Iran - Israel Conflict|ಇರಾನ್‌ ಮೇಲೆ ಇಸ್ರೇಲ್‌, ಅಮೆರಿಕ ದಾಳಿ; ಕರ್ನಾಟಕದ ಶಿಯಾ ಸಮುದಾಯವರಲ್ಲಿ ಆತಂಕ
x

ಖಮೇನಿ

Iran - Israel Conflict|ಇರಾನ್‌ ಮೇಲೆ ಇಸ್ರೇಲ್‌, ಅಮೆರಿಕ ದಾಳಿ; ಕರ್ನಾಟಕದ ಶಿಯಾ ಸಮುದಾಯವರಲ್ಲಿ ಆತಂಕ

ವಿಶ್ವದ ಹಲವು ರಾಷ್ಟ್ರಗಳಲ್ಲಿ ಶಿಯಾ ಮುಸ್ಲಿಮರಿಗೆ ಇರಾನ್‌ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಧಾರ್ಮಿಕ ಗುರು. ಇರಾನ್‌ ಪರಮೋಚ್ಛ ನಾಯಕರೂ ಆಗಿರುವ ಖಮೇನಿ ಹತ್ಯೆಗೆ ಇಸ್ರೇಲ್ ಬೆದರಿಕೆ ಹಾಕಿರುವುದರಿಂದ ಶಿಯಾ ಮುಸ್ಲಿಮರಲ್ಲಿ ದುಗುಡ ಹೆಚ್ಚಾಗಿದೆ.


ಇರಾನ್-ಇಸ್ರೇಲ್ ನಡುವಿನ ಸಂಘರ್ಷವು ಶಿಯಾ ಮುಸ್ಲಿಮರ ಪ್ರಾಬಲ್ಯವಿರುವ ರಾಜ್ಯದ ಹಲವು ಪ್ರದೇಶಗಳಲ್ಲಿ ತಲ್ಲಣ ಸೃಷ್ಟಿಸಿದೆ.

ಶಿಯಾ ಮುಸ್ಲಿಮರಿಗೆ ಪ್ರಮುಖ ಧಾರ್ಮಿಕ ಯಾತ್ರಾಸ್ಥಳವಾದ ಇರಾನ್ ಮೇಲೆ ಇಸ್ರೇಲ್‌ ಹಾಗೂ ಅಮೆರಿಕ ಜಂಟಿಯಾಗಿ ಕದನ ಆರಂಭಿಸಿರುವುದು ಈ ಆತಂಕಕ್ಕೆ ಕಾರಣ.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಶಿಯಾ ಮುಸ್ಲಿಮರಿಗೆ ಇರಾನ್‌ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರೇ ಧಾರ್ಮಿಕ ಗುರು. ಅಂತಹ ಗುರುವನ್ನೇ ಹತ್ಯೆ ಮಾಡುವುದಾಗಿ ಇಸ್ರೇಲ್ ಬೆದರಿಕೆ ಹಾಕಿ, ಯುದ್ಧ ಆರಂಭಿಸಿರುವುದರಿಂದ ಸಹಜವಾಗಿ ಶಿಯಾ ಮುಸ್ಲಿಮರಲ್ಲಿ ದುಗುಡ ಹೆಚ್ಚಾಗಿದೆ.

