ಕೆಎಂಎಫ್‌ನಲ್ಲಿ ಮತ್ತೆ ಒಕ್ಕಲಿಗರ ಬಲ? ದೇವೇಗೌಡ ಕುಟುಂಬದ  ಬಳಿಕ  ಡಿ.ಕೆ. ಸೋದರರ ಪಾರುಪತ್ಯ?
x

ಕೆಎಂಎಫ್‌ನಲ್ಲಿ ಮತ್ತೆ ಒಕ್ಕಲಿಗರ ಬಲ? ದೇವೇಗೌಡ ಕುಟುಂಬದ ಬಳಿಕ ಡಿ.ಕೆ. ಸೋದರರ ಪಾರುಪತ್ಯ?

ಬಳ್ಳಾರಿ ಹಾಲು ಒಕ್ಕೂಟ, ಕೋಲಾರ ಹಾಲು ಒಕ್ಕೂಟ ಅಧ್ಯಕ್ಷರ ಆಯ್ಕೆ ಬಳಿಕವೇ ಕೆಎಂಎಫ್‌ ಸ್ಥಾನ ಭರ್ತಿ. ಅಲ್ಲಿಯವರಗೆ ಚುನಾವಣೆ ನಡೆಯುವುದಿಲ್ಲ.


ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್‌) ರಾಜ್ಯದ ಡೈರಿ ಸಹಕಾರಿ ಆಂದೋಲನಕ್ಕೆ ಅತ್ಯುನ್ನತ ಸಂಸ್ಥೆಯಾಗಿದೆ. ಇದು ದೇಶದ ಡೈರಿ ಸಹಕಾರಿ ಸಂಸ್ಥೆಗಳಲ್ಲಿ ಎರಡನೇ ಅತಿದೊಡ್ಡ ಡೈರಿ ಸಹಕಾರಿ ಸಂಸ್ಥೆಯಾಗಿದೆ. ದಕ್ಷಿಣ ಭಾರತದಲ್ಲಿ ಸಂಗ್ರಹಣೆ ಮತ್ತು ಮಾರಾಟದ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ಇಂತಹ ಕೆಎಂಎಫ್‌ ಸಂಸ್ಥೆಗೆ ಇದೀಗ ವಿಧಾನಸಭಾ ಚುನಾವಣೆಗಿಂತಲೂ ಜೋರಾಗಿಯೇ ಚುನಾವಣೆಯ ನಡೆಯುವ ನಿರೀಕ್ಷೆ ಇದ್ದು, ರಾಜಕೀಯ ಲಾಬಿಯೂ ಭರ್ಜರಿಯಾಗಿಯೇ ನಡೆಯುತ್ತಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹೋದರ ಮತ್ತು ಡಿ.ಕೆ.ಸುರೇಶ್‌ ಬಮೂಲ್‌ ಅಧ್ಯಕ್ಷರಾಗಿ ನಿಯುಕ್ತಗೊಳ್ಳುತ್ತಿದ್ದಂತೆ ತೆರೆಮರೆಯಲ್ಲಿ ಕೆಎಂಎಫ್‌ ಅಧ್ಯಕ್ಷರ ಹುದ್ದೆಗೆ ತೀವ್ರ ಪೈಪೋಟಿ ಆರಂಭಗೊಂಡಿದೆ. ಕೆಎಂಎಫ್‌ ಗಾದಿಗೆ ಹೋಗಲು ಡಿ.ಕೆ.ಸುರೇಶ್‌ಗೆ ಇನ್ನೊಂದೆ ಮೆಟ್ಟಿಲು ಬಾಕಿ ಇದೆ. ಕೆಎಂಎಫ್‌ ಅಧ್ಯಕ್ಷ ಸ್ಥಾನವು ಡಿ.ಕೆ.ಸುರೇಶ್‌ಗೆ ಒಲಿಯುವುದು ಬಹುತೇಕ ಖಚಿತವಾಗಿದ್ದರೂ, ಹಲವರಿಂದ ಅಡ್ಡಗಾಲು ಇದೆ.

ರೇವಣ್ಣ ಪ್ರಾಬಲ್ಯ ಬಳಿಕ...

