ಕಮಲ್‌ ಹಾಸನ್‌ ಭಾಷಾ ವಿವಾದ | ಕಲಾವಿದರ ಆಕ್ರೋಶ; ಕನ್ನಡ ಸಂಘಟನೆಗಳಿಂದ ಪ್ರತಿಭಟನೆ
x

ಹಾವೇರಿಯಲ್ಲಿ ಕನ್ನಡಪರ ಸಂಘಟನೆಗಳು ಕಮಲ್‌ ಹಾಸನ್‌ ವಿರುದ್ಧ ಪ್ರತಿಭಟನೆ ನಡೆಸಿದರು

ಕಮಲ್‌ ಹಾಸನ್‌ ಭಾಷಾ ವಿವಾದ | ಕಲಾವಿದರ ಆಕ್ರೋಶ; ಕನ್ನಡ ಸಂಘಟನೆಗಳಿಂದ ಪ್ರತಿಭಟನೆ

'ಥಗ್ ಲೈಫ್' ಚಿತ್ರಕ್ಕೆ ನಿರ್ಬಂಧ ಹೇರಿದ ಹೊರತಾಗಿಯೂ ಕ್ಷಮೆ ಕೇಳಲು ಕಮಲ್ ಹಾಸನ್ ನಿರಾಕರಿಸಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.


ʼತಮಿಳಿನಿಂದ ಕನ್ನಡ ಹುಟ್ಟಿತುʼ ಎಂಬ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. 'ಥಗ್ ಲೈಫ್' ಚಿತ್ರಕ್ಕೆ ನಿರ್ಬಂಧ ಹೇರಿದ ಹೊರತಾಗಿಯೂ ಕ್ಷಮೆ ಕೇಳಲು ಕಮಲ್ ಹಾಸನ್ ನಿರಾಕರಿಸಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡ ಸಂಘಟನೆಗಳ ಜೊತೆಗೆ ಕನ್ನಡ ಚಿತ್ರರಂಗದ ಕಲಾವಿದರು ಕೂಡ ಕಮಲ್ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು, ಕಮಲ್ ಹಾಸನ್ ಸಿನಿ ಪಯಣದ ಹಿನ್ನೆಲೆ ಕೆದಕಿದ್ದಾರೆ. ತಮಿಳುನಾಡಿನಲ್ಲಿ ತೀರಾ ಕಳಪೆ ಪ್ರದರ್ಶನ ಕಂಡಿದ್ದ ನಿಮ್ಮ ಚಿತ್ರವನ್ನು ಸೂಪರ್ ಹಿಟ್ ಮಾಡಿದ್ದು ಕರ್ನಾಟಕ ಎಂಬುದು ನೆನಪಿಲ್ಲವೇ ಎಂದು ತಿರುಗೇಟು ನೀಡಿದ್ದಾರೆ.

ಡಾ. ರಾಜ್‌ಕುಮಾರ್‌ ಅವರ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದು ಸರಿಯಷ್ಟೇ. ʼತಮಿಳುನಿಂದಲೇ ಕನ್ನಡ ಹುಟ್ಟಿತುʼ ಎಂಬ ವ್ಯರ್ಥ ಮಾತು ಬೇಕಾಗಿರಲಿಲ್ಲ. ನಿಮಗೆ ಕನ್ನಡ ಭಾಷೆಯ ಬಗ್ಗೆ ಗೊತ್ತಲ್ಲದ ಮೇಲೆ ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ.

ನಿಮ್ಮ ಅಜ್ಞಾನದ ಒಂದು ಮಾತಿನಿಂದ ನಿಮ್ಮ ಸಿನಿಮಾಗೆ ಕುತ್ತು ಬಂದಿದೆ. ಕನ್ನಡ ಭಾಷೆ, ಸಾಹಿತ್ಯ ಪುರಾತನ ಕಾಲದ್ದು. ಕನ್ನಡ ಲಿಪಿ ಬಂದ ಮೇಲೆ ಬೇರೆ ಭಾಷೆಗಳ ಲಿಪಿ ಬಂದಿದೆ ಎಂದು ಭಾಷಾ ವಿದ್ವಾಂಸರು ಹೇಳುತ್ತಾರೆ. ನೀವು ನಿಮ್ಮ ಸಿನಿಮಾ ಪ್ರಮೋಷನ್ ಮಾಡಿದ್ದರೆ ಸಾಕಿತ್ತು. ಅದನ್ನು ಬಿಟ್ಟು ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಗಂಭೀರ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಳ್ಳೇಗಾಲದಲ್ಲಿ ಕನ್ನಡ ಸಂಘಟನೆಗಳು ಕಮಲ್‌ ಪೋಸ್ಟ್‌ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದರು

