Mysore MUDA Case | ಇ ಡಿ ಗೆ ಹಿನ್ನಡೆ; ಸಚಿವ ಬೈರತಿ ಸುರೇಶ್‌, ಸಿಎಂ ಪತ್ನಿ ಪಾರ್ವತಿ ಸಮನ್ಸ್‌ ವಜಾಗೊಳಿಸಿದ ಹೈಕೋರ್ಟ್‌
x

Mysore MUDA Case | ಇ ಡಿ ಗೆ ಹಿನ್ನಡೆ; ಸಚಿವ ಬೈರತಿ ಸುರೇಶ್‌, ಸಿಎಂ ಪತ್ನಿ ಪಾರ್ವತಿ ಸಮನ್ಸ್‌ ವಜಾಗೊಳಿಸಿದ ಹೈಕೋರ್ಟ್‌

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರಿಗೆ ತನಿಖೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಜಾರಿ ಮಾಡಿದ್ದ ಸಮನ್ಸ್‌/ನೋಟಿಸ್‌ಗಳು ಹಾಗೂ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ.


ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರಿಗೆ ತನಿಖೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಜಾರಿ ಮಾಡಿದ್ದ ಸಮನ್ಸ್‌/ನೋಟಿಸ್‌ಗಳು ಹಾಗೂ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

ಜಾರಿ ನಿರ್ದೇಶನಾಲಯ ದಾಖಲಿಸಿರುವ ದೂರು ಮತ್ತು ತನಿಖೆ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಸೆಕ್ಷನ್‌ 50ರ ಅಡಿ ಜಾರಿ ಮಾಡಿರುವ ಸಮನ್ಸ್‌ ಪ್ರಶ್ನಿಸಿ ಪ್ರತ್ಯೇಕವಾಗಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್‌ ಅವರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಬೈರತಿ ಸುರೇಶ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ. ವಿ. ನಾಗೇಶ್‌ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ 14 ನಿವೇಶನ ಹಂಚಿಕೆ ಪ್ರಕರಣದಲ್ಲಿ ಯಾವುದೇ ಅಪರಾಧ ಅಥವಾ ಅಪರಾಧ ಪ್ರಕ್ರಿಯೆ ಇಲ್ಲ. ಯಾವುದೇ ಪ್ರೆಡಿಕೇಟ್‌ ಅಪರಾಧದಲ್ಲಿ (ಅಕ್ರಮ ಗಳಿಕೆಗೆ ಕಾರಣವಾದ ಮೂಲ ಅಪರಾಧ) ಸುರೇಶ್‌ ಭಾಗಿಯಾಗಿಲ್ಲ. 2023ರ ಜೂನ್‌ನಲ್ಲಿ ಸುರೇಶ್‌ ನಗರಾಭಿವೃದ್ಧಿ ಮಂತ್ರಿಯಾಗಿದ್ದಾರೆ. ಅಕ್ರಮ ನಿವೇಶನಗಳಿಗೆ ಸಂಬಂಧಿಸಿದ ಇದು ಅಪರಾಧ ಪ್ರಕ್ರಿಯೆಯಾಗಿದ್ದು, ಯಾವ ರೀತಿಯಲ್ಲಿ ಸುರೇಶ್‌ ಇದಕ್ಕೆ ಸಂಬಂಧಿಸಿದ್ದಾರೆ? ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶ್‌ಗೆ ಇ ಡಿ ಜಾರಿ ಮಾಡಿದ್ದ ಸಮನ್ಸ್‌ ಅನ್ನು ಸಮನ್ವಯ ಪೀಠವು ವಜಾ ಮಾಡಿದ್ದು, ಇ ಡಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಸ್ವಾತಂತ್ರ್ಯವನ್ನು ಹೈಕೋರ್ಟ್‌ ನಟೇಶ್‌ ಅವರಿಗೆ ಕಲ್ಪಿಸಿದೆ” ಎಂದಿದ್ದರು.

