
ಜಾತ್ಯಾತೀತ ಜನತಾದಳ ಧ್ವಜ
ವಲಸಿಗರಿಂದಾಗುವ ದೌರ್ಜನ್ಯ ನಿಗ್ರಹಕ್ಕೆ ಹೊಸ ಕಾನೂನು ಜಾರಿ ಮಾಡುವಂತೆ ಜೆಡಿಎಸ್ ಆಗ್ರಹ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಂಗ್ ಕಮಾಂಡರ್ ವಿರುದ್ದ ಕ್ರಮಕ್ಕೆ ಆಗ್ರಹಿಸಿದ ಬೆನ್ನಲ್ಲೆ ಜೆಡಿಎಸ್ ಕೂಡ ವಲಸಿಗರ ಹಾವಳಿ ವಿರುದ್ದ ಶೀಘ್ರ ಕಾನೂನು ರೂಪಿಸಲು ಆಗ್ರಹಿಸಿದೆ
ವಿಂಗ್ ಕಮಾಂಡರ್ ಶೈಲಾದಿತ್ಯ ಬೋಸ್, ಕನ್ನಡಿಗರೊಬ್ಬರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡಿಗನ ಮೇಲಿನ ಹಲ್ಲೆಯನ್ನು ಖಂಡಿಸಿದ ಬೆನ್ನಲ್ಲೇ ಜೆಡಿಎಸ್ ರಾಜ್ಯ ಘಟಕವೂ ಕನ್ನಡ ಭಾಷೆ ಹಾಗೂ ಕನ್ನಡಿಗರ ಮೇಲಿನ ದಾಳಿಯ ನಿಯಂತ್ರಣಕ್ಕೆ ಕಾನೂನು ರೂಪಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್. ನಮ್ಮ ನೆಲದಲ್ಲಿ ದಿನವೂ ಕನ್ನಡಿಗರ ಮೇಲೆ ವಲಸಿಗರಿಂದ ನಡೆಯುತ್ತಿರುವ ದೌರ್ಜನ್ಯದ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಉತ್ತರ ರಾಜ್ಯಗಳ ವಲಸಿಗರ ದೌರ್ಜನ್ಯ ಖಂಡನೀಯ. ಸಿ.ವಿ. ರಾಮನ್ ನಗರದಲ್ಲಿ ಸೋಮವಾರ (ಏಪ್ರಿಲ್ 21) ರಂದು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಎಂಬುವರು ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕನ್ನಡಿಗ ಟೆಕಿ ವಿಕಾಸ್ ಕುಮಾರ್ ಮೇಲೆ ಭೀಕರ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದೆ.
ಭಾಷಾ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ಸಾರ್ವಜನಿಕವಾಗಿ ರೌಡಿಯಂತೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ನನ್ನು ಶೀಘ್ರವೇ ಬಂಧಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಒತ್ತಾಯಿಸಿದೆ.
ಕರ್ನಾಟಕದ ಅನ್ನ ತಿಂದು. ಇಲ್ಲಿನ ನೀರು ಕುಡಿದು. ಉದ್ಯೋಗವು ಪಡದು ಕನ್ನಡಿಗರ ಮೇಲೆ ಈ ರೀತಿ ದೌರ್ಜನ್ಯ ಎಸಗುವವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಆಗ್ರಹಿಸಿದೆ.