ಒಳಮೀಸಲಾತಿ ಸಮೀಕ್ಷೆ| ಇನ್ನೆಷ್ಟು ಬಾರಿ ಮುಂದೂಡಿಕೆ? ಇಲಾಖೆಗಳ ನಡುವೆ ಏಕಿಲ್ಲ ಸಮನ್ವಯತೆ?
x

ಒಳಮೀಸಲಾತಿ ಸಮೀಕ್ಷೆ| ಇನ್ನೆಷ್ಟು ಬಾರಿ ಮುಂದೂಡಿಕೆ? ಇಲಾಖೆಗಳ ನಡುವೆ ಏಕಿಲ್ಲ ಸಮನ್ವಯತೆ?

ಗಣತಿದಾರರಿಗೆ ಸಮರ್ಪಕ ತರಬೇತಿಯೇ ಆಗಿಲ್ಲ. ಸಕಾಲಕ್ಕೆ ನೆರವು ಲಭ್ಯವಾಗುತ್ತಿಲ್ಲ. ಎಸ್‌ಸಿ ವರ್ಗದವರ ಮನೆಗಳ ಹುಡುಕಾಟವು ಕಷ್ಟಕರವಾಗುತ್ತಿದೆ.


ಪರಿಶಿಷ್ಟ ಜಾತಿಯಡಿ ಒಳ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ದತ್ತಾಂಶ ಸಂಗ್ರಹಕ್ಕೆ ನಿಗದಿಪಡಿಸಲಾದ ನ್ಯಾ. ಎಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗವು ಸಮೀಕ್ಷೆ ನಡೆಸುತ್ತಿದೆ. ಇದಕ್ಕಾಗಿ ಕಾಂಗ್ರೆಸ್‌ ಸರ್ಕಾರ ಸುಮಾರು 100 ಕೋಟಿ ರೂಪಾಯಿ ನಷ್ಟು ವೆಚ್ಚ ಮಾಡುತ್ತಿದೆ. ಸರ್ಕಾರ ಇಷ್ಟೊಂದು ಹಣ ವೆಚ್ಚ ಮಾಡುತ್ತಿದ್ದರೂ ಎಷ್ಟರ ಮಟ್ಟಿಗೆ ಸದುಪಯೋಗವಾಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಸಮೀಕ್ಷೆಗೆ ಹಲವು ಸಮಸ್ಯೆಗಳು ಎದುರಾಗುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ಬಂದಿಲ್ಲವಾಗಿದೆ. ಒಳಮೀಸಲಾತಿ ಸಮೀಕ್ಷೆಯು ನಿಖರವಾಗಿ ನಡೆಯುತ್ತಿಲ್ಲ ಎಂಬ ಆರೋಪದ ಮಾತುಗಳು ಕೇಳಿಬಂದಿವೆ. ಅಲ್ಲದೇ, ಹಲವು ತಾಂತ್ರಿಕ ಸಮಸ್ಯೆಗಳು ಸೇರಿದಂತೆ ನಾನಾ ರೀತಿಯ ತೊಡಕುಗಳು ಸಮೀಕ್ಷೆಗೆ ಎದುರಾಗಿವೆ ಎಂದು ಹೇಳಲಾಗಿದೆ.

ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಕೂಡ, ಈಗಾಗಲೇ ಆರು ಬಾರಿ ಸಮೀಕ್ಷೆಯನ್ನು ಮುಂದೂಡಲಾಗಿದೆ. ಇದರ ಮೂಲ ಕಾರಣಗಳನ್ನು ಪತ್ತೆ ಮಾಡಲು ಸರ್ಕಾರ ಇನ್ನೂ ಜಾಣಕುರುಡು ತೋರಿಸುತ್ತಿರುವುದು ಯಾಕೆ ಎಂಬುದೂ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರವನ್ನು ಗಣತಿದಾರರೇ ಪತ್ತೆ ಮಾಡಿ ಪಟ್ಟಿ ಮಾಡಿದ್ದಾರೆ.