ಮುಂದುವರಿದು, “ಪ್ರಕರಣದಲ್ಲಿ ಸುರೇಶ್‌ ಪಾತ್ರ ಏನಿದೆ ಎಂಬುದನ್ನು ಜಾರಿ ನಿರ್ದೇಶನಾಲಯ ತೋರಿಸಲಿ. ಇ ಡಿ ಪ್ರಶ್ನೆ ಮಾಲಿಕೆಯು ಸುರೇಶ್‌ ಖಾಸಗಿ ಹಕ್ಕಿಗೆ ಹಾನಿ ಮಾಡುವಂತಿದೆ. ಖಾಸಗಿ ದೂರನ್ನು ಆಧರಿಸಿ ಇ ಡಿ ಇಸಿಐಆರ್‌ ದಾಖಲಿಸಿದೆ. ಖಾಸಗಿ ದೂರಿನಲ್ಲಿ ಸುರೇಶ್‌ ಹೆಸರಿನ ಉಲ್ಲೇಖವೇ ಇಲ್ಲ. ಹೀಗಿರುವಾಗ ನೋಟಿಸ್‌ ಜಾರಿ ಮಾಡಿರುವ ಹಿಂದಿನ ಉದ್ದೇಶವೇನು? ಪ್ರಶ್ನೆ ಮಾಲಿಕೆಯ ಮೂಲಕ ಸುರೇಶ್‌ ಸಹೋದರಿ, ಭಾವ, ಮೊಮ್ಮಕ್ಕಳು ಇತ್ಯಾದಿ ಮಾಹಿತಿಯನ್ನು ಇ ಡಿ ಕೇಳಿದೆ. ಇದೆಲ್ಲವೂ ಪ್ರೆಡಿಕೇಟ್‌ ಅಪರಾಧಕ್ಕೆ ಹೇಗೆ ಸಂಬಂಧಿಸುತ್ತದೆ? ಪಿತಾರ್ಜಿತ ಮತ್ತು ಸ್ವಯಂ ಸಂಪಾದನೆ ಆಸ್ತಿಯ ವಿವರ ಕೇಳಲಾಗಿದೆ. ಇದೆಲ್ಲಕ್ಕೂ ಸುರೇಶ್‌ ಹೇಗೆ ಉತ್ತರದಾಯಿಯಾಗುತ್ತಾರೆ? ಇದು ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ವಾದಿಸಿದ್ದರು.

ಪಾರ್ವತಿ ಸಿದ್ದರಾಮಯ್ಯ ಪರ ವಾದ

ವಿಚಾರಣೆಯ ವೇಳೆ ಪಾರ್ವತಿ ಅವರ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಪಾರ್ವತಿ ಅವರು ಮುಡಾಗೆ ಆಕ್ಷೇಪಾರ್ಹವಾದ 14 ನಿವೇಶನಗಳನ್ನು 2024ರ ಅಕ್ಟೋಬರ್‌ 10ರಂದು ಮರಳಿಸದ ದಿನವೇ ಜಾರಿ ನಿರ್ದೇಶನಾಲಯವು ಇಸಿಐಆರ್‌ ದಾಖಲಿಸಿದೆ. ಅಪರಾಧ ಪ್ರಕ್ರಿಯೆ ಇಲ್ಲದಿರುವಾಗ ಯಾವ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸುತ್ತದೆ? ಪಿಎಂಎಲ್‌ಎ ಅನ್ವಯಿಸಲು ಹಣ ವರ್ಗಾವಣೆಯಾಗಿರಬೇಕು. ಇಲ್ಲಿ ಎಲ್ಲಿ ಹಣ ವರ್ಗಾವಣೆಯಾಗಿದೆ? ಲೋಕಾಯುಕ್ತ ಎಫ್‌ಐಆರ್‌ ದಾಖಲಿಸಿದ ಬೆನ್ನಿಗೇ ಆತುರದಲ್ಲಿ ಇ ಡಿ ಪ್ರಕರಣ ದಾಖಲಿಸಿದೆ. ಇಲ್ಲಿ ಪ್ರಕರಣ ದಾಖಲಿಸಲು ಇ ಡಿಗೆ ವ್ಯಾಪ್ತಿಯೇ ಇಲ್ಲ” ಎಂದಿದ್ದರು.