ಇರಾನ್‌ ಅಲ್ಲದೇ ಇರಾಕ್‌, ಸಿರಿಯಾ, ಬಹ್ರೇನ್‌, ಸೌದಿ ಅರೆಬಿಯಾ ಕೂಡ ಶಿಯಾ ಮುಸ್ಲಿಮರ ಬಾಹುಳ್ಯವಿರುವ ದೇಶಗಳು. ಈ ದೇಶಗಳೊಂದಿಗೆ ಭಾರತದ ಶಿಯಾ ಮುಸ್ಲಿಮರ ಒಡನಾಟ ತಾಯಿ -ಮಗುವಿನಂತಿದೆ. ಮಧ್ಯ ಪ್ರಾಚ್ಯದ ದೇಶಗಳಲ್ಲಿ ಸಂಘರ್ಷ ಏರ್ಪಟ್ಟಾಗಲೆಲ್ಲಾ ರಾಜ್ಯದ ಶಿಯಾ ಮುಸ್ಲಿಮರಿರುವ ಗೌರಿಬಿದನೂರು ತಾಲೂಕಿ ಅಲಿಪುರ, ಬೆಂಗಳೂರಿನ ಜಾನ್ಸನ್‌ ಮಾರುಕಟ್ಟೆ ಹಾಗೂ ಇತರೆ ಜಿಲ್ಲೆಗಳಲ್ಲಿರುವ ಶಿಯಾ ಮುಸ್ಲಿಂ ಪ್ರದೇಶಗಳಲ್ಲಿ ಆತಂಕ ಮನೆ ಮಾಡುತ್ತದೆ.

ಶಿಯಾ ಮುಸ್ಲಿಮರು ಎಲ್ಲೆಲ್ಲಿದ್ದಾರೆ?

ಭಾರತದಲ್ಲಿ ಉತ್ತರಪ್ರದೇಶದ ಲಕ್ನೋ ಶಿಯಾ ಮುಸ್ಲಿಮರು ಹೆಚ್ಚಿರುವ ಪ್ರದೇಶ. ಕರ್ನಾಟಕದಲ್ಲಿ ಅಲಿಪುರ, ಬೆಂಗಳೂರಿನಲ್ಲಿ ಶಿಯಾ ಮುಸ್ಲಿಮರ ಸಂಖ್ಯೆ ಹೆಚ್ಚಿದೆ. ಉಳಿದಂತೆ ಮೈಸೂರು, ವಿಜಯಪುರ, ಹಾಸನ ಜಿಲ್ಲೆಗಳಲ್ಲಿ ಶಿಯಾ ಮುಸ್ಲಿಮರು ಇದ್ದಾರೆ. ಅಲಿಪುರದಲ್ಲಿ 25 ಸಾವಿರ ಶಿಯಾ ಮುಸ್ಲಿಮರಿದ್ದರೆ, ಬೆಂಗಳೂರಿನಲ್ಲಿ 18 ಸಾವಿರ ಜನಸಂಖ್ಯೆ ಇದೆ. ಪ್ರಮುಖವಾಗಿ ಜಾನ್ಸನ್ ಮಾರುಕಟ್ಟೆ, ಯಶವಂತಪುರ, ನೀಲಸಂದ್ರ, ರಿಚ್‌ಮಂಡ್‌ ಟೌನ್‌, ನೆಲಮಂಗಲದ ತ್ಯಾಮಗೊಂಡ್ಲು, ಕೊರಟಗೆರೆಯ ಹೊಳವನಹಳ್ಳಿ, ಪೋತೇನಹಳ್ಳಿ, ಮೈಸೂರು, ವಿಜಯಪುರ, ಹಾಸನ ಜಿಲ್ಲೆಯ ಹೊಳೆ ನರಸೀಪುರ, ದೊಡ್ಡಬಳ್ಳಾಪುರದಲ್ಲಿ ಶಿಯಾ ಮುಸ್ಲಿಂ ಕುಟುಂಬಗಳಿವೆ.

ಇವರಲ್ಲಿ ಬಹುತೇಕರು ಧಾರ್ಮಿಕ ಶಿಕ್ಷಣಕ್ಕಾಗಿ ಇರಾನ್‌ಗೆ ತೆರಳುತ್ತಾರೆ. ಅಲಿಪುರದಿಂದಲೇ ಸುಮಾರು 15 ಮಂದಿ ಎಂಬಿಬಿಎಸ್‌ ವೈದ್ಯರು ಇರಾನ್‌ಗೆ ತೆರಳಿದ್ದು, ಸುರಕ್ಷಿತವಾಗಿ ವಾಪಸಾಗಿದ್ದಾರೆ.