ದೊಡ್ಡವರೆಲ್ಲಾ ಜಾಣರಲ್ಲ..

ನಟಿ ರಚಿತಾ ರಾಮ್ ಕೂಡ ಕಮಲ್ ಹಾಸನ್ ಹೇಳಿಕೆಗೆ ತಮ್ಮದೇ ದಾಟಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ. ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರೆಲ್ಲಾ ಕೋಣರಲ್ಲ ಎಂಬ ಗಾದೆ ಉಲ್ಲೇಖಿಸಿ ಹಿರಿಯ ನಟ ಕಮಲ್ ಹೇಳಿಕೆಯನ್ನು ಖಂಡಿಸಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರಚಿತಾ ರಾಮ್, ಕನ್ನಡ, ಕರ್ನಾಟಕದ ವಿಚಾರ ಪ್ರತಿಯೊಬ್ಬ ಕನ್ನಡಿಗನಿಗೂ ಭಾವನಾತ್ಮಕವಾಗಿದೆ. ಕನ್ನಡ ಭಾಷೆಯ ಬಗ್ಗೆ ಯಾರಾದರೂ ಟೀಕೆ ಮಾಡಿದರೆ ನೋಡಿಕೊಂಡು ಸುಮ್ಮನೆ ಕೂರಲು ಆಗುವುದಿಲ್ಲ. ನಾವು ಕನ್ನಡದವರು, ವಿಶಾಲ ಹೃದಯದವರು. ಎಲ್ಲ ಭಾಷೆಯ ಸಿನಿಮಾ ನೋಡುತ್ತೇವೆ. ಹಾಡುಗಳನ್ನು ಕೇಳುತ್ತೇವೆ. ಕಲಾವಿದರನ್ನು ಬೆಂಬಲಿಸುತ್ತೇವೆ. ಆದರೆ, ನಮ್ಮ ಭಾಷೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ನಾವ್ಯಾಕೆ ದನಿ ಎತ್ತಬಾರದು ಎಂದು ಪ್ರಶ್ನಿಸಿದ್ದಾರೆ.

ಕಮಲ್‌ ಮೊಂಡುತನ ಪ್ರದರ್ಶನ

ಕಮಲ್ ಹಾಸನ್ ಹೇಳಿಕೆಯನ್ನು ಚೇತನ್ ಅಹಿಂಸಾ ಟೀಕಿಸಿದ್ದಾರೆ. ಕಮಲ್‌ ಹಾಸನ್‌ ಅಪ್‌ಡೇಟ್‌ ಆಗಿಲ್ಲ, ಕ್ಷಮೆ ಕೇಳಲ್ಲ ಎಂಬ ಕಮಲ್ ಹೇಳಿಕೆ ಅವರ ಮೊಂಡುತನ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯ ಕುರಿತ ಕಮಲ್ ಹಾಸನ್ ಮಾತು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವುದಿಲ್ಲ. ತಮ್ಮ ಮಾತು ಸತ್ಯ ಅಲ್ಲವೆಂದು ಗೊತ್ತಾದ ಮೇಲೆ ಕ್ಷಮೆ ಕೇಳಬೇಕು. ಅದನ್ನು ಬಿಟ್ಟು ವಾದಕ್ಕಿಳಿಯಬಾರದು. ಪಂಚ ದ್ರಾವಿಡ ಭಾಷೆಗಳಲ್ಲಿ ಸೋದರ ಭಾಷೆಗಳಿವೆ. ಇದನ್ನು ಮೊದಲು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದು ತಮಿಳು-ಕನ್ನಡ ನಡುವಿನ ಘರ್ಷಣೆ ಅಲ್ಲ. ಸತ್ಯ ಹಾಗೂ ಸುಳ್ಳಿನ ನಡುವಿನ ಸಂಘರ್ಷ. ಡಾ.ರಾಜಕುಮಾರ್ ಅವರು ಕನ್ನಡ ಭಾಷೆಗಾಗಿ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ್ದರು. ಶಿವರಾಜಕುಮಾರ್ ಕೂಡ ಆ ಹೋರಾಟ ಮುಂದುವರಿಸಬೇಕಿತ್ತು. ಆದರೆ, ಸ್ನೇಹ, ಸಿನಿಮಾ ಅಂತ ಹೇಳಿ ಸುಮ್ಮನಿರುವುದು ಸರಿಯಲ್ಲ. ಕನ್ನಡ ಭಾಷೆ, ನೆಲಕ್ಕಿಂತ ಸಿನಿಮಾ ಕೆರಿಯರ್ ಮುಖ್ಯ ಎನ್ನುವಂತಾಗುತ್ತದೆ. ಹಾಗಾಗಿ ಶಿವರಾಜ್‌ಕುಮಾರ್‌ ಕೂಡ ಕಮಲ್ ಹಾಸನ್ ಹೇಳಿಕೆ ಖಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಳೆದ ಮೇಲೆ ತಗ್ಗಿಬಗ್ಗಿ ನಡೀಬೇಕು

