
Assembly Session Day-3 | ಅಸಂಸದೀಯ ಪದ ಬಳಕೆ | ಶಾಸಕರಿಗೆ ಸಿಎಂ ನೀತಿ ಪಾಠ
ಟೀಕೆ ಮಾಡುವುದು ಪ್ರತಿಪಕ್ಷಗಳ ಕರ್ತವ್ಯ. ಆದರೆ, ಯಾರೂ ಕೂಡ ತಪ್ಪು ಪದ ಬಳಕೆ ಮಾಡಬೇಡಿ, ರಚನಾತ್ಮಕ ಟೀಕೆ ಮಾಡಿ ಎಂದು ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಸದಸ್ಯರಲ್ಲಿ ಮನವಿ ಮಾಡಿದರು.
ವಿಧಾನಸಭೆ ಅಧಿವೇಶನದಲ್ಲಿ ರಸಗೊಬ್ಬರ ಚರ್ಚೆಯ ಮಧ್ಯೆ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಪರಸ್ಪರ ಬೈದಾಡಿಕೊಂಡು ಪ್ರಸಂಗ ಬುಧವಾರ ನಡೆಯಿತು.
ರಸಗೊಬ್ಬರ ವಿಷಯದ ಕುರಿತು ಕೃಷಿ ಸಚಿವ ಚಲುವನಾರಾಯಣ ಸ್ವಾಮಿ ಹಾಗೂ ಬಿಜೆಪಿ ಸದಸ್ಯ ಅಶ್ವತ್ಥ ನಾರಾಯಣ ಮಧ್ಯೆ ಚರ್ಚೆ ನಡೆಯುತ್ತಿದ್ದಾಗ ಕೆ.ಜೆ. ಜಾರ್ಜ್ ಮಧ್ಯೆ ಪ್ರವೇಶಿಸಿದರು. ಆಗ ಅಶ್ವತ್ಥನಾರಾಯಣ ಅವರು ಸ್ಮಾರ್ಟ್ ಮೀಟರ್ ಪ್ರಕರಣ ಪ್ರಸ್ತಾಪಿಸಿ ನೀವು ಹಿಟ್ ಅಂಡ್ ರನ್ ಮಾಡಿದ್ದೀರಿ ಎಂದು ಛೇಡಿಸಿದರು. ಮಾತಿಗೆ ಮಾತು ಬೆಳೆದು ಗದ್ದಲ ಏರ್ಪಟ್ಟಾಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಧ್ಯಪ್ರವೇಶಿಸಿ, ಭ್ರಷ್ಟಾಚಾರ ಪಿತಾಮಹ ಎಂದು ಜರಿದರು. ಇದಕ್ಕೆ ತಿರುಗೇಟು ನೀಡಿದ ಅಶ್ವತ್ಥನಾರಾಯಣ ಅವರು, ಭ್ರಷ್ಟಾಚಾರದ ಪಿತಾಮಹ ಯಾರೆಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ತಿವಿದರು.
ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಸಂಯಮ ಕಳೆದುಕೊಂಡು ಅಶ್ವತ್ಥನಾರಾಯಣ ವಿರುದ್ಧ ಮುಗಿಬಿದ್ದರು. ಇಡೀ ಸದನ ಗದ್ದಲದಲ್ಲಿ ಮುಳುಗಿತು. ಕೂಡಲೇ ಸ್ಪೀಕರ್ ಯು.ಟಿ.ಖಾದರ್ ಅವರು ಸದನವನ್ನು ಮುಂದೂಡಿಕೆ ಮಾಡಿದರು. ಆದರೂ, ಹತ್ತು ನಿಮಿಷಗಳ ಕಾಲ ಡಿ.ಕೆ. ಶಿವಕುಮಾರ್ ಹಾಗೂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಏಕವಚನದಲ್ಲೇ ಪರಸ್ಪರ ಬೈದಾಡಿಕೊಂಡರು. ನಂತರ ಸ್ಪೀಕರ್ ಅವರು ಎರಡೂ ಕಡೆಯವರನ್ನು ಸಮಾಧಾನಪಡಿಸಿ ಸಂಧಾನ ಮಾಡಿದರು.
ಶಾಸಕರಿಗೆ ಸಿಎಂ ನೀತಿಪಾಠ
ಅಧಿವೇಶನ ಮರು ಆರಂಭವಾದಾಗ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾನು ಒಂಬತ್ತು ಚುನಾವಣೆಯಲ್ಲಿ ಗೆದ್ದಿದ್ದೇನೆ. ಲೋಕಸಭಾ ಚುನಾವಣೆಗೆ ನಿಲ್ಲಬಾರದು ಎಂದು ತೀರ್ಮಾನಿಸಿದ್ದೇನೆ ಎಂದು ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸದನದಲ್ಲಿ ಅಸಂಸದೀಯ ಪದಗಳ ಬಳಕೆಗೆ ಬೇಸರ ವ್ಯಕ್ತಪಡಿಸಿದ ಅವರು, ಇನ್ನೊಬ್ಬರಿಗೆ ನೋವುಂಟು ಮಾಡದೇ ಮಾತಾಡುವುದನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಅಧಿವೇಶನದ ಗ್ಯಾಲರಿಯಲ್ಲಿ ವಿದ್ಯಾರ್ಥಿಗಳು ಬಂದು ಕೂತಿರುತ್ತಾರೆ. ನಮ್ಮ ನಡವಳಿಕೆ ಗಮನಿಸುತ್ತಾರೆ. ರಾಜ್ಯ ಸರ್ಕಾರದ ಆಡಳಿತವನ್ನು ಟೀಕಿಸಿ, ಅದಕ್ಕೆ ಉತ್ತರ ಕೊಡಲು ನಾನು ಸೇರಿ ಎಲ್ಲ ಸಚಿವರು ಸಿದ್ಧರಿರುತ್ತೇವೆ. ಆದರೆ, ಪದಪ್ರಯೋಗ ವೇಳೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.
