ಕಲಬುರಗಿ ಪೊಲೀಸ್‌ ಕಮಿಷನರೇಟ್‌ ಕಚೇರಿಗೆ ಐಎಸ್‌ಒ ಮಾನ್ಯತೆ
x

ಕಲಬುರಗಿ ಪೊಲೀಸ್‌ ಕಮಿಷನರೇಟ್‌ ಕಚೇರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರಮಾಣ ಪತ್ರ ಹಸ್ತಾಂತರಿಸಿದರು.

ಕಲಬುರಗಿ ಪೊಲೀಸ್‌ ಕಮಿಷನರೇಟ್‌ ಕಚೇರಿಗೆ ಐಎಸ್‌ಒ ಮಾನ್ಯತೆ

ಸಾರ್ವಜನಿಕರ ಸೇವೆಗಳಲ್ಲಿ ಹಾಗೂ ಇತರೆ ವಿಭಾಗಗಳಲ್ಲಿ ಸುಧಾರಣೆ ತಂದ ಹಿನ್ನೆಲೆಯಲ್ಲಿ ಐಎಸ್ ಓ -9001 2021 ಪ್ರಶಸ್ತಿಯನ್ನು ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿಗೆ ನೀಡಲಾಗಿದೆ.


ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿಗೆ ಐಎಸ್‌ಓ 9001 2015 ಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿದೆ. ನಾಗರಿಕ ಸ್ನೇಹಿ, ವೃತ್ತಿಪರತೆ, ಸಾರ್ವಜನಿಕರ ಸೇವೆ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಸುಧಾರಣಾ ಮಾನದಂಡಗಳನ್ನು ಪರಿಗಣಿಸಿ ಈ ಮಾನ್ಯತೆ ನೀಡಲಾಗಿದೆ.

ಭಾನುವಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಪ್ರಮಾಣ ಪತ್ರ ವಿತರಿಸಿ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈಗ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಿದೆ. ಆದರೆ, ಜನರಿಂದ ಹೊಗಳಿಕೆಯ ಪ್ರಶಸ್ತಿ ಪಡೆಯಲು ಪೊಲೀಸರು ಮತ್ತಷ್ಟು ಜನಸ್ನೇಹಿ ಆದಾಗ ಮಾತ್ರ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಪರಿಶಿಷ್ಟ ಜಾತಿ, ಪಂಗಡದ ದೌರ್ಜನ್ಯ ಪ್ರಕರಣಗಳು ಸಹ ಕಡಿಮೆಯಾಗಿವೆ. ಸರ ಕಳ್ಳತನ ಪ್ರಕರಣಗಳು ಸೇರಿದಂತೆ ಸಾಮಾನ್ಯ ಪ್ರಕರಣಗಳೆಲ್ಲವೂ ಕಡಿಮೆಯಾದರೂ ಮಾದಕ ವಸ್ತುವಿಗೆ ಸಂಬಂಧಿಸಿದ ಪ್ರಕರಣಗಳು ಮಾತ್ರ ಏರುತ್ತಿವೆ. ಡಗ್ಸ್ ಹಾಗೂ ಮಾದಕ ಪದಾರ್ಥಗಳ ಮಾರಾಟ ಚಟುವಟಿಕೆ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ʼಸಕಾಲʼ ಯೋಜನೆಯಲ್ಲಿ ಕಲಬುರಗಿ ರಾಜ್ಯಕ್ಕೆ ನಂಬರ್‌ ಸ್ಥಾನದಲ್ಲಿದೆ. ಜಿ.ಪಂ.ನಲ್ಲಿ ತೆರಿಗೆ ವಸೂಲಾತಿಯಲ್ಲಿ 13 ನೇ ಸ್ಥಾನ ಪಡೆದಿದೆ. ಈಗ ಪೊಲೀಸ್ ಕಮಿಷನರೇಟ್ ಕಚೇರಿಗೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಂದಿರುವುದು ಖುಷಿಯ ವಿಚಾರ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಕಲಬುರಗಿ ಪೊಲೀಸ್ ಕಮೀಷನರೇಟ್ ತನ್ನ ಅಮೂಲಾಗ್ರ ಬದಲಾವಣೆ, ಸಾರ್ವಜನಿಕರ ಸೇವೆ ವಿಸ್ತರಣೆ ಹಾಗೂ ಇತರೆ ವಿಭಾಗಗಳಲ್ಲಿ ಸುಧಾರಣೆ ತಂದಿರುವುದಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇದಕ್ಕೆ ಕಾರಣೀಕರ್ತರಾದ ಎಲ್ಲರಿಗೂ ಅಭಿನಂದನೆಗಳು ಎಂದರು.

ಪೊಲೀಸ್ ಕಮೀಷನರ್ ಡಾ. ಶರಣಪ್ಪ ಢಗೆ ಮಾತನಾಡಿ, ಸಾರ್ವಜನಿಕರ ಸೇವೆಗಳಲ್ಲಿ ಹಾಗೂ ಇತರೆ ವಿಭಾಗಗಳಲ್ಲಿ ಸುಧಾರಣೆ ತಂದ ಹಿನ್ನೆಲೆಯಲ್ಲಿ ಐಎಸ್ ಓ -9001 2021 ಪ್ರಶಸ್ತಿಯನ್ನು ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿಗೆ ನೀಡಲಾಗಿದೆ. ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಸಿಬ್ಬಂದಿ ರಜೆ,‌ ವೈದ್ಯಕೀಯ ಸೇವೆ, ವಿವಿಧ ವಿಭಾಗಗಳಲ್ಲಿ ಗಣನೀಯ ಬದಲಾವಣೆಯಾಗಿವೆ. ಕಮೀಷನರೇಟ್ ಅಡಿಯಲ್ಲಿನ ಪೊಲೀಸ್ ಠಾಣೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಮಾಹಿತಿ ಹಾಗೂ ತಂತ್ರಜ್ಞಾನ ವಿಭಾಗದಲ್ಲಿ ಗಣನೀಯ ಸುಧಾರಣೆ ಹಾಗೂ ಸಾರ್ವಜನಿಕ ಸೇವೆ ಮುಖ್ಯವಾಗಿ ಪಾಸ್ ಪೋರ್ಸ್ ವೆರಿಫಿಕೇಷನ್ ನಲ್ಲಿ ಸುಧಾರಣೆ ತರಲಾಗಿದೆ. ಒಂದು ವಾರದ ಒಳಗಾಗಿ ವಿಲೇವಾರಿ ಮಾಡಲು‌ ಕ್ರಮವಹಿಸಲಾಗಿದೆ" ಎಂದು ಡಾ ಶರಣಪ್ಪ ಢಗೆ ವಿವರಿಸಿದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ‌ಎಲ್ ಸಿ ತಿಪ್ಪಣ್ಣಪ್ಪ‌ ಕಮಕನೂರು ಹಾಗೂ ಜಗದೇವ ಗುತ್ತೇದಾರ್, ಕುಡಾ ಅಧ್ಯಕ್ಷ ಮಜರ್ ಅಲಂ‌ಖಾನ್, ಜೆಸ್ಕಾಂ‌ ಅಧ್ಯಕ್ಷ ಪ್ರವೀಣ್ ಹರವಾಳ್, ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್, ಕಮೀಷನರ್ ಡಾ ಶರಣಪ್ಪ ಢಗೆ, ಸಿಇಓ ಭಂವರ್ ಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸಲು ಸೇರಿ ಮತ್ತಿತರರು ಉಪಸ್ಥಿತರಿದ್ದರು.

Read More
Next Story