
ಪತಿಯ ಕಿರುಕುಳಕ್ಕೆ ಬೇಸತ್ತು ಮಗುವಿಗೆ ವಿಷವಿತ್ತು ತಾನೂ ಸೇವಿಸಿದ ಪತ್ನಿ, ಮಗು ಸಾವು
ಮೈಕ್ರೊಫೈನಾನ್ಸ್ ಕಿರುಕುಳ: ಹೋಟೆಲ್ ಮಾಲೀಕ ಆತ್ಮಹತ್ಯೆ
ಕಿರುಕುಳದಿಂದ ತೀವ್ರವಾಗಿ ನೊಂದಿದ್ದ ಜಗನ್ನಾಥ್ ಅವರು, ಜುಲೈ 28ರಂದು ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಮೈಕ್ರೊಫೈನಾನ್ಸ್ ಸಂಸ್ಥೆಗಳ ಸಾಲ ಮರುಪಾವತಿಗಾಗಿ ಸಿಬ್ಬಂದಿ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಹೋಟೆಲ್ ಉದ್ಯಮಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುಃಖಕರ ಘಟನೆ ಶಿರಾದ ತಾಲ್ಲೂಕಿನ ಬಡಕನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಜಗನ್ನಾಥ್ (40) ಎಂದು ಗುರುತಿಸಲಾಗಿದೆ.
ಹೋಟೆಲ್ ನಡೆಸುತ್ತಿದ್ದ ಜಗನ್ನಾಥ್ ಅವರು, ತಮ್ಮ ವ್ಯವಹಾರದ ಅಗತ್ಯಗಳಿಗಾಗಿ ಪತ್ನಿ ಗಿರಿಜಾ ಅವರ ಹೆಸರಿನಲ್ಲಿ ಕನಕ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಸಮರ್ಥ ಫೈನಾನ್ಸ್ ಸಂಸ್ಥೆಗಳಿಂದ ಒಟ್ಟು ₹5 ಲಕ್ಷ ಸಾಲ ಪಡೆದಿದ್ದರು. ಈ ಸಾಲವನ್ನು ಮರುಪಾವತಿ ಮಾಡುವಂತೆ ಸಂಸ್ಥೆಗಳ ಸಿಬ್ಬಂದಿ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ.
ಈ ಕಿರುಕುಳದಿಂದ ತೀವ್ರವಾಗಿ ನೊಂದಿದ್ದ ಜಗನ್ನಾಥ್ ಅವರು, ಜುಲೈ 28ರಂದು ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಹೊಲಕ್ಕೆ ಬಂದ ಅವರ ಸಹೋದರ ನರಸೇಗೌಡ ಅವರು ಅಸ್ವಸ್ಥರಾಗಿದ್ದ ಜಗನ್ನಾಥ್ ಅವರನ್ನು ತಕ್ಷಣವೇ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈ ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.