ಮೋದಿಗೆ, ಸಿ ಟಿ ರವಿ ಕಪಾಳಕ್ಕೆ ಹೊಡೆಯಿರಿ ಎಂದು‌ ನಾನು ಹೇಳಿಲ್ಲ: ಶಿವರಾಜ್ ತಂಗಡಗಿ ಸ್ಪಷ್ಟನೆ
x

ಮೋದಿಗೆ, ಸಿ ಟಿ ರವಿ ಕಪಾಳಕ್ಕೆ ಹೊಡೆಯಿರಿ ಎಂದು‌ ನಾನು ಹೇಳಿಲ್ಲ: ಶಿವರಾಜ್ ತಂಗಡಗಿ ಸ್ಪಷ್ಟನೆ

"ಸಿ.ಟಿ ರವಿ ಅದೇನೋ ಹೇಳಿದ್ದಾರೆ. ನಾನು ಅವರ ಹಾಗೆ ಕೇಳಲ್ಲ, ಹೇಳಲ್ಲ. ನಾನು ಯಾರಿಗೆ ಹುಟ್ಟಿದ್ದೇನೆ ಎಂಬ ಬಗ್ಗೆ ತಿಳಿಯಬೇಕಾ? ದಿನಾಂಕ ಫಿಕ್ಸ್ ಮಾಡಿ, ಬಿಜೆಪಿ ಕಚೇರಿಗೆ ನನ್ನ ತಾಯಿಯನ್ನು ಕರೆದುಕೊಂಡು ಬರುತ್ತೇನೆ" ಎಂದು ಸಿ. ಟಿ ರವಿಗೆ ಕಟು ಶಬ್ದಗಳಲ್ಲಿ ಸವಾಲು ಹಾಕಿದರು.


ಬಿಜೆಪಿಯವರ ಕಪಾಳಕ್ಕೆ ಹೊಡೆಯಿರಿ, ಮೋದಿಗೆ ಹೊಡಿಯಿರಿ, ಸಿ.ಟಿ ರವಿಗೆ ಹೊಡೆಯಿರಿ ಎಂದು ನಾನು ಹೇಳಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ.

ಮೋದಿ ಮೋದಿ ಘೋಷಣೆ ಕೂಗುವ ಯುವಕರು, ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು ಎಂದು ತಂಗಡಗಿ ಹೇಳಿಕೆ ನೀಡಿದ್ದರು. ಇದಕ್ಕೆ ಸೋಮವಾರ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಸಿಟಿ ರವಿ ಅವರು ಸಂಸ್ಕೃತಿಯೇ ಗೊತ್ತಿಲ್ಲದವರಿಗೆ ಕನ್ನಡ ಸಂಸ್ಕೃತಿ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ ಎಂದಿದ್ದರು.

ʼʼಸಚಿವರ ಹೇಳಿಕೆ ಇದು ಕನ್ನಡ ಸಂಸ್ಕೃತಿ ಇಲಾಖೆಗೆ ಮಾಡಿದ ಅಪಚಾರ. ಅವರ ಹೇಳಿಕೆಗೆ ಪ್ರತಿಯಾಗಿ, ‘ಬಾರಪ್ಪ ನಿಮ್ಮಪ್ಪನಿಗೆ ಹುಟ್ಟಿದ್ದರೆ ಹೊಡಿ’ ಎಂದು ಹೇಳಬೇಕು ಅಂದುಕೊಂಡಿದ್ದೆ. ಆದರೆ, ತಂಗಡಗಿ ಮಟ್ಟಕ್ಕೆ ನಾವು ಇಳಿದು ಮಾತನಾಡಲು ಹೋಗಲ್ಲ. ಇಂಥವರನ್ನು ಸಂಪುಟದಲ್ಲಿ ಇಟ್ಟುಕೊಳ್ಳಬಾರದುʼʼ ಎಂದು ಸಿಟಿ ರವಿ ಆಗ್ರಹಿಸಿದ್ದರು.

