ಕಾಂಗ್ರೆಸ್ ಶಾಸಕನಿಗೆ ಹನಿಟ್ರ್ಯಾಪ್, ಬ್ಲ್ಯಾಕ್ ಮೇಲ್!: ಇಬ್ಬರ ಬಂಧನ
x

ಕಾಂಗ್ರೆಸ್ ಶಾಸಕನಿಗೆ ಹನಿಟ್ರ್ಯಾಪ್, ಬ್ಲ್ಯಾಕ್ ಮೇಲ್!: ಇಬ್ಬರ ಬಂಧನ


ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್​ ಶಾಸಕ ಹರೀಶ್‌ಗೌಡ ಅವರಿಗೆ ಸುಳ್ಳು ಹನಿಟ್ರ್ಯಾಪ್​ ಮಾದರಿ ವಿಡಿಯೋ ಸೃಷ್ಟಿಸಿ ಬೆದರಿಕೆ ಹಾಕಿದ್ದಲ್ಲದೇ, ಕೋಟ್ಯಂತರ ರೂ. ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದ ಗ್ಯಾಂಗ್‌ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಮೂಲದ ಸಂತೋಷ್ ಮತ್ತು ಪುಟ್ಟರಾಜು ಬಂಧಿತ ಆರೋಪಿಗಳು. ಆರೋಪಿಗಳ ಗ್ಯಾಂಗ್​ ಶಾಸಕ ಹರೀಶ್‌ಗೌಡ ಅವರ ವಿರುದ್ಧವೇ ಸುಳ್ಳು ಹನಿಟ್ರ್ಯಾಪ್​ ಮಾದರಿ ವಿಡಿಯೋ ಸೃಷ್ಟಿಸಿ ಬೆದರಿಕೆ ಹಾಕಲು ಮುಂದಾಗಿದ್ದರು. ಅಲ್ಲದೆ, ಕೋಟ್ಯಂತರ ರೂ. ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದರು.‌ ಆ ಬಳಿಕ ಹರೀಶ್‌ಗೌಡ ಅವರು ಬೆಂಗಳೂರಿನ ಸಿಸಿಬಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಶಾಸಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಹನಿಟ್ರ್ಯಾಪ್​ ಮಾಡುತ್ತಿದ್ದ ಜಾಲವನ್ನು ಬೇಧಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣಗೆ ಒಳಪಡಿಸಿದಾಗ ಹಲವು ವಿಚಾರ ಬೆಳಕಿಗೆ ಬಂದಿದೆ. ಹನಿಟ್ರ್ಯಾಪ್​ ಗ್ಯಾಂಗ್‌ನಲ್ಲಿ ಓರ್ವ ಯುವತಿ ಸಹ ಇರುವ ಬಗ್ಗೆ ಮಾಹಿತಿ ದೊರೆತಿದೆ.

ಈ ಆರೋಪಿಗಳು ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ ಶಾಸಕರು, ಸಚಿವರು, ಉದ್ಯಮಿಗಳು, ವಿಶ್ವ ವಿದ್ಯಾಲಯಗಳ ಕುಲಪತಿಗಳು ಸೇರಿ ವಿಐಪಿಗಳನ್ನು ಸುಳ್ಳು ಹನಿಟ್ರ್ಯಾಪ್ ಮಾಡುತ್ತಿದ್ದರು. ನಂತರ ಅವರದ್ದೇ ಎನ್ನುವಂತೆ ವಿಡಿಯೋ ಸಿದ್ದಪಡಿಸಿ ಕೋಟ್ಯಾಂತರ ರೂ. ಹಣಕ್ಕೆ ಬೆಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದರು. ಆರೋಪಿಗಳು ಇಂತಹ ಕೃತ್ಯಗಳನ್ನು ಮೈಸೂರು, ಬೆಂಗಳೂರು ಸೇರಿ ವವಿಧೆಡೆ ಎಸಗಿದ್ದಾರೆ.