ದ ಫೆಡರಲ್‌ ಕರ್ನಾಟಕಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಗಣತಿದಾರರಿಗೆ ಸಮರ್ಪಕ ತರಬೇತಿಯೇ ಆಗಿಲ್ಲ. ಸಕಾಲಕ್ಕೆ ನೆರವು ಲಭ್ಯವಾಗುತ್ತಿಲ್ಲ. ಪರಿಶಿಷ್ಟ ಜಾತಿಯವರ ಮನೆಗಳ ಹುಡುಕಾಟವು ಕಷ್ಟಕರವಾಗುತ್ತಿದೆ. ರೆಷನ್‌ ಕಾರ್ಡ್‌ ಇಲ್ಲದಿರುವವರು ಸಮೀಕ್ಷೆಯಿಂದ ದೂರ ಉಳಿಯುವಂತಾಗಿದೆ. ಇಲಾಖೆಗಳ ಸಹಕಾರ ಕೊರತೆ. ಹೀಗೆ ನಾನಾ ರೀತಿಯ ಸಮಸ್ಯೆಗಳು ಸಮೀಕ್ಷೆಯಲ್ಲಿ ತಲೆದೋರಿವೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗುತ್ತಿಲ್ಲ ಎಂದು ಹೇಳಲಾಗಿದೆ.

ಗಣತಿದಾರರಿಗೆ ಇರುವ ಸಮಸ್ಯೆಗಳು ಮತ್ತು ಇರುವ ಲೋಪದೋಷಗಳ ಬಗ್ಗೆ ಸರ್ಕಾರಕ್ಕೆ ನೀಡಲಾದ ಮಾಹಿತಿಯ ದಾಖಲೆಗಳು ʼದ ಫೆಡರಲ್‌ ಕರ್ನಾಟಕʼದ ಬಳಿ ಲಭ್ಯವಿದೆ.

ಒಳಮೀಸಲಾತಿ ಸಮೀಕ್ಷೆಗೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಸೂಕ್ತ ತರಬೇತಿಯೇ ಸಿಕ್ಕಿಲ್ಲ. ಸಮೀಕ್ಷೆ ಆರಂಭಕ್ಕೂ ಮುನ್ನ ಒಂದು ದಿನದ ತರಬೇತಿ ನಿಗದಿ ಮಾಡಲಾಗಿತ್ತು. ಆದರೆ ತರಾತುರಿಯಲ್ಲಿ ಅರ್ಧ ದಿನ ಮಾತ್ರ ತರಬೇತಿ ನೀಡಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗಣತಿದಾರರಿಗೆ ತರಬೇತಿ ನೀಡಬೇಕಾದ ತರಬೇತುದಾರರಿಗೆ ಗಣತಿ ತಂತ್ರಾಂಶವನ್ನು ಬಳಸುವುದು ಕಷ್ಟಕರವಾಗಿದೆ ಎನ್ನಲಾಗಿದೆ.

ಸಮೀಕ್ಷೆಗೆ ಕೇವಲ ಶಿಕ್ಷಕರನ್ನು ಮಾತ್ರ ನಿಯೋಜನೆ ಮಾಡಲಾಗಿದೆ. ಇದರಿಂದ ಶಿಕ್ಷಕರು ಎದುರಿಸುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡದವರು ಇಲ್ಲದಂತಾಗಿದೆ. ನುರಿತ ತಂತ್ರಜ್ಞರು, ತಾಂತ್ರಿಕ ಸಿಬ್ಬಂದಿಯನ್ನು ಗಣತಿದಾರರ ಸಹಾಯಕ್ಕೆ ನಿಯೋಜನೆ ಮಾಡಬೇಕಿತ್ತು. ಆದರೆ, ಉದ್ಯೋಗ ಖಾತ್ರಿ ಯೋಜನೆಯ ಎಂಐಎಸ್‌ ಸಮನ್ವಯಕಾರರನ್ನು ನಿಯೋಜಿಸಲಾಗಿದೆ. ಇವರು ಜಿಲ್ಲೆ ಮತ್ತು ತಾಲೂಕಿಗೆ ಒಬ್ಬರನ್ನು ನಿಯೋಜಿಸಲಾಗಿದೆ. ಇದರಿಂದ ಜಾತಿ ಹೆಸರು ದಾಖಲಿಸುವಾಗ ಒಂದು ಅಕ್ಷರ ಬದಲಾದರೂ ಜಾತಿ ಮತ್ತು ಅದರ ಕೋಡ್‌ ಬದಲಾಗುತ್ತಿದೆ. ಹೀಗಾಗಿ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡುವವರೇ ಇಲ್ಲದಂತಾಗಿದೆ.