ನಟ ವರಿಷ್ಠ ಸಿಂಹ ಮಾತನಾಡಿ, ಭಾಷಾ ವಿವಾದಗಳು ನಟರ ಮೇಲೆ ಭಾರೀ ಪರಿಣಾಮ ಬೀರುತ್ತವೆ. ನನ್ನ ಸಿನಿಮಾ ತಮಿಳುನಾಡಿನಲ್ಲಿ ಬಿಡುಗಡೆಯಾಗುವಾಗ ನನ್ನನ್ನೂ ಕೆಣಕಬಹುದು. ಆದರೆ, ಒಬ್ಬರ ವಿವೇಚನೆ ಇಲ್ಲದ ಮಾತು ಹಲವರ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಜಾಗರೂಕತೆಯಿಂದ ಮಾತಾಡಬೇಕು. ಬೆಳೆದ ಮೇಲೆ ಏನು ಮಾತನಾಡಿದರೂ ನಡೆಯುತ್ತದೆ ಎಂಬ ಅಹಂ ಸರಿಯಲ್ಲ. ತಗ್ಗಿಬಗ್ಗಿ ನಡೆಯುವುದನ್ನು ಕಲಿಯಬೇಕು ಎಂದು ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಕಮಲ್‌ ಹಾಸನ್‌ ವಿರುದ್ಧ ಪ್ರತಿಭಟನೆ ನಡೆಸಿದರು

ಕಮಲ್ ಚಿತ್ರ ಬಿಡುಗಡೆ ಮಾಡಿದರೆ ಥಿಯೇಟರ್‌ಗೆ ಬೆಂಕಿ ಹಚ್ತೀವಿ

ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮೆ ಕೇಳಲು ನಿರಾಕರಿಸಿರುವ ನಟ ಕಮಲ್ ಹಾಸನ್ ವಿರುದ್ಧ ಕನ್ನಡ ಸಂಘಟನೆಗಳು ಬೆಂಕಿ ಉಗುಳುತ್ತಿವೆ.

ಕಮಲ್ ನಟನೆಯ ಥಗ್ ಲೈಫ್ ಚಿತ್ರ ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಎಚ್ಚರಿಕೆ ನೀಡಿದ್ದಾರೆ.