ಆರೋಪಿಗಳು ರಾಜ್ಯದಲ್ಲಿನ ಪ್ರಭಾವಿಗಳ ಸಂಪರ್ಕ ಮಾಡಿ ಅವರನ್ನು ಫಾಲೋ ಮಾಡುತ್ತಿದ್ದರು. ಬಳಿಕ ವಿಐಪಿಗಳನ್ನು ಭೇಟಿ ಮಾಡಿ ನಂಬರ್​ ಪಡೆದುಕೊಂಡು ಅವರ ಚಲನವಲನದ ಮೇಲೆ ಕಣ್ಣಿಡುತ್ತಿದ್ದರು. ಬಳಿಕ, ವಿಐಪಿಗಳು ಉಳಿದುಕೊಳ್ಳುತ್ತಿದ್ದ ಐಷಾರಾಮಿ ಹೋಟೆಲ್‌ಗಳ ರೂಮು ಬುಕ್ಕಿಂಗ್​, ಚೆಕ್​-ಇನ್​​ ಹಾಗೂ ಚೆಕ್​-ಔಟ್​ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಬಳಿಕ, ವಿಐಪಿಗಳು ಹೋಟೆಲ್‌ನ ರೂಮ್​ ಖಾಲಿ ಮಾಡಿಕೊಂಡು ಹೋದ ನಂತರ ಅವರು ಉಳಿದುಕೊಂಡಿದ್ದ ರೂಮ್​ ಅನ್ನು ಬಾಡಿಗೆ ಪಡೆದು ಅಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಈ ರೂಮಿನಲ್ಲಿ ಯುವತಿ ಬಳಸಿಕೊಂಡು ಹಿಡಿನ್​ ಕ್ಯಾಮೆರಾ ಇಟ್ಟಿರುವ ರೀತಿಯಲ್ಲಿ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದರು. ಬಳಿಕ ವಿಐಪಿ ಈ ಯುವತಿಯನ್ನು ಬಳಕೆ ಮಾಡಿಕೊಂಡಿದ್ದಾರೆ ಎಂಬ ರೀತಿಯಲ್ಲಿ ವಿಡಿಯೋ ಕ್ರಿಯೇಟ್​ ಮಾಡಿ ಅದನ್ನು ವಿಐಪಿಗಳಿಗೆ ಕಳುಹಿಸಿ, ಹಣ್ಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಇಲ್ಲದಿದ್ದರೆ ವಿಡಿಯೋ ವೈರಲ್​ ಮಾಡುವುದಾಗಿ ಹಾಗೂ ಪೊಲೀಸರಿಗೆ ಕೊಡುವುದಾಗಿ ಬೆದರಿಕೆ ಹಾಕಿದ್ದರು. ಇದೇ ರೀತಿ ಕಾಂಗ್ರೆಸ್​ ಶಾಸಕ ಹರೀಶ್‌ಗೌಡ ಅವರಿಗೂ ಮಾಡಿದ್ದು, ಕೂಡಲೆ ಶಾಸಕರು ದೂರು ನೀಡಿದ್ದಾರೆ. ಇದೀಗ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.

ಈ ಪ್ರಕರಣ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಶಾಸಕ ಹರೀಶ್ ಗೌಡ ಅವರು, ʻʻನನ್ನ ಪರಿಚಿತರಿಗೆ, ಗೌರವಯುತವಾಗಿ ಬದುಕುತ್ತಿರುವವರಿಗೆ ಹನಿ ಟ್ರ್ಯಾಪ್ ಮಾಡಲಾಗಿತ್ತು. ಎರಡು ನಂಬರ್‌ಗಳಿಂದ ಕರೆ ಮಾಡುತ್ತಿದ್ದರು. ಆ ನಂಬರ್‌ಗಳನ್ನು ಟ್ರೇಸ್ ಮಾಡುವ ಮೂಲಕ ಅವರನ್ನು ಬಂಧಿಸಲಾಗಿದೆ. ನಾನೇ ದೂರು ಕೊಟ್ಟಿದ್ದೆ, ಇಬ್ಬರು ಆರೋಪಿಗಳ ಬಂಧನವಾಗಿದೆ. ಇದೀಗ ತನಿಖೆ ನಡೆಯುತ್ತಿದೆ, ಕಾನೂನಾತ್ಮಕವಾಗಿ ಏನು ಆಗಬೇಕು ಆಗುತ್ತದೆʼʼ ಎಂದು ಹೇಳಿದರು.

ಪ್ರಕರಣದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು, ʻʻಕಳೆದ ಕೆಲವು ದಿನಗಳ ಹಿಂದೆ ಸಿಸಿಬಿ ಠಾಣೆಗೆ ದೂರು ಬಂದಿತ್ತು. ಒಂದು ಗ್ಯಾಂಗ್, ಕೆಲವೊಂದು ಅಂಶಗಳ ಮೇಲೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರು ಬಂದಿತ್ತು. ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ಅವರ ಹೇಳಿಕೆ ಪಡೆದುಕೊಂಡಿದ್ದೇವೆ. ಈ ಗ್ಯಾಂಗ್‌ನಲ್ಲಿ ಇದುವರೆಗೂ ಮೂವರು ಇದ್ದದ್ದು ಪತ್ತೆಯಾಗಿದೆ. ಇಬ್ಬರ ಬಂಧನವಾಗಿದೆ ಮತ್ತೊಬ್ಬರು ಪರಾರಿಯಾಗಿದ್ದಾರೆ. ಈ ರೀತಿ ಇನ್ನೂ ಅನೇಕರಿಗೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ ಪರಿಶೀಲನೆ ಮಾಡುತ್ತಿದ್ದೇವೆʼʼ ಎಂದು ತಿಳಿಸಿದರು.

ʻʻಹಣಕ್ಕಾಗಿ ಬೇಡಿಕೆ ಇಟ್ಟು ಪೋಟೋ ಮನೆಗೆ ಕಳಿಸುವುದಾಗಿ ಬೆದರಿಸುತ್ತಿದ್ದರು. ಈ ಜಾಲದಲ್ಲಿ ಯಾರಿದಾರೆ ಎಂಬುದನ್ನ ನೋಡಬೇಕು. ಉದ್ಯಮಿಗಳು, ಉಪನ್ಯಾಸಕರು, ಎಲ್ಲರಿಗೂ ಕರೆ ಮಾಡಿ ಡಿಮ್ಯಾಂಡ್ ಮಾಡಿದ್ದಾರೆ. ತಪ್ಪಿತಸ್ತರಿಗೆ ಕಾನೂನು ಕ್ರಮ ಆಗಲಿದೆʼʼ ಎಂದರು.

Read More
Next Story