ಬೆಂಗಳೂರಿನಲ್ಲಿ ಶಿಯಾ ಮುಸ್ಲಿಮರ ಮಸೀದಿ

ಅಲಿಪುರದ ನಂತರ ಹೆಚ್ಚು ಶಿಯಾ ಮುಸ್ಲಿಮರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬೆಂಗಳೂರಿನ ಜಾನ್ಸನ್‌ ಮಾರುಕಟ್ಟೆ, ಯಶವಂತಪುರ ಹಾಗೂ ಆನೆಪಾಳ್ಯದಲ್ಲಿ ಮಸೀದಿಗಳಿವೆ.

ಇರಾನ್‌ ಮೇಲೆ ಯುದ್ಧ ನಡೆಯುತ್ತಿರುವುದರಿಂದ ತಮ್ಮ ಧಾರ್ಮಿಕ ಸ್ಥಳ, ಧಾರ್ಮಿಕ ಗುರುಗಳಿಗೆ ಏನಾಗುತ್ತದೋ ಎಂಬ ಆತಂಕ ಇಲ್ಲಿನ ಶಿಯಾ ಮುಸ್ಲಿಮರಲ್ಲಿದೆ. ಇಲ್ಲಿನ ಮಸೀದಿಗಳಲ್ಲಿ ಇರಾನ್‌ ಪರ ಪ್ರಾರ್ಥನೆಗಳು ನಡೆಯುತ್ತಿವೆ.

ಶಿಯಾ ಕುಟುಂಬಗಳು ಸುರಕ್ಷಿತ

ಇರಾನ್‌ನ ಟೆಹ್ರಾನ್‌ನಲ್ಲಿ ಅಲಿಪುರ ಗ್ರಾಮದ 15 ಮಂದಿ ವಿದ್ಯಾರ್ಥಿಗಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು 50 ಕುಟುಂಬಗಳು ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಯಾತ್ರೆ, ವ್ಯವಹಾರಗಳಿಗಾಗಿ ಹೋದವರು ಸೇರಿ ಸುಮಾರು 250-300 ಮಂದಿ ಇರಾನ್‌ನಲ್ಲಿದ್ದಾರೆ. ಅವರನ್ನು ಯುದ್ಧಪೀಡಿತ ಟೆಹ್ರಾನ್‌ನಿಂದ ಮಷದ್ ಹಾಗೂ ಖೋಮ್ ನಗರಗಳಿಗೆ ಸ್ಥಳಾಂತರಿಸಲಾಗಿದೆ. ಎಲ್ಲಾ 250 ಮಂದಿ ಸುರಕ್ಷಿತವಾಗಿದ್ದು, 50 ಮಂದಿ ಭಾನುವಾರ ಗ್ರಾಮಕ್ಕೆ ಮರಳಿದಿದ್ದಾರೆ. ಉಳಿದವರು ಖೋಮ್‌ ನಗರದಲ್ಲಿ ಸುರಕ್ಷಿತ ಸ್ಥಳದಲ್ಲಿದ್ದು, ಶೀಘ್ರವೇ ಅವರನ್ನು ಅಲಿಪುರಕ್ಕೆ ಕರೆಸಿಕೊಳ್ಳಲಾಗುವುದು ಎಂದು ಅಲಿಪುರದ ಮುಖಂಡ ಮಿರ್‌ ರೋಶನ್‌ ಅಬ್ಬಾಸ್‌ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಅಲಿಪುರದ ಹಲವು ಕುಟುಂಬಗಳು ದಶಕಗಳಿಂದ ಇರಾನ್‌ ಜೊತೆ ಸಂಪರ್ಕ ಹೊಂದಿದ್ದು, ಶಿಕ್ಷಣ ಹಾಗೂ ಉದ್ಯೋಗ ಮಾಡಿಕೊಂಡು ಅಲ್ಲಿಯೇ ನೆಲೆ ನಿಂತಿದ್ದಾರೆ. ಈ ಕುಟುಂಬಗಳು ವರ್ಷಕ್ಕೆ ಎರಡು ಬಾರಿ ಅಂದರೆ ಮೊಹರಂ ಹಾಗೂ ರಂಜಾನ್‌ ಹಬ್ಬಗಳಿಗೆ ಅಲಿಪುರಕ್ಕೆ ಆಗಮಿಸುತ್ತಾರೆ. ಇರಾನ್‌ನಲ್ಲಿ ಅಗ್ಗದ ದರದಲ್ಲಿ ವೈದ್ಯಕೀಯ ಮಾಡುವ ಉದ್ದೇಶ ಹಾಗೂ ಧಾರ್ಮಿಕ ಶಿಕ್ಷಣಕ್ಕಾಗಿ ಕರ್ನಾಟಕದ ಹಲವು ಕಡೆಗಳಿಂದ ಶಿಯಾ ಮುಸ್ಲಿಮರು ಇರಾನ್‌, ಇರಾಕ್‌, ಸಿರಿಯಾ, ಸೌದಿ ಅರೆಬಿಯಾಗೆ ತೆರಳುತ್ತಾರೆ.

