Student union elections again in the state? KPCC forms high-level committee!
x

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಮತ್ತೆ ವಿದ್ಯಾರ್ಥಿ ಸಂಘಗಳ ಚುನಾವಣೆ? ಕೆಪಿಸಿಸಿಯಿಂದ ಉನ್ನತ ಮಟ್ಟದ ಸಮಿತಿ ರಚನೆ!

ವಿದ್ಯಾರ್ಥಿ ಚುನಾವಣೆಯನ್ನು ಯಾವ ಹಂತದಲ್ಲಿ ನಡೆಸಬಹುದು, ಸಾಧಕ-ಬಾಧಕ, ಚುನಾವಣೆ ಪ್ರಕ್ರಿಯೆ, ವ್ಯವಸ್ಥೆ, ರಾಜಕೀಯೇತರ ರೀತಿಯಲ್ಲಿ ಚುನಾವಣೆ ನಡೆಸಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಸಲು ಸಮಿತಿಗೆ ಕೆಪಿಸಿಸಿ ಸೂಚಿಸಿದೆ.


Click the Play button to hear this message in audio format

ರಾಜ್ಯದಲ್ಲಿ ಮತ್ತೆ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು, ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣಗಳನ್ನು ಬೆಳೆಸುವ ದೃಷ್ಟಿಯಿಂದ ಚುನಾವಣೆ ಪ್ರಕ್ರಿಯೆ, ರೂಪು-ರೇಷೆ ಕುರಿತು ಅಧ್ಯಯನ ಮಾಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು (ಕೆಪಿಸಿಸಿ) ಉನ್ನತ ಮಟ್ಟದ ಸಮಿತಿ ರಚಿಸಿದೆ.

ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸಬೇಕು ಎಂಬ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಶನಿವಾರ(ಡಿ.26) ಸಮಿತಿಯ ಸಂಚಾಲಕರು ಮತ್ತು ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದ್ದು, ಸಮಿತಿಗೆ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಅವರನ್ನು ಸಂಚಾಲಕರನ್ನಾಗಿ ನೇಮಕಮಾಡಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಮುಖ್ಯ ಸಚೇತಕ ಸಲೀಂ ಅಹಮದ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ಬಿ. ಶಿವಣ್ಣ, ವಿಧಾನ ಪರಿಷತ್‌ ಸದಸ್ಯರಾದ ಪುಟ್ಟಣ್ಣ, ಬಸವನಗೌಡ ಬಾದರ್ಲಿ ಹಾಗೂ ಎಚ್‌.ಎಸ್. ಮಂಜುನಾಥ್‌, ಕೀರ್ತೀ ಗಣೇಶ್‌ ಈ ಸಮಿತಿಯಲ್ಲಿರುವ ಸದಸ್ಯರಾಗಿದ್ದಾರೆ.

ಯಾವೆಲ್ಲಾ ವಿಷಯಗಳ ಚರ್ಚೆ

ವಿದ್ಯಾರ್ಥಿ ಚುನಾವಣೆಯನ್ನು ಯಾವ ಹಂತದಲ್ಲಿ ನಡೆಸಬಹುದು, ಸಾಧಕ-ಬಾಧಕ, ಚುನಾವಣೆ ಪ್ರಕ್ರಿಯೆ, ವ್ಯವಸ್ಥೆ, ರಾಜಕೀಯೇತರ ರೀತಿಯಲ್ಲಿ ಚುನಾವಣೆ ನಡೆಸಬೇಕೇ, ಚುನಾವಣ ಹಾಗೂ ಉಮೇದುವಾರಿಕ ಅರ್ಹತೆಗಳು, ಚುನಾವಣೆ ನಡೆಸುವ ಪ್ರಕ್ರಿಯೆ ಹಾಗೂ ವ್ಯವಸ್ಥೆ ಹೇಗಿರಬೇಕೆಂಬ ಬಗ್ಗೆ ಮಾಹಿತಿ, ಚುನಾವಣೆಯ ವೆಚ್ಚ ಮತ್ತು ಪಾರದರ್ಶಕತೆ, ದೂರುಗಳ ಪರಿಹಾರ ಮತ್ತು ಭದ್ರತೆ ವ್ಯವಸ್ಥೆ ಬಗ್ಗೆ, ಪ್ರಾತಿನಿಧ್ಯ ಮತ್ತು ಅಂತರ್ಗತ ಶಿಕ್ಷಣ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸಮಿತಿಗೆ ಸೂಚಿಸಲಾಗಿದೆ.

ವಿಕಲಚೇತನರಿಗೂ ಅವಕಾಶ ?

ಮಹಿಳೆಯರು, ಕಡೆಗಣಿಸಲಾದ ಸಣ್ಣ ಸಮುದಾಯಗಳು ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಸೀಟುಗಳ ಮೀಸಲಾತಿ ಅಥವಾ ಕೋಟಾವನ್ನು ನಿಗದಿಪಡಿಸುವುದು. ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಶೈಕ್ಷಣಿಕ ವೇಳಾಪಟ್ಟಿಗೆ ತೊಂದರೆಯಾಗದಂತೆ ವಿದ್ಯಾರ್ಥಿ ಸಂಘದ ಅವಧಿಯನ್ನು ನಿರ್ಧರಿಸುವ ಬಗ್ಗೆ ಸಮಿತಿ ರಚನೆಯಾದ ಹದಿನೈದು ದಿನಗಳ ಒಳಗಾಗಿ ಸಮಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ಮತ್ತೆ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವ ಬಗ್ಗೆ ʼದ ಫೆಡರಲ್‌ ಕರ್ನಾಟಕʼ ಆಗಸ್ಟ್‌ 24ರಂದು ವಿಶೇಷ ಲೇಖನ ಪ್ರಕಟಿಸಿತ್ತು.

ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ಸದ್ದು: 3 ದಶಕಗಳ ನಿಷೇಧ ತೆರವಿಗೆ ಸರ್ಕಾರದ ಚಿಂತನೆ


Read More
Next Story