ಬರೀ ಶಿಕ್ಷಕರ ನಿಯೋಜನೆ

ಪ್ರತಿ ಮತಗಟ್ಟೆಗೂ ಮತಗಟ್ಟೆ ಅಧಿಕಾರಿಗಳನ್ನು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಬೇಕಿತ್ತು. ಆದರೆ, ಗಣತಿಗೆ ಬರೀ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಅವರು ಪ್ರತಿ ಊರಿನಲ್ಲಿಯೂ ಸುಮಾರು 300 ರಿಂದ 400 ಮನೆಗಳನ್ನು ಹುಡುಕಿ ಗಣತಿ ಮಾಡುವುದು ಕಷ್ಟಕರವಾಗಿದೆ. ಅಲ್ಲದೇ, ಸಮಸ್ಯೆಗಳ ಬಗ್ಗೆ ಮಾಹಿತಿ ಹಂಚಿಕೆಕೊಳ್ಳಲು ರಾಜ್ಯಮಟ್ಟದಲ್ಲಿ ಸಹಾಯವಾಣಿ ಮಾದರಿಯ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಒಂದಷ್ಟು ದೂರುಗಳು ಬರುವುದನ್ನು ಬಿಟ್ಟರೆ ಉಳಿದ ಸಮಸ್ಯೆಗಳನ್ನು ಎಲ್ಲಿ ಹೇಳಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ . ಹೀಗಾಗಿ ಸಮೀಕ್ಷೆಯು ನಿರೀಕ್ಷಿತ ಪ್ರಮಾಣದಲ್ಲಿ ಫಲಪ್ರದವಾಗುತ್ತಿಲ್ಲ ಎಂದು ಮೂಲಗಳು ಹೇಳಿವೆ.

ಮೊಬೈಲ್‌ ಹ್ಯಾಂಗ್‌, ನೆಟ್‌ವರ್ಕ್‌ ಸಮಸ್ಯೆ

ಶಿಕ್ಷಕರು ತಮ್ಮದೇ ಮೊಬೈಲ್‌ ಬಳಸಿ ಗಣತಿ ಮಾಡಬೇಕು ಎಂದು ಸೂಚಿಸಲಾಗಿದೆ. ಇದರಿಂದ ಶಿಕ್ಷಕರು ತಮ್ಮಲ್ಲಿರುವ ಸಣ್ಣಪುಟ್ಟ ಮೊಬೈಲ್‌ ಬಳಸುತ್ತಿದ್ದಾರೆ. ಮೊಬೈಲ್‌ನ ಗೂಗಲ್‌ ಪ್ಲೆಸ್ಟೋರ್‌ನಿಂದ ಯಾವುದೇ ತಂತ್ರಾಂಶ ಡೌನ್‌ಲೌಡ್‌ ಮಾಡುವಂತಿಲ್ಲ. ಬದಲಾಗಿ ಸರ್ಕಾರ ಕಳುಹಿಸುವ ಲಿಂಕ್‌ ಬಳಸಿ ತಂತ್ರಾಂಶ ಬಳಸಿಕೊಂಡು ಗಣತಿ ಮಾಡಬೇಕು. ಆದರೆ ಈ ತಂತ್ರಾಂಶಕ್ಕೆ ಶಿಕ್ಷಕರಲ್ಲಿ ಸಣ್ಣಪುಟ್ಟ ಮೊಬೈಲ್‌ಗಳು ಹೊಂದಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಇನ್ನು, ಗಣತಿಗೆ ಆಧಾರ್‌ ಮತ್ತು ರೇಷನ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ. ಆದರೆ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಈ ಎರಡು ದಾಖಲೆಗಳು ಇಲ್ಲದವರು ಇದ್ದಾರೆ. ಅಂತಹವರು ಗಣತಿಯಿಂದ ದೂರ ಉಳಿಯುವಂತಾಗಿದೆ. ಆಧಾರ್‌ ಕಾರ್ಡ್‌ ಮತ್ತು ರೇಷನ್‌ ಕಾರ್ಡ್‌ ಇಲ್ಲದವರಿಗೆ ಪರ್ಯಾಯ ದಾಖಲೆಗಳನ್ನು ನೀಡುವ ಅವಕಾಶ ನೀಡಬೇಕಿತ್ತು. ಮತದಾರರ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ನೀಡಲು ಅವಕಾಶ ಕೊಡಬೇಕಾಗಿತ್ತು. ಇದು ಇಲ್ಲದಿರುವುದರಿಂದ ಗಣತಿಯಿಂದ ವಂಚಿತರಾಗುವಂತಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಹಕ್ಕಿಪಕ್ಕಿ, ಅಲೆಮಾರಿ ಸೇರಿದಂತೆ ಹಲವು ಸಮುದಾಯದಲ್ಲಿ ಈ ಸಮಸ್ಯೆಗಳು ಕಂಡು ಬಂದಿವೆ ಎಂದು ತಿಳಿದುಬಂದಿದೆ.