ಅಲ್ಪಸಂಖ್ಯಾತ ಶಿಯಾ ಮುಸ್ಲಿಮರು

ಕರ್ನಾಟಕ ರಾಜ್ಯದಲ್ಲಿ ಶಿಯಾ ಮುಸ್ಲಿಮರ ಬಗ್ಗೆ ಕುರಿತು ಅಧ್ಯಯನ ನಡೆಸಿರುವ ಅಲಿಪುರ ಲೇಖಕ ಅಖೀಲ್‌ ಅಬ್ಬಾಸ್‌ ಅವರು ಶಿಯಾಗಳ ಸಾಂಸ್ಕೃತಿಕ, ರಾಜಕೀಯ ಬೆಳವಣಿಗೆ ಕುರಿತು ಬೆಳಕು ಚೆಲ್ಲುವ ಕೃತಿ ಬರೆದಿದ್ದಾರೆ.

ʼಮುಸ್ಲಿಮರಲ್ಲಿ ಅಲ್ಪಸಂಖ್ಯಾತರು ಶಿಯಾ ಪಂಗಡ; ಕರ್ನಾಟಕಲ್ಲಿ ಶಿಯಾಗಳ ಇತಿಹಾಸʼ ಎಂಬ ಕೃತಿಯಲ್ಲಿ ಖಲೀಲ್ ಅಬ್ಬಾಸ್‌ ಅವರು, ಶಿಯಾ ಪರಂಪರೆ ಕರ್ನಾಟಕಕ್ಕೆ ಬಂದ ವಿವರಣೆ ನೀಡಿದ್ದಾರೆ.

ಶಿಯಾ ಮುಸ್ಲಿಮರು ಉತ್ತರದಿಂದ ದಕ್ಷಿಣದವರೆಗೆ ಭಾರತದ ಮೇಲೆ ಆಳವಾದ ಪ್ರಭಾವ ಬೀರಿದ್ದರು. ಶಿಯಾ ಮುಸ್ಲಿಂ ರಾಜರು ಕಾಲಕಾಲಕ್ಕೆ ಭಾರತದ ಹಲವು ಪ್ರಾಂತ್ಯಗಳಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಆದರೆ, ಸುನ್ನಿ ಮುಸ್ಲಿಮರ ಜನಸಂಖ್ಯೆಗೆ ಹೋಲಿಸಿದರೆ ಶಿಯಾ ಪಂಗಡದವರು ಅಲ್ಪಸಂಖ್ಯಾತರಾಗಿದ್ದಾರೆ ಎಂದು ಅಖೀಲ್ ಅಬ್ಬಾಸ್ ಅಭಿಪ್ರಾಯಪಟ್ಟಿದ್ದಾರೆ.

