ಬೆಂಗಳೂರು ಕಾಲ್ತುಳಿತ ದುರಂತಕ್ಕೆ ವಿರಾಟ್ ಕಾರಣವೇ? ಕೊಹ್ಲಿ ಒತ್ತಡದಿಂದ ತರಾತುರಿ ಆಯೋಜನೆ?
x

ಬೆಂಗಳೂರು ಕಾಲ್ತುಳಿತ ದುರಂತಕ್ಕೆ ವಿರಾಟ್ ಕಾರಣವೇ? ಕೊಹ್ಲಿ ಒತ್ತಡದಿಂದ ತರಾತುರಿ ಆಯೋಜನೆ?

ದುರಂತ ನಡೆದ ಮರು ದಿನವೇ ಅಂದರೆ ಗುರುವಾರ ಅವರು ಪತ್ನಿ ಸಮೇತ ಲಂಡನ್​ಗೆ ಹೋಗಿದ್ದಾರೆ. ಅವರು ಏರ್​ಪೋರ್ಟ್​ಗೆ ತೆರಳುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಇಷ್ಟಕ್ಕೆಲ್ಲ ಅವರೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ 2025 ಗೆಲುವಿನ ಸಂಭ್ರಮಾಚರಣೆಯು ಕರಾಳ ದುರಂತವಾಗಿ ಪರಿಣಮಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಜೀವಗಳು ಬಲಿಯಾಗಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ಆಘಾತಕಾರಿ. ಆದರೆ, ಈ ಎಲ್ಲ ದುರಂತಕ್ಕೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪರೋಕ್ಷ ಕಾರಣ ಎಂಬ ಆರೋಪಗಳು ಕೇಳಿಬಂದಿವೆ. ಚಾಂಪಿಯನ್ ಪಟ್ಟ ಗಳಿಸಿದ ಮರುದಿನವೇ ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸಲು ಅವರು ಫ್ರಾಂಚೈಸಿ ಮೇಲೆ ಒತ್ತಡ ಹೇರಿದ್ದರು ಎಂದು ಮಾತುಗಳು ಕೇಳಿ ಬರುತ್ತಿವೆ.

ಬುಧವಾರ ದುರಂತ ನಡೆದಿದ್ದು, ರಾತ್ರಿ ವೇಳೆ ವಿರಾಟ್​ ಸೋಶಿಯಲ್ ಮಿಡಿಯಾ ಪೋಸ್ಟ್​ ಮೂಲಕ ಮೃತರಿಗೆ ಸಂತಾಪ ಸೇರಿದಂತೆ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಆದರೆ, ಮರು ದಿನವೇ ಅಂದರೆ ಗುರುವಾರ ಅವರು ಪತ್ನಿ ಸಮೇತ ಲಂಡನ್​ಗೆ ಹೋಗಿದ್ದಾರೆ. ಅವರು ಏರ್​ಪೋರ್ಟ್​ಗೆ ತೆರಳುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಇಷ್ಟಕ್ಕೆಲ್ಲ ಅವರೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿರಾಟ್ ಕೊಹ್ಲಿ ಅವರು ಲಂಡನ್ ಪ್ರವಾಸಕ್ಕೆ ತೆರಳಬೇಕಿದ್ದರಿಂದ ಕಾರ್ಯಕ್ರಮವನ್ನು ತರಾತುರಿಯಲ್ಲಿ ಆಯೋಜಿಸಲಾಯಿತು ಎಂಬ ಆರೋಪಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಸೋಶಿಯಲ್​ ಮೀಡಿಯಾಗಳಲ್ಲಿ ಅವರನ್ನು ನೇರವಾಗಿ ಗುರಿಯಾಗಿಸಲಾಗಿದೆ.

ಆರೋಪದ ಮೂಲ ಮತ್ತು ಸತ್ಯಾಂಶ

ದುರಂತ ಸಂಭವಿಸಿದ ನಂತರ, ಕೆಲವು ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ವೈಯಕ್ತಿಕ ವಿದೇಶಿ ಪ್ರವಾಸದ ಕಾರಣದಿಂದಾಗಿ ಐಪಿಎಲ್ ವಿಜಯೋತ್ಸವ ಸಮಾರಂಭವನ್ನು ಮರು ದಿನವೇ ಆಯೋಜಿಸಲು ಒತ್ತಡ ಹೇರಿದರು ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ, ಇದನ್ನು ಮೂಲಗಳು ಸಂಪೂರ್ಣವಾಗಿ ನಿರಾಕರಿಸಿದ್ದರು., ಜನಸಂದಣಿ ನಿರ್ವಹಣೆಯಲ್ಲಿನ ಗಂಭೀರ ಲೋಪಗಳಿಗೆ ಕೊಹ್ಲಿಯನ್ನೇ ಹೊಣೆಗಾರರನ್ನಾಗಿಸುವ ಪ್ರಯತ್ನ ಎಂದು ಹೇಳಲಾಗುತ್ತಿದೆ