ಸುಮಾರು 15 ವರ್ಷಗಳ ಕಾಲ ಕೆಎಂಎಫ್‌ ಅಧ್ಯಕ್ಷರಾಗಿದ್ದ ಎಚ್‌.ಡಿ.ರೇವಣ್ಣ ಪಾರುಪತ್ಯವನ್ನು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಂತ್ಯಗೊಳಿಸಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಮತ್ತೊಮ್ಮೆ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಎಚ್‌.ಡಿ.ರೇವಣ್ಣ ಪ್ರಯತ್ನ ಸಫಲವಾಗುವ ಸಾಧ್ಯತೆ ಕಡಿಮೆ ಇದ್ದು, ಡಿ.ಕೆ.ಸುರೇಶ್‌ ಕಪಿಪುಷ್ಠಿಗೆ ಕೆಎಂಎಫ್‌ ಧಕ್ಕುವ ಸಾಧ್ಯತೆ ಇದೆ.

ಡಿ.ಕೆ.ಸುರೇಶ್‌ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಬಮೂಲ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಇದೀಗ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಇನ್ನೀಗ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಒಂದೇ ಮೆಟ್ಟಿಲು ಬಾಕಿ ಉಳಿದಿದೆ. ಡಿ.ಕೆ ಸುರೇಶ್ ಆಯ್ಕೆ ಬಹುತೇಕ ಖಚಿತವಾಗಿದ್ದು, ಬಮುಲ್‌ನಿಂದ ಕೆಎಂಎಫ್‌ಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆಯಿದೆ. ಇದು ಅವರನ್ನು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗಿ ಆಯ್ಕೆ ಮಾಡಲು ದಾರಿ ಮಾಡಿಕೊಡುತ್ತದೆ.

ಲೋಕಸಭೆ ಚುನಾವಣೆ ಪರಾಭವ ಬಳಿಕ ಹೊಸ ಲೆಕ್ಕಾಚಾರ

ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ವಿಧಾನಪರಿಷತ್‌ ಸದಸ್ಯರಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಅಂತಹ ಪ್ರಯತ್ನಗಳು ಮಾಡರಲಿಲ್ಲ ಎನ್ನಲಾಗಿದೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಸಹ ಹೇಳಲಾಗಿತ್ತು. ಆದರೆ, ಅವರ ರಾಜಕೀಯ ಲೆಕ್ಕಾಚಾರಗಳೇ ಬೇರೆಯಾಗಿದ್ದವು. ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾದರೆ ರೈತರೊಂದಿಗೆ ನಿಕಟ ಸಂಪರ್ಕ ಹೊಂದಬಹುದು. ಮುಖ್ಯವಾಗಿ ಹಳೆ ಮೈಸೂರು ಭಾಗದಲ್ಲಿ ರಾಜಕೀಯವಾಗಿ ಸಂಘಟನಾ ಶಕ್ತಿ ಸಿಗಲಿದೆ. ಜತೆಗೆ ಕೃಷಿಕರು, ರೈತರೊಂದಿಗೆ ಒಡನಾಡಬಹುದು ಎಂಬ ಕಾರಣಕ್ಕೆ ಡಿ.ಕೆ.ಸುರೇಶ್ ಬಮೂಲ್‌ ಅಧ್ಯಕ್ಷ ಸ್ಥಾನಕ್ಕೆ ಒಲವು ತೋರಿದರು. ಇದು ಕೆಎಂಎಫ್‌ನಲ್ಲಿಯೂ ಬಣ ರಾಜಕೀಯಕ್ಕೆ ಬೀಜ ಬಿದ್ದಂತಾಗಿದೆ.