ಟೀಕೆ ಮಾಡುವುದು ಪ್ರತಿಪಕ್ಷಗಳ ಕರ್ತವ್ಯ. ಆದರೆ, ಯಾರೂ ಕೂಡ ತಪ್ಪು ಪದ ಬಳಕೆ ಮಾಡಬೇಡಿ, ರಚನಾತ್ಮಕ ಟೀಕೆ ಮಾಡಿ ಎಂದು ಸದಸ್ಯರಿಗೆ ಸಿಎಂ ನೀತಿ ಪಾಠ ಹೇಳಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ಸ್ವಾಭಿಮಾನ, ಆತ್ಮಗೌರವಕ್ಕೆ ಧಕ್ಕೆ ಆದಾಗ ಯಾರೂ ಸಹಿಸಲ್ಲ. ಜಾರ್ಜ್ ಅವರ ಕೈ ಕೆಳಗೆ ನಾನು ಕೆಲಸ ಮಾಡಿದ್ದೇವೆ. ನನಗೆ ಅವರು ನಾಯಕರಿದ್ದಂತೆ, ಅವರಿಗೆ ಅವಮಾನವಾದರೆ ನಾನು ಸಹಿಸಲ್ಲ, ಅವಮಾನ ನೋಡಿಕೊಂಡು ಇದ್ದರೆ ನನ್ನಂತಹ ನಾಲಾಯಕ್ ಯಾರೂ ಇರಲ್ಲ. ನನ್ನ ಭಾಷೆ, ನನ್ನ ವರ್ತನೆ ತಪ್ಪಿರಬಹುದು. ನಾವು ತಪ್ಪು ಮಾಡಿದರೆ ನಮ್ಮನ್ನು ಅಮಾನತು ಮಾಡಿ, ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು.
ಪ್ರತಿಪಕ್ಷ ನಾಯಕ ಅಶೋಕ್ ಮಾತನಾಡಿ, ಕರ್ನಾಟಕದ ವಿಧಾನಸಭೆಗೆ ತನ್ನದೇ ಆದ ಸ್ಥಾನಮಾನವಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಲು ಆಗುವುದೇ ಇಲ್ಲ. ಇಲ್ಲಿ ವೈಯಕ್ತಿಕವಾಗಿ ಟೀಕೆ ಮಾಡುವುದು ಬೇಡ, ನಾವು ವಿರೋಧ ಪಕ್ಷದವರು, ಟೀಕೆ ಮಾಡಲು ನಮ್ಮನ್ನು ಕೂರಿಸಿದ್ದಾರೆ. ಸರ್ಕಾರದ ತಪ್ಪುಗಳನ್ನು ಹೇಳಲೇಬೇಕು. ಹೇಳುವ ರೀತಿ ನೀತಿ, ಭಾಷೆಯ ತಿಳಿದು ಮಾತನಾಡಬೇಕು. ಜತೆಗೆ ಸರ್ಕಾರವೂ ಸಂಯಮದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
Live Updates
- 13 Aug 2025 4:36 PM IST
ಡಿ.ಕೆ. ಶಿವಕುಮಾರ್ ಹಾಗೂ ಅಶ್ವಥ್ ನಾರಾಯಣ್ ವಾಕ್ಸಮರ, ಸದನ ಮುಂದೂಡಿಕೆ
ಅಧಿವೇಶನದಲ್ಲಿ ರಸಗೊಬ್ಬರ ಹಂಚಿಕೆ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಅವರ ನಡುವೆ ತೀವ್ರ ವಾಗ್ವಾದ ನಡೆದ ಕಾರಣ ಸಭಾಧ್ಯಕ್ಷರು ಕಲಾಪವನ್ನು ಐದು ನಿಮಿಷ ಮುಂದೂಡಿದರು.
- 13 Aug 2025 4:30 PM IST
ಸದನದಲ್ಲಿ ರಸಗೊಬ್ಬರ ಗದ್ದಲ
ರಾಜ್ಯದಲ್ಲಿ ಅವಧಿಗೂ ಮುನ್ನವೇ ಮುಂಗಾರು ಆರಂಭವಾಗಿದೆ. ಆದರೆ ರಾಜ್ಯ ಸರ್ಕಾರ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಇರುವುದರಿಂದ ರಸಗೊಬ್ಬರ ಪೂರೈಸುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷಗಳ ಶಾಸಕರು ವಾಗ್ದಾಳಿ ನಡೆಸಿದರು.
ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಕೆ.ಜೆ. ಜಾರ್ಜ್ ಹಾಗೂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ನಡುವೆ ಮಾತಿನ ಚಕಮಕಿ ನಡೆಯಿತು.
- 13 Aug 2025 4:05 PM IST
ಕಳಪೆ ಬೀಜ ಮಾರಾಟಗಾರ ವಿರುದ್ಧ ಕ್ರಮಕ್ಕೆ ಆಗ್ರಹ
ರಾಜ್ಯದಲ್ಲಿ ರೈತರಿಗೆ ಕಳಪೆ ಬೀಜ ಮತ್ತು ಅವಧಿ ಮೀರಿದ ರಸಗೊಬ್ಬರ ಪೂರೈಕೆ ಮಾಡುತ್ತಿದ್ದು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಮಾರುಕಟ್ಟೆಯಲ್ಲಿ ಕಳಪೆ ಬೀಜ ಮತ್ತು ಅವಧಿ ಮೀರಿದ ರಸಗೊಬ್ಬರ ಮಾರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ತಿಳಿಸಿದರು.
- 13 Aug 2025 3:43 PM IST
ತುಂಗಭದ್ರಾದಿಂದ ಎರಡನೇ ಬೆಳೆಗೆ ನೀರು ಹರಿಸುವಂತೆ ಆಗ್ರಹ
ತುಂಗಭದ್ರಾ ಜಲಾಶಯದ ಮೂಲಕ ರೈತರಿಗೆ ಎರಡನೇ ಬೆಳೆಗೆ ನೀರು ಬಿಡಬೇಕು ಎಂದು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಆಗ್ರಹಿಸಿದರು.
- 13 Aug 2025 3:31 PM IST
ಇ-ಖಾತೆ ಇಲ್ಲದಿದ್ದರೆ ಆಸ್ತಿ ನೋಂದಣಿ ಇಲ್ಲ
ಕಾವೇರಿ ತಂತ್ರಾಂಶದ ಮೂಲಕ ಪಡೆದ ಇ-ಖಾತೆ ಇದ್ದರೆ ಮಾತ್ರ ಆಸ್ತಿಗಳನ್ನು ನೋಂದಣಿ ಮಾಡಲಾಗುವುದು. ಇದರಿಂದ ಅವ್ಯವಹಾರಕ್ಕೆ ಕಡಿವಾಣ ಹಾಕಲಾವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ಈ ಮೊದಲು ಅನಧೀಕೃತ ದಾಖಲೆಗಳನ್ನು ನೀಡಿ ಆಸ್ತಿ ನೋಂದಣಿ ಮಾಡಲಾಗುತ್ತಿತ್ತು ಎಂದು ಅಧಿವೇಶನದಲ್ಲಿ ಹೇಳಿದರು.
- 13 Aug 2025 1:39 PM IST
ದಾನಪಡೆದ ಜಮೀನು ಹಾಗೂ ಸರ್ಕಾರಿ ಜಮೀನಿನಲ್ಲಿನ ಶಾಲೆಗಳಿಗೆ ಖಾತೆ ಮಾಡಿಸಿಕೊಳ್ಳಲು ಸೂಚನೆ
ರಾಜ್ಯದ ವಿವಿದೆಡೆ ದಾನ ಪಡೆದ ಜಮೀನು ಹಾಗೂ ಸರ್ಕಾರಿ ಜಮೀನಿನಲ್ಲಿರುವ ಶಾಲೆಗಳಿಗೆ ಶೀಘ್ರವೇ ಖಾತೆ ಮಾಡಿಸಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗುವುದು ಎಂದು ಸದನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
- 13 Aug 2025 1:06 PM IST
ಆಸ್ತಿ ನೋಂದಣಿಗೆ ಆಧಾರ್ ಕಡ್ಡಾಯ, ವಂಚಕರಿಗೆ ಮೂಗುದಾರ
ನಕಲಿ ದಾಖಲೆಗಳನ್ನು ನೀಡಿ ಆಸ್ತಿಯನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಆಸ್ತಿ ನೋಂದಣಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಧಿವೇಶನದಲ್ಲಿ ತಿಳಿಸಿದರು.
- 13 Aug 2025 12:55 PM IST
ಬೆಂಗಳೂರು ನಗರದಲ್ಲಿ ಸರ್ಕಾರಿ ಜಮೀನ ಸಂರಕ್ಷಿಸುವಂತೆ ಆಗ್ರಹ
ಬೆಂಗಳೂರು ನಗರದಲ್ಲಿನ ಕೆರೆ, ರಾಜಕಾಲುವೆ, ಉದ್ಯಾನವನ ಹಾಗೂ ಖರಾಬು ಜಮೀನುಗಳು ಸೇರಿದಂತೆ ಸರ್ಕಾರಿ ಜಮೀನನ್ನು ಸಂರಕ್ಷಣೆ ಮಾಡಬೇಕು ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಆಗ್ರಹಿಸಿದರು.