ಕೊಹ್ಲಿ ಮೇಲಿನ ಆರೋಪಗಳಿಗೆ ಯಾವುದೇ ಅಧಿಕೃತ ಪುರಾವೆ ಅಥವಾ ದೃಢೀಕರಣ ಲಭ್ಯವಿಲ್ಲ. ವಿರಾಟ್ ಕೊಹ್ಲಿ ಅಥವಾ ಆರ್‌ಸಿಬಿ ತಂಡದಿಂದ ಕಾರ್ಯಕ್ರಮದ ಆಯೋಜನೆಗೆ ಸಂಬಂಧಿಸಿದಂತೆ ಅಂತಹ ಯಾವುದೇ ಒತ್ತಡ ಹೇರಲಾಗಿತ್ತು ಎಂದು ಸಾರ್ವಜನಿಕವಾಗಿ ಘೋಷಿಸಿಲ್ಲ. ಘಟನೆ ನಡೆದ ನಂತರ, ವಿರಾಟ್ ಕೊಹ್ಲಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಘಟನೆ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. "ಸಂಪೂರ್ಣವಾಗಿ ನೊಂದಿದ್ದೇನೆ," ಎಂದು ಅವರು ಬರೆದಿದ್ದಾರೆ.

ಯಾವುದೇ ದೊಡ್ಡ ಪ್ರಮಾಣದ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸುವ ಜವಾಬ್ದಾರಿ ಸಾಮಾನ್ಯವಾಗಿ ಆಯೋಜಕರು, ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆಯ ಮೇಲೆ ಇರುತ್ತದೆ. ಆಟಗಾರನ ವೈಯಕ್ತಿಕ ಪ್ರವಾಸ ಯೋಜನೆಗಳು ಇಡೀ ಕಾರ್ಯಕ್ರಮದ ಭದ್ರತೆ ಮತ್ತು ನಿರ್ವಹಣಾ ಪ್ರೋಟೋಕಾಲ್‌ಗಳ ಉಲ್ಲಂಘನೆಗೆ ನೇರ ಕಾರಣವಾಗಲು ಸಾಧ್ಯವಿಲ್ಲ ಎಂಬುದಾಗಿಯೂ ಹೇಳಲಾಗುತ್ತಿದೆ.

ದುರಂತಕ್ಕೆ ನಿಜವಾದ ಕಾರಣಗಳೇನು?

ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ 35,000 ಮಂದಿಗೆ ಸೀಮಿತವಾಗಿದ್ದರೂ, ಸುಮಾರು 2-3 ಲಕ್ಷ ಜನರು ಸೇರಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಈ ಅಗಾಧ ಜನಸಂದಣಿಯನ್ನು ನಿರ್ವಹಿಸಲು ಪೂರ್ವ ಯೋಜನೆ, ಸಾಕಷ್ಟು ಭದ್ರತಾ ಸಿಬ್ಬಂದಿ, ಬ್ಯಾರಿಕೇಡಿಂಗ್ ಮತ್ತು ತುರ್ತು ನಿರ್ಗಮನ ವ್ಯವಸ್ಥೆಗಳ ಕೊರತೆಯೇ ಕಾಲ್ತುಳಿತಕ್ಕೆ ಪ್ರಮುಖ ಕಾರಣಗಳಾಗಿವೆ. ಅಲ್ಲದೆ, ಗೃಹ ಸಚಿವರು ಪಥಯಾತ್ರೆ ರದ್ದುಪಡಿಸಿದ್ದಾರೆ ಎಂದು ಹೇಳಿದರೂ, ಆರ್‌ಸಿಬಿ ತಂಡದ ಸಾಮಾಜಿಕ ಮಾಧ್ಯಮದಲ್ಲಿ ಪಥಯಾತ್ರೆ ನಡೆಯಲಿದೆ ಎಂದು ಟ್ವೀಟ್ ಮಾಡಿದ್ದು, ಇದು ಜನರಲ್ಲಿ ಗೊಂದಲವನ್ನುಂಟು ಮಾಡಿ, ಜನಸಂದಣಿಯನ್ನು ಮತ್ತಷ್ಟು ಹೆಚ್ಚಿಸಿತು. ಈ ಆಯೋಜನಾ ಗೊಂದಲವೇ ದುರಂತಕ್ಕೆ ನೇರ ಕಾರಣ ಎಂದು ವ್ಯಾಪಕವಾಗಿ ಟೀಕಿಸಲಾಗುತ್ತಿದೆ.

ರಾಜಕೀಯ ಮತ್ತು ಸಾರ್ವಜನಿಕರ ಆಕ್ರೋಶ

ಈ ದುರಂತವು ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ನಿರ್ವಹಣಾ ವೈಫಲ್ಯವನ್ನು ತೀವ್ರವಾಗಿ ಟೀಕಿಸಿವೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದು, ಮುಖ್ಯಮಂತ್ರಿ ಮತ್ತು ಡಿಸಿಎಂ ವಿರುದ್ಧವೇ ಪರೋಕ್ಷವಾಗಿ ಆರೋಪಗಳನ್ನು ಮಾಡಿದ್ದಾರೆ.

Read More
Next Story