ಈ ಬಗ್ಗೆ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಂಗಡಗಿ ಅವರು, ʼʼಪ್ರಧಾನಿ ನರೇಂದ್ರ ಮೋದಿ ಕೊಟ್ಟ ಭರವಸೆಗಳ ಬಗ್ಗೆ ನಾನು ಉಲ್ಲೇಖ ಮಾಡಿ ನಾನು ಹೇಳಿಕೆ ನೀಡಿದ್ದೇನೆʼʼ ಎಂದರು.

''ಈ ದೇಶದಲ್ಲಿ ಎಷ್ಟೊಂದು ಸುಳ್ಳು ಹೇಳಿಕೊಂಡು ಬಂದಿದ್ದೀರಿ. 2014ರ ನರೇಂದ್ರ ಮೋದಿಯವರ ಚುನಾವಣಾ ಭಾಷಣವನ್ನು ಕೇಳಿದರೆ ಬಿಜೆಪಿಯವರೇ ಮತ ಚಲಾಯಿಸುವುದಿಲ್ಲ. 2 ಕೋಟಿ ಉದ್ಯೋಗ ಕೊಡ್ತೀನಿ ಎಂದು ಭಾಷಣ ಮಾಡಿದ್ರಿ, ಕೊಟ್ಟಿದ್ದೀರಾ?. ಮಳೆಯಿಂದ, ಬರದಿಂದ ರಾಜ್ಯದ ಜನ ತತ್ತರಿಸಿದ್ದಾರೆ. ಚುನಾವಣೆ ವೇಳೆ ಕೆಲಸ ಮಾಡಿದ್ದೀರಿ ಎಂದು ಹೇಳುವ ಧೈರ್ಯ ಇಲ್ಲ. ಅದಕ್ಕಾಗಿ ದಾರಿ ತಪ್ಪಿಸುತ್ತಿದ್ದೀರಿ. ಜನರನ್ನು ಧರ್ಮದ ಹೆಸರಿನಲ್ಲಿ, ಭಾವನೆ ಹೆಸರಿನಲ್ಲಿ ದಾರಿ ತಪ್ಪಿಸಿದ್ದೀರಿ ಎಂದು ಕಳಕಳಿಯ ಮಾತನಾಡಿದ್ದೇನೆ" ಎಂದು ಹೇಳಿದರು.

ʼʼಚಾಕು ಚೂರಿ ಹಿಡಿದುಕೊಂಡು ಓಡಾಡಿದ್ದೀರಿ. ಆಯುಧ ಹಿಡಿದುಕೊಂಡು ಬರುತ್ತೀರಿ. ಸತ್ಯ ಹೇಳಿದ್ರೆ ಎಲ್ಲಿ ಬೇಕಾದ್ರು ಉರಿ ಬೀಳುತ್ತದೆ. ಮೆಣಸಿನ ಕಾಯಿ ಇಡ್ಕೊಂಡ ಹಾಗೆ ಆಗುತ್ತಾ?. ಕಾಂಗ್ರೆಸ್ ಪಕ್ಷದ ನಾಯಕನಾಗಿ ನಾನು ನಿಮ್ಮನ್ನು ಹಾಡಿ ಹೊಗಳಬೇಕಾ?. 2 ಕೋಟಿ ಉದ್ಯೋಗ ನೀಡಿದ್ರೆ ತೋರಿಸಿ. ನಾನೂ ನಿಮಗೆ ಜೈ ಅಂತೀನಿ, ನಾನೂ ಕೇಳಿದ್ರಲ್ಲಿ ತಪ್ಪೇನಿಲ್ಲ. ಪಾಠ ಕಲಿಸುತ್ತೇನೆ. ಸುಳ್ಳು ಮತ್ತು ಸತ್ಯದ ನಡುವಿನ ಯುದ್ಧ ಇದುʼʼ ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದರು.

