ತುಮಕೂರಿಗೆ ನಿಸಾನ್‌ ಮೋಟರ್‌, ವಿಜಯಪುರ, ಧಾರವಾಡಕ್ಕೆ ನಿಸ್ಸಿನ್‌ ಫುಡ್ಸ್‌!  ಜಪಾನ್‌ ಕಂಪೆನಿಗಳ  ಆಸಕ್ತಿ
x

ತುಮಕೂರಿಗೆ ನಿಸಾನ್‌ ಮೋಟರ್‌, ವಿಜಯಪುರ, ಧಾರವಾಡಕ್ಕೆ ನಿಸ್ಸಿನ್‌ ಫುಡ್ಸ್‌! ಜಪಾನ್‌ ಕಂಪೆನಿಗಳ ಆಸಕ್ತಿ


ತುಮಕೂರಿನಲ್ಲಿನ ವಿದ್ಯುತ್‌ ಚಾಲಿತ ವಾಹನಗಳ (ಇವಿ) ಕೈಗಾರಿಕಾ ಸಮೂಹ ಸ್ಸ್ಥಾಪನೆಗೆ ಜಪಾನ್‌ನ ನಿಸಾನ್‌ ಮೋಟರ್‌ ಸಂಸ್ಥೆ ಒಲವು ತೋರಿದೆ. ಜತೆಗೆ ರಾಜ್ಯದಲಿ ತಂತ್ರಜ್ಞಾನ ಆವಿಷ್ಕಾರ ಅಭಿವೃದ್ಧಿ ಪಾಲುದಾರಿಕೆಗೆ ಹಿಟಾಚಿ ಸಂಸ್ಥೆ ಆಸಕ್ತಿ ತೋರಿದೆ.‌

ಬೃಹತ್‌ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಜಪಾನ್‌ ಪ್ರವಾಸ ವೇಲೆ ಸೋಮವಾರ ಬಹುರಾಷ್ಟ್ರೀಯ ಕಂಪನಿಗಳಾದ ಹಿಟಾಚಿ, ನಿಸಿನ್‌ಫುಡ್ಸ್‌ ಮತ್ತು ನಿಸಾನ್‌ ಮೋಟರ್‌ ಕಂಪನಿಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ವಹಿವಾಟು ವಿಸ್ತರಣೆಗೆ ಕಂಪೆನಿಗಳು ಆಸಕ್ತಿ ತೋರಿವೆ. ವಿಜಯಪುರ, ಧಾರವಾಡ ಜಿಲ್ಲೆಗಳ ಫುಡ್‌ಪಾರ್ಕ್‌ ಮೂಲಕ ನಿಸಿನ್ ಫುಡ್ಸ್‌ ಆಸಕ್ತಿ ವ್ಯಕ್ತಪಡಿಸಿದ್ದು, ಸರ್ಕಾರದ ಬೆಂಬಲ ನೀಡುವುದಾಗಿ ಸಚಿವ ಪಾಟೀಲ್‌ ಬರವಸೆ ನೀಡಿದ್ದಾರೆ.

ಕರ್ನಾಟಕದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಉಪಕ್ರಮಕ್ಕೆ ಸಂಬಂಧಿಸಿದಂತೆ ಪಾಲುದಾರಿಕೆ ಮತ್ತು ವಿಸ್ತರಣೆ ಕುರಿತು ಸಚಿವರು ನಿಸಾನ್‌ ಮೋಟರ್‌ನ ಹಿರಿಯ ಉಪಾಧ್ಯಕ್ಷ ಜೋಜಿ ತಗಾವಾ ಅವರ ಜೊತೆ ಮಾತುಕತೆ ನಡೆಸಿದರು, ನಿಸಾನ್‌ ಇಂಡಿಯಾದ ಅಧ್ಯಕ್ಷ ಫ್ರ್ಯಾಂಕ್‌ ಟೊರೆಸ್‌ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯದ ಉನ್ನತ ಮಟ್ಟದ ನಿಯೋಗದ 5 ದಿನಗಳ ಜಪಾನ್‌ ಭೇಟಿಯ ಮೊದಲ ದಿನ ನಡೆದ ಸಭೆಗಳಲ್ಲಿ ಬಂಡವಾಳ ಹೂಡಿಕೆಯ ಸಾಧ್ಯತೆಗಳು ಮತ್ತು ರಾಜ್ಯ ಸರ್ಕಾರದ ಜೊತೆಗಿನ ಸಹಯೋಗ ವೃದ್ಧಿಸುವುದಕ್ಕೆ ಗಮನ ಕೇಂದ್ರೀಕರಿಸಲಾಗಿತ್ತು. ಹಿಟಾಚಿ ಕಂಪನಿ ಜೊತೆಗಿನ ಸಭೆಯಲ್ಲಿ, ಭವಿಷ್ಯದ ತಂತ್ರಜ್ಞಾನ, ಪರಿಸರ ಸ್ನೇಹಿ ಸುಸ್ಥಿರ ಇಂಧನ, ನಿರ್ವಹಣೆಯ ಮುನ್ಸೂಚನೆ, ಸೈಬರ್‌ ಸುರಕ್ಷತೆ ಪಾಲುದಾರಿಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು, ನಿರ್ದಿಷ್ಟವಾಗಿ ಹಣಕಾಸು ಸೇವೆಗಳಲ್ಲಿ ವಹಿವಾಟು ವಿಸ್ತರಿಸಲು ಹಿಟಾಚಿ ಕಂಪನಿಯು ಆಸಕ್ತಿ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಉದ್ಯಮ ವಿಸ್ತರಣೆ ಸಾಧ್ಯತೆಗಳ ಬಗ್ಗೆ ನಿಸಿನ್‌ ಫುಡ್ಸ್‌ ಕಂಪನಿ ಜೊತೆಗೆ ನಿಯೋಗವು ಮಾತುಕತೆ ನಡೆಸಿತು. ʼಬೆಂಗಳೂರು ನಗರ ಕೇಂದ್ರವಾಗಿರಿಸಿ ವಹಿವಾಟು ವಿಸ್ತರಿಸಲು ವಿಪುಲ ಅವಕಾಶಗಳಿವೆ. ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಸ್ಥಾಪಿಸಲಿರುವ ಆಹಾರ ಪಾರ್ಕ್‌ಗಳಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ಬೆಂಬಲ ನೀಡಲಾಗುವುದುʼ ಎಂದು ಸಚಿವ ಪಾಟೀಲ ಅವರು ಭರವಸೆ ನೀಡಿದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ, ಕೈಗಾರಿಕೆ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಉಪಸ್ಥಿತರಿದ್ದರು.


Read More
Next Story