“ಆಕ್ಷೇಪಾರ್ಹ ನಿವೇಶನಗಳು ಅಪರಾಧ ಪ್ರಕ್ರಿಯೆ ಎಂದು ಇ ಡಿಯು ಆಕ್ಷೇಪಣೆಯಲ್ಲಿ ವಿವರಿಸಿದೆ. ಆದರೆ, ಈಗ ಬರೀ 14 ನಿವೇಶನ ಮಾತ್ರವಲ್ಲ. ಮುಡಾ ಹಂಚಿಕೆ ಮಾಡಿರುವ ಎಲ್ಲಾ ನಿವೇಶನಗಳ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಇ ಡಿ ಹೇಳುತ್ತಿದೆ. ಪ್ರೆಡಿಕೇಟ್‌ ಅಪರಾಧವನ್ನು (ಅಕ್ರಮ ಸಂಪತ್ತಿನ ಗಳಿಕೆಗೆ ಕಾರಣವಾದ ಮೂಲ ಅಪರಾಧ) ಲೋಕಾಯುಕ್ತರು ತನಿಖೆ ನಡೆಸುತ್ತಿರುವಾಗ ಇ ಡಿ ಮತ್ತೆ ಅದನ್ನು ತನಿಖೆ ನಡೆಸಲಾಗದು. 160 ನಿವೇಶನಗಳನ್ನು ಜಪ್ತಿ ಮಾಡಲಾಗಿದೆ ಎಂದು ಇ ಡಿ ಹೇಳಿದೆ. ಹಾಲಿ ಪ್ರಕರಣಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ, ಇಡೀ ಪ್ರಕ್ರಿಯೆ ವಜಾ ಮಾಡಬೇಕು” ಎಂದು ಕೋರಿದ್ದರು.

“ಮೂಲ ಅಂಶಗಳು ನಾಪತ್ತೆಯಾಗಿದ್ದು, ಅಸಂಗತ ತನಿಖೆಗೆ ಅನುಮತಿಸಲಾಗದು. ಸಮನ್ಸ್‌ ಜಾರಿಗೊಳಿಸಲು ಆಧಾರ ಇರಬೇಕು. ಅನುಮಾನದ ಆಧಾರದಲ್ಲಿ ಸಮನ್ಸ್‌ ಜಾರಿಗೊಳಿಸಲಾಗದು. ನಂಬಲರ್ಹ ಕಾರಣಗಳು ಇರಬೇಕಾಗುತ್ತವೆ. ಪಾರ್ವತಿ ಅವರು ಮುಖ್ಯಮಂತ್ರಿ ಪತ್ನಿಯಾಗಿದ್ದು, ಆರೋಪ ಬಂದಾಗ ಮುಂಚಿತವಾಗಿ ಅದನ್ನು ಹತ್ತಿಕ್ಕುವ ಕೆಲಸ ಮಾಡಬೇಕಾದ ನೈತಿಕ ಜವಾಬ್ದಾರಿ ಇದೆ. ಇದರ ಭಾಗವಾಗಿ ಅವರು 14 ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ನಿವೇಶನ ಹಂಚಿಕೆಯೇ ಅಪರಾಧ ಎಂದು ಯಾವ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಹೇಳುತ್ತಿದೆ” ಎಂದು ಪ್ರಶ್ನಿಸಿದ್ದರು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ನಿಯಮಗಳನ್ನು ಉಲ್ಲಂಘಿಸಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಿದೆ ಎಂದು ದೂರು ಬಂದಿದೆ. ಹೀಗಾಗಿ, 14 ನಿವೇಶನಗಳಿಗೆ ಸೀಮಿತವಾಗಿ ತನಿಖೆ ನಡೆಸುತ್ತಿಲ್ಲ. ಪ್ರೆಡಿಕೇಟ್‌ ಅಪರಾಧ ದಾಖಲಾದ ಬಳಿಕ ಅಪರಾಧ ಪ್ರಕರಣ ದಾಖಲಿಸಿ ತನಿಖೆ ನಡೆಸದಂತೆ ತಮಗೆ ಯಾವುದೇ ನಿರ್ಬಂಧವಿಲ್ಲ. ಮುಡಾ ತನಿಖೆಯಲ್ಲಿ ಸಾಕಷ್ಟು ಹುಳುಕುಗಳಿವೆ. ತನಿಖೆ ಪ್ರಗತಿಯಲ್ಲಿದೆ” ಎಂದು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