ಮತದಾನ ನಡೆದರೆ 20 ಮಂದಿ ಮತದಾರರು

ಕೆಎಂಎಫ್‌ನ ಅಧ್ಯಕ್ಷ ಗಾದಿಗೆ ಮಾಜಿ ಸಂಸದ ಡಿ.ಕೆ.ಸುರೇಶ್‌ ಆಯ್ಕೆ ಬಹುತೇಕ ಖಚಿತ ಎಂದೇ ಹೇಳಲಾಗುತ್ತದೆ. ಆದರೆ ಕಾಂಗ್ರೆಸ್‌ನಲ್ಲಿಯೇ ಒಳಬೇಗುದಿ ಇದ್ದು, ರಾಜಕೀಯ ಮೇಲಾಟಗಳು ನಡೆಯುತ್ತಿವೆ. ಶಾಸಕ ನಂಜೇಗೌಡ, ಭೀಮಾನಾಯ್ಕ್‌ ಸಹ ಕೆಎಂಎಫ್‌ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಈ ನಡುವೆ, ಬೆಳಗಾವಿ ಹಾಲು ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಹ ಮತ್ತೊಮ್ಮೆ ಕೆಎಂಎಫ್‌ ಅಧ್ಯಕ್ಷರಾಗಲು ಆಸಕ್ತಿ ಹೊಂದಿದ್ದಾರೆ. ಕೆಎಂಎಫ್‌ ಅಧ್ಯಕ್ಷ ಗಾದಿಗೆ ಅವಿರೋಧ ಆಯ್ಕೆ ನಡೆದರೆ ಯಾವುದೇ ಸಮಸ್ಯೆಯಾಗುವುದಿಲ್ಲ.

ಒಂದು ವೇಳೆ ಕೆಎಂಎಫ್‌ ಅಧ್ಯಕ್ಷ ಗಾದಿಗೆ ತೀವ್ರ ಪೈಪೋಟಿ ಆರಂಭವಾದರೆ, ಚುನಾವಣೆ ನಡೆಸಬೇಕಾಗುತ್ತದೆ. ಚುನಾವಣೆ ನಡೆದರೆ 20 ಮಂದಿ ಮತದಾರರು ಮತ ಚಲಾಯಿಸಬೇಕಾಗುತ್ತದೆ. ಒಟ್ಟು 16 ಹಾಲು ಒಕ್ಕೂಟಗಳಿಂದಲೂ ಕೆಎಂಎಫ್ ಪ್ರತಿನಿಧಿಸಲು ಇರುವ ನಿರ್ದೇಶಕರು, ಎನ್‌ಡಿಎಫ್‌, ಸಹಕಾರ ಇಲಾಖೆ ರಿಜಿಸ್ಟ್ರಾರ್, ಕೆಎಂಫ್ ವ್ಯವಸ್ಥಾಪಕ ನಿರ್ದೇಶಕ, ಪಶುಸಂಗೋಪನೆ ಅಧಿಕಾರಿಗಳು ಸೇರಿ ಒಟ್ಟು 20 ಮಂದಿ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಯ್ಕೆಗೆ ಮತ ಚಲಾಯಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಡಿ.ಕೆ. ಸುರೇಶ್‌ಗೆ ಭೀಮಾನಾಯ್ಕ್‌, ನಂಜೇಗೌಡ ಪೈಪೋಟಿ?