ಹೊರಗಿನ ವ್ಯಕ್ತಿಗಳು ಕನ್ನಡದ ಬಗ್ಗೆ ಆಗಿಂದಾಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಜಾಸ್ತಿಯಾಗಿದೆ. ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು-ಕರ್ನಾಟಕ ಮಧ್ಯೆ ಸಂಘರ್ಷ ನಡೆಯುತ್ತಿದೆ. ಈಗ ಭಾಷಾ ಸಂಘರ್ಷಕ್ಕೆ ತಮಿಳು ನಟರು ಮುಂದಾಗಿರುವುದನ್ನು ಸರಿಯಲ್ಲ ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಬಗ್ಗೆ ಅಭಿಮಾನ ಇತ್ತು. ಆದರೆ, ಮೊನ್ನೆ ಆಡಿದ ಮಾತು ಕನ್ನಡಿಗರನ್ನು ಕೆರಳಿಸುವ, ಒಗ್ಗೂಡಿಸುವ, ಪ್ರತಿಭಟಿಸುವ ಸಂದರ್ಭಕ್ಕೆ ಅವಕಾಶ ಮಾಡಿಕೊಟ್ಟಿದೆ. ಕಮಲ್ ಹಾಸನ್ ಯಾವ ಆಧಾರದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಆದರೆ, ತಮಿಳರನ್ನು ಓಲೈಸುವ ನಿಟ್ಟಿನಲ್ಲಿ ದುರಾಭಿಮಾನದ ಹೇಳಿಕೆ ನೀಡಿರುವುದನ್ನು ಕನ್ನಡಿಗರು ಒಪ್ಪುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ತಮಿಳಿನ ಬಗ್ಗೆ ಅವರು ಏನು ಬೇಕಾದರೂ ಹೇಳಲಿ. ಇನ್ನೊಂದು ಭಾಷೆ ಬಗ್ಗೆ ಮಾತನಾಡುವಾಗ ಕನಿಷ್ಠ ಅರಿವು ಇರಬೇಕಿತ್ತು. ವಿಪರ್ಯಾಸವೆಂದರೆ ಕನ್ನಡಿಗರನ್ನು ಒಗ್ಗೂಡಿಸಿದ ಗೋಕಾಕ್ ಚಳವಳಿ ನೇತೃತ್ವ ವಹಿಸಿದ್ದ ಡಾ.ರಾಜಕುಮಾರ್ ಅವರ ಸುಪುತ್ರ ಶಿವರಾಜ್ ಕುಮಾರ್ ಎದುರಲ್ಲೇ ಇಂತಹ ಹೇಳಿಕೆ ನೀಡಿದರೂ ಖಂಡಿಸದಿರುವುದು ದುರಂತ. ಕನ್ನಡಕ್ಕೆ ತನ್ನದೇ ಸ್ವಂತಿಕೆ ಇದೆ, ವಿಶ್ವದ ಲಿಪಿ ರಾಣಿ ಎಂಬ ಖ್ಯಾತಿ ಇದೆ ಎಂದು ಹೇಳಬಹುದಿತ್ತು. ಆದರೆ ವಿವಾದದ ನಂತರವೂ ಶಿವರಾಜ್ ಕುಮಾರ್ ಅವರು ಕಮಲ್ ಹಾಸನ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದನ್ನು ಸಹಿಕೊಳ್ಳೋಕೆ ಆಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಂಘಟನೆಗಳ ಪ್ರತಿಭಟನೆ

ಕಮಲ್ ಹಾಸನ್ ಹೇಳಿಕೆ ಖಂಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನ್ನಡ ಪರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಪ್ರತಿಭಟನೆಗೆ ಇಳಿದಿವೆ. ಮಂಡ್ಯದಲ್ಲಿ ಕದಂಬ ಸೈನ್ಯ ಸಂಘಟನೆ ವತಿಯಿಂದ ಕಮಲ್ ಪ್ರತಿಕೃತಿ ದಹಿಸಿ ಆಕ್ರೋಶ ಪಡಿಸಲಾಯಿತು.

ಕೋಲಾರದಲ್ಲಿ ಕರವೇ ಕಾರ್ಯಕರ್ತರು ಕಮಲ್ಹಾಸನ್ ಪೋಸ್ಟರ್‌ಗಳನ್ನು ಹರಿದು ಹಾಕಿ , ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಶಿವರಾಜ್‌ಕುಮಾರ್‌ ಧೋರಣೆಯನ್ನೂ ಟೀಕಿಸಿವೆ. ಇದಲ್ಲದೇ ಕೊಳ್ಳೆಗಾಲ, ಹಾವೇರಿ, ಬೆಳಗಾವಿ, ಮಂಡ್ಯದಲ್ಲೂ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

Read More
Next Story