ʼʼಅನುರಾಗ್ ಠಾಕೂರ್ ರೈತರಿಗೆ ಗುಂಡು ಹೊಡೆಯಿರಿ ಎಂದು ಹೇಳಿದ್ರು. ಯಾರಪ್ಪಗೆ ಹುಟ್ಟಿದ್ದು ಎಂದು ಪ್ರಶ್ನಿಸುವ ಇವರು ಸಂಸ್ಕಾರವಂತರಾ?. ಸಿದ್ದರಾಮಯ್ಯ ಬಗ್ಗೆ, ರಾಹುಲ್‌ ಗಾಂಧಿ ಬಗ್ಗೆ, ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಏನೇನು ಹೇಳಿಕೆ ಕೊಟ್ಟಿದ್ದೀರಿ?. ಇನ್ನೊಮ್ಮೆ ನನ್ನ ಭಾಷಣವನ್ನು ಸರಿಯಾಗಿ ಕೇಳಿ, ಉತ್ತರ ಕೊಡಿʼʼ ಎಂದು ಶಿವರಾಜ್ ತಂಗಡಗಿ ತಿಳಿಸಿದರು.

ʼʼಉತ್ತರ ಕರ್ನಾಟಕದವರಿಗೆ ಪುಸ್ತಕದ ಭಾಷೆ ಮಾತನಾಡಲು ಬರಲ್ಲ. ಐದು ಮಂದಿ ಸಹಾಯ ಮಾಡದಿದ್ರೆ ನೀವು ದಕ್ಷಿಣ ಭಾರತದಲ್ಲಿ ಎಲ್ಲಿ ಅಧಿಕಾರಕ್ಕೆ ಬರುತಿದ್ರಿ. ನಿಮ್ಮ ಸರ್ಕಾರ ಉಳಿಸಲಿಕ್ಕೆ ನಮ್ಮನ್ನು ಅನರ್ಹ ಮಾಡಿದ್ರಿ. ನಿಮಗೆ ಪೂರ್ಣ ಪ್ರಮಾಣದ ಬಹುಮತ ಎಲ್ಲಿ, ಯಾವಾಗ ಬಂದಿದೆ?. ಈ ರಾಜ್ಯದ ಮಾನ ಹರಾಜು ಹಾಕಿದ್ದೀರಿʼʼ ಎಂದು ಆರೋಪಿಸಿದರು.

ʼʼಈಶ್ವರಪ್ಪ ಯೋಗ್ಯರು ಇರೋ ಕಾರಣ ಟಿಕೆಟ್ ಕೊಟ್ಟಿಲ್ಲ. ಸಿ.ಟಿ ರವಿ ಸೋತ ಮೇಲೆ ಎಂಪಿ ಟಿಕೆಟ್ ಕೊಡಲಿಲ್ಲ. ರಾಜ್ಯಾಧ್ಯಕ್ಷ ಆಗ್ತಿನಿ ಎಂದು ಹೇಳಿದ್ರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಿದ್ರು. ಏನೂ ಇಲ್ಲದೇ ಬರೀ ಭಾಷಣ ಮಾಡೋಕೆ ಬಿಟ್ಟಿದ್ದಾರೆʼʼ ಎಂದು ಸಿ. ಟಿ ರವಿ ವಿರುದ್ಧ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.

"ಸಿ.ಟಿ ರವಿ ಅದೇನೋ ಹೇಳಿದ್ದಾರೆ. ನಾನು ಅವರ ಹಾಗೆ ಕೇಳಲ್ಲ, ಹೇಳಲ್ಲ. ನಾನು ಯಾರಿಗೆ ಹುಟ್ಟಿದ್ದೇನೆ ಎಂಬ ಬಗ್ಗೆ ತಿಳಿಯಬೇಕಾ? ದಿನಾಂಕ ಫಿಕ್ಸ್ ಮಾಡಿ, ಬಿಜೆಪಿ ಕಚೇರಿಗೆ ನನ್ನ ತಾಯಿಯನ್ನು ಕರೆದುಕೊಂಡು ಬರುತ್ತೇನೆ" ಎಂದು ಸಿ. ಟಿ ರವಿಗೆ ಕಟು ಶಬ್ದಗಳಲ್ಲಿ ಸವಾಲು ಹಾಕಿದರು.

Read More
Next Story