ಬಳ್ಳಾರಿ ಹಾಲು ಒಕ್ಕೂಟ, ಕೋಲಾರ ಹಾಲು ಒಕ್ಕೂಟ ಸೇರಿದಂತೆ ಇನ್ನು ಕೆಲ ಒಕ್ಕೂಟಗಳ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಬೇಕಿದೆ. ಖಾಲಿ ಇರುವ ಸ್ಥಾನಗಳ ಭರ್ತಿ ಬಳಿಕವೇ ಕೆಎಂಎಫ್‌ ಅಧ್ಯಕ್ಷರ ಗಾದಿಗೆ ಚುನಾವಣೆ ನಡೆಯಲಿದೆ. ಖಾಲಿ ಇರುವ ಒಕ್ಕೂಟಗಳ ಅಧ್ಯಕ್ಷ ಸ್ಥಾನಗಳ ಆಯ್ಕೆ ನಡೆಯದೆ ಕೆಎಂಎಫ್‌ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯುವುದಿಲ್ಲ. ಬಳ್ಳಾರಿ ಹಾಲು ಒಕ್ಕೂಟಕ್ಕೆ ಕಾಂಗ್ರೆಸ್‌ ಶಾಸಕ, ಕೆಎಂಎಫ್‌ನ ನಿಕಟಪೂರ್ವ ಅಧ್ಯಕ್ಷ ಭೀಮಾನಾಯ್ಕ್‌ ಒಲವು ಹೊಂದಿದ್ದರೆ, ಕೋಲಾರ ಹಾಲು ಒಕ್ಕೂಟಕ್ಕೆ ಇನ್ನೊಬ್ಬರು ಕಾಂಗ್ರೆಸ್‌ ಶಾಸಕ ಕೆ.ವೈ. ನಂಜೇಗೌಡ ಅವರು ಆಸಕ್ತಿ ಹೊಂದಿದ್ದಾರೆ. ಇವರಿಬ್ಬರು ಆಯ್ಕೆಯಾದರೆ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ. ಹೀಗಾಗಿ ಅವರಿಗೆ ಸ್ಥಾನ ಸಿಗದಂತೆ ಮಾಡಲು ರಾಜಕೀಯ ಲಾಬಿಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಖಾಲಿ ಇರುವ ಸ್ಥಾನಗಳ ಆಯ್ಕೆಗೂ ರಾಜಕೀಯ ನಡೆಯುತ್ತಿರುವ ಕಾರಣ ಸದ್ಯಕ್ಕೆ ಒಕ್ಕೂಟಗಳ ಅಧ್ಯಕ್ಷರ ಆಯ್ಕೆಯು ಸಹ ವಿಳಂಬವಾಗುವ ಸಾಧ್ಯತೆ ಇದೆ. ಇದು ತಡವಾದರೆ ಕೆಎಂಎಫ್‌ ಅಧ್ಯಕ್ಷರ ಚುನಾವಣೆಯು ಸಹ ವಿಳಂವಾಗಲಿದೆ. ಜುಲೈ ತಿಂಗಳಲ್ಲಿ ಕೆಎಂಎಫ್‌ ಅಧ್ಯಕ್ಷರ ಹುದ್ದೆಗೆ ಚುನಾವಣೆ ನಡೆಯುವ ನಿರೀಕ್ಷೆ ಇತ್ತು. ಆದರೆ, ಒಕ್ಕೂಟಗಳಿಗೆ ಚುನಾವಣೆ ನಡೆಯಬೇಕಿರುವ ಕಾರಣ ಕೆಎಂಎಫ್‌ ಅಧ್ಯಕ್ಷರ ಹುದ್ದೆಗೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇನ್ನು 3-4 ತಿಂಗಳ ಬಳಿಕವೇ ಕೆಎಂಎಫ್‌ ಅಧ್ಯಕ್ಷರ ಗಾದಿಗೆ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ.

ಹಾಸನದ ಮೇಲೂ ಹಿಡಿತ:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬ ನಡುವೆ ರಾಜಕೀಯ ವೈಷಮ್ಯ ಹೆಚ್ಚಾಗುತ್ತಿದೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಿಡಿತದಲ್ಲಿದ್ದ ಪ್ರದೇಶಗಳನ್ನೆಲ್ಲಾ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಪ್ರಯತ್ನಿಸುತ್ತಿದ್ದಾರೆ. ಇಡಿ ಹಾಸನದಲ್ಲಿ ಜೆಡಿಎಸ್‌ ಪ್ರಾಬಲ್ಯ ಇತ್ತು. ಇದೀಗ ಅದು ಜೆಡಿಎಸ್‌ ಕೈ ತಪ್ಪುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ ಗೆಲುವು ಸಾಧಿಸಿದ್ದರು. ಈಗ ಕಾಂಗ್ರೆಸ್‌ನ ಶ್ರೇಯಸ್‌ ಪಟೇಲ್‌ ಜಯಗಳಿಸಿದ್ದಾರೆ. ಈ ಮೂಲಕ ಹಾಸನದಲ್ಲಿಯೂ ಡಿ.ಕೆ.ಶಿವಕುಮಾರ್‌ ತನ್ನ ಪ್ರಾಬಲ್ಯ ಸಾಧಿಸಿದ್ದಾರೆ. ಹಾಸನದಲ್ಲಿ ಪ್ರಾಬಲ್ಯ ಸಾಧಿಸಿದ ಬಳಿಕ ಕೆಎಂಎಫ್‌ನಲ್ಲಿಯೂ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ರಾಜಕೀಯ ತಂತ್ರಗಾರಿಕೆ ಎಣೆದಿದ್ದಾರೆ ಎಂದು ತಿಳಿದುಬಂದಿದೆ

Read More
Next Story