ಜಾಗೃತಿ ಮೂಡಿಸುವಲ್ಲಿ ವಿಫಲ; ಪ್ರಚಾರದ ಕೊರತೆ

ರಾಜ್ಯದ ಬಹುತೇಕ ಮಂದಿಯಲ್ಲಿ ಯಾವ ಜಾತಿ ದಾಖಲಿಸಬೇಕು, ಯಾವುದು ಸರಿ, ತಪ್ಪು ಎಂಬುದರ ಕುರಿತು ಅರಿವು ಇಲ್ಲ. ಸರ್ಕಾರ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಜಾತಿ ಸಮೀಕ್ಷೆ ನಡೆಸುವಾಗ ಅದಕ್ಕೆ ಸಾಕಾಷ್ಟು ಪೂರ್ವ ಸಿದ್ಧತೆ ನಡೆಸಬೇಕಿತ್ತು. ಗಣತಿ ಆರಂಭಿಸುವ ಒಂದು ತಿಂಗಳೇ ಮೊದಲೇ ಪ್ರಚಾರ ಕಾರ್ಯ ಪ್ರಾರಂಭಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಿತ್ತು. ಸಾಂಪ್ರಾದಾಯಿಕ ಪ್ರಚಾರ ಮಾರ್ಗಗಳಾದ ಡಂಗೂರ ಸಾರುವುದು, ಬೀದಿ ನಾಟಕ ಮಾಡಿಸುವುದು, ಕರ ಪತ್ರಗಳನ್ನು ಹಂಚುವುದು, ಬ್ಯಾನರ್‌ಗಳನ್ನು ಹಾಕಿಸುವ ಕೆಲಸ ಮಾಡಬೇಕಿತ್ತು. ಇದರ ಜತೆಗೆ ರೇಡಿಯೋ, ಟಿವಿ ಚಾನಲ್‌ಗಳಲ್ಲಿ ಮಾಹಿತಿ ನೀಡುವುದು, ಬಸ್‌ಗಳಲ್ಲಿ, ಆಟೋಗಳಲ್ಲಿ, ನಿಲ್ದಾಣಗಳಲ್ಲಿ ಫಲಕಗಳನ್ನು ಹಾಕುವುದು ಮತ್ತು ಧ್ವನಿ ವರ್ಧಕಗಳ ಮೂಲಕ ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿತ್ತು. ಆದರೆ, ಸರ್ಕಾರವು ಕೆಲವು ಆಯ್ದ ಪತ್ರಿಕೆಗಳು, ಟಿವಿ ಚಾನಲ್‌ಗಳಿಗೆ ಜಾಹಿರಾತುಗಳನ್ನು ನೀಡಿ ಕೈ ತೊಳೆದುಕೊಂಡಿದೆ. ಹೀಗಾಗಿ ಎಸ್‌ಸಿಯ ಕೆಲವು ಪ್ರಜ್ಞಾವಂತರು ಹೊರತು ಪಡಿಸಿದರೆಜಾತಿ ಗಣತಿ ಬಗ್ಗೆ ಮಾಹಿತಿಯೇ ಇಲ್ಲ ಎಂದು ಸಮೀಕ್ಷೆ ನಡೆಸುವವರಿಂದಲೇ ಬೇಸರ ವ್ಯಕ್ತವಾಗಿದೆ.

