I never asked for ministerial status: Mahesh Joshi clarifies
x

ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮಹೇಶ್‌ ಜೋಶಿ. 

ನಾನು ಸಚಿವ ಸ್ಥಾನಮಾನ ಕೇಳಿರಲಿಲ್ಲ: ಸರ್ಕಾರದ ಕ್ರಮಕ್ಕೆ ಮಹೇಶ್‌ ಜೋಶಿ ಸ್ಪಷ್ಟನೆ

ಕನ್ನಡ ಕಾರ್ಯವನ್ನು ನಿರ್ವಹಿಸಲು ಅನುಕೂಲವಾಗುವಂತೆ ಶಿಷ್ಟಾಚಾರ ಪಾಲನೆಯಲ್ಲಿ ವಿನಾಯಿತಿ ನೀಡುವಂತೆ ಕೋರಿದ್ದೆನೆ ಹೊರತು ಸಚಿವ ಸ್ಥಾನಮಾನ ಕೇಳಿರಲಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಸ್ಪಷ್ಟನೆ ನೀಡಿದ್ದಾರೆ.


ರಾಜ್ಯ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್‌ ಮಹತ್ವ ಪರಿಗಣಿಸಿ ರಾಜ್ಯ ಸಚಿವ ಸ್ಥಾನಮಾನ ನೀಡಿತ್ತೇ ಹೊರತು ಅದಕ್ಕಾಗಿ ನಾನು ವೈಯಕ್ತಿಕವಾಗಿ ಬೇಡಿಕೆ ಇಟ್ಟಿರಲಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಹೇಳಿದ್ದಾರೆ.

ರಾಜ್ಯ ಸಚಿವ ದರ್ಜೆ ಸ್ಥಾನಮಾನ ಹಿಂಪಡೆದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ಅಧ್ಯಕ್ಷರಿಗೆ ‌ರಾಜ್ಯ ಸಚಿವ ಸ್ಥಾನಮಾನ ನೀಡುವ ಮೂಲಕ ಗೌರವ ಸಲ್ಲಿಸಿತ್ತು. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು, ಸರ್ಕಾರ ಸಚಿವ ಸ್ಥಾನಮಾನ ಹಿಂಪಡೆಯುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದ್ದಾರೆ.

ಕಸಾಪ ಅಧ್ಯಕ್ಷರಿಗೆ ನೀಡಿದ್ದ ರಾಜ್ಯ ಸಚಿವ ಸಂಪುಟ ಸ್ಥಾನಮಾನವನ್ನು ಸರ್ಕಾರ ಶನಿವಾರ ಹಿಂಪಡೆದಿತ್ತು. ಅದಾದ ಬಳಿಕ ಪ್ರಗತಿಪರ ಸಾಹಿತಿಗಳು, ಚಿಂತಕರು ಹಾಗೂ ಮಂಡ್ಯ ಭಾಗದ ಸಾಹಿತ್ಯಾಭಿಮಾನಿಗಳು ಸಂಭ್ರಮಿಸಿದ್ದರು.

ಸಿಎಂಗೆ ಪತ್ರ ಬರೆದ ಜೋಶಿ

ಸಚಿವ ಸ್ಥಾನಮಾನ ಹಿಂಪಡೆದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಅವರು ಪತ್ರ ಬರೆದಿದ್ದು, ಸಚಿವ ಸ್ಥಾನಮಾನವನ್ನು ನಾನು ಕೇಳಿರಲಿಲ್ಲ. ಕನ್ನಡ, ಕನ್ನಡಿಗ, ಕರ್ನಾಟಕದ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಶಿಷ್ಟಾಚಾರ ಪಾಲನೆಯಲ್ಲಿ ವಿನಾಯಿತಿ ನೀಡುವಂತೆ ಮಾತ್ರ ಕೋರಿದ್ದೆ. ಆದರೆ, ಈ ಹಿಂದಿನ ಸರ್ಕಾರ ರಾಜ್ಯ ಸಚಿವ ದರ್ಜೆ ಸ್ಥಾನಮಾನ ನೀಡಿತ್ತು. ನಾನು ಆ ಗೌರವಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದ್ದಾರೆ.

ಮಂಡ್ಯದಲ್ಲಿ ಕಬಾಬ್‌ ಹಂಚಿ ಸಂಭ್ರಮ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್‌ ಜೋಶಿ ಅವರಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನಮಾನ ಹಾಗೂ ವಿಶೇಷ ಸೌಲಭ್ಯವನ್ನು ವಾಪಸ್‌ ಪಡೆದ ಸರ್ಕಾರದ ನಿರ್ಧಾರವನ್ನು ಮಂಡ್ಯ ಬಾಡೂಟ ಬಳಗದವರು ಸ್ವಾಗತಿಸಿದ್ದು, ಚಿಕನ್‌ ಕಬಾಬ್‌ ಹಂಚಿ ಸಂಭ್ರಮಾಚರಣೆ ನಡೆಸಿದ್ದಾರೆ.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಮುಖ್ಯಸ್ಥರಾಗಿ ಕನ್ನಡಪರ ಕೆಲಸ ಮಾಡುವ ಬದಲು ಬೈಲಾ ತಿದ್ದುಪಡಿ ಮಾಡುವ ಮೂಲಕ ಮಹೇಶ್‌ ಜೋಶಿ ಅವರು ಸರ್ವಾಧಿಕಾರಿಯಾಗಲು ಹೊರಟ್ಟಿದ್ದರು ಎಂದು ಬಾಡೂಟ ಬಳಗದ ಎಂ.ಬಿ. ನಾಗಣ್ಣಗೌಡ ಕಿಡಿಕಾರಿದ್ದಾರೆ.

"ಮಹೇಶ್‌ ಜೋಶಿ ವಿರುದ್ದ ಮಂಡ್ಯದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಸಚಿವ ಸ್ಥಾನಮಾನ ವಾಪಸ್‌ ಪಡೆದಿದೆ. ಹಾಗಾಗಿ ಬಳಗದ ಸದಸ್ಯರೆಲ್ಲರೂ ಸೇರಿ ಚಿಕನ್‌ ಕಬಾಬ್‌ ಹಂಚಿದ್ದೇವೆ. ಮುಂದಿನ ದಿನಗಳಲ್ಲಾದರೂ ಜೋಶಿ ಅವರು ಕನ್ನಡ ಕೆಲಸಗಳನ್ನು ಮಾಡಿಕೊಂಡು ಹೋಗಬೇಕು." ಎಂದು ಬಾಡೂಟ ಬಳಗದ ಮುಖಂಡ ತಿಮ್ಮೇಗೌಡ ಸಲಹೆ ನೀಡಿದ್ದಾರೆ.

Read More
Next Story