೆ ಕಾಯ್ದೆ ತರದೆಯೂ ನಿಯಮ ಮಾಡಬಹುದಿತ್ತು ಎಂದು ತಿಳಿಸಿದರು.

     

     

Read More
Next Story