ಹುಣಸೂರು: ತಾಯಿ ಬೆನ್ನಲ್ಲೇ 4 ಹುಲಿ ಮರಿಗಳು ಅರಣ್ಯ ಇಲಾಖೆ ಬಲೆಗೆ; ಗ್ರಾಮಸ್ಥರಲ್ಲಿ ನಿರಾಳ ಭಾವ
x

ಹುಣಸೂರು: ತಾಯಿ ಬೆನ್ನಲ್ಲೇ 4 ಹುಲಿ ಮರಿಗಳು ಅರಣ್ಯ ಇಲಾಖೆ ಬಲೆಗೆ; ಗ್ರಾಮಸ್ಥರಲ್ಲಿ ನಿರಾಳ ಭಾವ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನಲ್ಲಿರುವ ಗೌಡನಕಟ್ಟೆ ಗ್ರಾಮದ ಜಮೀನಿನಲ್ಲಿ ಹುಲಿ ಮತ್ತು ಅದರ ಮರಿಗಳು ಬೀಡುಬಿಟ್ಟಿದ್ದವು.


Click the Play button to hear this message in audio format

ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದ್ದ ಹುಲಿ ಹಾವಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ತಾಯಿ ಹುಲಿಯನ್ನು ಸೆರೆಹಿಡಿದ ಮೂರು ದಿನಗಳ ಬಳಿಕ, ಇದೀಗ ಅರಣ್ಯ ಇಲಾಖೆಯು ಅದರ ನಾಲ್ಕು ಮರಿಗಳನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಭಯದ ನೆರಳಲ್ಲೇ ಬದುಕುತ್ತಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನಲ್ಲಿರುವ ಗೌಡನಕಟ್ಟೆ ಗ್ರಾಮದ ಜಮೀನಿನಲ್ಲಿ ಹುಲಿ ಮತ್ತು ಅದರ ಮರಿಗಳು ಬೀಡುಬಿಟ್ಟಿದ್ದವು. ಕೆಲ ದಿನಗಳ ಹಿಂದೆ ಜೋಳದ ಹೊಲದಲ್ಲಿ ಇಬ್ಬರು ರೈತರ ಮೇಲೆ ಹುಲಿ ದಾಳಿ ಮಾಡಲು ಯತ್ನಿಸಿದ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ, ಗುರುವಾರ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ತಾಯಿ ಹುಲಿಯನ್ನು ಸೆರೆಹಿಡಿದಿದ್ದರು.

ತಾಯಿ ಹುಲಿ ಸೆರೆಯಾದರೂ, ಅದರ ಮರಿಗಳು ಜಮೀನಿನಲ್ಲೇ ಅವಿತುಕೊಂಡಿದ್ದರಿಂದ ಗ್ರಾಮಸ್ಥರ ಆತಂಕ ಪೂರ್ತಿಯಾಗಿ ದೂರವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಮರಿಗಳ ಪತ್ತೆಗಾಗಿ ಕಾರ್ಯಾಚರಣೆಯನ್ನು ಮುಂದುವರಿಸಿತ್ತು.

ಮರಿಗಳ ರಕ್ಷಣೆ ಮತ್ತು ಮುಂದಿನ ಕ್ರಮ

ನಿರಂತರ ಹುಡುಕಾಟದ ಬಳಿಕ ಇಂದು (ಭಾನುವಾರ) ಅರಣ್ಯ ಇಲಾಖೆ ಸಿಬ್ಬಂದಿ ಅದೇ ಜಮೀನಿನಲ್ಲಿ ಅವಿತುಕೊಂಡಿದ್ದ ನಾಲ್ಕು ಹುಲಿ ಮರಿಗಳನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ಸದ್ಯ ಈ ಮರಿಗಳಿಗೆ ಅಗತ್ಯವಿರುವ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಅಥವಾ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಂದೆಡೆ ತಾಯಿ ಹುಲಿ, ಮತ್ತೊಂದೆಡೆ ಮರಿಗಳು ಗ್ರಾಮದ ಜಮೀನಿನಲ್ಲಿ ಬೀಡುಬಿಟ್ಟಿದ್ದರಿಂದ ರೈತರು ಹೊಲಗಳಿಗೆ ಹೋಗಲು ಹೆದರುವಂತಾಗಿತ್ತು. ಇದೀಗ ತಾಯಿ ಮತ್ತು ಮರಿಗಳೆಲ್ಲವೂ ಸೆರೆಯಾಗಿರುವುದರಿಂದ ಗ್ರಾಮದಲ್ಲಿ ಆವರಿಸಿದ್ದ ಆತಂಕದ ಕಾರ್ಮೋಡ ಸರಿದಂತಾಗಿದೆ. ಅರಣ್ಯ ಇಲಾಖೆಯ ಈ ತ್ವರಿತ ಮತ್ತು ಯಶಸ್ವಿ ಕಾರ್ಯಾಚರಣೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read More
Next Story