ಕೆಲವು ದಲಿತ ಸಂಘಟನೆಗಳು ಮಾತ್ರ ತಮ್ಮ ಸಮಾಜದ ಜನರ ಕಾಲೋನಿಗಳಿಗೆ ಗಣತಿದಾರರು ಬಂದಾಗ ಕರೆದೊಯ್ದು, ಜಾತಿಗಳನ್ನು ದಾಖಲಿಸುತ್ತಿದ್ದಾರೆ. ಸಂಘಟನೆ ಇಲ್ಲದೆ ಪರಿಶಿಷ್ಟರಲ್ಲಿಯೇ ತೀರಾ ಹಿಂದುಳಿದವರು, ಅಶಕ್ಷರು, ಅಸ್ಪೃರ್ಶರೇ ಎನಿಸಿಕೊಳ್ಳುತ್ತಿರುವ ಅನೇಕ ಅತಿ ಸಣ್ಣ ಜಾತಿಗಳು ಗಣತಿಯಿಂದಲೇ ದೂರ ಉಳಿದಂತಾಗಿದೆ. ಹೀಗಾಗಿ ಸರ್ಕಾರವು ಮೊದಲೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸದೆ ದಿಢೀರ್‌ ಜಾತಿ ಗಣತಿ ನಿರ್ಧರಿಸಿ ಶಿಕ್ಷಕರಿಗೆ ಒಂದೆರಡು ಗಂಟೆಗಳ ಕಾಲ ತರಬೇತಿ ನೀಡಿ ಸಮೀಕ್ಷೆ ಆರಂಭಿಸಿರುವುದರಿಂದ ಸಮಸ್ಯೆ ತೀವ್ರವಾಗಿದೆ ಎನ್ನಲಾಗಿದೆ.

ಇಲಾಖೆಗಳ ಸಹಕಾರ ಕೊರತೆ

ಸಮೀಕ್ಷೆಯು ಕೆಲವೊಂದು ಇಲಾಖೆಗಳ ನಡುವಿನ ಸಮನ್ವಯತೆಯಿಂದ ನಡೆಬೇಕಾಗಿದೆ. ಆದರೆ, ಇದು ಆ ರೀತಿಯಲ್ಲಿ ನಡೆಯುತ್ತಿಲ್ಲ. ಸರ್ಕಾರ ನಡೆಸುತ್ತಿರುವ ಸಮೀಕ್ಷೆ ಬರೀ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದಂತಾಗಿದೆ. ಇದಕ್ಕೆ ಸರ್ಕಾರದ ಇತರ ಯಾವುದೇ ಇಲಾಖೆಗಳ ಸಹಕಾರವಾಗಲಿ, ಸಹಾಯವಾಗಲಿ ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷಾ ಕಾರ್ಯ ಸಂಪೂರ್ಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಇಲಾಖೆ ಸಹಯೋಗದಲ್ಲಿ ನಡೆಯಬೇಕಿತ್ತು. ಆದರೆ, ಸದಸ್ಯ ಇದು ಶಿಕ್ಷಕರ ಸಮೂಹ ನಡೆಸುತ್ತಿರುವ ಸರ್ಕಾರದ ಕಾರ್ಯಕ್ರಮವಾಗಿದೆ ಎಂದು ಹೇಳಲಾಗಿದೆ.


Read More
Next Story