“ಸಂಬಂಧಿಗಳ ಹೆಸರಿನಲ್ಲಿ ಹಲವಾರು ಮಂದಿ ನಿವೇಶನಗಳನ್ನು ಖರೀದಿಸಿದ್ದಾರೆ. ಪಾರ್ವತಿ ಅವರಿಗೆ ಹಂಚಿಕೆಯಾಗಿದ್ದ 14 ನಿವೇಶನಗಳು ಹಗರಣದ ಒಂದು ಭಾಗವಷ್ಟೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರು ನಿವೇಶನ ಹಂಚಿಕೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ನೋಡಬೇಕು. ಹೀಗಾಗಿ, ಅವರ ಸಂಬಂಧಿಗಳಿಂದ ಮಾಹಿತಿ ಸಂಗ್ರಹಿಸಲು ಅನುಮತಿಸಬೇಕು. ಪ್ರಶ್ನೆ ಮಾಲಿಕೆಯನ್ನು ಸಮನ್ಸ್‌ ಜೊತೆಗೆ ಸೇರಿಸಿದ್ದೇವೆ. ಇದು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲಾಗದು” ಎಂದಿದ್ದರು.

“ನಿವೇಶನಗಳ ಹಂಚಿಕೆಯು ಕ್ರಿಮಿನಲ್‌ ಚಟುವಟಿಕೆಯಾಗಿದೆ. ಆಕ್ಷೇಪಾರ್ಹವಾದ 14 ನಿವೇಶನಗಳಿಗೆ ಅಪರಾಧ ಪ್ರಕ್ರಿಯೆ ಚಹರೆಯಿದೆ. ಅವುಗಳನ್ನು ಹಿಂದಿರುಗಿಸಿದ ಮಾತ್ರಕ್ಕೆ ಅದು ಹೋಗುವುದಿಲ್ಲ. ಸಮನ್ಸ್‌ ಜಾರಿಗೊಳಿಸುವ ಮೂಲಕ ನಾವು ಸಿವಿಲ್‌ ತನಿಖೆ ನಡೆಸಿದ್ದೇವೆ. ಇದನ್ನು ವಜಾ ಮಾಡುವಂತೆ ಕೋರುವ ಪ್ರಶ್ನೆ ಉದ್ಭವಿಸುವುದಿಲ್ಲ. ಪ್ರೆಡಿಕೇಟ್‌ ಅಪರಾಧದ ಬೆನ್ನಿಗೇ ಅಪರಾಧ ಪ್ರಕ್ರಿಯೆ ಕಂಡುಬಂದಿದ್ದು, ಅದರ ಭಾಗವಾಗಿ ಸಮನ್ಸ್‌ ಜಾರಿಗೊಳಿಸಲಾಗಿದೆ. ಇದು ಸಿವಿಲ್‌ ತನಿಖೆಯಾಗಿದ್ದು, ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ” ಎಂದಿದ್ದರು.

Read More
Next Story