ಅಬ್ಬಾಸ್‌ ಅವರು ಅಲಿಪುರದ ಶ್ರೀಮಂತ ಶಿಯಾ ಕುಟುಂಬದಲ್ಲಿ ಬೆಳೆದು, ಥೈಲ್ಯಾಂಡ್‌ನಲ್ಲಿ ತಮ್ಮ ತಂದೆಯ ಜೆಮ್ಸ್‌ ಸ್ಟೋನ್ಸ್ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಶಿಯಾ ಪರಂಪರೆ, ಬೆಳವಣಿಗೆ, ಸಾಂಸ್ಕೃತಿಕ ಹಾಗೂ ರಾಜಕೀಯ ಸ್ಥಾನಮಾನಗಳ ಕುರಿತು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

ಶಿಯಾ-ಸುನ್ನಿ ಮುಸ್ಲಿಮರು ಇಬ್ಭಾಗವಾಗಿದ್ದೇಗೆ?

ಪ್ರವಾದಿ ಮುಹಮ್ಮದ್ ಪೈಂಗಬರ್ ಕಾಲವಾದ ನಂತರ ಅವರ ಆಪ್ತಮಿತ್ರ ಅಬೂಬಕರ್ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ಆದರೆ ಪ್ರವಾದಿಯವರ ವಂಶಸ್ಥರಾದ ಅಲಿ ಅವರ ಉತ್ತರಾಧಿಕಾರಿ ಬಯಕೆ ಈಡೇರಿರಲಿಲ್ಲ. ಆಗ ಅಲಿ ನೇತೃತ್ವದ ಗುಂಪು ಶಿಯಾ ಪಂಥ ಎಂದು ಚಾಲ್ತಿಗೆ ಬಂದಿತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ಅಬೂಬಕರ್ ಅವರ ಇಬ್ಬರು ಉತ್ತರಾಧಿಕಾರಿಗಳ ಹತ್ಯೆ ನಂತರ ಅಲಿ ಅವರು ಇಸ್ಲಾಂ ಧರ್ಮದ ನಾಲ್ಕನೇ ಖಲೀಫರಾದರು. ಎರಡೂ ಪಂಗಡಗಳ ನಡುವಿನ ಹೋರಾಟ ಹೆಚ್ಚಾದಾಗ ಕ್ರಿ.ಶ. 661 ರಲ್ಲಿ ಕುಫಾ (ಇಂದಿನ ಇರಾಕ್) ಮಸೀದಿಯಲ್ಲಿ ವಿಷಪೂರಿತ ಕತ್ತಿಯಿಂದ ಅಲಿ ಅವರನ್ನು ಹತ್ಯೆ ಮಾಡಲಾಯಿತು.

ಸಿರಿಯಾ, ಬಹ್ರೇನ್‌, ಇರಾನ್‌ ಹಾಗೂ ಇರಾಕ್‌ನಲ್ಲಿ ಶಿಯಾ ಮುಸ್ಲಿಮರು ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದಾರೆ. ಮಧ್ಯ ಪ್ರಾಚ್ಯದ ಮೇಲೆ ಹಿಡಿತ ಸಾಧಿಸಲು ಇರಾನ್‌ ಮುಂಚೂಣಿ ಸ್ಥಾನದಲ್ಲಿದೆ. ಸಂಪದ್ಭರಿತ ತೈಲ ನಿಕ್ಷೇಪ ಹೊಂದಿರುವ ಇರಾನ್‌ ಜಗತ್ತಿನ ಶೇ 20 ರಷ್ಟು ತೈಲ ಪೂರೈಕೆಗೆ ಜಲಮಾರ್ಗ ಹೊಂದಿದೆ.

Read More
Next Story